ಜುಲೈನಿಂದ ಷೇರು ಪೇಟೆಯಲ್ಲಿ ಪಿಎಫ್ ಹಣ ಹೂಡಿಕೆ
ನವದೆಹಲಿ, ಜೂ. 29 : ಕಾರ್ಮಿಕ ಸಂಘಟನೆಗಳು ಮೊದಲಿನಿಂದ ವಿರೋಧ ವ್ಯಕ್ತಪಡಿಸುತ್ತ ಬಂದಿದ್ದರೂ ಜುಲೈನಿಂದ ಭವಿಷ್ಯ ನಿಧಿ ಹಣವನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸಲು ಭವಿಷ್ಯ ನಿಧಿ ಸಂಸ್ಥೆ (ಪಿಎಫ್ ಒ) ಮುಂದಾಗಿದೆ.
ಮೊದಲಿಗೆ ಶೇ.1ರಷ್ಟು ಹಣ ಹೂಡಿಕೆ ಮಾಡಲಿದ್ದು ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ಶೇ.5ಕ್ಕೆ ಹೆಚ್ಚಿಸಲಾಗುವುದು ಎಂದು ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಮಾಹಿತಿ ನೀಡಿದ್ದಾರೆ. ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ಗಳಲ್ಲಿ ಇಪಿಎಫ್ಒ ಹೆಚ್ಚಿನ ಹೂಡಿಕೆ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ.[ಪಿಎಫ್ ಹೊಸ ನಿಮಯ : ಟೇಕ್ ಹೋಮ್ ಸಂಬಳಕ್ಕೆ ಕುತ್ತು !]
ಒಂದು ಹಣಕಾಸು ವರ್ಷದಲ್ಲಿ 1 ಲಕ್ಷ ಕೋಟಿ ರು. ಹೂಡಿಕೆ ಮಾಡಲಾಗುವುದು. ಇದರಲ್ಲಿ 5 ಸಾವಿರ ಕೋಟಿ ರು. ಷೇರುಗಳಲ್ಲಿ ತೊಡಗಿಸಲಾಗುವುದು ಎಂದು ಇಪಿಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದು ಸರ್ಕಾರದ ಬಂಡವಾಳ ಕ್ರೋಢಿಕರಣಕ್ಕೂ ನೆರವಾಗಲಿದೆ.[ಹಳೆ ನೋಟು ಬದಲಾವಣೆ ಗಡುವು ವಿಸ್ತರಣೆ]
ದೇಶದಲ್ಲಿ ಆರ್ಥಿಕ ಸುಧಾರಣೆ ತರುವ ನಿಟ್ಟಿನಲ್ಲಿ ತೆರಿಗೆ ನೀತಿ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಹಣ ಸದಾ ಚಲಾಚಣೆಯಲ್ಲಿ ಇರಬೇಕು. ಯಾವ ಕಾರಣಕ್ಕೂ ಒಂದೆ ಕಡೆ ನೆಲೆ ನಿಂತು ಪ್ರಯೋಜನಕ್ಕೆ ಬಾರದಂತೆ ಆಗಬಾರದು ಎಂಬ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂಥ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.