ಪತಂಜಲಿ ಸಿಮ್ ಪಡೆಯಿರಿ, ಶೇ10ರಷ್ಟು ರಿಯಾಯಿತಿ ಗಳಿಸಿ!
ಬೆಂಗಳೂರು, ಮೇ 28: ಯೋಗಗುರು ಬಾಬಾ ರಾಮ್ ದೇವ್ ಅವರು ತಮ್ಮ ಪತಂಜಲಿ ಆಹಾರ ಉತ್ಪನ್ನ ಕ್ಷೇತ್ರ ಮಾಡಿದ ಬಳಿಕ ಟೆಲಿಕಾಂ ಕ್ಷೇತ್ರಕ್ಕೆ ಕಾಲಿರಿಸಿದೆ.
ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ನಿಯಮಿತ(ಬಿಎಸ್ಎನ್ಎಲ್) ಹಾಗೂ ಬಾಬಾ ರಾಮ್ ದೇವ್ ಅವರ ಪತಂಜಲಿ ಕೈಜೋಡಿಸಿದ್ದು, ಸ್ವದೇಶಿ ಸಮೃದ್ಧಿ ಸಿಮ್ ಕಾರ್ಡ್ ಗಳನ್ನು ನೀಡಲು ಮುಂದಾಗಿವೆ.
ಸದ್ಯ ಈ ಸಿಮ್ ನೌಕರರಿಗೆ ಮಾತ್ರ ಲಭ್ಯವಿರಲಿದೆ. 144 ರೂಪಾಯಿ ರೀಚಾರ್ಜ್ ಮಾಡಿದಲ್ಲಿ ಬಳಕೆದಾರರಿಗೆ 2 ಜಿಬಿ ಡೇಟಾ ಪ್ಯಾಕ್, ಪ್ರತಿ ದಿನ 100 ಎಸ್ಎಂಎಸ್ ಉಚಿತವಾಗಿ ಸಿಗಲಿದೆ ಹಾಗೂ ಅನಿಯಮಿತ ಕಾಲಿಂಗ್ ಕೂಡಾ ಲಭ್ಯ.
ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿರುವ ಈ ಸಿಮ್ ಹೊಂದಿರುವವರು, ಇಂಟರ್ನೆಟ್ ಡೇಟಾ, ಎಸ್ಎಂಎಸ್ ಜೊತೆ ಪತಂಜಲಿ ಉತ್ಪನ್ನಗಳ ಮೇಲೆ ಶೇಕಡಾ 10ರಷ್ಟು ರಿಯಾಯಿತಿ ಪಡೆಯಬಹುದಾಗಿದೆ. ಜತೆಗೆ ಈ ಸಿಮ್ ಬಳಕೆದಾರರಿಗೆ 2.5 ಲಕ್ಷ ರೂಪಾಯಿಯವರೆಗೆ ವೈದ್ಯಕೀಯ ವಿಮೆ ಹಾಗೂ 5 ಲಕ್ಷ ರೂಪಾಯಿಯವರೆಗೆ ಅಪಘಾತ ಸಂದರ್ಭದಲ್ಲಿ ಜೀವವಿಮೆ ಸಿಗಲಿದೆ.
ಬಿಎಸ್ಎನ್ಎಲ್ ಹಾಗೂ ಪತಂಜಲಿ ಸ್ವದೇಶಿ ಕಂಪನಿಗಳಾಗಿದ್ದು, ಎರಡೂ ಸೇರಿ ದೇಶದ ಸೇವೆ ಮಾಡಲಿವೆ ಎಂದು ಬಾಬಾ ರಾಮ್ ದೇವ್ ಹೇಳಿದ್ದಾರೆ.