ಎಲ್ಲ ಬ್ಯಾಂಕ್ಗಳನ್ನು ಖಾಸಗೀಕರಣ ಮಾಡೊಲ್ಲ: ನಿರ್ಮಲಾ ಸೀತಾರಾಮನ್
ನವದೆಹಲಿ, ಮಾರ್ಚ್ 16: ಸಾರ್ವಜನಿಕ ವಲಯದ ಎಲ್ಲ ಬ್ಯಾಂಕ್ಗಳನ್ನೂ ಖಾಸಗೀಕರಣಗೊಳಿಸುವುದಿಲ್ಲ. ಏನೇ ಆದರೂ ಉದ್ಯೋಗಿಗಳ ಹಿತವನ್ನು ರಕ್ಷಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ.
ಖಾಸಗೀಕಣದ ಪ್ರಸ್ತಾಪ ವಿರೋಧಿಸಿ ಒಂಬತ್ತು ಬ್ಯಾಂಕ್ ಒಕ್ಕೂಟಗಳು ನಡೆಸುತ್ತಿರುವ ಎರಡು ದಿನಗಳ ಮುಷ್ಕರದ ನಡುವೆ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ನಿರ್ಮಲಾ, 'ದೇಶದ ಆಕಾಂಕ್ಷೆಗಳನ್ನು ಬ್ಯಾಂಕುಗಳು ತಲುಪಬೇಕು ಎಂದು ನಾವು ಬಯಸಿದ್ದೇವೆ' ಎಂದರು.
ಸರ್ಕಾರದ 'ಸರ್ಜಿಕಲ್ ಸ್ಟ್ರೈಕ್'ಗೆ ಕಂಗಾಲಾದ ಸಾರ್ವಜನಿಕ ಬ್ಯಾಂಕಿಂಗ್ ವಲಯ
'ಯಾವ ಬ್ಯಾಂಕುಗಳು ಖಾಸಗೀಕರಣಗೊಳ್ಳುವ ಸಂಭವವಿದೆಯೋ, ಅವುಗಳ ಪ್ರತಿ ಸಿಬ್ಬಂದಿ ಸದಸ್ಯರ ಹಿತಾಸಕ್ತಿಯನ್ನು ರಕ್ಷಿಸಲಾಗುವುದು. ಏನೇ ಕಷ್ಟಬಂದರೂ ಹಾಲಿ ಉದ್ಯೋಗಿಗಳ ಹಿತಾಸಕ್ತಿಯನ್ನು ಕಾಪಾಡಲಾಗುವುದು' ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಮುಂದೆ ಓದಿ.
ಪಿಎಸ್ಬಿ ಮುಂದುವರಿಯುತ್ತದೆ
'ನಾವು ಪಿಎಸ್ಬಿಗಳನ್ನು (ಖಾಸಗಿ ಸಾರ್ವಜನಿಕ ಬ್ಯಾಂಕುಗಳು) ಮುಂದುವರಿಸುತ್ತೇವೆ ಎಂಬುದನ್ನು ಸಾರ್ವಜನಿಕ ವಲಯದ ಉದ್ಯಮಶೀಲ ನೀತಿ ಸ್ಪಷ್ಟವಾಗಿ ಹೇಳಿದೆ. ಎಲ್ಲ ಕೆಲಸಗಾರರ ಹಿತಾಸಕ್ತಿಗಳನ್ನು ಖಂಡಿತವಾಗಿಯೂ ಸಂಪೂರ್ಣವಾಗಿ ರಕ್ಷಿಸಲಾಗುವುದು' ಎಂದರು.
ಅದನ್ನೂ ಹೊರಗುತ್ತಿಗೆ ನೀಡಿರಬೇಕು
ಬ್ಯಾಂಕ್ಗಳ ಖಾಸಗೀಕರಣದ ಕುರಿತು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ನಿರ್ಮಲಾ, 'ರಾಹುಲ್ ಗಾಂಧಿ ಬಹುಶಃ ತಮ್ಮ ಹೇಳಿಕೆಗಳನ್ನು ಹೊರಗಿನವರಿಗೆ ಹೊರಗುತ್ತಿಗೆ ನೀಡಿರಬೇಕು. ಈ ಎರಡು ಸಾಲುಗಳು ಸಹಾಯ ಮಾಡುವುದಿಲ್ಲ. ಅವರು ಗಂಭೀರ ಚರ್ಚೆಯಲ್ಲಿ ತೊಡಗಿಸಿಕೊಳ್ಳುವುದನ್ನು ನಾನು ಬಯಸುತ್ತೇನೆ' ಎಂದು ವ್ಯಂಗ್ಯವಾಡಿದರು.
ಬ್ಯಾಂಕ್ ಮುಷ್ಕರ; ದಾವಣಗೆರೆಯಲ್ಲಿ ನೌಕರರ ಬೃಹತ್ ಪ್ರತಿಭಟನೆ
ಮೊದಲು ಹೋಮ್ವರ್ಕ್ ಮಾಡಿಕೊಳ್ಳಲಿ
'ಕಾಂಗ್ರೆಸ್ ಭ್ರಷ್ಟಾಚಾರವನ್ನು ರಾಷ್ಟ್ರೀಕರಣಗೊಳಿಸಿತ್ತು. ಇದಕ್ಕೆ ರಾಹುಲ್ ಗಾಂಧಿ ಅವರಿಗೆ ನಮ್ಮಿಂದ ಪ್ರತಿಕ್ರಿಯೆ ಬರಲಿದೆ. ರಾಹುಲ್ ಗಾಂಧಿ ಮೊದಲು ಆಲೋಚಿಸಿ ಹೋಮ್ ವರ್ಕ್ ಮಾಡಿಕೊಳ್ಳಲಿ. ಬಳಿಕ ನಮ್ಮ ವಿರುದ್ಧ ಆರೋಪ ಮಾಡಲಿ' ಎಂದು ಟೀಕಿಸಿದರು.
ಮೋದಿ ಆಪ್ತರಿಗೆ ಮಾರಾಟ
'ಭಾರತ ಸರ್ಕಾರವು ಲಾಭವನ್ನು ಖಾಸಗೀಕರಣ ಮಾಡುತ್ತಿದೆ ಮತ್ತು ನಷ್ಟವನ್ನು ರಾಷ್ಟ್ರೀಕರಣಗೊಳಿಸುತ್ತಿದೆ. ಪಿಎಸ್ಬಿಗಳನ್ನು ಮೋದಿ ಆಪ್ತ ಸ್ನೇಹಿತರಿಗೆ ಮಾರಾಟ ಮಾಡುತ್ತಿರುವುದು ಭಾರತದ ಹಣಕಾಸು ಭದ್ರತೆಯೊಂದಿಗಿನ ಅಪಾಯಕಾರಿ ರಾಜಿಯಾಗಿದೆ. ಮುಷ್ಕರ ನಡೆಸುತ್ತಿರುವ ಉದ್ಯೋಗಿಗಳೊಂದಿಗೆ ನಾನು ಸಹಾನುಭೂತಿಯಿಂದ ನಿಲ್ಲುತ್ತೇನೆ' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.