ನಿವೃತ್ತಿ ವಯಸ್ಸು ಇಳಿಸುವ ಯೋಜನೆಯಿಲ್ಲ: ಬಿಎಸ್ಎನ್ಎಲ್ ಸಿಎಂಡಿ
ನವದೆಹಲಿ, ಏಪ್ರಿಲ್ 05: ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ನಿಯಮಿತ(ಬಿಎಸ್ಎನ್ಎಲ್) ಸಿಬ್ಬಂದಿಗಳ ಆತಂಕಕ್ಕೆ ಪ್ರತಿಕ್ರಿಯೆ ಸಿಕ್ಕಿದೆ.
54 ಸಾವಿರ ಉದ್ಯೋಗಿಗಳನ್ನು ಲೋಕಸಭೆ ಚುನಾವಣೆ ಬಳಿಕ ಮನೆಗೆ ಕಳಿಸಲಾಗುತ್ತದೆ ಎಂಬ ಸುದ್ದಿಯನ್ನು ಬಿಎಸ್ಎನ್ಎಲ್ ಸಿಎಂಡಿ ಅನುಪಮ್ ಶ್ರೀವಾಸ್ತವ ಅಲ್ಲಗೆಳೆದಿದ್ದಾರೆ.
ಬಿಎಸ್ಎನ್ಎಲ್ ದಿವಾಳಿ?: ಲಕ್ಷಾಂತರ ಉದ್ಯೋಗಿಗಳಿಗೆ ಸಂಬಳ ಸಿಕ್ಕಿಲ್ಲ
ಸುಮಾರು 54 ಸಾವಿರ ಉದ್ಯೋಗ ಕಡಿತಗೊಳಿಸುವಂತೆ ಬಿಎಸ್ಎನ್ಎಲ್ ಬೋರ್ಡ್ ನಿಂದ ದೂರ ಸಂಪರ್ಕ ಇಲಾಖೆ(ಡಿಒಟಿ)ಗೆ ವರದಿ ಸಲ್ಲಿಸಲಾಗಿದೆ. ಬೋರ್ಡ್ ಸದಸ್ಯರ ಪೈಕಿ 10ರಲ್ಲಿ 3 ಮಂದಿ ಇದಕ್ಕೆ ಸಮ್ಮತಿಸಿದ್ದಾರೆ. ಚುನಾವಣೆ ಬಳಿಕ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿತ್ತು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಆದರೆ ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂಡಿ ಅನುಪಮ್, 'ನಿವೃತ್ತಿ ವಯಸ್ಸನ್ನು ಇಳಿಸುವ ಯೋಜನೆ ಇಲ್ಲ, ಉದ್ಯೋಗಿಗಳ ಸಂಖ್ಯೆ ಕಡಿತಗೊಳಿಸುವ ಯಾವುದೇ ಪ್ರಸ್ತಾವನೆ ಬೋರ್ಡ್ ಮುಂದೆ ಬಂದಿಲ್ಲ. ಈ ಬಗ್ಗೆ ಮಾಧ್ಯಮಗಳ ವರದಿಗಳನ್ನು ನಂಬಬೇಡಿ ಎಂದಿದ್ದಾರೆ.
ಉದ್ಯೋಗ ಕಡಿತ ಹೇಗೆ? ಏಕೆ?
