ಕೆಫೆ ಕಾಫಿ ಡೇ ಮಧ್ಯಂತರ ಸಿಒಒ ನಿತಿನ್ ರಾಜೀನಾಮೆ, ಮುಂದೇನು?
ಬೆಂಗಳೂರು, ಜುಲೈ 17: ಕೆಫೆ ಕಾಫಿ ಡೇ ಮಧ್ಯಂತರ ಚೀಫ್ ಆಪರೇಟಿಂಗ್ ಆಫೀಸರ್(ಸಿಒಒ) ಆಗಿ ನೇಮಕಗೊಂಡಿದ್ದ ನಿತಿನ್ ಬಾಗ್ಮನೆ ಅವರು ತಮ್ಮ ಸ್ಥಾನಕ್ಕೆ ವೈಯಕ್ತಿಕ ಕಾರಣಗಳನ್ನು ನೀಡಿ ರಾಜೀನಾಮೆ ನೀಡಿದ್ದಾರೆ ಎಂದು ಷೇರುಪೇಟೆಗೆ ಅಧಿಕೃತವಾಗಿ ಕಾಫಿ ಡೇ ಎಂಟರ್ ಪ್ರೈಸರ್ಸ್ ಲಿಮಿಟೆಡ್(ಸಿಡಿಇಎಲ್) ಮಾಹಿತಿ ನೀಡಿದೆ.
''ವೈಯಕ್ತಿಕ ಕಾರಣಗಳಿಂದ ನಿತಿನ್ ಬಾಗ್ಮನೆ ಅವರು ಚೀಫ್ ಆಪರೇಟಿಂಗ್ ಆಫೀಸರ್(ಸಿಒಒ) ಆಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ, ಮಧ್ಯಂತರ ಸಿಒಒ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಅವರು ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮುಂದುವರೆಯಲಿದ್ದಾರೆ'' ಎಂದು ಸಿಡಿಇಎಲ್ ಪ್ರಕಟಿಸಿದೆ.
ಭಾರತದ 'ಕಾಫಿ ಕಿಂಗ್' ವಿ. ಜಿ. ಸಿದ್ದಾರ್ಥ ಹೆಗ್ಡೆ from ಚೇತನಹಳ್ಳಿ ಎಸ್ಟೇಟ್
ಹೀಗಾಗಿ, ಕೆಫೆ ಕಾಫಿ ಡೇ ಸಂಸ್ಥಾಪಕ, ಮಾಲೀಕ ವಿ.ಜಿ ಸಿದ್ದಾರ್ಥ ಅವರ ನಿಧನದಿಂದ ಕಾಫಿ ಡೇ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ ಎಂಬ ಪ್ರಶ್ನೆ ಮತ್ತೆ ಎದ್ದಿದೆ. ವಿ. ಜಿ ಸಿದ್ದಾರ್ಥ ಅಗಲಿಕೆಯ ನೋವಲ್ಲಿ ಒಂದು ವರ್ಷ ಕಳೆದಿರುವ ಸಂಸ್ಥೆ ಇನ್ನೂ ಸಮಸ್ಯೆಗಳಿಂದ ಹೊರ ಬಂದಿಲ್ಲ.
ಕಾಫಿ ಡೇ ಎಂಟರ್ ಪ್ರೈಸರ್ಸ್ ಲಿಮಿಟೆಡ್ ಸಮಿತಿ ಸಭೆ
ಕಾಫಿ ಡೇ ಎಂಟರ್ ಪ್ರೈಸರ್ಸ್ ಲಿಮಿಟೆಡ್ ಸಮಿತಿ ಸಭೆಯಲ್ಲಿ ನಿರ್ದೇಶಕರ ಮಂಡಳಿ ಮಧ್ಯಂತರ ಅಧ್ಯಕ್ಷರಾಗಿ ಎಸ್. ವಿ ರಂಗನಾಥ್(ಸ್ವತಂತ್ರ ನಿರ್ದೇಶಕರಾಗಿದ್ದಾರೆ) ಹಾಗೂ ನಿತಿನ್ ಬಾಗ್ಮನೆ ಅವರನ್ನು ಮಧ್ಯಂತರ ಚೀಫ್ ಆಪರೇಟಿಂಗ್ ಆಫೀಸರ್(ಸಿಒಒ) ಆಗಿ ನೇಮಿಸಲಾಗಿತ್ತು. ಕಾಫಿ ಡೇ ಮಂಡಳಿಯಲ್ಲಿ ನಾನ್ ಎಕ್ಸಿಕ್ಯೂಟಿವ್ ನಿರ್ದೇಶಕಿ, ಸಿಇಒ ಸ್ಥಾನದಲ್ಲಿ ಮಾಲವಿಕಾ ಹೆಗ್ಡೆ(ವಿ.ಜಿ ಸಿದ್ದಾರ್ಥ ಅವರ ಪತ್ನಿ) ಮುಂದುವರೆದಿದ್ದಾರೆ.
ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್ ಸೇಲ್
ಸಬ್ಸಿಡಿ ಸಂಸ್ಥೆ ಟ್ಯಾಗ್ಲಿನ್ ನ ನಿರ್ದೇಶಕರಾಗಿರುವ ಬಾಗ್ಮನೆ ಅವರು ಸದ್ಯ ಕಳೆದ ಒಂದು ವರ್ಷದಿಂದ ಕಾಫಿ ಡೇ ದೈನಂದಿನ ಕಾರ್ಯಕಾರಿ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಇದಕ್ಕೂ ಮುನ್ನ 2011ರಲ್ಲಿ ಟ್ಯಾಗ್ಲಿನ್ ಮೂಲಕ ಸಿಕಾಲ್ ಲಾಜಿಸ್ಟಿಕ್ ಕಂಪನಿ ಖರೀದಿಸಲಾಯಿತು. ಸಿಕಾಲ್ ಸಂಸ್ಥೆಗೆ ಸದ್ಯ ಆರ್ ರಾಮ್ ಮೋಹನ್ ಚೇರ್ಮನ್ ಕಾಫಿ ಡೇ ಸಿಎಫ್ಒ ಆಗಿದ್ದಾರೆ.
ಸಿದ್ದಾರ್ಥರ 650 ಕೋಟಿ ರು ಮೊತ್ತ ಎಲ್ಲೆಲ್ಲಿ ಹೂಡಿಕೆ?
ಬಾಗ್ಮನೆ ಅವರು ಸಿಒಒ ಆಗಿದ್ದ ಅವಧಿಯಲ್ಲೇ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್ 2,700 ಕೋಟಿ ರೂ.ಗಳಿಗೆ ಅಮೆರಿಕ ಮೂಲದ ಬ್ಲ್ಯಾಕ್ ಸ್ಟೋನ್ ಮತ್ತು ಸಾಲರ್ ಪುರಿಯಾ ಸತ್ವಾ ಕಂಪನಿಗಳು ಖರೀದಿ ಮಾಡಿದ್ದವು.
ಸಿಕಾಲ್ ಮಾರಾಟ, ಕೆಕೆಆರ್ ಸಂಜಯ್ ರಾಜೀನಾಮೆ
ಇನ್ನೊಂದೆಡೆ ಜಾಗತಿಕ ಹೂಡಿಕೆದಾರ ಸಂಸ್ಥೆ ಕೆಕೆಆರ್ ಸಿಇಒ ಸಂಜಯ್ ನಾಯರ್ ಅವರು ಕಳೆದ ನವೆಂಬರ್ ತಿಂಗಳಿನಲ್ಲಿ ತಮ್ಮ ಹುದ್ದೆ ರಾಜೀನಾಮೆ ನೀಡಿದ್ದಾರೆ. ಕಾಫಿ ಡೇಯಲ್ಲಿ ವಿದೇಶಿ ಹೂಡಿಕೆಗೆ ಕೆಕೆಆರ್ ಮುಖ್ಯ ಕಾರಣವಾಗಿತ್ತು.
ಲಾಜಿಸ್ಟಿಕ್ ಲಿಮಿಟೆಡ್ ಕಂಪನಿ ಸಿಕಾಲ್ ಮೂಲಕ ಕಂಟೇನರ್ ಫ್ರೇಟ್ ಕೇಂದ್ರ, ಪೋರ್ಟ್ ಟರ್ಮಿನಲ್ ಗಳನ್ನು ನಿಭಾಯಿಸಲಾಗುತ್ತಿದೆ. ಸಿಕಾಲ್ ಸಂಸ್ಥೆ ಕೊಳ್ಳಲು ಜೆಎಸ್ ಡಬ್ಲ್ಯೂ ಸಮೂಹ, ಅದಾನಿ ಗ್ರೂಪ್ ಮುಂಚೂಣಿಯಲ್ಲಿವೆ. ಇದಲ್ಲದೆ ದುಬೈ ಸರ್ಕಾರ ಸ್ವಾಮ್ಯದ ಡಿಪಿ ವರ್ಲ್ಡ್ ಕೂಡಾ ಆಸಕ್ತಿ ತೋರಿದೆ.
ಕಾಫಿ ಕಿಂಗ್ ಮರೆಯಾಗಿ ಒಂದು ವರ್ಷ ಸಮೀಪ
ಜುಲೈ 29ರಂದು ಮಂಗಳೂರು- ಉಳ್ಳಾಲ ಬಳಿಯ ನೇತ್ರಾವತಿ ಸೇತುವೆ ಬಳಿ ಕಾಣೆಯಾಗಿದ್ದ ಸಿದ್ದಾರ್ಥ, ಜುಲೈ 31ರಂದು ಹೊಯ್ಗೆ ಬಜಾರ್ ಸಮೀಪ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಮಾರ್ಚ್ 2019ರ ಎಣಿಕೆಯಂತೆ ಭಾರತದಲ್ಲಿ ಸುಮಾರು 1,752 ಕೆಫೆಗಳನ್ನು ಹೊಂದಿರುವ ಕೆಫೆ ಕಾಫಿ ಡೇ ಸದ್ಯ ದೇಶದಲ್ಲಿ ಮುಂಚೂಣಿಯಲ್ಲಿರುವ ಕಾಫಿ ಸಂಸ್ಥೆಯಾಗಿತ್ತು. 1996ರಲ್ಲಿ ಸ್ಥಾಪನೆಯಾದ ಕರ್ನಾಟಕದ ಚಿಕ್ಕಮಗಳೂರು ಮೂಲದ ಈ ಸಂಸ್ಥೆಯಲ್ಲಿ 20 ಸಾವಿರಕ್ಕೂ ಅಧಿಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದರು.
ವಿ. ಜಿ. ಸಿದ್ದಾರ್ಥ ಮಾಲಿಕತ್ವದ ಗ್ಲೋಬಲ್ ವಿಲೇಜ್ 2700 ಕೋಟಿಗೆ ಮಾರಾಟ