'ಎನ್ ಪಿಎದಿಂದ ಆರ್ಥಿಕತೆಗೆ ಹೊಡೆತ ಹೊರತು ಅಪನಗದೀಕರಣದಿಂದಲ್ಲ'
ಅನುತ್ಪಾದಕ ಆಸ್ತಿಯಿಂದ (ನಾನ್ ಪರ್ಫಾಮಿಂಗ್ ಅಸೆಟ್ಸ್) ಆರ್ಥಿಕ ಪ್ರಗತಿಗೆ ಹೊಡೆತ ಬಿದ್ದಿದ್ದೇ ಹೊರತು ಅಪನಗದೀಕರಣದಿಂದ ಅಲ್ಲ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಸೋಮವಾರ ಹೇಳಿದ್ದಾರೆ. 2015-16ರ ಕೊನೆ ತ್ರೈಮಾಸಿಕದಿಂದ ಶುರುವಾಗಿ 6 ತ್ರೈ ಮಾಸಿಕದಲ್ಲಿ ಆರ್ಥಿಕ ಪ್ರಗತಿ ಕುಂಠಿತವಾಗಲು ಅನುತ್ಪಾದಕ ಆಸ್ತಿ ಕಾರಣ ಎಂದು ಅವರು ಹೇಳಿದ್ದಾರೆ.
ಅಭಿವೃದ್ಧಿ ದರವು 9.2ರಷ್ಟು ಇತ್ತು. ಆದ್ದರಿಂದ ಅಪನಗದೀಕರಣ ಯಾವುದೇ ದುಷ್ಪರಿಣಾಮ ಬೀರಿಲ್ಲ. ಬ್ಯಾಂಕಿಂಗ್ ವಲಯದಲ್ಲಿ ಎನ್ ಪಿಎಗಳು ಹೆಚ್ಚಾದಂತೆ ಅಭಿವೃದ್ಧಿ ದರ ಕುಸಿಯುತ್ತಾ ಬಂತು. ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಾಗ ಆ ಮೊತ್ತ 4 ಲಕ್ಷ ಕೋಟಿ ರುಪಾಯಿ ಇತ್ತು. 2017ರ ಮಧ್ಯದ ಹೊತ್ತಿಗೆ ಅದು 10.5 ಲಕ್ಷ ಕೋಟಿ ರುಪಾಯಿ ತಲುಪಿತು ಎಂದಿದ್ದಾರೆ.
ಅಪನಗದೀಕರಣವನ್ನು ಅನಾಹುತ ಎಂದು ಕರೆದು ಅಂಕಿ-ಅಂಶ ತೆರೆದಿಟ್ಟ ಚಿದಂಬರಂ
ಈ ಹಿಂದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಆಗಿದ್ದ ರಘುರಾಮ್ ರಾಜನ್ ಒತ್ತಡ ಹೆಚ್ಚಿದ್ದ ಎನ್ ಪಿಎಗಳನ್ನು ಗುರುತಿಸಲು ಹೊಸ ವಿಧಾನ ತಂದರು. ಇದರಿಂದಾಗಿ ನಿರಂತರವಾಗಿ ಎನ್ ಪಿಎ ಏರಿಕೆ ಆಯಿತು. ಆರ್ಥಿಕ ಹಿನ್ನಡೆಗೂ ಮತ್ತು ಅಪನಗದೀಕರಣಕ್ಕೂ ಸಂಬಂಧ ಇದೆ ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಬಂಡವಾಳ ವೆಚ್ಚ ಹೆಚ್ಚು ಮಾಡುವ ಮೂಲಕ ಅಭಿವೃದ್ಧಿ ದರದ ಕುಸಿತವನ್ನು ತಡೆಯಬಹುದು. ಸರಕಾರ ಆ ಕೆಲಸವನ್ನು ಮಾಡಿದೆ. 2017- 18ರ ಎರಡನೇ ತ್ರೈ ಮಾಸಿಕದಿಂದ ಪ್ರಗತಿ ದರ ಏರಿಕೆ ಹಾದಿಯಲ್ಲಿದೆ ಎಂದು ರಾಜೀವ್ ಕುಮಾರ್ ತಿಳಿಸಿದ್ದಾರೆ.
ಆರ್ ಬಿಐ ವರದಿ ಪ್ರಕಾರ, ಅಪನಗದೀಕರಣದ ನಂತರ 13 ಸಾವಿರ ಕೋಟಿ ರುಪಾಯಿ ವಾಪಸ್ ಆಗಿಲ್ಲ. ಇದು ಬಿಟ್ಟು ತೆರಿಗೆ ಅಧಿಕಾರಿಗಳು 23,942 ಕೋಟಿ ವಶಪಡಿಸಿಕೊಂಡಿದ್ದಾರೆ. ಇವೆರಡೂ ಸೇರಿ 36 ಸಾವಿರ ಕೋಟಿ ಆಗುತ್ತದೆ. 18 ಲಕ್ಷ ಅನುಮಾನಾಸ್ಪದ ಖಾತೆಗಳನ್ನು ಪತ್ತೆ ಹಚ್ಚಲಾಗಿದೆ. ಇನ್ನೂ 1.5 ಲಕ್ಷ ಕೋಟಿ ರುಪಾಯಿ ಆರ್ಥಿಕತೆಗೆ ವಾಪಸಾಗುವ ನಿರೀಕ್ಷೆ ಇದೆ. ಅಪನಗದೀಕರಣದಿಂದ ಭ್ರಷ್ಟಾಚಾರ ನಿಯಂತ್ರಣಕ್ಕೆ ಬಂದಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಅಪನಗದೀಕರಣದ ನಂತರ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ ಎಂದು ಅವರು ಹೇಳಿದ್ದಾರೆ.