ಅನೇಕ ಮಂದಿಗೆ ವಿಆರ್ ಎಸ್ ಪ್ಯಾಕೇಜ್ ಘೋಷಿಸಲಾಗುತ್ತದೆ. ಇನ್ನು ಅನೇಕರಿಗೆ ನೇರವಾಗಿ ಮನೆಗೆ ಕಳಿಸಲಾಗುತ್ತದೆ. ಇದಲ್ಲದೆ, ನಿವೃತ್ತಿ ವಯೋಮಿತಿಯನ್ನು 60 ವರ್ಷಗಳಿಂದ 58 ವರ್ಷಕ್ಕೆ ಇಳಿಸಲು ಕೂಡಾ ಶಿಫಾರಸು ಮಾಡಲಾಗಿದೆ. 50 ವರ್ಷ ಮೇಲ್ಪಟ್ಟವರಿಗೆ ವಾಲೆಂಟರಿ ರಿಟೈರ್ ಮೆಂಟ್ ಸ್ಕೀಂ(ವಿಆರ್ ಎಸ್) ಜಾರಿಗೊಳಿಸಲು ಮುಂದಾಗಿದೆ ಎಂಬ ವರದಿಗಳು ಬಂದಿತ್ತು.
ಶೇ 31ರಷ್ಟು ಮಂದಿ ಉದ್ಯೋಗ ಕಡಿತ
ಇದರಿಂದಾಗಿ 54,451 ಬಿಎಸ್ಎನ್ಎಲ್ ಸಿಬ್ಬಂದಿ ಅಥವಾ 1,74,312 ಒಟ್ಟಾರೆ,ಶೇ 31ರಷ್ಟು ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ವಿಆರ್ ಎಸ್, ಉದ್ಯೋಗ ಕಡಿತದ ಬಳಿಕ ಬಿಎಸ್ಎನ್ಎಲ್ ಸಿಬ್ಬಂದಿ ಸಂಖ್ಯೆ 33,568ಗೆ ತಗ್ಗಲಿದೆ ಇದರಿಂದ 13,895 ಕೋಟಿ ರು ಉಳಿತಾಯ ಮಾಡಬಹುದು ಎಂದು ತಿಳಿದು ಬಂದಿದೆ.
|
ಸಿಬ್ಬಂದಿಗೆ ಸಂಬಳ ಸಿಕ್ಕಿಲ್ಲ
ಬಿಎಸ್ಎನ್ಎಲ್ ಹಾಗೂ ಎಂಟಿಎನ್ಎಲ್ ತನ್ನ ಸಿಬ್ಬಂದಿಗಳಿಗೆ ಫೆಬ್ರವರಿ ತಿಂಗಳಿನಲ್ಲಿ ಸಂಬಳ ನೀಡಲು ಹಣವಿಲ್ಲದೆ ಸರ್ಕಾರದ ಮೊರೆ ಹೊಕ್ಕಿದ್ದನ್ನು ಇಲ್ಲಿ ಸ್ಮರಿಸಬಹುದು. ನಂತರ ಕೆಲವು ರಾಜ್ಯಗಳ ಸಿಬ್ಬಂದಿಗೆ ಸಂಬಳ ಸಿಗುವ ಭರವಸೆ ಸಿಕ್ಕಿತ್ತು. ಈ ಎಲ್ಲಾ ಘಟನಾವಳಿಗಳಿಂದ ಉದ್ಯೋಗ ಕಡಿತ ಮಾಡುವ ಸುದ್ದಿಗೆ ಬಲ ಬಂದಿತ್ತು.
ನಷ್ಟದಲ್ಲಿರುವ ಬಿಎಸ್ಎನ್ಎಲ್
ಬಿಎಸ್ಎನ್ಎಲ್ ನಷ್ಟದ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿದೆ. ವರದಿ ಪ್ರಕಾರ, 2018ರಲ್ಲಿ ಸುಮಾರು 8 ಸಾವಿರ ಕೋಟಿ ರು ನಷ್ಟು ನಷ್ಟ ಎದುರಿಸಿದೆ. 2017ರ ಆರ್ಥಿಕ ವರ್ಷದಲ್ಲಿ 4,786 ಕೋಟಿ ರು, 2019ರಲ್ಲಿ 8 ಸಾವಿರ ಕೋಟಿ ರುಗೂ ಅಧಿಕ ನಷ್ಟ ನಿರೀಕ್ಷಿಸಲಾಗಿದೆ.