ಜಿಎಸ್ ಟಿಯಿಂದ ಮುಂದೆ ಭಾರತಕ್ಕೆ ವಿಶ್ವಗೌರವ: ಇನ್ಫಿ ನಾರಾಯಣ ಮೂರ್ತಿ
ಜಿಎಸ್ ಟಿ ಸ್ವಾಗತಿಸಿದ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ. ವಿದೇಶಿ ಹೂಡಿಕೆದಾರರು ಜಿಎಸ್ ಟಿ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಒಮ್ಮೆ ಭಾರತದಲ್ಲಿ ಬಂಡವಾಳ ಹೂಡಿದಾಗ ಅವರಿಗೆ ಜಿಎಸ್ ಟಿ ಸರಳ ಎಂಬುದು ಗೊತ್ತಾಗುತ್ತದೆ ಎಂದು ಅವರು ತಿಳಿ
ನವದಹೆಲಿ, ಜುಲೈ 1: ನೂತನ ತೆರಿಗೆ ವ್ಯವಸ್ಥೆಯಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಬಗ್ಗೆ ವಿದೇಶಿ ಬಂಡವಾಳಗಾರರು ಹೊಂದಿರುವ ಮನೋಭಾವದ ಬಗ್ಗೆ ನಾವು ಆತಂಕ ಪಡಬೇಕಾಗಿಲ್ಲ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದ್ದಾರೆ.
''ಮುಂದಿನ ದಿನಗಳಲ್ಲಿ ಜಿಎಸ್ ಟಿಯಿಂದ ಭಾರತವು ಕಾಣುವ ಏಳ್ಗೆಯನ್ನು ನೋಡಿ ಅದೇ ವಿದೇಶಿಗರು ನಮ್ಮ ದೇಶದ ಬಗ್ಗೆ ಗೌರವದಿಂದ ಮಾತನಾಡುವಂತಾಗುತ್ತದೆ'' ಎಂದು ಅವರು ಆಶಿಸಿದ್ದಾರೆ.
ಜಿಎಸ್ ಟಿ ಬಗ್ಗೆ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ''ಭಾರತದಲ್ಲಿ ಉದ್ಯಮವೊಂದನ್ನು ಆರಂಭಿಸಬೇಕ ಬೇಕೆಂದರೆ ಈವರೆಗೆ ಸಾಕಷ್ಟು ತೊಡಕುಗಳಿದ್ದವು. ಹಾಗಾಗಿ, ವಿದೇಶಿ ಬಂಡವಾಳ ಹೂಡಿಕೆದಾರರರು ಭಾರತದಲ್ಲಿ ಬಂಡವಾಳ ಹೂಡಲು ಮೀನ ಮೇಷ ಎಣಿಸುತ್ತಿದ್ದರು. ಆದರೆ, ಜಿಎಸ್ ಟಿಯಿಂದಾಗಿ ಮುಂದೆ ಈ ಪರಿಸ್ಥಿತಿ ಬದಲಾಗಲಿದೆ'' ಎಂದು ಅವರು ತಿಳಿಸಿದರು.
''ಭಾರತದಲ್ಲಿ ಉದ್ದಿಮೆ ಆರಂಭಿಸಲು ಅಥವಾ ಉದ್ದಿಮೆ ನಡೆಸಲು ಈವರೆಗೆ ಇದ್ದ ಅನೇಕ ತೊಂದರೆಗಳು ಜಿಎಸ್ ಟಿಯಿಂದ ಖಂಡಿತವಾಗಿಯೂ ನಿವಾರಣೆಯಾಗಲಿವೆ. ಇನ್ನು ಮುಂದೆ ಭಾರತದಲ್ಲಿ ಉದ್ಯಮ ಆರಂಭಿಸಲು ಬರುವ ವಿದೇಶಿಗರು ಖಂಡಿತವಾಗಿಯೂ ಜಿಎಸ್ ಟಿಯನ್ನು ಆನಂದಿಸುತ್ತಾರೆ. ಆಗ ವಿದೇಶಿಗರಲ್ಲಿ ಭಾರತದ ಗೌರವ ಹೆಚ್ಚುತ್ತದೆ'' ಎಂದು ಅವರು ತಿಳಿಸಿದರು.