13 ಸಾವಿರ ಕೋಟಿ ನಷ್ಟ 4 ತ್ರೈಮಾಸಿಕದಲ್ಲಿ ತೋರಿಸ್ತೀವಿ: ಪಿಎನ್ ಬಿ
ಮುಂಬೈ, ಮಾರ್ಚ್ 9: ನೀರವ್ ಮೋದಿ- - ಗೀತಾಂಜಲಿ ಜೆಮ್ಸ್ ಪ್ರಕರಣದಲ್ಲಿ ಬ್ಯಾಂಕ್ ಗೆ ಆಗಿರುವ ಹದಿಮೂರು ಸಾವಿರ ಕೋಟಿ ರುಪಾಯಿ ನಷ್ಟವನ್ನು ಒಂದೇ ಸಲ ಖಾತೆ ಪುಸ್ತಕದಲ್ಲಿ ತೋರಿಸುವ ಬದಲು ನಾಲ್ಕು ತ್ರೈ ಮಾಸಿಕದಲ್ಲಿ ಹಂಚಲು ಅವಕಾಶ ನೀಡಬೇಕು ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಮನವಿ ಮಾಡಲಾಗಿದೆ.
ಈ ಹಗರಣ ಬೆಳಕಿಗೆ ಬಂದ ಮೇಲೆ ಬ್ಯಾಂಕ್ ನ ನೆಟ್ ವರ್ತ್ ಪೈಕಿ 48 ಸಾವಿರ ಕೋಟಿ ಕೊಚ್ಚಿಹೋಗಿದೆ. ಇಷ್ಟು ದೊಡ್ಡ ಮೊತ್ತದ ನಷ್ಟ ಆಗಿರುವುದರಿಂದ ಬ್ಯಾಂಕ್ ನ ಹಣ ಸಾಲ ಪಡೆಯುವ ಸಾಮರ್ಥ್ಯಕ್ಕೂ ಹೊಡೆತ ಕೊಟ್ಟಿದೆ.
ಈತನೇ ಪಿಎನ್ ಬಿ ಹಗರಣದ ಮಾಸ್ಟರ್ ಮೈಂಡ್!
"ನಮ್ಮ ಮನವಿಯನ್ನು ಆರ್ ಬಿಐ ಒಪ್ಪಬಹುದು. ನಷ್ಟವನ್ನು ಆ ರೀತಿ ನಾಲ್ಕು ತ್ರೈ ಮಾಸಿಕಕ್ಕೆ ಹಂಚಲು ಅವಕಾಶವಿದೆ. ಮತ್ತು ಆ ಒಟ್ಟು ಮೊತ್ತವು ಎನ್ ಪಿಎ ಅಲ್ಲ. ಆದ್ದರಿಂದ ಮಾರ್ಚ್ ಮೂವತ್ತೊಂದರವರೆಗೆ ಎಲ್ ಒಯು (ಲೆಟರ್ ಆಫ್ ಅಂಡರ್ ಟೇಕಿಂಗ್) ಪಾವತಿ ಆಗಿಲ್ಲ ಅಂತಲೇ ಇನ್ನೊಂದು ತ್ರೈ ಮಾಸಿಕದಲ್ಲೂ ತೋರಿಸಲು ಅವಕಾಶ ನೀಡಬೇಕು" ಎಂದು ಮನವಿ ಮಾಡಿರುವುದಾಗಿ ಬ್ಯಾಂಕ್ ಹೇಳಿದೆ.
ಮೂಲಗಳ ಪ್ರಕಾರ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಆ ರೀತಿ ಮಾಡಲು ಆರ್ ಬಿಐ ಅವಕಾಶ ನೀಡಬಹುದು. ನಿಯಮಗಳ ಪ್ರಕಾರ ಖಾತೆ ಪುಸ್ತಕಗಳಲ್ಲಿ ಹಗರಣದ ಒಟ್ಟು ಮೊತ್ತವನ್ನು ಇಡಿಯಾಗಿ ತೆಗೆದುಹಾಕಬೇಕು. ಹಾಗೆ ಮಾಡುವುದರಿಂದ ಬ್ಯಾಂಕ್ ನ ನೆಟ್ ವರ್ತ್ ನ ಶೇ ಇಪ್ಪತ್ತೈದರಷ್ಟು ಕೊಚ್ಚಿ ಹೋಗುತ್ತದೆ.
ಈಗಾಗಲೇ ಪಿಎನ್ ಬಿಯ ಎನ್ ಪಿಎ ಪ್ರಮಾಣ ಮೂವತ್ನಾಲ್ಕು ಸಾವಿರ ಕೋಟಿ ಇದೆ. ಸದ್ಯದ ಸ್ಥಿತಿಯಲ್ಲಿ ಬ್ಯಾಂಕ್ ಗೆ ಹಣ ಕೊಡಲು ಯಾರು ಬರುವುದಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಬ್ಯಾಂಕ್ ನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.