ಟಾಟಾ ಬಂದ್ರು, ಮಿಸ್ತ್ರಿ ಹೋದ್ರು ಏನಿದರ ಗುಟ್ಟು?
ಇಪ್ಪತ್ತು ವರ್ಷಗಳ ಕಾಲ ಗ್ರೂಪ್ ನ ಮುನ್ನಡೆಸಿದ್ದ 78 ವರ್ಷದ ರತನ್ ಟಾಟಾ 2012ರಲ್ಲೇ ನಿವೃತ್ತರಾಗಿದ್ದರು. ಆ ಸ್ಥಾನಕ್ಕೆ 48 ವರ್ಷದ ಮಿಸ್ತ್ರಿ ಅವರನ್ನು ತರಲಾಗಿತ್ತು. ಟಾಟಾ ಸನ್ಸ್ ನ ನಿರ್ದೇಶಕರಾಗಿ ಮಿಸ್ತ್ರಿ ಮುಂದುವರಿಯಲಿದ್ದಾರೆ.
ಮುಂಬೈ, ಅಕ್ಟೋಬರ್ 25: ಸೈರಸ್ ಮಿಸ್ತ್ರಿ ಅವರನ್ನು ಟಾಟಾ ಸನ್ಸ್ ನ ಚೇರ್ ಮನ್ ಹುದ್ದೆಯಿಂದ ತೆಗೆಯುವ ಮೂಲಕ ಭಾರತದ ಕಾರ್ಪೋರೆಟ್ ಜಗತ್ತೇ ಆಘಾತಗೊಳ್ಳುವಂತೆ ಅಗಿದೆ. ಆ ಸ್ಥಾನಕ್ಕೆ ಈಗ ರತನ್ ಟಾಟಾ ಬಂದಿದ್ದಾರೆ. ಇನ್ನು ನಾಲ್ಕು ತಿಂಗಳು ಅವರು ಈ ಜವಾಬ್ದಾರಿ ವಹಿಸಲಿದ್ದಾರೆ. ಅಷ್ಟರಲ್ಲಿ ಮಿಸ್ತ್ರಿ ಅವರಿಗೆ ಪರ್ಯಾಯವಾಗಿ ಶಾಶ್ವತವಾದ ಆಯ್ಕೆಯೊಂದನ್ನು ಮಾಡಲಾಗುತ್ತದೆ.
ಇಪ್ಪತ್ತು ವರ್ಷಗಳ ಕಾಲ ಗ್ರೂಪ್ ನ ಮುನ್ನಡೆಸಿದ್ದ 78 ವರ್ಷದ ರತನ್ ಟಾಟಾ 2012ರಲ್ಲೇ ನಿವೃತ್ತರಾಗಿದ್ದರು. ಆ ಸ್ಥಾನಕ್ಕೆ 48 ವರ್ಷದ ಮಿಸ್ತ್ರಿ ಅವರನ್ನು ತರಲಾಗಿತ್ತು. ಟಾಟಾ ಸನ್ಸ್ ನ ನಿರ್ದೇಶಕರಾಗಿ ಮಿಸ್ತ್ರಿ ಮುಂದುವರಿಯಲಿದ್ದಾರೆ. ಈ ಬೆಳವಣಿಗೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಾಟಾ ತಿಳಿಸಿದ್ದಾರೆ. ಮಂಗಳವಾರ ಗ್ರೂಪ್ ನ ಎಲ್ಲ ಸಿಇಒಗಳ ಸಭೆ ನಡೆಸುವ ಸಾಧ್ಯತೆ ಇದೆ.[ಟಾಟಾ ಸಂಸ್ಥೆಗೆ ರತನ್ ರೀ ಎಂಟ್ರಿ, ಚೇರ್ಮನ್ ಮಿಸ್ತ್ರಿ ಔಟ್!]
ಈ ಬೆಳವಣಿಗೆಗೆ ಕಾರಣ ಏನು ಅಂತ ಪ್ರತಿಕ್ರಿಯಿಸಲು ಟಾಟಾ ಅವರಾಗಲಿ, ಮಿಸ್ತ್ರಿ ಆಗಲಿ ಸಂಪರ್ಕಕ್ಕೆ ಸಿಕ್ಕಿಲ್ಲ. ಅದರೆ ನೌಕರರಿಗೆ ಪತ್ರ ಬರೆದಿರುವ ಟಾಟಾ, ಮಧ್ಯಂತರವಾಗಿ ಚೇರ್ ಮನ್ ಹುದ್ದೆ ನಿರ್ವಹಿಸಲು ಒಪ್ಪಿದ್ದೇನೆ. ಕಂಪನಿಯ ಸ್ಥಿರತೆ ಹಾಗೂ ವಿಶ್ವಾಸಾರ್ಹತೆ ಉಳಿಸುತ್ತೇನೆ ಎಂದಿದ್ದಾರೆ.
