ನೋಟ್ ಬ್ಯಾನ್ ಬಗ್ಗೆ ಇದೇ ಮೊದಲು ತುಟಿಬಿಚ್ಚಿದ ರಘುರಾಮ್
ಅಪನಗದೀಕರಣ ಬೆಂಬಲಿಸಿರಲಿಲ್ಲ ಎಂದ ಆರ್ ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್. ಅಪನಗದೀಕರಣದಿಂದ ಸುಮಾರು 2 ರಿಂದ 2.50 ಲಕ್ಷ ಕೋಟಿ ರು. ನಷ್ಟ ಎಂದ ರಘುರಾಮ್.
Recommended Video
ನವದೆಹಲಿ, ಸೆಪ್ಟಂಬರ್ 4: ಕಳೆದ ವರ್ಷ ಮೋದಿ ಸರ್ಕಾರ ಕೈಗೊಂಡಿದ್ದ ಅಪನಗದೀಕರಣದ ವಿಚಾರವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ನ (ಆರ್ ಬಿಐ) ಮಾಜಿ ಗವರ್ನರ್ ರಘುರಾಮ್ ಅವರು, ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ.
ಕುಸಿದ ಆರ್ಥಿಕ ಪ್ರಗತಿ; ಕಳೆದ ಮೂರು ವರ್ಷಗಳಲ್ಲಿ ಅತ್ಯಂತ ಕಳಪೆ
ಹಾಗಂತ ಅವರು ಮೋದಿ ವಿರುದ್ಧ ಹೇಳಿಕೆ ನೀಡಿಲ್ಲ. ತಮ್ಮ ಮನಸ್ಸಿನಲ್ಲಿನ ಎಲ್ಲಾ ವಿಚಾರವನ್ನೂ 'ಐ ಡೂ ವಾಟ್ ಐ ಡು' ಎಂಬ ಪುಸ್ತಕದಲ್ಲಿ ಅವರು ದಾಖಲಿಸಿದ್ದಾರೆ.
ಅಪನಗದೀಕರಣಕ್ಕೆ ನನ್ನ ವಿರೋಧವಿದೆ. ಇದನ್ನು ನಾನು ಪ್ರೋತ್ಸಾಹಿಸುವುದಿಲ್ಲ. ಇದರಿಂದ ದೇಶದ ಜಿಡಿಪಿಗೆ ಭಾರೀ ಹೊಡೆತ ಬೀಳುತ್ತದೆ. ಇಂಥ ನಿರ್ಧಾರಗಳನ್ನು ಕೈಗೊಳ್ಳುವಾಗ ಸಾಕಷ್ಟು ಪೂರ್ವ ತಯಾರಿ ಮಾಡಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ತಾವು ಆರ್ ಬಿಐ ಗವರ್ನರ್ ಆಗಿದ್ದ ವೇಳೆ, ಕೇಂದ್ರ ಸರ್ಕಾರ ಅಪನಗದೀಕರಣದ ಬಗ್ಗೆ ಚರ್ಚಿಸಿರಲಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ, ಇತ್ತೀಚೆಗೆ, ಆರ್ ಬಿಐಯು ಶೇ. 99ರಷ್ಟು ಹಳೇ ನೋಟುಗಳು ಮತ್ತೆ ಆರ್ ಬಿಐಗೆ ಬಂದಿವೆ ಎಂದು ಹೇಳಿತ್ತು. ಆದರೆ, ಇದು ಅಪನಗದೀಕರಣದ ಯಶಸ್ಸು ಎಂದು ಹೇಳಲಾಗದು ಎಂದು ರಘುರಾಮ್ ತಿಳಿಸಿದ್ದಾರೆ.
''ಅಪನಗದೀಕರಣ ಆಗಿದೆ. ಅದರ ಪರಿಣಾಮವಾಗಿ ಜಿಡಿಪಿಗೂ ಹೊಡೆತ ಬಿದ್ದಿದೆ. ಭಾರತ ಸರ್ಕಾರಕ್ಕೆ 2 ಲಕ್ಷ ಕೋಟಿ ರು. ಗಳಿಂದ 2.50 ಲಕ್ಷ ರು. ಗಳವರೆಗೂ ನಷ್ಟವಾಗಿರುವುದು ಮನಸ್ಸಿಗೆ ಬೇಸರವಾಗಿದೆ'' ಎಂದು ಅವರು ತಿಳಿಸಿದ್ದಾರೆ.