ಪೆಟ್ರೋಲ್ ಬೆಲೆ ಇಳಿಕೆ ಸುತ್ತ; ದೊರೆ ಮಾಡಿದ ತಪ್ಪಿಗೆ ದಂಡನೆ ಇಲ್ಲ!
ಸರಕಾರದ ಕೆಲ ನಿರ್ಧಾರಗಳು ಹೇಗೆ ಆರ್ಥಿಕತೆ ಮೇಲೆ ಹೊಡೆತ ಕೊಡುತ್ತವೆ ಅನ್ನೋದಿಕ್ಕೆ ಗುರುವಾರ ಹಾಗೂ ಶುಕ್ರವಾರದ ಷೇರು ಮಾರುಕಟ್ಟೆ ಉದಾಹರಣೆಯಾಗಿ ಕಾಣುತ್ತಿದೆ. ಮೋದಿ ನೇತೃತ್ವದ ಕೇಂದ್ರ ಸರಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಬೆಲೆ ಕಡಿತಗೊಳಿಸಿ ಗುರುವಾರ ಘೋಷಣೆ ಮಾಡಿತು.
ಇನ್ನೇನು ಷೇರು ಮಾರುಕಟ್ಟೆ ಮುಕ್ತಾಯ ಹಂತದ ಒಂದೂಕಾಲು ಗಂಟೆ ಹಾಗೂ ಶುಕ್ರವಾರ ಬೆಳಗಿನ ನಲವತ್ತೈದು ನಿಮಿಷದಲ್ಲಿ ಸಾರ್ವಜನಿಕ ವಲಯದ ತೈಲ ಕಂಪನಿ ಷೇರುಗಳಲ್ಲಿ ಹಣ ಹೂಡಿಕೆ ಮಾಡಿದ್ದವರ 1 ಲಕ್ಷ ಕೋಟಿ ರುಪಾಯಿ ಕೊಚ್ಚಿಕೊಂಡು ಹೋಯಿತು. ಸಾಮಾನ್ಯ ಷೇರುದಾರರ 48 ಸಾವಿರ ಕೋಟಿ ರುಪಾಯಿ ಸಂಪತ್ತು ಕರಗಿದರೆ, ಮೋದಿ ಸರಕಾರವು 55 ಸಾವಿರ ಕೋಟಿ ರುಪಾಯಿ ಕಳೆದುಕೊಂಡಿತು.
ಅಬಕಾರಿ ಸುಂಕ ಇಳಿಕೆ, ತೈಲ ಕಂಪನಿಗಳ ಷೇರುಗಳು ಕುಸಿತ
ಏರುತ್ತಿರುವ ಬೆಲೆಗಳ ಮಧ್ಯೆ ಪೆಟ್ರೋಲ್- ಡೀಸೆಲ್ ದರ ಇಳಿಸುವ ನಿರ್ಧಾರ ಸರಕಾರದಿಂದ ಜನ ಸಾಮಾನ್ಯರು ನಿರೀಕ್ಷಿಸುವುದು ಸಹಜ. ಆದರೆ ಇದರಿಂದ ಆಗುವ ಪರಿಣಾಮಗಳು ಏನು ಎಂಬುದನ್ನು ಸಹ ಗಮನದಲ್ಲಿ ಇಟ್ಟುಕೊಳ್ಳಬೇಕು. ಕೇಂದ್ರ ಸರಕಾರ ತನ್ನ ಪಾಲಿನ ಅಬಕಾರಿ ಸುಂಕ ಇಳಿಸಿರುವುದು ಲೀಟರ್ ಗೆ 1.50 ರುಪಾಯಿ ಮಾತ್ರ. ತೈಲ ಮಾರಾಟ ಕಂಪನಿಗಳಿಗೆ 1 ರುಪಾಯಿ ಇಳಿಸುವಂತೆ ಸೂಚಿಸಿದೆ. ಅದೊಂದು ನಿರ್ಧಾರಕ್ಕೆ ಷೇರು ಮಾರುಕಟ್ಟೆ ಪ್ರತಿಕ್ರಿಯಿಸಿದ ರೀತಿ ಇದು.
ನಿಯಮದ ಪ್ರಕಾರ ತೈಲ ಕಂಪನಿಗಳಿಗೆ ಇಷ್ಟು ದರ ಕಡಿಮೆ ಮಾಡಿ ಎಂದು ಈಗ ಸರಕಾರ ಸೂಚಿಸುವಂತಿಲ್ಲ. ಆದರೆ ಈ ಸರಕಾರ ಹಸ್ತಕ್ಷೇಪ ಮಾಡಿದೆ. ಇದರಿಂದ ಸಾರ್ವಜನಿಕರ ಹೂಡಿಕೆ ಹಣ ಷೇರು ಮೌಲ್ಯದ ರೂಪದಲ್ಲಿ ಕೊಚ್ಚಿ ಹೋದರೆ, ತೈಲ ದರ ಇಳಿಸಿದ ಶ್ರೇಯ ಮೋದಿ ಸರಕಾರಕ್ಕೆ.