ಬುದ್ಧಿವಂತ, ನಿಸ್ವಾರ್ಥಿ
ಈ ಹಿಂದೆ ಮಿಸ್ತ್ರಿ ಅವರನ್ನು ಆಯ್ಕೆ ಮಾಡುವ ವೇಳೆ, ಅವರು ಪ್ರಖರ ಬುದ್ಧಿವಂತ ಹಾಗೂ ನಿಸ್ವಾರ್ಥಿ ಎಂದು ಹೇಳಲಾಗಿತ್ತು. ಅಷ್ಟು ಚಿಕ್ಕ ವಯಸ್ಸಿಗೆ ದೊಡ್ಡ ಹುದ್ದೆ ಏರಿದಾಗ ತುಂಬ ವರ್ಷಗಳ ಕಾಲ ಮುಂದುವರಿಯುತ್ತಾರೆ ಎಂಬ ನಿರೀಕ್ಷೆಯಿತ್ತು. ಇದೀಗ ಬೋರ್ಡ್ ನ ಆರು ಸದಸ್ಯರು ಮಿಸ್ತ್ರಿ ಅವರನ್ನು ತೆಗೆದುಹಾಕುವ ನಿರ್ಣಯದ ಪರವಾಗಿದ್ದರು.
ಅನಿರೀಕ್ಷಿತ ನಿರ್ಧಾರ
ಟಾಟಾ ಗ್ರೂಪ್ ನ ಚೆನ್ನಾಗಿ ಬಲ್ಲವರ ಪ್ರಕಾರ ಈ ನಿರ್ಧಾರ ತೀರಾ ಅನಿರೀಕ್ಷಿತ. ಸದ್ಯದಲ್ಲೇ ಮಿಸ್ತ್ರಿ ಹೇಳಿಕೆ ನೀಡಲಿದ್ದಾರೆ ಎಂದು ತಿಳಿಸಲಾಗಿದೆ. ಈ ನಿರ್ಧಾರವನ್ನು ಪ್ರಕಟಿಸುವ ಮುನ್ನ ಮೋಹನ್ ಪರಾಶರನ್, ಚಿದಂಬರಂ ಅವರಂಥ ಕಾನೂನು ಪಂಡಿತರ ಜತೆ ಚರ್ಚೆ ಕೂಡ ನಡೆಸಲಾಗಿದೆ ಎಂಬ ಮಾಹಿತಿ ಇದೆ. ಹೆಸರಾಂತ ವಕೀಲ ಹರೀಶ್ ಸಾಳ್ವೆ, ಅಭಿಷೇಕ್ ಸಿಂಘ್ವಿ ಅವರನ್ನು ಕೂಡ ಈ ವಿಚಾರದಲ್ಲಿ ಸಂಪರ್ಕಿಸಲಾಗಿತ್ತು.
ಎರಡನೇ ಬಾರಿಗೆ
143 ವರ್ಷಗಳ ಟಾಟಾ ಕಂಪನಿ ಇತಿಹಾಸದಲ್ಲೇ ಕುಟುಂಬದ ಹೊರಗಿನವರೊಬ್ಬರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಿದ್ದು ಇದು ಎರಡನೇ ಬಾರಿಯಾಗಿತ್ತು. ಡಿಸೆಂಬರ್ 2012ರಲ್ಲಿ ಮಿಸ್ತ್ರಿ ಜವಾಬ್ದಾರಿ ವಹಿಸಿಕೊಂಡಿದ್ದರು. ಟಾಟಾ ಸ್ಟೀಲ್, ಟಾಟಾ ಟೆಲಿ ಹಲವು ಸವಾಲುಗಳನ್ನು ಎದುರಿಸುತ್ತಿದ್ದವು. ಟಾಟಾ ಮೋಟಾರ್ಸ್ ಬೆಳವಣಿಗೆ ಕುಂಠಿತವಾಗಿತ್ತು.
