FICCI ಸಭೆ: ಹಳ್ಳಿ, ಸಣ್ಣ ನಗರಗಳಲ್ಲಿ ಹೂಡಿಕೆಗೆ ಮೋದಿ ಕರೆ
ನವದೆಹಲಿ, ಡಿ.13: ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಮಂಡಳಿ (ಎಫ್ಐಸಿಸಿಐ) ಯ 93 ನೇ ವಾರ್ಷಿಕ ಸಾಮಾನ್ಯ ಸಭೆ ಮತ್ತು ವಾರ್ಷಿಕ ಸಮಾವೇಶವನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನಾ ಭಾಷಣ ಮಾಡಿದರು.
ದೇಶೀಯ ಅಗತ್ಯಗಳನ್ನು ಪೂರೈಸುವುದು ಮಾತ್ರವಲ್ಲದೆ ಜಾಗತಿಕವಾಗಿ ಪ್ರಬಲ ಬ್ರಾಂಡ್ ಇಂಡಿಯಾವನ್ನು ನಿರ್ಮಿಸುವ ಸಾಮರ್ಥ್ಯ ಹೊಂದಿರುವುದಕ್ಕಾಗಿ ಭಾರತದ ಖಾಸಗಿ ವಲಯವನ್ನು ಪ್ರಧಾನಿ ಶ್ಲಾಘಿಸಿದರು. ಆತ್ಮನಿರ್ಭರ ಭಾರತದ ಬಗ್ಗೆ ಪ್ರತಿಯೊಬ್ಬ ನಾಗರಿಕನಿಗಿರುವ ಬದ್ಧತೆಯು ದೇಶದ ಖಾಸಗಿ ವಲಯದ ಮೇಲಿರುವ ವಿಶ್ವಾಸಕ್ಕೆ ಒಂದು ಉದಾಹರಣೆಯಾಗಿದೆ ಎಂದರು.
ಕೋವಿಡ್ ಆಘಾತದಿಂದ ಚೇತರಿಸಿಕೊಳ್ಳಲು ಕೈಗಾರಿಕೋದ್ಯಮಿಗಳು ಮತ್ತು ಉದ್ಯಮಿಗಳ ನೀಡಿದ ಕೊಡುಗೆಗಾಗಿ ಪ್ರಧಾನಿ ಅಭಿನಂದಿಸಿದರು. ಸಾಂಕ್ರಾಮಿಕ ಸಮಯದಲ್ಲಿ ದೇಶವು ನಾಗರಿಕರ ಜೀವನಕ್ಕೆ ಆದ್ಯತೆ ನೀಡಿತು ಮತ್ತು ಅದು ಉತ್ತಮ ಫಲಿತಾಂಶವನ್ನು ನೀಡಿತು ಎಂದು ಅವರು ಹೇಳಿದರು. ಪರಿಸ್ಥಿತಿಗಳು ಆರಂಭದಲ್ಲಿ ಹದಗೆಟ್ಟಿದ್ದ ವೇಗದಲ್ಲಿಯೇ ಸುಧಾರಿಸಿದವು ಎಂದು ಶ್ರೀ ಮೋದಿ ಹೇಳಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಎಫ್ಐಸಿಸಿಐನ ಪಾತ್ರವನ್ನು ಸ್ಮರಿಸಿದ ಪ್ರಧಾನಿ, ಇದರ ಶತಮಾನೋತ್ಸವ ಹೆಚ್ಚು ದೂರವೇನೂ ಇಲ್ಲ, ರಾಷ್ಟ್ರ ನಿರ್ಮಾಣದಲ್ಲಿ ಅದು ತನ್ನ ಪಾತ್ರವನ್ನು ವಿಸ್ತರಿಸಬೇಕು ಎಂದು ಹೇಳಿದರು.
ಎಲ್ಲಾ ವಲಯದ ಪಾಲುದಾರರನ್ನು ಪ್ರೋತ್ಸಾಹಿಸುತ್ತಿದೆ
ಜೀವನ ಮತ್ತು ಆಡಳಿತದಲ್ಲಿ ಆತ್ಮವಿಶ್ವಾಸವಿರುವ ವ್ಯಕ್ತಿಯು ಇತರರಿಗೆ ಜಾಗ ನೀಡಲು ಎಂದಿಗೂ ಹಿಂಜರಿಯುವುದಿಲ್ಲ. ಬೃಹತ್ ಜನಾದೇಶದ ಬೆಂಬಲವಿರುವ ಸದೃಢ ಸರ್ಕಾರವು ಆ ವಿಶ್ವಾಸ ಮತ್ತು ಸಮರ್ಪಣೆಯನ್ನು ಹೊಂದಿದೆ.
