ಈ ವರ್ಷ ಹೆಚ್ಚಾಗಲಿದೆ ಕೆಲಸ ಕಳೆದುಕೊಳ್ಳಲಿರುವವರ ಸಂಖ್ಯೆ!
ಕಳೆದೆರಡು ವರ್ಷಗಳಿಂದ ಜಾಗತಿಕ ಮಟ್ಟದಲ್ಲಿ ಭಾರತೀಯ ಉತ್ಪಾದನಾ ವಲಯದ ವ್ಯವಹಾರವು ಶೇ. 3.7ರಷ್ಟು ಕುಸಿತ ಕಂಡಿದ್ದು, ಇದು ಕಳೆದ ಏಳು ವರ್ಷಗಳಲ್ಲಿಯೇ ಅಧಿಕ ಎಂದು ಹೇಳಲಾಗಿದೆ.
ನವದೆಹಲಿ, ಫೆಬ್ರವರಿ 27: ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾದ 'ಮೇಕ್ ಇಂಡಿಯಾ'ದ ಆಸರೆಯ ಹೊರತಾಗಿಯೂ ಭಾರತೀಯ ಉತ್ಪಾದನಾ ವಲಯವು ಇಳಿಮುಖದತ್ತ ಸಾಗುತ್ತಿದ್ದು, ಇದರ ಪರಿಣಾಮವಾಗಿ ಈ ವರ್ಷ ಖಾಸಗಿ ವಲಯದಲ್ಲಿ ಕೆಲಸ ಕಳೆದುಕೊಳ್ಳಲಿರುವ ಸಂಖ್ಯೆ ಹೆಚ್ಚಾಗಲಿದೆ ಎಂದು ಮೂಲಗಳು ತಿಳಿಸಿವೆ.
2015ರಿಂದ 2016ರವರೆಗಿನ ಅವಧಿಯಲ್ಲಿ ಭಾರತದ ಉತ್ಪಾದನಾ ವಲಯದ ವ್ಯವಹಾರ ಶೇ. 3.7ರಷ್ಟು ಕುಸಿತ ಕಂಡಿದೆ. ಇದು ಕಳೆದ ಏಳು ವರ್ಷಗಳಲ್ಲೇ ಅತ್ಯಂತ ದೊಡ್ಡ ಕುಸಿತ ಎಂದು ಹೇಳಲಾಗಿದೆ.
ವ್ಯವಹಾರ ಕುಸಿತಕ್ಕೆ ಕಾರಣವೇನು?: ಉತ್ಪಾದನಾ ವಲಯದ ಈ ಕುಸಿತಕ್ಕೆ ಪ್ರಮುಖವಾಗಿ ಎರಡು ಕಾರಣಗಳಿವೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಜಾಗತಿಕ ಮಾರುಕಟ್ಟೆಯ ತೇಜಿಯು (ವ್ಯಾಪಾರದ ಗತಿ) ಮಂದಗತಿಯಲ್ಲಿ ಸಾಗುತ್ತಿರುವುದು ಹಾಗೂ ಭಾರತದಲ್ಲಿ ಉತ್ಪತ್ತಿಯಾಗುತ್ತಿರುವ ಪರಿಕರಗಳಿಗೆ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ಇಲ್ಲದಿರುವುದು - ಇವೇ ಆ ಎರಡು ಕಾರಣಗಳೆಂದು ಹೇಳಲಾಗಿದೆ.
