'ಬುಲೆಟ್ ಟ್ರೇನ್'ಗೆ ಹಣದ ನೆರವು ನಿಲ್ಲಿಸಿದ ಜಪಾನ್, ಅಯ್ಯೋ ಇದೇನು?
ಪ್ರಧಾನಿ ನರೇಂದ್ರ ಮೋದಿ ಅವರ ಮಹಾತ್ವಾಕಾಂಕ್ಷಿ ಯೋಜನೆ 'ಬುಲೆಟ್ ಟ್ರೇನ್'ಗೆ ದೊಡ್ಡ ತಡೆ ಎದುರಾಗಿದೆ. ಜಪಾನ್ ಇಂಟರ್ ನ್ಯಾಷನಲ್ ಕೋ ಆಪರೇಷನ್ ಏಜೆನ್ಸಿಯು ಈ ರೈಲ್ವೆ ಜಾಲ ನಿರ್ಮಾಣಕ್ಕೆ ಹಣಕಾಸು ನೆರವು ನೀಡುವುದನ್ನು ನಿಲ್ಲಿಸಿದೆ. ರೈತರ ಸಮಸ್ಯೆಯನ್ನು ಗಮನದಲ್ಲಿ ಇಟ್ಟುಕೊಂಡು ಇಂಥ ನಿರ್ಧಾರ ಮಾಡಲಾಗಿದೆ.
1 ಲಕ್ಷ ಕೋಟಿ ರುಪಾಯಿ ವೆಚ್ಚದ ಈ ಯೋಜನೆಗಾಗಿ ಸ್ವಾಧೀನ ಮಾಡಿಕೊಂಡ ಭೂಮಿಗಾಗಿ ರೈತರಿಗೆ ಪರಿಹಾರ ನೀಡಲು ಸರಕಾರ ಆದ್ಯತೆ ಕೊಡಬೇಕು ಎಂದು ಜಪಾನ್ ನ ಏಜೆನ್ಸಿ ಹೇಳಿದೆ. ಗುಜರಾತ್ ಹಾಗೂ ಮಹಾರಾಷ್ಟ್ರ ಮಧ್ಯೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ. ಕೇಂದ್ರ ಸರಕಾರದಿಂದ ಈಗಾಗಲೇ ರೈತರ ಸಮಸ್ಯೆ ನಿವಾರಣೆಗಾಗಿಯೇ ವಿಶೇಷ ಸಮಿತಿ ರಚಿಸಲಾಗಿದೆ.
ಮೋದಿಯ ಬುಲೆಟ್ ಟ್ರೇನ್ಗೆ ಕೆಂಪು ಬಾವುಟ ತೋರಿಸಿದ ರೈತರು
ಆದರೆ, ಈ ಸಮಸ್ಯೆ ಬಗೆಹರಿಸಲು ಹಣಕಾಸಿನ ಕೊರತೆ ಇದೆ. ಆ ಕಾರಣಕ್ಕೆ 2022ಕ್ಕೆ ಪೂರ್ಣಗೊಳ್ಳಬೇಕಾದ ಈ ಯೋಜನೆ ಮತ್ತಷ್ಟು ಸಮಯ ಮುಂದೆ ಹೋಗಲಿದೆ. ಹದಿನೈದು ವರ್ಷದ ಹಿಂದೆ ಆರಂಭವಾದ ಜಪಾನ್ ನ ಸರಕಾರಿ ಏಜೆನ್ಸಿ 'ಜಿಕಾ', ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಅಲ್ಲಿನ ಸರಕಾರಕ್ಕೆ ನೆರವು ನೀಡುತ್ತದೆ.
ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಭೂ ಸ್ವಾಧೀನ ಸಮಸ್ಯೆ
ಅಂತರರಾಷ್ಟ್ರೀಯ ಸಹಕಾರ, ಜಾಗತಿಕ ಆರ್ಥಿಕ ವ್ಯವಸ್ಥೆಗೆ ಬೆಂಬಲ ನೀಡುವುದು, ಅಭಿವೃದ್ಧಿ ಆಗುತ್ತಿರುವ ಪ್ರದೇಶಗಳ ಆರ್ಥಿಕ ಸ್ಥಿರತೆಗಾಗಿ ಶ್ರಮಿಸುವುದು ಈ ಏಜೆನ್ಸಿಯ ಉದ್ದೇಶವಾಗಿದೆ. ಗುಜರಾತ್ ಹಾಗೂ ಮಹಾರಾಷ್ಟ್ರಗಳಲ್ಲಿ ಈ ಯೋಜನೆಗಾಗಿ ಭೂ ಸ್ವಾಧೀನ ಮಾಡಿಕೊಳ್ಳುವಲ್ಲಿ ಸಮಸ್ಯೆ ಉಂಟಾಗಿದೆ.
