ಚೆಕ್ಬುಕ್, ಐಸಿಯು, ಅಂತ್ಯಕ್ರಿಯೆ ಮೇಲೆ ಜಿಎಸ್ಟಿ ವಿಧಿಸಿಲ್ಲ: ನಿರ್ಮಲಾ ಸೀತಾರಾಮನ್
ನವದೆಹಲಿ, ಆಗಸ್ಟ್ 3: ಜಿಎಸ್ಟಿಯಿಂದ ನಾಗರಿಕರ ಮೇಲೆ ಹೆಚ್ಚಿನ ತೆರಿಗೆ ಬೀಳುತ್ತಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಹೇಳಿದರು. ಯುಪಿಯ ಅವಧಿಗಿಂತ ಎನ್ಡಿಎ ಆಡಳಿತದಲ್ಲಿ ಹಣದುಬ್ಬರ ಕಡಿಮೆ ಎಂದು ಅವರು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಕೆಲವು ಜನಪ್ರಿಯ ವಸ್ತುಗಳ ಮೇಲೆ ಜಿಎಸ್ಟಿ ವಿಧಿಸುವ ತಪ್ಪು ಕಲ್ಪನೆಯನ್ನು ಸ್ಪಷ್ಟಪಡಿಸಿದ ಹಣಕಾಸು ಸಚಿವರು, ಬ್ಯಾಂಕ್ ಖಾತೆಗಳಿಂದ ನಗದು ಹಿಂಪಡೆಯುವಿಕೆ, ಹೊಸ ಚೆಕ್ ಪುಸ್ತಕಗಳ ವಿತರಣೆ ಅಥವಾ ಸ್ಮಶಾನ ಅಥವಾ ಆಸ್ಪತ್ರೆಯ ಹಾಸಿಗೆಗಳು ಮತ್ತು ಐಸಿಯುಗಳ ಮೇಲೆ ಯಾವುದೇ ತೆರಿಗೆ ವಿಧಿಸಿಲ್ಲಎಂದು ಹೇಳಿದರು.
6 ಬಿಲಿಯನ್ ಯುಪಿಐ ವಹಿವಾಟು: ಪ್ರಧಾನಿ ಮೋದಿ ಶ್ಲಾಘನೆ
ಪ್ರಿಂಟರ್ಗಳಿಂದ ಬ್ಯಾಂಕ್ಗಳು ಮುದ್ರಿತ ಚೆಕ್ ಪುಸ್ತಕಗಳನ್ನು ಖರೀದಿಸಲು ಜಿಎಸ್ಟಿ ವಿಧಿಸಲಾಗಿದೆ, ಸಾಮಾನ್ಯ ಬ್ಯಾಂಕ್ ಗ್ರಾಹಕರು ಬಳಸುವ ಚೆಕ್ ಬುಕ್ಗಳಿಗೆ ಯಾವುದೇ ತೆರಿಗೆ ಇರುವುದಿಲ್ಲ ಎಂದು ಅವರು ಹೇಳಿದರು.
ಅದೇ ರೀತಿ, ಹೊಸ ಸ್ಮಶಾನಗಳ ನಿರ್ಮಾಣ ಮತ್ತು ಅದರಲ್ಲಿ ಬಳಸುವ ಉಪಕರಣಗಳ ಮೇಲೆ ಮಾತ್ರ ಜಿಎಸ್ಟಿ ವಿಧಿಸಲಾಗಿದೆ. ಅಂತ್ಯಕ್ರಿಯೆ, ಶವಸಂಸ್ಕಾರ ಅಥವಾ ಸಮಾಧಿಗಳಿಗೆ ತೆರಿಗೆ ವಿಧಿಸಲಾಗುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದರು.
ಎಲ್ಲಾ ರಾಜ್ಯಗಳು ಒಪ್ಪಿಕೊಂಡಿವೆ
"ಜಿಎಸ್ಟಿ ಕೌನ್ಸಿಲ್ ಸ್ಮಶಾನದ ಮೇಲೆ ಶುಲ್ಕ ವಿಧಿಸಿದೆ ಎಂದು ಆರೋಪಿಸಲಾಗಿದೆ. ಸತ್ತವರನ್ನು ಹೂಳಲು ಯಾವುದೇ ಜಿಎಸ್ಟಿ ವಿಧಿಸಿಲ್ಲ, ಈ ಆರೋಪಗಳೆಲ್ಲ ಸತ್ಯಕ್ಕೆ ದೂರಾವದವು ಎಂದು" ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ರಾಜ್ಯಸಭೆಯಲ್ಲಿ ಬೆಲೆ ಏರಿಕೆ ಕುರಿತ ಚರ್ಚೆಗೆ ಉತ್ತರಿಸಿದ ಅವರು, "ಅಕ್ಕಿ, ಗೋಧಿ ಹಿಟ್ಟು ಮತ್ತು ಮೊಸರು ಮುಂತಾದ ಆಹಾರ ಪದಾರ್ಥಗಳ ಮೇಲೆ ಜಿಎಸ್ಟಿ ವಿಧಿಸುವ ಕ್ರಮಕ್ಕೆ ಎಲ್ಲಾ ರಾಜ್ಯಗಳು ಒಪ್ಪಿಕೊಂಡಿವೆ ಮತ್ತು 22 ರಾಜ್ಯಗಳಲ್ಲಿ ದೈನಂದಿನ ಅಗತ್ಯ ವಸ್ತುಗಳ ಮೇಲೆ ಇಂತಹ ತೆರಿಗೆ ಮೊದಲೇ ಅಸ್ತಿತ್ವದಲ್ಲಿದೆ" ಎಂದು ಹೇಳಿದರು.
