ಪುಣೆ: ED ವಶಕ್ಕೆ ABIL ಸಂಸ್ಥೆ ಚೇರ್ಮನ್ ಅವಿನಾಶ್ ಭೋಸ್ಲೆ
ಪುಣೆ, ಜೂನ್ 28: ಮನಿಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಮೂಲದ ಉದ್ಯಮಿಯನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ABIL ಸಮೂಹ ಸಂಸ್ಥೆ ಚೇರ್ಮನ್ ಅವಿನಾಶ್ ಭೋಸ್ಲೆ ಈ ಮುಂಚೆ ಸಿಬಿಐ ವಶದಲ್ಲಿದ್ದರು.
ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಹಾಗೂ ಡಿಎಚ್ಎಫ್ಎಲ್ ಸಂಸ್ಥೆಯ ಕಪಿಲ್ ವಾಧವಾನ್ ಅವರ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಿನಾಶ್ ವಿಚಾರಣೆಗೊಳಪಡಿಸಲು ಸಿಬಿಐ ತಂಡ ಬಂಧಿಸಿತ್ತು.
ಮತ್ತೊಂದು ದೊಡ್ಡ ವಂಚನೆ ಕೇಸ್: ಡಿಎಚ್ಎಫ್ಎಲ್ ವಿರುದ್ಧ 34,615 ಕೋಟಿ ವಂಚನೆ ಪ್ರಕರಣ ದಾಖಲು
ಸದ್ಯ ಮುಂಬೈನ ಆರ್ಥರ್ ರಸ್ತೆ ಜೈಲಿನಲ್ಲಿರುವ ಅವಿನಾಶ್ ಭೋಸ್ಲೆಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದು, ನ್ಯಾಯಾಲಯದ ಮುಂದೆ ಹಾಜರು ಪಡಿಸಿ, ಅಧಿಕೃತವಾಗಿ ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ 17 ಬ್ಯಾಂಕ್ಗಳ ಒಕ್ಕೂಟಕ್ಕೆ 34,615 ಕೋಟಿ ರುಪಾಯಿ ವಂಚಿಸಿದ ಆರೋಪದ ಮೇಲೆ ದಿವಾನ್ ಹೌಸಿಂಗ್ ಅಂಡ್ ಫೈನಾನ್ಸ್ ಲಿಮಿಟೆಡ್ನ (ಡಿಎಚ್ಎಫ್ಎಲ್) ಕಪಿಲ್ ಮತ್ತು ಧೀರಜ್ ವಾಧವನ್ ಅವರ ವಿರುದ್ಧ ಪ್ರಕರಣ ದಾಖಲಾಗಿರುವುದು ಸದ್ಯ ತನಿಖೆಯಲ್ಲಿದೆ.
ಆಟೋರಾಜ- ರಿಯಲ್ ಎಸ್ಟೇಟ್ ಬಾಸ್ ಅವಿನಾಶ್
ಪುಣೆ ಮೂಲದ ಆಟೋ ಡ್ರೈವರ್ ಅವಿನಾಶ್ ಹಂತ ಹಂತವಾಗಿ ಬೆಳೆದು ರಿಯಲ್ ಎಸ್ಟೇಟ್ ಉದ್ಯಮಿ ಎನಿಸಿಕೊಂಡವ, ಯೆಸ್ ಬ್ಯಾಂಕ್- ಡಿಎಚ್ಎಫ್ಎಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಮಧ್ಯವರ್ತಿಯಾಗಿದ್ದವ. ಸುಮಾರು 360 ಕೋಟಿ ರು ಗೂ ಅಧಿಕ ಮೊತ್ತವನ್ನು ಡಿಎಚ್ಎಫ್ಎಲ್ನಿಂದ ಪಡೆದು ಇನ್ನೊಂದು ರಿಯಲ್ ಎಸ್ಟೇಟ್ ಡೆವಲಪರ್ ಕಡೆಗೆ ತಿರುಗಿಸಿದ್ದಲ್ಲದೆ ಅದನ್ನು ಅನುತ್ಪಾದಕ ಆಸ್ತಿ(NPA) ಎಂದು ತೋರಿಸಿದ್ದರು.
ಈ ಪ್ರಕರಣದಲ್ಲಿ ಇತ್ತೀಚೆಗೆ ಬಂಧನಕ್ಕೊಳಗಾಗಿದ್ದ ಸಂಜಯ್ ಛಬಾರಿಯಾ ಅವರ ಒಡೆತನದ ರೇಡಿಯಸ್ ಡೆವಲಪರ್ಸ್ 68.8 ಕೋಟಿ ಮತ್ತು 292 ಕೋಟಿ ರೂ.ಗಳ ಎರಡು ಪಾವತಿಗಳನ್ನು ಭೋಸ್ಲೆ ಸಂಸ್ಥೆಗೆ ಮಾಡಿರುವುದಕ್ಕೆ ಸಾಕ್ಷ್ಯ ಸಿಕ್ಕಿದೆ ಎಂದು ಸಿಬಿಐ ವರದಿಯಲ್ಲಿ ತಿಳಿಸಿದೆ.