ಹೆಚ್ಚಿನ ಪರಿಹಾರ, ಮೂಲಸೌಕರ್ಯಕ್ಕೆ ರೈತರ ಆಗ್ರಹ
ರೈತರು ಹೆಚ್ಚಿನ ಪರಿಹಾರ ಹಾಗೂ ಹಳ್ಳಿಗಾಡು ಪ್ರದೇಶದಲ್ಲಿ ಕೆಲವು ಮೂಲ ಸೌಕರ್ಯಕ್ಕಾಗಿ ಒತ್ತಾಯಿಸುತ್ತಿದ್ದಾರೆ. 508 ಕಿಲೋಮೀಟರ್ ಈ ರೈಲು ಕಾರಿಡಾರ್ ಪೈಕಿ 110 ಕಿಲೋಮೀಟರ್ ಮಹಾರಾಷ್ಟ್ರದ ಪಲ್ಘರ್ ಮೂಲಕ ಹಾದುಹೋಗುತ್ತದೆ. ಇಲ್ಲಿ ರೈತರಿಂದ ಭಾರೀ ಸವಾಲು ಎದುರಾಗಿದೆ. ಗುಜರಾತ್ ನಲ್ಲೂ 850 ಹೆಕ್ಟೇರ್ ಪ್ರದೇಶ ಭೂ ಸ್ವಾಧೀನ ಮಾಡಿಕೊಳ್ಳಬೇಕಿದೆ. ಎಂಟು ಜಿಲ್ಲೆಗಳ 5 ಸಾವಿರ ಕುಟುಂಬಗಳು ಈ ವ್ಯಾಪ್ತಿಯಲ್ಲಿವೆ.
ಬುಲೆಟ್ ರೈಲು ಯಾಕೆ ಬೇಕು? ರೈಲ್ವೆ ಸಚಿವರ ಉತ್ತರ
ಗುಜರಾತ್ ಹೈ ಕೋರ್ಟ್ ಮೆಟ್ಟಿಲೇರಿದ ರೈತರು
ಗುಜರಾತ್ ನ ಕೆಲ ರೈತರು ಈ ಯೋಜನೆ ಬಗ್ಗೆ ಕೆಲವು ಆಕ್ಷೇಪ ವ್ಯಕ್ತಪಡಿಸಿ, ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಜಪಾನ್ ನ 'ಜಿಕಾ' ಹಣಕಾಸಿನ ನೆರವು ನಿಲ್ಲಿಸುವ ಘೋಷಣೆ ಮಾಡಿದೆ. ಜತೆಗೆ ಈ ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ಗುಜರಾತ್ ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ. ರೈತರ ಸಮಸ್ಯೆ ನಿವಾರಿಸುವ ತನಕ ಸರಕಾರಕ್ಕೆ ಹಣಕಾಸಿನ ನೆರವು ನೀಡಬಾರದು ಎಂದು ಕೋರಿ ರೈತರು 'ಜಿಕಾ'ಗೆ ಪತ್ರ ಬರೆದಿದ್ದಾರೆ.
ಈ ತನಕ 125 ಕೋಟಿ ಮಾತ್ರ ಬಿಡುಗಡೆ
ಇಲ್ಲಿನ ಪರಿಸ್ಥಿತಿ ಅರ್ಥ ಮಾಡಿಕೊಳ್ಳುವುದಕ್ಕೆ ಜಪಾನ್ ನಿಂದ ಒಬ್ಬರನ್ನು ರಾಯಭಾರಿಯಾಗಿ ಕಳುಹಿಸಿ ಎಂದು ಕೇಳಿಕೊಳ್ಳಲಾಗಿದೆ. ಈ ಯೋಜನೆಗಾಗಿ ಈ ವರೆಗೆ ಜಿಕಾದಿಂದ 125 ಕೋಟಿ ಬಿಡುಗಡೆ ಮಾಡಲಾಗಿದೆ. 1 ಲಕ್ಷ ಕೋಟಿ ರುಪಾಯಿಯ ಈ ಯೋಜನೆಗೆ ಜಿಕಾ 80 ಸಾವಿರ ಕೋಟಿ ನೆರವು ನೀಡುವ ಭರವಸೆ ನೀಡಿತ್ತು.