ಅಪನಗದೀಕರಣ ವರ್ಷಕ್ಕೆ ಬಂತು, ಚಿನ್ನಾಭರಣ ವ್ಯಾಪಾರಿಗಳು ಏನಂತಾರೆ?
"ಇನ್ನೂರು ಕಿಲೋಮೀಟರ್ ವೇಗದಲ್ಲಿ ಓಡುವ ಕಾರನ್ನು ತಯಾರಿ ಮಾಡುವ ಮೊದಲೇ ಅಷ್ಟು ವೇಗದಲ್ಲಿ ಚಲಿಸಲು ಯೋಗ್ಯವಾದಂಥ ರಸ್ತೆಗಳಿವೆಯೇ ಎಂಬುದನ್ನು ಯೋಚಿಸಬೇಕು. ಈ ಉದಾಹರಣೆಗೆ ಹೋಲಿಸಿ ಹೇಳುವುದಾದರೆ ಅಪನಗದೀಕರಣ ಅನ್ನೋದು ಮೊದಲ ಹೊಡೆತ" ಅಂತಲೇ ಮಾತಿಗಾರಂಭಿಸಿದರು ಚಿನ್ನಾಭರಣಗಳ ಆ ವ್ಯಾಪಾರಿ.
ಮೋದಿಯವರಿಗೆ ಜನರ ಭಾವನೆ ಅರ್ಥವಾಗ್ತಿಲ್ಲ : ರಾಹುಲ್ ವಾಗ್ದಾಳಿ
ಅಪನಗದೀಕರಣದ ಬಗ್ಗೆ ತೀರ್ಥಹಳ್ಳಿಯ ಚಿನ್ನಾಭರಣ ವ್ಯಾಪಾರಿಯೊಬ್ಬರನ್ನು ಒನ್ಇಂಡಿಯಾ ಕನ್ನಡ ಮಾತನಾಡಿಸಿದೆ. ಅಪನಗದೀಕರಣದ ನಂತರ ಆದ ಬೆಳವಣಿಗೆಗಳ ಬಗ್ಗೆ ಹಾಗೂ ವ್ಯಾಪಾರದಲ್ಲಿ ಆದ ಹಿನ್ನಡೆಯನ್ನು ಇಷ್ಟಿಷ್ಟಾಗಿ ಬಿಡಿಸಿಟ್ಟಿದ್ದಾರೆ. ನೋಟು ನಿಷೇಧಕ್ಕೆ ಈ ತಿಂಗಳ ಎಂಟನೇ ತಾರೀಕು ವರ್ಷ ತುಂಬುತ್ತದೆ.
ಕಪ್ಪು ಹಣದ ನಿಯಂತ್ರಣ, ಭಯೋತ್ಪಾದಕರನ್ನು ಮಟ್ಟ ಹಾಕುವುದು ಹಾಗೂ ಭ್ರಷ್ಟಾಚಾರ ನಿಗ್ರಹದಂಥ ಉದ್ದೇಶ ಹೊಂದಿದ್ದ ಅಪನಗದೀಕರಣ ದೇಶದ ವಿವಿಧ ವಲಯಗಳ ಮೇಲೆ ನಾನಾ ರೀತಿಯ ಪರಿಣಾಮ ಬೀರಿದೆ. ನೋಟು ನಿಷೇಧದ ಪರಿಣಾಮ ಐವತ್ತು ದಿನಗಳ ಮಟ್ಟಿಗೆ ತೀವ್ರತರ ಆಗಿರುತ್ತದೆ. ಆ ನಂತರ ಸರಿಹೋಗುತ್ತದೆ ಎಂಬ ಭರವಸೆ ನೀಡಿದ್ದರು ಪ್ರಧಾನಿ ನರೇಂದ್ರ ಮೋದಿ. ಆದರೆ ಹಾಗೆ ಆಗಲಿಲ್ಲ.
