ಕೇಂದ್ರ ಬಜೆಟ್ ಮಂಡನೆಗೂ ಮುನ್ನ ನೌಕರ ವರ್ಗಕ್ಕೆ ನೆಮ್ಮದಿಯ ಸುದ್ದಿ
ನವದೆಹಲಿ, ಜೂನ್ 30: ನೌಕರರ ಭವಿಷ್ಯ ನಿಧಿಯ (ಇಪಿಎಫ್) ಮೇಲಿನ ಬಡ್ಡಿದರವನ್ನು ಕಡಿಮೆ ಮಾಡುವ ವಿತ್ತ ಸಚಿವಾಲಯದ ಶಿಫಾರಸ್ಸನ್ನು ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ ಒ) ತಿರಸ್ಕರಿಸಿದೆ. ಹೀಗಾಗಿ, ಕೇಂದ್ರ ಬಜೆಟ್ ಮಂಡನೆಗೂ ಮುನ್ನ ನೌಕರ ವರ್ಗಕ್ಕೆ ನೆಮ್ಮದಿಯ ಸುದ್ದಿ ಸಿಕ್ಕಿದೆ.
ಆದಾಯ ತೆರಿಗೆ ಮೇಲಿನ ವಿನಾಯಿತಿಯ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಮಧ್ಯಮ ವರ್ಗದ ನೌಕರರಿಗೆ ಖುಷಿ ನೀಡಿದ್ದ ಕೇಂದ್ರ ಸರ್ಕಾರ, ಮತ್ತೊಂದು ಸಿಹಿ ಸುದ್ದಿ ನೀಡಿತ್ತು.
ಪಿಂಚಣಿದಾರರಿಗೆ ಶುಭ ಸುದ್ದಿ ನೀಡುವ ಸುಳಿವು ಕೊಟ್ಟ ನಿರ್ಮಲಾ
ನೌಕರರ ಭವಿಷ್ಯ ನಿಧಿಯ (ಇಪಿಎಫ್) ಮೇಲಿನ ಬಡ್ಡಿದರವನ್ನು ಶೇ 0.10ರಷ್ಟು ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ನಿರ್ಧಾರ ಪ್ರಕಟಿಸಿತ್ತು. ಆದರೆ, ಈ ಬಾರಿಯ ಮೋದಿ ಸರ್ಕಾರ್ 2.0ನ ಬಜೆಟ್ ಗೂ ಮುನ್ನ ಪಿಎಫ್ ಬಡ್ಡಿದರವನ್ನು ತಗ್ಗಿಸುವ ಪ್ರಸ್ತಾಪನೆ ಬಂದಿತ್ತು.
ಲೋಕಸಭೆ ಚುನಾವಣೆಗೂ ಮುನ್ನ ಶೇ 8.55ರಷ್ಟಿದ್ದ ಇಪಿಎಫ್ ಬಡ್ಡಿದರವು ಶೇ 8.65ಕ್ಕೆ ಹೆಚ್ಚಳ ಮಾಡಲಾಗಿತ್ತು. ಅದರೆ, ಕಾರ್ಮಿಕ ಸಚಿವಾಲಯ, ಇಪಿಎಫ್ ಒ ನಿರ್ಧಾರವನ್ನು ವಿತ್ತ ಸಚಿವಾಲಯ ವಿರೋಧಿಸಿತ್ತು. ಬ್ಯಾಂಕಿಗೆ ಠೇವಣಿ ದರ ಹೆಚ್ಚಳವಾಗಿದ್ದು, ಸರಿ ಹೊಂದಿಸಲು ಪಿಎಫ್ ಬಡ್ಡಿದರ ತಗ್ಗಿಸುವಂತೆ ಸೂಚಿಸಲಾಗಿತ್ತು.
ಬಡ್ಡಿದರ ಏರಿಕೆ ನಿರ್ಧಾರದಿಂದ ಆರು ಕೋಟಿ ಗ್ರಾಹಕರಿಗೆ ಅನುಕೂಲವಾಗಲಿದ್ದು, ಕೇಂದ್ರ ಸರ್ಕಾರಕ್ಕೆ 151 ಕೋಟಿ ರೂಪಾಯಿ ಹೆಚ್ಚುವರಿ ಹೊರೆಯಾಗಲಿದೆ.
ಆದಾಯ ತೆರಿಗೆ ಮಿತಿ, ಮೋದಿ ಸರ್ಕಾರ 2.0 ಬಜೆಟ್ ನಿರೀಕ್ಷೆಯೇನು?
ಪಿಎಫ್ ಲೆಕ್ಕಾಚಾರ: ಮೂಲ ವೇತನ ಮತ್ತು ತುಟ್ಟಿಭತ್ಯೆ(ಡಿಎ) ಒಟ್ಟು ಮೊತ್ತದ ಶೇ 12ರಷ್ಟು ಪರಿಗಣಿಸಲಾಗುತ್ತದೆ. ಈ ಪೈಕಿ ಉದ್ಯೋಗದಾತರ ವಂತಿಗೆ ಶೇ 3.67ರಷ್ಟು ಪಿಎಫ್ ಗೆ ಹಾಗೂ ಶೇ 8.33ರಷ್ಟು ಪಿಎಫ್ ಪಿಂಚಣಿ ನಿಧಿಗೆ ಹಾಗೂ ಶೇ 0.5% ಉದ್ಯೋಗಿಗಳ ವಿಮಾ ಯೋಜನೆಗೆ ಸೇರಲಿದೆ. ನೌಕರನ ಸಂಬಳ 15 ಸಾವಿರಕ್ಕಿಂತ ಕಡಿಮೆಯಿದ್ರೆ ಆತನ ಸಂಬಳದಲ್ಲಿ ಪ್ರತಿ ತಿಂಗಳು ಶೇಕಡಾ 12ರಷ್ಟು ಭಾಗ ಪಿಎಫ್ ಖಾತೆ ಸೇರುತ್ತದೆ. ಕಂಪನಿ ಶೇಕಡಾ 8.33ರಷ್ಟು ಪಿಂಚಣಿ ಯೋಜನೆಗೆ ಹಾಗೂ ಶೇಕಡಾ 3.67ರಷ್ಟು ಇಪಿಎಫ್ ಗೆ ಹಣ ನೀಡುತ್ತದೆ.