ಭೋಸ್ಲೆ ವಿರುದ್ಧ ಪ್ರಕರಣ
2020ರಿಂದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಪ್ರಕಾರ,ರಾಣಾ ಕಪೂರ್ ನೇತೃತ್ವದ ಯೆಸ್ ಬ್ಯಾಂಕ್ - ಕಿಕ್ಬ್ಯಾಕ್ಗಳಿಗೆ ಬದಲಾಗಿ 2020ರಲ್ಲಿ DHFL ಗೆ ಸಾಲವನ್ನು ಮಂಜೂರು ಮಾಡಿದೆ.
DHFL ಪ್ರವರ್ತಕರಾದ ವಾಧವಾನ್ಗಳು ಹಣವನ್ನು ವಶಪಡಿಸಿಕೊಂಡು, ಮುಂಬೈ ಮತ್ತು ಪುಣೆಯ ಡೆವಲಪರ್ಗಳ ಮೂಲಕ ಅವುಗಳನ್ನು ವ್ಯವಹಾರಕ್ಕೆ ತಂದರು ಮತ್ತು ಅಂತಿಮವಾಗಿ ಯೆಸ್ ಬ್ಯಾಂಕ್ಗೆ ನೀಡಬೇಕಾದ ಸಾಲ ಪಾವತಿಗಳಲ್ಲಿ ಡಿಫಾಲ್ಟ್ ಮಾಡಿದರು.
ಸಿಬಿಐ ಪ್ರಕಾರ, ಯೆಸ್ ಬ್ಯಾಂಕ್ ಡಿಎಚ್ಎಫ್ಎಲ್ಗೆ ವಿತರಿಸಿದ ಹಣದ ಒಂದು ಭಾಗವನ್ನು ಎಬಿಐಎಲ್ ಮತ್ತು ರೇಡಿಯಸ್ ಗ್ರೂಪ್ನಲ್ಲಿ ಇರಿಸಲಾಗಿತ್ತು ಮತ್ತು ನಂತರ ಶೆಲ್ ಕಂಪನಿಗಳ ವೆಬ್ ಮೂಲಕ ಡಿಎಚ್ಎಫ್ಎಲ್ಗೆ ಹಿಂತಿರುಗಿಸಲಾಯಿತು. ABIL ಮತ್ತು Radius ಗುಂಪಿನ ನಡುವೆ ಯಾವುದೇ ನೇರ ಸಂಪರ್ಕವಿಲ್ಲ, ಆದರೆ ಎರಡೂ DHFL ಗೆ ಸಂಪರ್ಕ ಹೊಂದಿವೆ ಎಂದು ಮೂಲಗಳು ತಿಳಿಸಿವೆ.
ಅವಿನಾಶ್ ಭೋಸ್ಲೆ ಮತ್ತು ಇತರ ಡೆವಲಪರ್
DHFL ನ ಹಣಕಾಸಿನ ತನಿಖೆಯ ಭಾಗವಾಗಿ, ಸಿಬಿಐ ಈ ವರ್ಷದ ಏಪ್ರಿಲ್ನಲ್ಲಿ ಮುಂಬೈ ಮತ್ತು ಪುಣೆಯಲ್ಲಿ ಅವಿನಾಶ್ ಭೋಸ್ಲೆ ಮತ್ತು ಇತರ ಡೆವಲಪರ್ಗಳಿಗೆ ಸಂಬಂಧಿಸಿದ ಹಲವಾರು ಸ್ಥಳಗಳಲ್ಲಿ ದಾಳಿ ನಡೆಸಿತು.
ಭೋಸ್ಲೆ ಮತ್ತು ಅವರ ಪುತ್ರನನ್ನು ಕಳೆದ ವರ್ಷ ಜಾರಿ ನಿರ್ದೇಶನಾಲಯ (ಇಡಿ) ಕೂಡ ವಿಚಾರಣೆಗೊಳಪಡಿಸಿತ್ತು. ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (FEMA) ಉಲ್ಲಂಘನೆಯ ಆರೋಪದ ಮೇಲೆ ಸಂಸ್ಥೆಯು ಭೋಸ್ಲೆ ಒಡೆತನದ 40.34 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಹಲವು ಬ್ಯಾಂಕುಗಳಿಗೆ ವಂಚನೆ
ಡಿಎಚ್ಎಫ್ಎಲ್ ಪ್ರವರ್ತಕರು, ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ವಂಚನೆ ಪ್ರಕರಣದಲ್ಲಿ ಅನೇಕ ಬ್ಯಾಂಕುಗಳಿಗೆ ನಷ್ಟವಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಅತಿ ಹೆಚ್ಚು ಅಂದರೆ 9898 ಕೋಟಿ ರುಪಾಯಿ ವಂಚನೆಯಾಗಿದೆ ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ, ನಂತರದ ಸ್ಥಾನದಲ್ಲಿ ಬ್ಯಾಂಕ್ ಆಫ್ ಇಂಡಿಯಾ (4,044 ಕೋಟಿ ರು), ಕೆನರಾ ಬ್ಯಾಂಕ್ (4,022 ಕೋಟಿ ರು), ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (3,813 ಕೋಟಿ ರು), ಪಂಜಾಬ್ ನ್ಯಾಷನಲ್ ಬ್ಯಾಂಕ್ (3,802 ಕೋಟಿ ರು) ಮತ್ತು ಬ್ಯಾಂಕ್ ಆಫ್ ಬರೋಡಾ (2,036 ಕೋಟಿ ರು) ವಂಚನೆಯಾಗಿದೆ ಎಂದು ಉಲ್ಲೇಖಿಸಲಾಗಿದೆ.