ದೂರದೃಷ್ಟಿ ಮತ್ತು ನಿರ್ಣಾಯಕ ಸರ್ಕಾರವು ಎಲ್ಲಾ ಪಾಲುದಾರರು ತಮ್ಮ ಸಾಮರ್ಥ್ಯವನ್ನು ಸಾಕಾರಗೊಳಿಸಲು ಪ್ರೋತ್ಸಾಹಿಸುತ್ತದೆ. ಕಳೆದ ಆರು ವರ್ಷಗಳಲ್ಲಿ ಸರ್ಕಾರ ಎಲ್ಲಾ ವಲಯದ ಪಾಲುದಾರರನ್ನು ಪ್ರೋತ್ಸಾಹಿಸುತ್ತಿದೆ ಎಂದು ಮೋದಿ ಹೇಳಿದರು. ಉತ್ಪಾದನೆಯಿಂದ ಎಂಎಸ್ಎಂಇ ಮೂಲಸೌಕರ್ಯದಿಂದ ಕೃಷಿ, ಟೆಕ್ ಉದ್ಯಮದಿಂದ ತೆರಿಗೆ ಮತ್ತು ರಿಯಲ್ ಎಸ್ಟೇಟ್ನಿಂದ ಸರಳ ನಿಯಂತ್ರಕಗಳವರೆಗೆ ಎಲ್ಲ ಕ್ಷೇತ್ರಗಳಲ್ಲಿನ ಸರ್ವತೋಮುಖ ಸುಧಾರಣೆಗಳಲ್ಲಿ ಇದು ಪ್ರತಿಫಲಿಸುತ್ತಿದೆ ಎಂದು ಅವರು ಹೇಳಿದರು.
ನಮ್ಮ ಉದ್ಯಮಕ್ಕೆ ಸೇತುವೆಗಳು ಬೇಕೇ ಹೊರತು, ಗೋಡೆಗಳಲ್ಲ
ನಮ್ಮ ಉದ್ಯಮಕ್ಕೆ ಸೇತುವೆಗಳು ಬೇಕೇ ಹೊರತು, ಗೋಡೆಗಳಲ್ಲ ಎಂದು ಪ್ರಧಾನಿ ಹೇಳಿದರು. ಆರ್ಥಿಕತೆಯ ವಿವಿಧ ಕ್ಷೇತ್ರಗಳನ್ನು ಬೇರ್ಪಡಿಸುವ ಗೋಡೆಗಳನ್ನು ತೆಗೆದುಹಾಕುವ ಮೂಲಕ ಎಲ್ಲರಿಗೂ ಹೊಸ ಅವಕಾಶಗಳು ಸಿಗುತ್ತವೆ, ವಿಶೇಷವಾಗಿ ರೈತರಿಗೆ ಹೊಸ ಆಯ್ಕೆಗಳು ದೊರೆಯುತ್ತವೆ. ತಂತ್ರಜ್ಞಾನ, ಕೋಲ್ಡ್ ಸ್ಟೋರೇಜ್ ಮತ್ತು ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದರಿಂದ ರೈತರಿಗೆ ಪ್ರಯೋಜನವಾಗುತ್ತದೆ. ಕೃಷಿ, ಸೇವೆ, ಉತ್ಪಾದನೆ ಮತ್ತು ಸಾಮಾಜಿಕ ಕ್ಷೇತ್ರಗಳು ಪರಸ್ಪರ ಪೂರಕವಾಗುವಂತೆ ಮಾಡುವ ಮಾರ್ಗಗಳನ್ನು ಕಂಡುಕೊಳ್ಳಲು ಶಕ್ತಿಯನ್ನು ಹೂಡಿಕೆ ಮಾಡಬೇಕೆಂದು ಪ್ರಧಾನಿ ಕರೆ ನೀಡಿದರು.
FICCI ಯಂತಹ ಸಂಸ್ಥೆ ಈ ಪ್ರಯತ್ನದಲ್ಲಿ ಸೇತುವೆ ಮತ್ತು ಸ್ಫೂರ್ತಿ ಎರಡೂ ಆಗಬಹುದು. ಸ್ಥಳೀಯ ಮೌಲ್ಯ ಮತ್ತು ಪೂರೈಕೆ ಸರಪಳಿಯನ್ನು ಬಲಪಡಿಸುವ ಮತ್ತು ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತದ ಪಾತ್ರವನ್ನು ವಿಸ್ತರಿಸುವ ಗುರಿಯೊಂದಿಗೆ ನಾವು ಕೆಲಸ ಮಾಡಬೇಕು. ಭಾರತವು ಮಾರುಕಟ್ಟೆ, ಮಾನವಶಕ್ತಿ ಮತ್ತು ಮಿಷನ್ ಮೋಡ್ನಲ್ಲಿ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಮೋದಿ ಹೇಳಿದರು.