ಪೂರ್ಣ ಪ್ರಮಾಣದ ಹೊರೆ ತನ್ನ ಮೇಲೆ ಹಾಕಿಕೊಳ್ಳದ ಸರಕಾರ
ಈಗ 1.50 ರುಪಾಯಿ ಬೆಲೆ ಇಳಿಸುವುದರಿಂದ ಮೋದಿ ಸರಕಾರಕ್ಕೆ ಮುಂದಿನ ಮಾರ್ಚ್ ತನಕ ಹತ್ತು ಸಾವಿರ ಕೋಟಿ ಆದಾಯ ನಷ್ಟವಾಗುತ್ತದೆ. ಇನ್ನು ಹೆಚ್ಚುವರಿ ಒಂದು ರುಪಾಯಿ ಕೂಡ ತನ್ನ ಮೇಲೇ ಹಾಕಿಕೊಂಡಿದ್ದರೆ ಆದಾಯ ನಷ್ಟವು 17 ಸಾವಿರ ಕೋಟಿ ರುಪಾಯಿಗೆ ಏರಿಕೆ ಆಗುತ್ತಿತ್ತು. ಆದರೆ ಸರಕಾರ ಪೂರ್ಣ ಪ್ರಮಾಣದ ನಷ್ಟ ತನ್ನ ಮೇಲೆ ಹಾಕಿಕೊಂಡಿಲ್ಲ. ಹಾಗೆ ನೋಡಿದರೆ ಈಗ ಪೆಟ್ರೋಲ್/ಡೀಸೆಲ್ ಬೆಲೆಯ ನಿರ್ಧಾರವನ್ನು ತೈಲ ಮಾರಾಟ ಕಂಪನಿಗಳಿಗೇ ಬಿಡಲಾಗಿದೆ. ಸರಕಾರವು ಅದರಲ್ಲಿ ಮೂಗು ತೂರಿಸುವಂತಿಲ್ಲ. ಆದರೆ ಆ ಮಾತನ್ನು ತಪ್ಪಿ ಸರಕಾರದಿಂದ ದರ ತಗ್ಗಿಸಲು ಸೂಚಿಸಿದ್ದರಿಂದ ಷೇರು ಮಾರುಕಟ್ಟೆಯಲ್ಲಿ ಸಾರ್ವಜನಿಕ ಸ್ವಾಮ್ಯದ ಷೇರು ದರಗಳು ಕುಸಿದವು. ಅವುಗಳು ಹಣ ಹೂಡಿದ್ದವರು ನಷ್ಟಕ್ಕೆ ಈಡಾದರು.
2016ರಲ್ಲಿ ಬ್ಯಾರೆಲ್ ಪೆಟ್ರೋಲ್ ದರ $30ಕ್ಕೆ ಕುಸಿದಿತ್ತು
1991ರಲ್ಲಿ ಭಾರತವು ಉದಾರೀಕರಣಕ್ಕೆ ಬಾಗಿಲು ತೆರೆದಿಟ್ಟ ಮೇಲೆ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬಂದ ಸರಕಾರ ಮೋದಿ ಅವರದು. ಜತೆಗೆ ಅದೃಷ್ಟವೂ ಅವರ ಜತೆಗಿತ್ತು. 2014ರಲ್ಲಿ ಬ್ಯಾರೆಲ್ ಗೆ $108 ಇದ್ದ ದರ 2016ರಲ್ಲಿ $30ಕ್ಕೆ ಕುಸಿಯಿತು. ಇದರಿಂದ ಭಾರೀ ಲಾಭವೇ ಆಯಿತು. ಮೂರು ವರ್ಷದಲ್ಲಿ 7 ಲಕ್ಷ ಕೋಟಿ ರುಪಾಯಿ ಬಂದಿತ್ತು. ಸುಮ್ಮನೆ ಊಹಿಸಿಕೊಳ್ಳಿ: ಪೆಟ್ರೋಲ್. ಡೀಸೆಲ್ ದರವನ್ನು ಕಡಿಮೆ ಮಾಡಿ ಈ ಲಾಭವನ್ನು ಗ್ರಾಹಕರಿಗೇ ಬಿಟ್ಟುಕೊಟ್ಟಿದ್ದರೆ? ತೆರಿಗೆ ಬರುವುದನ್ನು ಖಾಸಗಿ ಬೇಡಿಕೆಗೆ ಮತ್ತು ಕಾರ್ಪೊರೇಟ್ ಹೂಡಿಕೆಗೆ ಅಂತ ಮೀಸಲಿಡಬಹುದಿತ್ತು.