ಭಾರತವು ಅಭಿವೃದ್ಧಿಶೀಲ ಆರ್ಥಿಕತೆಯಾಗಿ ಉಳಿದಿದೆ: ನಿರ್ಮಲಾ ಸೀತಾರಾಮನ್
ಜಿಎಸ್ಟಿ ಬಗ್ಗೆ ತಪ್ಪು ಮಾಹಿತಿ ಬೇಡ
"ಜಿಎಸ್ಟಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಾನು ಹೆಚ್ಚು ಕೇಳುತ್ತೇನೆ, ಬಹುಶಃ ಸರಿಯಾದ ಮಾಹಿತಿ ತಲುಪುತ್ತಿಲ್ಲ ಎಂದು ಕಳವಳ ಇದೆ. ಇದರ ಪರಿಣಾಮವಾಗಿ, ಸಾಕಷ್ಟು ತಪ್ಪು ಕಲ್ಪನೆಗಳಿವೆ ಅಂತಹ ಕೆಲವು ತಪ್ಪು ಕಲ್ಪನೆಗಳನ್ನು ದೂರ ಮಾಡಲು ನಾನು ಪ್ರಯತ್ನಿಸುತ್ತೇನೆ" ಎಂದು ಸಚಿವರು ಹೇಳಿದರು.
ದಿನನಿತ್ಯದ ಬಾಡಿಗೆ 5,000 ರೂ.ಗಿಂತ ಹೆಚ್ಚಿರುವ ಆಸ್ಪತ್ರೆ ಕೊಠಡಿಗಳಿಗೆ ಮಾತ್ರ ಜಿಎಸ್ಟಿ ವಿಧಿಸಲಾಗಿದ್ದು, ಆಸ್ಪತ್ರೆಯ ಹಾಸಿಗೆಗಳು ಅಥವಾ ಐಸಿಯು ಮೇಲೆ ಯಾವುದೇ ತೆರಿಗೆ ವಿಧಿಸಿಲ್ಲ ಎಂದರು.
ಬೆಲೆ ಏರಿಕೆ ವಿರೋಧಿಸಿ ವಿಪಕ್ಷಗಳ ಪ್ರತಿಭಟನೆ
ಸಂಸತ್ತಿನಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನದ ಮೊದಲನೇ ದಿನದಿಂದಲೇ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಅಗತ್ಯ ವಸ್ತುಗಳ ಮೇಲೆ ಜಿಎಸ್ಟಿ ವಿಧಿಸುವ ಮೂಲಕ ಕೇಂದ್ರ ಸರ್ಕಾರ ಜನರ ಮೇಲೆ ಹೆಚ್ಚಿನ ಹೊರೆ ಹಾಕುತ್ತಿದೆ ಎಂದು ಆರೋಪಿಸಿವೆ.
ಈ ಬಗ್ಗೆ ಸಂಸತ್ತಿನಲ್ಲಿ ಕಾಂಗ್ರೆಸ್, ಟಿಎಂಸಿ ಸೇರಿದಂತೆ ಹಲವು ವಿರೋಧ ಪಕ್ಷಗಳು ಭಾರಿ ಪ್ರತಿಭಟನೆಯನ್ನೇ ನಡೆಸಿದವು.
ಆಹಾರ ಧಾನ್ಯಗಳ ಮೇಲೂ ಜಿಎಸ್ಟಿ
ಮೊದಲೇ ಪ್ಯಾಕ್ ಮಾಡಲಾದ ಮತ್ತು ಲೇಬಲ್ ಮಾಡಿದ ಮಾಂಸ (ಶೀತಲೀಕರಿಸಿದ ಹೊರತುಪಡಿಸಿ), ಮೀನು, ಮೊಸರು, ಲಸ್ಸಿ, ಪನೀರ್, ಜೇನುತುಪ್ಪ, ಒಣಗಿದ ದ್ವಿದಳ ಧಾನ್ಯಗಳು, ಗೋಧಿ ಮತ್ತು ಇತರ ಧಾನ್ಯಗಳು, ಗೋಧಿ ಅಥವಾ ಮೆಸ್ಲಿನ್ ಹಿಟ್ಟು, ಬೆಲ್ಲ, ಮಂಡಕ್ಕಿ, ಎಲ್ಲಾ ಸರಕುಗಳು ಮತ್ತು ಸಾವಯವ ಗೊಬ್ಬರ ಮತ್ತು ತೆಂಗಿನಕಾಯಿ ಕಾಂಪೋಸ್ಟ್ಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರಲಾಗಿದೆ. ಜುಲೈ 18ರಿಂದಲೇ ಇವುಗಳ ಮೇಲೆ ಜಿಎಸ್ಟಿ ವಿಧಿಸಲಾಗುತ್ತಿದೆ. ಪ್ಯಾಕ್ ಮಾಡದ, ಲೇಬಲ್ ಮಾಡದ ಮತ್ತು ಬ್ರಾಂಡ್ ಮಾಡದ ಸರಕುಗಳಿಗೆ ಜಿಎಸ್ಟಿ ವಿನಾಯಿತಿ ಮುಂದುವರೆಸಿದೆ.
Recommended Video