ಜನಧನ್, ಆಧಾರ್ ಮತ್ತು ಮೊಬೈಲ್
ಜೆ-ಎ-ಎಂ (ಜನಧನ್, ಆಧಾರ್ ಮತ್ತು ಮೊಬೈಲ್) ಟ್ರಿನಿಟಿ ಮೂಲಕ ಹಣಕಾಸಿನ ಸೇರ್ಪಡೆಯ ಯಶಸ್ಸು ಈ ಸರ್ಕಾರದ ಯೋಜಿತ ಮತ್ತು ಸಮಗ್ರ ವಿಧಾನಕ್ಕೆ ಅತ್ಯುತ್ತಮ ಉದಾಹರಣೆ ಎಂದು ಪ್ರಧಾನಿ ಹೇಳಿದರು. ಇದು ವಿಶ್ವದ ಅತಿದೊಡ್ಡ ನೇರ ಲಾಭ ವರ್ಗಾವಣೆ ವ್ಯವಸ್ಥೆಯಾಗಿದ್ದು, ಸಾಂಕ್ರಾಮಿಕ ಸಮಯದಲ್ಲಿ ಕೋಟಿಗಟ್ಟಲೆ ಖಾತೆಗಳಿಗೆ ಒಂದು ಬಟನ್ ಕ್ಲಿಕ್ ಮಾಡುವ ಮೂಲಕ ಹಣವನ್ನು ವರ್ಗಾಯಿಸುವ ಮೂಲಕ ದೇಶವು ಪ್ರಶಂಸೆಗೆ ಪಾತ್ರವಾಯಿತು ಎಂದರು.
ರೈತರ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ
ರೈತರಿಗೆ ಮತ್ತು ಕೃಷಿ ಕ್ಷೇತ್ರಕ್ಕೆ ಸುದೀರ್ಘವಾಗಿ ನೆರವಾಗುವ ಕ್ರಮಗಳ ಬಗ್ಗೆ ಪ್ರಧಾನಿ ಪ್ರಸ್ತಾಪಿಸಿದರು. ನೀತಿ ಮತ್ತು ಉದ್ದೇಶದ ಮೂಲಕ (ನೀತಿ ಮತ್ತು ನಿಯತ್ತು), ರೈತರ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದರು. ಕೃಷಿ ಕ್ಷೇತ್ರದ ಹೆಚ್ಚುತ್ತಿರುವ ಚೈತನ್ಯದ ಬಗ್ಗೆ ಮಾತನಾಡಿದ ಅವರು, ರೈತರು ತಮ್ಮ ಉತ್ಪನ್ನಗಳನ್ನು ಮಂಡಿಗಳ ಹೊರಗೆ ಮಾರಾಟ ಮಾಡಲು ಹೊಸ ಪರ್ಯಾಯ, ಮಂಡಿಗಳ ಆಧುನೀಕರಣ ಮತ್ತು ಎಲೆಕ್ಟ್ರಾನಿಕ್ ಪ್ಲಾಟ್ಫಾರ್ಮ್ನಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಆಯ್ಕೆಯು ಲಭ್ಯವಾಗಿದೆ ಎಂದು ಅವರು ತಿಳಿಸಿದರು. ರೈತ ಸಮೃದ್ಧನಾದರೆ, ರಾಷ್ಟ್ರ ಸಮೃದ್ಧವಾದಂತೆ. ಆದ್ದರಿಂದ ರೈತನನ್ನು ಸಮೃದ್ಧನನ್ನಾಗಿ ಮಾಡುವುದು ಇದೆಲ್ಲದರ ಗುರಿಯಾಗಿದೆ ಎಂದರು.