ಸೋರಿಕೆ ಹಾಗೂ ಅಶಕ್ತವಾದ ಜನ ಕಲ್ಯಾಣ ಯೋಜನೆಗಳು
ಹಾಗೆ ಮಾಡಲಿಲ್ಲ. ಕನಿಷ್ಠ ಆ ಹಣವನ್ನು ಬಿಕ್ಕಟ್ಟಿನಲ್ಲಿರುವ ಬ್ಯಾಂಕ್ ಗಳು ಹಾಗೂ ಮೂಲಸೌಕರ್ಯ ಕಂಪನಿಗಳ ಸ್ಥಿತಿಯ ಚೇತರಿಕೆಗಾದರೂ ಬಳಸಬಹುದಿತ್ತೆ? ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಂತೆ ಮುಖ್ಯವಾಗಿದ್ದ ಎರಡು ಸಮಸ್ಯೆಗಳನ್ನು ನಿವಾರಿಸಬಹುದಿತ್ತು. ಅದರ ಬದಲಿಗೆ ತಾವು ಅಧಿಕಾರ ವಹಿಸಿಕೊಂಡ ನಂತರ ನಿರಂತರವಾಗಿ ತೆರಿಗೆ ಏರಿಸುತ್ತಲೇ ಹೋದರು. ಆ ಆದಾಯದಿಂದ ಬಂದ ಹಣವನ್ನು ಜನ ಕಲ್ಯಾಣ ಯೋಜನೆಗಳಿಗೆ ಅಂತ ಬಳಕೆ ಮಾಡಿದರು. ಅದಾದರೂ ಸಶಕ್ತವಾಗಿತ್ತಾ ಅಂತ ನೋಡಿದರೂ ಆ ಯೋಜನೆಗಳಲ್ಲೂ ಸೋರಿಕೆ ಹಾಗೂ ಸಮಸ್ಯೆಗಳು ಸಾಕಷ್ಟಿದ್ದವು.
ದೊರೆ ಮಾಡಿದ ತಪ್ಪಿಗೆ ದಂಡನೆಯಿಲ್ಲ
ಈ ವರ್ಷದ ಆರಂಭದಲ್ಲಿ ಕೇಂದ್ರ ಸರಕಾರಕ್ಕೆ ನಗದು ಅಗತ್ಯವಿತ್ತು. ಆಗ ಅದು ಕಂಡುಕೊಂಡಿದ್ದು ಬಂಡವಾಳ ಹಿಂತೆಗೆತದ ದಾರಿ. ಅಂಥ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಸರಕಾರದ ಪಾಲಿನ ಷೇರು ಸ್ವಲ್ಪ ಪ್ರಮಾಣದಲ್ಲಿ ಮಾರಾಟ ಮಾಡುವುದು, ಅದರಿಂದ ಹಣ ಸಂಗ್ರಹ ಮಾಡುವುದು ವಿಧಾನ. ಆದರೆ ಸರಕಾರದ್ದೇ ಆದ ಒಎನ್ ಜಿಸಿ (ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್)ಯಿಂದ ಎಚ್ ಪಿಸಿಎಲ್ (ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್) ಷೇರುಗಳನ್ನು 35 ಸಾವಿರ ಕೋಟಿ ರುಪಾಯಿಗೆ ಖರೀದಿಸಲಾಯಿತು. ಅಷ್ಟು ಹಣ ಪಾವತಿಸುವಷ್ಟು ಹೆಚ್ಚುವರಿ ಮೊತ್ತ ಇದ್ದಲ್ಲಿ ಅದನ್ನು ಆಯಾ ಕಂಪನಿಯ ಷೇರುದಾರರಿಗೆ ಡಿವಿಡೆಂಡ್, ಬೋನಸ್ ಷೇರು ಅಥವಾ ಇನ್ಯಾವ ರೂಪದಲ್ಲಾದರೂ ವಾಪಸ್ ನೀಡಬೇಕು. ಆದರೆ ಹಾಗೆ ಮಾಡಲಿಲ್ಲ. ಒಎನ್ ಜಿಐಯಿಂದ ಸಾರ್ವಜನಿಕರಿಗೆ ಓಪನ್ ಆಫರ್ ಮಾಡಬೇಕಿತ್ತು. ಅದು ಆಗಲಿಲ್ಲ. ಅಲ್ಲಿಗೆ ಬಹಳ ನಿಯಮಗಳನ್ನು ಮೀರಿ, 'ದೊರೆ ಮಾಡಿದ ತಪ್ಪಿಗೆ ದಂಡನೆ ಇಲ್ಲ' ಎಂಬ ಮಾತಿಗೆ ಮತ್ತೊಮ್ಮೆ ಪುಷ್ಟಿ ಸಿಕ್ಕಿತು.