ಹಾಗಾಗಿ, ಮೋದಿಯವರು ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ, ಉತ್ಪಾದನಾ ವಲಯಕ್ಕೆ ಹಲವಾರು ಸೌಕರ್ಯಗಳನ್ನು ನೀಡಿದ್ದರೂ ಅವು ಈ ವಲಯವನ್ನು ಪರಿಣಾಮಕಾರಿಯಾಗಿ ಮೇಲೆತ್ತುವಲ್ಲಿ ವಿಫಲವಾಗಿವೆ ಎನ್ನಲಾಗಿದೆ.[ಲೈವ್ : ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಚಾಲನೆ]
ನಿಜ ಹೇಳಬೇಕೆಂದರೆ, ಕಳೆದ ವರ್ಷಾಂತ್ಯಕ್ಕೆ ಕೇಂದ್ರ ಸರ್ಕಾರ ಕೈಗೊಂಡಿದ್ದ ಅಪನಗದೀಕರಣದ ನಿರ್ಧಾರಕ್ಕೂ ಮೊದಲೇ ಈ ವಲಯದ ವ್ಯವಹಾರ ನಿರೀಕ್ಷೆಯ ಮಟ್ಟದಲ್ಲಿರಲಿಲ್ಲ. ಈಗ, ಅಪನಗದೀಕರಣದ ನಿರ್ಧಾರ ಈ ವಲಯವು ಮತ್ತಷ್ಟು ಕುಸಿಯುವಂತೆ ಮಾಡಿದೆ ಎನ್ನಲಾಗಿದೆ.[ಮೇಕ್ ಇನ್ ಇಂಡಿಯಾ ಪ್ರತಿಭೆ ಸಿಕ್ಕಿದ್ದು ನಕಲಿ ನೋಟು ದಂಧೇಲಿ!]
ಹಾಗಾಗಿಯೇ, 2016ರಲ್ಲಿ ಲಾರ್ಸೆನ್ ಆ್ಯಂಡ್ ಟರ್ಬೊ ಕಂಪನಿಯು ತನ್ನಲ್ಲಿನ ಸುಮಾರು 14,000 ಜನರನ್ನು ಮನೆಗೆ ಕಳುಹಿಸಿತ್ತು. ಇನ್ನು, ದೈತ್ಯ ಕಂಪನಿಗಳಾದ ಮೈಕ್ರೋ ಸಾಫ್ಟ್, ಐಬಿಎಂ ಹಾಗೂ ನೋಕಿಯಾ ಸಂಸ್ಥೆಗಳೂ ಇದೇ ಹಾದಿ ಹಿಡಿದು ತಮ್ಮಲ್ಲಿನ ಅನೇಕ ನೌಕರರನ್ನು ಮನೆಗೆ ಕಳುಹಿಸಿದ್ದವು.
ಅದರಲ್ಲೂ, 2014ರಲ್ಲಿ ಮೋದಿಯವರು ಮೇಕ್ ಇನ್ ಇಂಡಿಯಾ ಯೋಜನೆಯನ್ನು ಘೋಷಣೆ ಮಾಡಿದ ನಂತರವೂ, ನೋಕಿಯಾ ಕಂಪನಿಯು ಚೆನ್ನೈನಲ್ಲಿರುವ ತನ್ನ ಉತ್ಪಾದನಾ ಘಟಕವನ್ನು ಮುಚ್ಚುವ ಮೂಲಕ ತನ್ನಲ್ಲಿನ 6,600 ಖಾಯಂ ನೌಕರರನ್ನು ಬೀದಿಗೆ ಅಟ್ಟಿತ್ತು.
ಪರಿಹಾರವೇನು?: ಪರಿಸ್ಥಿತಿ ಹೀಗೇ ಮುಂದುವರಿದರೆ, ಖಾಸಗಿ ವಲಯದಲ್ಲಿರುವ ಅನೇಕ ಕಂಪನಿಗಳು ತಮ್ಮ ಖರ್ಚು ಕಡಿತ ಮಂತ್ರದಡಿ ಅನೇಕ ನೌಕರರ ಕೆಲಸ ಕಿತ್ತುಕೊಳ್ಳುವುದು ಬಹುತೇಕ ಖಾತ್ರಿಯಾಗಲಿದೆ. ಹಾಗಾದಲ್ಲಿ, ಲಕ್ಷಾಂತರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ.
ಪರಿಸ್ಥಿತಿ ಗಂಭೀರ ಸ್ಥಿತಿಗೆ ತಲುಪುವ ಮುನ್ನ ಕೇಂದ್ರ ಸರ್ಕಾರವು ಮಧ್ಯೆ ಪ್ರವೇಶಿಸಿ ಉತ್ಪಾದನಾ ವಲಯಕ್ಕೆ ವಿಶೇಷ ಪ್ಯಾಕೇಜ್ ಹಾಗೂ ಯೋಜನೆಗಳನ್ನು ಘೋಷಿಸುವ ಮೂಲಕ ಕಂಪನಿಗಳಿಗೆ ನೆರವಾಗಬೇಕೆಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.