ಕೃಷಿಯಲ್ಲಿ ಖಾಸಗಿ ವಲಯದ ಹೂಡಿಕೆಯು ಸಾಕಷ್ಟಿಲ್ಲ
ಕೃಷಿಯಲ್ಲಿ ಖಾಸಗಿ ವಲಯದ ಹೂಡಿಕೆಯು ಸಾಕಷ್ಟಿಲ್ಲ ಎಂದು ಮೋದಿ ಹೇಳಿದರು. ಸರಬರಾಜು ಸರಪಳಿ, ಕೋಲ್ಡ್ ಸ್ಟೋರೇಜ್ ಮತ್ತು ರಸಗೊಬ್ಬರಗಳಂತಹ ಕ್ಷೇತ್ರಗಳಲ್ಲಿ ಖಾಸಗಿ ವಲಯದ ಆಸಕ್ತಿ ಮತ್ತು ಹೂಡಿಕೆ ಎರಡೂ ಅಗತ್ಯವಿದೆ ಎಂದು ಅವರು ಹೇಳಿದರು. ಗ್ರಾಮೀಣ ಕೃಷಿ ಆಧಾರಿತ ಕೈಗಾರಿಕೆಗಳಲ್ಲಿ ಭಾರಿ ಅವಕಾಶವಿದೆ ಮತ್ತು ಅದಕ್ಕಾಗಿ ಸ್ನೇಹಪರ ನೀತಿಗಳು ಜಾರಿಯಲ್ಲಿವೆ ಎಂದು ಪ್ರಧಾನಿ ಹೇಳಿದರು.
ಗ್ರಾಮೀಣ, ಅರೆ-ಗ್ರಾಮೀಣ ಮತ್ತು ಎರಡು ಮತ್ತು ಮೂರನೇ ಶ್ರೇಣಿಯ ನಗರಗಳಲ್ಲಿ ಆಗುತ್ತಿರುವ ಸಕಾರಾತ್ಮಕ ಬದಲಾವಣೆಯ ಬಗ್ಗೆ ಗಮನಸೆಳೆದ ಪ್ರಧಾನಿ, ಇಂತಹ ಕ್ಷೇತ್ರಗಳಲ್ಲಿನ ಅವಕಾಶಗಳ ಪ್ರಯೋಜನ ಪಡೆಯಲು ವ್ಯಾಪಾರ ಮತ್ತು ಉದ್ಯಮದ ಹಿರಿಯ ಮುಖಂಡರನ್ನು ಆಹ್ವಾನಿಸಿದರು.
ಸ್ಟಾರ್ಟ್ ಅಪ್ ಗಳು 2 ಮತ್ತು 3ನೇ ಶ್ರೇಣಿ ನಗರಗಳಲ್ಲಿವೆ
ಗ್ರಾಮೀಣ ಪ್ರದೇಶಗಳಲ್ಲಿನ ಇಂಟರ್ನೆಟ್ ಬಳಕೆದಾರರ ಸಂಖ್ಯೆಯು ನಗರಗಳನ್ನು ಮೀರಿಸಿದೆ ಮತ್ತು ಭಾರತದ ಅರ್ಧದಷ್ಟು ಸ್ಟಾರ್ಟ್ ಅಪ್ ಗಳು 2 ಮತ್ತು 3ನೇ ಶ್ರೇಣಿ ನಗರಗಳಲ್ಲಿವೆ ಎಂದು ಅವರು ಹೇಳಿದರು. ಸಾರ್ವಜನಿಕ ವೈ-ಫೈ ಹಾಟ್ಸ್ಪಾಟ್ಗಳಿಗಾಗಿ ಇತ್ತೀಚೆಗೆ ಅನುಮೋದಿಸಲಾದ ಪಿಎಂ-ವಾಣಿ ಬಗ್ಗೆ ಪ್ರಸ್ತಾಪಿಸಿದ ಅವರು, ಗ್ರಾಮೀಣ ಸಂಪರ್ಕ ಕುರಿತ ಪ್ರಯತ್ನಗಳಲ್ಲಿ ಉದ್ಯಮಿಗಳು ಪಾಲುದಾರರಾಗಬೇಕು ಎಂದು ಹೇಳಿದರು. "21 ನೇ ಶತಮಾನದಲ್ಲಿ, ಭಾರತದ ಬೆಳವಣಿಗೆಯನ್ನು ಹಳ್ಳಿಗಳು ಮುನ್ನಡೆಸುತ್ತವೆ. ನಿಮ್ಮಂತಹ ಉದ್ಯಮಿಗಳು ಹಳ್ಳಿಗಳು ಮತ್ತು ಸಣ್ಣ ನಗರಗಳಲ್ಲಿ ಹೂಡಿಕೆ ಮಾಡುವ ಅವಕಾಶವನ್ನು ಕಳೆದುಕೊಳ್ಳಬಾರದು. ನಿಮ್ಮ ಹೂಡಿಕೆಯು ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಕೃಷಿ ಕ್ಷೇತ್ರದ ನಮ್ಮ ಸಹೋದರ ಸಹೋದರಿಯರಿಗೆ ಹೊಸ ಅವಕಾಶಗಳ ಬಾಗಿಲು ತೆರೆಯುತ್ತದೆ''ಎಂದು ಪ್ರಧಾನಿ ಹೇಳಿದರು.