ಮೋದಿ ಮತ್ತೆ ಪಿಎಂ ಆಗಲಿ, ಭಾರತ ಬೆಳಗಲಿ ಎಂದ ಇನ್ಫಿ ಮೂರ್ತಿ
ಬೆಂಗಳೂರು, ನವೆಂಬರ್ 14: 'ಪ್ರಧಾನಿ ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ, ಇಂದಿನ ಆರ್ಥಿಕ ನೀತಿಗಳನ್ನು ಮುಂದುವರಿಸಿಕೊಂಡು ಹೋಗಬೇಕಿದೆ, ಇದರಿಂದ ಭಾರತ ಬೆಳಗಲಿದೆ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಎಕಾನಾಮಿಕ್ಸ್ ಟೈಮ್ಸ್ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ದೇಶದ ಆರ್ಥಿಕ ಬೆಳವಣಿಗೆಗೆ ಪ್ರಧಾನಿ ಮೋದಿ ಕಾರಣರಾಗಿದ್ದಾರೆ. ಜಿಎಸ್ಟಿಯನ್ನು ಪರಿಚಯಿಸಿ, ಉತ್ತಮ ಹಾಗೂ ವ್ಯವಸ್ಥಿತವಾಗಿ ಜಾರಿಗೊಳಿಸಿದ್ದಾರೆ. ಮೋದಿ ಹಾಗೂ ಅವರ ಸಚಿವ ಸಂಪುಟದವರು ಕಠಿಣವಾಗಿ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಮಟ್ಟದಲ್ಲಿ ಭ್ರಷ್ಟಾಚಾರ ಇಳಿಮುಖವಾಗಿದೆ ಎಂದಿದ್ದಾರೆ.
ಜಿಎಸ್ಟಿ ಮತ್ತು ನೋಟು ರದ್ಧತಿ ಕಾರ್ಯಗತಗೊಳಿಸುವಿಕೆ ಮತ್ತು ಅನುಷ್ಠಾನದ ಪ್ರಶ್ನೆಗೆ ಉತ್ತರಿಸಿದ್ದ ಮೂರ್ತಿ, ಪ್ರಧಾನಿ ಅವರು ಪ್ರಬಲವಾದ ಆರ್ಥಿಕ ಪ್ರಗತಿಯ ಮನಸ್ಸಿನಿಂದ ಸರ್ಕಾರವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಎಂದಿದ್ದಾರೆ. ಆರ್ ಬಿಐ, ಸಿಬಿಐನಂಥ ಸಂಸ್ಥೆಗಳ ಸ್ವಾಯುತ್ತತೆಗೆ ಬೆಂಬಲ ವ್ಯಕ್ತಪಡಿಸಿದರೂ, ಆರ್ ಬಿಐ ಗೊಂದಲವನ್ನು ಕೇಂದ್ರ ಸರ್ಕಾರ ಪರಿಹರಿಸಲು ಸೂಕ್ತ ಮಾರ್ಗ ಕಂಡುಕೊಳ್ಳಬೇಕಿದೆ ಎಂದರು.
ಜಿಎಸ್ ಟಿಯಿಂದ ಮುಂದೆ ಭಾರತಕ್ಕೆ ವಿಶ್ವಗೌರವ: ಇನ್ಫಿ ನಾರಾಯಣ ಮೂರ್ತಿ
'ನಾವು ಅನುಷ್ಠಾನದ ಜವಾಬ್ದಾರಿಯನ್ನು ಪ್ರಧಾನಿ ಒಬ್ಬರ ಮೇಲೆ ಹೊರಿಸಬಾರದು. ಅಧಿಕಾರಶಾಹಿ ಸಹ ಅದನ್ನು ಮಾಡಬೇಕಾಗುತ್ತದೆ'. ಆರ್ಥಿಕ ಬೆಳವಣಿಗೆ ಬಗ್ಗೆ ಪ್ರಧಾನಿ ಬಹಳ ಶಿಸ್ತು ಹೊಂದಿದ್ದು, ಅದನ್ನು ಮುಂದುವರೆಸಿಕೊಂಡು ನಡೆಯುವುದು ಉತ್ತಮ ಎಂದು ಹೇಳಿದರು.