ನವೆಂಬರ್ 8ರಂದು ಬಿಜೆಪಿಯಿಂದ ಕಪ್ಪು ಹಣ ವಿರೋಧಿ ದಿನ
ವಿವಿಧ ಕ್ಷೇತ್ರಗಳ ಪೈಕಿ ಮುಖ್ಯವಾಗಿ ಚಿನ್ನದ ಆಭರಣಗಳ ವ್ಯಾಪಾರಕ್ಕೆ ಹಿನ್ನಡೆ ಆಗಿದೆ ಎಂಬ ವರ್ತಕರ ಆರೋಪದ ಹಿನ್ನೆಲೆಯಲ್ಲಿ ಅವರ ಮಾತುಗಳ ಯಥಾವತ್ ಲೇಖನ ನಿಮ್ಮೆದುರು ಇದೆ.
ಡಿಜಿಟಲ್ ವ್ಯವಹಾರ ಅಂದರೆ ಹೆದರುವ ಮಹಿಳೆಯರು
"ಡಿಜಿಟಲ್ ವ್ಯವಹಾರ ತಂದಿರುವುದರಿಂದ ಕಪ್ಪು ಹಣದ ಪ್ರಮಾಣ ಕಡಿಮೆ ಆಗುತ್ತದೆ ಎಂಬುದು ನಿಜ ಅಂದುಕೊಳ್ಳೋಣ. ಆದರೆ ಚಿನ್ನಾಭರಣ ವ್ಯಾಪಾರ ಮಾಡುವವರಲ್ಲಿ ಹೆಂಗಸರೇ ಹೆಚ್ಚು. ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ಮತ್ತ್ಯಾವುದೇ ರೀತಿಯ ಡಿಜಿಟಲ್ ವ್ಯವಹಾರ ಮಾಡುವುದಕ್ಕೆ ಅವರು ಹೆದರುತ್ತಾರೆ. ಜತೆಗೆ ಮಾಧ್ಯಮಗಳಲ್ಲೂ ಇಂಥ ವ್ಯವಹಾರದಲ್ಲಿ ಆಗುವ ವಂಚನೆ ಬಗ್ಗೆ ಸುದ್ದಿ ಬರುತ್ತಿದೆ".
ಯುವ ಜನತೆ ಧೈರ್ಯ
ಯುವ ಜನತೆ ಸ್ವಲ್ಪ ಧೈರ್ಯವಾಗಿ ಡಿಜಿಟಲ್ ವ್ಯವಹಾರ ಮಾಡುತ್ತಾರೆ ಮತ್ತು ಅವರ ಆರ್ಥಿಕ ವಿಚಾರದ ತಿಳಿವಳಿಕೆ ಹೆಚ್ಚು. ಆದರೆ ಮನೆಗಳಲ್ಲಿ ಇರುವ ಹಿರಿಯ ವಯಸ್ಸಿನವರಲ್ಲಿ ಮನಸಿನಲ್ಲಿ ಭಯ ಇದೆ. ಜತೆಗೆ ಪ್ಯಾನ್ ಕಾರ್ಡ್, ಆಧಾರ್ ಬೇಕು ಮತ್ತು ಮಾಧ್ಯಮಗಳಲ್ಲೇ ಹೀಗಾಗಬಹುದು- ಹಾಗಾಗಬಹುದು ಎಂದು ಸುದ್ದಿ ಪ್ರಕಟವಾಗಿದ್ದರಿಂದ ಚಿನ್ನಾಭರಣ ಖರೀದಿ ಮಾಡುವುದನ್ನೇ ನಿಲ್ಲಿಸಿದ ಹಾಗೂ ಕಾದು ನೋಡೋಣ ಅಂದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ.
