ಡೀಸೆಲ್, ಪೆಟ್ರೋಲ್ ವಾಹನ ರದ್ದು ಮಾಡಲ್ಲ: ಕೇಂದ್ರ ಸಚಿವ ನಿತಿನ್ ಗಡ್ಕರಿ
ನವದೆಹಲಿ, ಸೆಪ್ಟೆಂಬರ್ 5: ವಾಹನ ಕ್ಷೇತ್ರದಲ್ಲಿನ ಹಿಂಜರಿತವನ್ನು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಗುರುವಾರ ಒಪ್ಪಿಕೊಂಡಿದ್ದಾರೆ. ಈ ಕ್ಷೇತ್ರದಲ್ಲಿ ಬೇಡಿಕೆ ಸೃಷ್ಟಿಸಲು ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ರಫ್ತು ಉತ್ತೇಜನ, ಜಿಎಸ್ ಟಿ ಉತ್ತೇಜನವನ್ನು ನೀಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಇಂಟರ್ನಲ್ ಕಂಬಷನ್ ಎಂಜಿನ್ (ಐಸಿಇ) ಅನ್ನು ಸ್ಥಗಿತಗೊಳಿಸುವ ಯೋಜನೆ ಸರಕಾರದ ಮುಂದೆ ಇಲ್ಲ ಎಂದು ಹೇಳಿದ್ದಾರೆ.
ಮೋದಿ ಸರ್ಕಾರದಿಂದ ಆರ್ಥಿಕತೆಯ ಕೆಟ್ಟ ನಿರ್ವಹಣೆ: ಮನಮೋಹನ್ ಸಿಂಗ್
"ಸದ್ಯದ ಆರ್ಥಿಕ ಸ್ಥಿತಿಯ ಅಂಕಿ- ಅಂಶಗಳಿಗೆ ಸಂಬಂಧಿಸಿದಂತೆ ವಾಹನ ಕ್ಷೇತ್ರವು ಹಿಂಜರಿತವನ್ನು ಎದುರಿಸುತ್ತದೆ. ಅದಕ್ಕೆ ಕಾರಣ ಆಗಿರುವುದು ಜಾಗತಿಕ ಆರ್ಥಿಕತೆ, ಬೇಡಿಕೆ ಹಾಗೂ ಪೂರೈಕೆ. ಸರಕಾರವು ಆಟೋಮೊಬೈಲ್ ಕ್ಷೇತ್ರದ ಜತೆ ಇದೆ ಎಂದು ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ.
ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗಲು ಯಾವುದೇ ಗಡುವು ಇಲ್ಲ. ಅಂಥ ಗಡುವು ವಿಧಿಸುವ ಉದ್ದೇಶವೂ ಸರಕಾರಕ್ಕೆ ಇಲ್ಲ. ಆದರೆ ಏಳು ಲಕ್ಷ ಕೋಟಿಯಷ್ಟು ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿರುವ ಕಡೆ ನೋಡಬೇಕು, ಜತೆಗೆ ಮಾಲಿನ್ಯದ ಸಮಸ್ಯೆ. ಪೆಟ್ರೋಲ್, ಡೀಸೆಲ್ ಎಂಜಿನ್ ವಾಹನಗಳನ್ನು ನಾವು ನಿಷೇಧಿಸುತ್ತಿಲ್ಲ ಎಂದು ಹೇಳಿದ್ದಾರೆ.
ಹೊಸ ಬಿಎಸ್- 6 ಎಂಜಿನ್ ಅನ್ನು ಪರಿಚಯಿಸುವುದರಿಂದ ವಾಹನಗಳ ಬೆಲೆ ಹೆಚ್ಚಾಗಬಹುದು. ಅದಕ್ಕಾಗಿ ಜಿಎಸ್ ಟಿ ದರವನ್ನು ತಗ್ಗಿಸಲು ಮನವಿ ಮಾಡಲಾಗಿದೆ. ಆ ಬೇಡಿಕೆ ಅನುಸಾರ ಹೈಬ್ರಿಡ್ ವಾಹನಗಳ ಮೇಲೆ ಜಿಎಸ್ ಟಿ ಇಳಿಸಲು ಯತ್ನಿಸುತ್ತಿದ್ದೇವೆ. ಈಗಾಗಲೇ ಎಲೆಕ್ಟ್ರಿಕ್ ವಾಹನಗಳಿಗೆ ಇಳಿಕೆ ಮಾಡಿದ್ದೇವೆ ಎಂದು ಗಡ್ಕರಿ ತಿಳಿಸಿದ್ದಾರೆ.
ಜಿಎಸ್ ಟಿ ಇಳಿಕೆಗೆ ಬಂದ ಬೇಡಿಕೆಯನ್ನು ವಿತ್ತ ಸಚಿವರ ಬಳಿ ಒಯ್ಯುತ್ತೇನೆ. ಅದು ಸೀಮಿತ ಸಮಯಕ್ಕೆ ಆದರೂ ಆ ಕೆಲಸ ಆಗಲು ಪ್ರಯತ್ನಿಸುತ್ತೇನೆ. ಈಗ ಆ ವಲಯಕ್ಕೆ ನೆರವು ಬೇಕಿದೆ. ಆ ನೆರವಿನಿಂದ ಮಾರಾಟ ಹೆಚ್ಚಾಗಬೇಕು ಎಂದು ಅವರು ಹೇಳಿದ್ದಾರೆ.
ತಮ್ಮ ಕಂಪೆನಿಯೊಳಗೇ ಫೈನಾನ್ಸಿಂಗ್ ಕಂಪೆನಿ ಮಾಡುವಂತೆ ಕೆಲವರಿಗೆ ಸಲಹೆ ನೀಡಿದ್ದೇನೆ. ಇದರಿಂದ ಮಾರಾಟ ಹೆಚ್ಚಳಕ್ಕೆ ಸಹಾಯ ಆಗುತ್ತದೆ. ಇನ್ನು ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಐದು ಲಕ್ಷ ಕೋಟಿ ವೆಚ್ಚದಲ್ಲಿ ಅರವತ್ತೆಂಟು ರಸ್ತೆಗಳ ನಿರ್ಮಾಣ ಆಗಲಿದೆ. ಇದರಿಂದ ಕೂಡ ಟ್ರಕ್ ಸೇರಿದಂತೆ ಕೆಲ ವಾಹನಗಳ ಮಾರಾಟ ಹೆಚ್ಚಳಕ್ಕೆ ನೆರವಾಗುತ್ತದೆ ಎಂದು ನಿತಿನ್ ಗಡ್ಕರಿ ಮಾಹಿತಿ ನೀಡಿದರು.