ಶೇ 5ರಷ್ಟು ಆದಾಯ ಕುಸಿತ
ಮಿಸ್ತ್ರಿ ನಿರ್ಧಾರಗಳ ಬಗ್ಗೆಯೇ ಅಸಮಾಧಾನ ಕೇಳಿಬರುತ್ತಿತ್ತು. ಕಳೆದ ವರ್ಷ ಕಂಪನಿ ಒಟ್ಟಾರೆ ಆದಾಯದಲ್ಲಿ ಶೇ 5ರಷ್ಟು ಕುಸಿತ ಕಂಡಿತ್ತು. ಆದರೆ ಮಿಸ್ತ್ರಿ ಅವರಿಗೆ ಸಿಕ್ಕ ಸಮಯ ಕೂಡ ಕಡಿಮೆ ಎಂಬ ಮಾತು ಕೇಳಿಬರುತ್ತಿದೆ. ಈ ನಾಲ್ಕು ವರ್ಷದಲ್ಲಿ ಜಾಗತಿಕ ಆರ್ಥಿಕ ಪರಿಸ್ಥಿತಿ ಅಂಥ ಚೆನ್ನಾಗಿಲ್ಲ. ತುಂಬ ಸಾಲ ಇದ್ದ ವ್ಯವಹಾರವನ್ನು ನೋಡಿಕೊಳ್ಳಬೇಕಿತ್ತು. ಮಾರುಕಟ್ಟೆ ಅಸ್ಥಿರತೆ ಕೂಡ ಕಾಡಿದೆ ಎಂದು ಹೇಳುವವರಿದ್ದಾರೆ.
ತಿಕ್ಕಾಟಕ್ಕೆ ಕಾರಣ
ಈ ತಿಕ್ಕಾಟಕ್ಕೆ ಮತ್ತೊಂದು ಪ್ರಮುಖ ಕಾರಣವಿದೆ. ಅದು ಮಿಸ್ತ್ರಿ ಅವರು ಐರಿಷ್ ಪೌರತ್ವ ಬಿಡಲು ಒಪ್ಪದಿರುವುದು. 2012ರಲ್ಲಿ ಚೇರ್ ಮನ್ ಆದ ನಂತರವೂ ಭಾರತೀಯ ಪೌರತ್ವ ಪಡೆದಿರಲಿಲ್ಲ. ಕಂಪನಿಯ ಎಷ್ಟೋ ನಿರ್ಧಾರಗಳನ್ನು ಚರ್ಚಿಸುತ್ತಿರಲಿಲ್ಲ ಎಂಬುದು ಕಂಪನಿ ಒಳಗಿನವರ ಆರೋಪವಾಗಿತ್ತು. 'ಕೋರಸ್' ಮಾರಾಟದ ನಿರ್ಧಾರ ತೆಗೆದುಕೊಂಡ ವೇಳೆಯಲ್ಲಾದರೂ ಚರ್ಚಿಸಬಹುದಿತ್ತು. ಇದರಿಂದ ಯುಕೆನಲ್ಲಿ ಟಾಟಾ ವರ್ಚಸ್ಸಿಗೆ ಧಕ್ಕೆಯಾಯಿತು ಎಂಬ ಅಸಮಾಧಾನ ಕೇಳಿಬಂದಿತ್ತು.
ಮೂರು ಲಕ್ಷ ಕೋಟಿ ಸಾಲ
ಡೊಕೊಮೊ ವಿಚಾರದಲ್ಲಿ ಮಿಸ್ತ್ರಿ ನಡೆದುಕೊಂಡ ಬಗ್ಗೆ ಟಾಟಾ ಅವರಿಗೆ ಸಮಾಧಾನ ಇರಲಿಲ್ಲ. ಕಂಪನಿಯ ವಿಸ್ತರಣೆ ಆಲೋಚನೆಯಿಂದ ಆದಾಯ ಆರು ಬಿಲಿಯನ್ ಡಾಲರ್ ನಿಂದ 100 ಬಿಲಿಯನ್ ಡಾಲರ್ ಗೆ ಏರಿದೆ. ಅದೇ ವೇಳೆ ಸಾಲ ಕೂಡ ಹೆಚ್ಚಳವಾಗಿದೆ. ಕಳೆದ ಮಾರ್ಚ್ ವೇಳೆಗೆ ಟಾಟಾ ಗ್ರೂಪ್ ನ ಒಟ್ಟು ಸಾಲ ಮೂರು ಲಕ್ಷ ಕೋಟಿಗೂ ಹೆಚ್ಚಿದೆ. ಇನ್ನು ನಿವ್ವಳ ಸಾಲ ಎರಡು ಲಕ್ಷ ಕೋಟಿಗೂ ಹೆಚ್ಚಿದೆ.