ಮಾಧ್ಯಮಗಳ ಸುದ್ದಿಯಿಂದ ಗೊಂದಲ
ಈ ವರ್ಷದ ಏಪ್ರಿಲ್ ಹಾಗೂ ಮೇ ತಿಂಗಳ ಮದುವೆ ಸೀಸನ್ ನಲ್ಲಿ ಒಂದಿಷ್ಟು ವ್ಯಾಪಾರ ಆಯಿತು. ಅದೂ ಕಳೆದ ವರ್ಷದ ಸೀಸನ್ ಗೆ ಹೋಲಿಸಿದರೆ ತೀರಾ ಕಡಿಮೆ. ಒಟ್ಟಾರೆ ಈ ವರ್ಷವೇ ವ್ಯಾಪಾರ ಕಡಿಮೆ ಆಗಿದೆ. ಸರಕಾರದ ಉದ್ದೇಶದ ಬಗ್ಗೆ ನಮ್ಮ ತಕರಾರೇನಿಲ್ಲ. ಆದರೆ ಈ ವಿಚಾರವಾಗಿ ಅತಿ ಹೆಚ್ಚು ಗೊಂದಲ ಆಗಿದ್ದು ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದಲ್ಲೇ. ಬ್ಯಾಂಕ್ ಗಳಿಂದ ಹಣ ತೆಗೆಯಲಾರದೆ, ಚೆಕ್- ಡ್ರಾಫ್ಟ್ ಅಂಥದ್ದು ಕೊಡಲು ಜನರು ಹೆದರಿಬಿಟ್ಟರು.
ಗಾಯದ ಮೇಲಿನ ಬರೆ ಜಿಎಸ್ ಟಿ
ಇನ್ನು ಜಿಎಸ್ ಟಿ ಜಾರಿಗೆ ತಂದಿದ್ದು ಗಾಯದ ಮೇಲೆ ಬರೆ ಎಳೆದಂತೆಯೇ ಆಗಿದೆ. ಆದಾಯ ತೆರಿಗೆ ಪಾವತಿಸುವ ವೇತನದಾರರಂತೂ ಬಹಳ ಒದ್ದಾಡುತ್ತಿದ್ದಾರೆ. ಆದಾಯ ತೆರಿಗೆ ಪಾವತಿಸುವ ಜತೆಗೆ ನಿತ್ಯವೂ ಕಾಫಿ ಕುಡಿಯಲು ರೆಸ್ಟೋರೆಂಟ್ ಗೆ ಹೋದರೆ ಆರಂಭವಾಗುವ ಜಿಎಸ್ ಟಿ ಬೆನ್ನು ಬಿಡದೆ ಹಿಂಡಿ ಹಾಕುತ್ತಿದೆ. ಬೇಕಾದರೆ ಲೆಕ್ಕ ಹಾಕಿ ನೋಡಬಹುದು.
ಒಂದು ದಿನಕ್ಕೆ ಏನೆಲ್ಲ ಖರೀದಿ ಮಾಡಲಾಗುತ್ತದೆ. ಅದಕ್ಕೆಲ್ಲ ಸೇರಿ ಒಟ್ಟು ಎಷ್ಟು ತೆರಿಗೆ ಬೀಳುತ್ತದೆ. ಪಟ್ಟಿ ಮಾಡಿ ಲೆಕ್ಕ ಹಾಕಿಕೊಳ್ಳಲಿ. ಇಷ್ಟೆಲ್ಲ ಜಿಎಸ್ ಟಿ ಪಾವತಿಸಿದ ನಂತರವೂ ಆದಾಯ ತೆರಿಗೆಯನ್ನು ಕಡಿಮೆ ಮಾಡದಿದ್ದರೆ ಎಲ್ಲ ಕ್ಷೇತ್ರಗಳಿಗೂ ಕಷ್ಟ. ಒಂದೋ ಆದಾಯ ತೆರಿಗೆಯನ್ನೇ ಪೂರ್ತಿ ತೆಗೆದುಬಿಡಬೇಕು ಅಥವಾ ಕಡಿಮೆ ಮಾಡಲೇಬೇಕು.