ಭಾರತದಲ್ಲಿ 'ಗ್ರೀನ್ ಪೀಸ್'ಗೆ ಇನ್ನು ಜೀವವಿದೆ
ಚೆನ್ನೈ, ನವೆಂಬರ್. 21: ವಿದೇಶಿ ಹಣ ದುರ್ಬಳಕೆ ಮಾಡಿಕೊಂಡ ಆರೋಪದಲ್ಲಿ ಕೇಂದ್ರ ಸರ್ಕಾರದಿಂದ ನಿಷೇಧಕ್ಕೆ ಗುರಿಯಾಗಿದ್ದ ಎನ್ ಜಿಒ ಗ್ರೀನ್ ಪೀಸ್ ಗೆ ಹೋದ ಜೀವ ಬಂದಂತೆ ಆಗಿದೆ. ಗ್ರೀನ್ ಪೀಸ್ ಇಂಡಿಯಾ ಸೊಸೈಟಿಯ ನೋಂದಣಿ ರದ್ದು ಮಾಡಿದ್ದ ಕೇಂದ್ರ ಸರ್ಕಾರದ ಕ್ರಮಕ್ಕೆ ಮದ್ರಾಸ್ ಹೈಕೋರ್ಟ್ ತಡೆ ನೀಡಿದೆ.
ಕೇಂದ್ರ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಗ್ರೀನ್ ಪೀಸ್ ಮದ್ರಾಸ್ ಹೈ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ.ಎಂ. ಸುಂದ್ರೇಶ್ ಮಧ್ಯಂತರ ತಡೆಯಾಜ್ಞೆ ನೀಡಿದ್ದಾರೆ.[ಗ್ರೀನ್ ಪೀಸ್ ಬ್ಯಾಂಕ್ ಖಾತೆ ಮುಟ್ಟುಗೋಲು]
ನಾಲ್ಕು ವಾರದೊಳಗೆ ಸ್ಪಷ್ಟೀಕರಣ ಕೊಡಬೇಕೆಂದು ಜಿಲ್ಲಾ ನೋಂದಣಾಧಿಕಾರಿಗಳಿಗೆ ನೋಟಿಸ್ ಸಹ ನೀಡಲಾಗಿದೆ. ಯಾವ ಆಧಾರದಲ್ಲಿ ಗ್ರೀನ್ ಪೀಸ್ ಸಂಸ್ಥೆ ನೋಂದಣಿ ರದ್ದು ಮಾಡಲಾಗಿತ್ತು ಎಂದು ತಿಳಿಸುವಂತೆ ಸೂಚನೆ ನೀಡಲಾಗಿದೆ.[ಗ್ರೀನ್ ಪೀಸ್ ಎಂದರೆ ಏನು?]
ಗ್ರೀನ್ ಪೀಸ್ ಇಂಡಿಯಾದ ಕಾರ್ಯಕಾರಿ ನಿರ್ದೇಶಕ ವಿನುತಾ ಗೋಪಾಲ್ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ, ಸರ್ಕಾರ ನಮ್ಮ ಬಳಿ ವಿವರಣೆ ಕೇಳಿಲ್ಲ. ಅಲ್ಲದೇ. ಒಮ್ಮುಖವಾಗಿ ಚಿಂತಿಸಿ ತೀರ್ಮಾನ ತೆಗೆದುಕೊಂಡಿದೆ ಎಂದು ಆರೋಪಿಸಿದ್ದರು. ಈ ತೀರ್ಮಾನ ಎನ್ ಜಿಒದ ಹೋರಾಟಕ್ಕೆ ಚೈತನ್ಯ ತುಂಬಿದ್ದು ಸದ್ಯದ ಮಟ್ಟಿಗೆ ಗ್ರೀನ್ ಪೀಸ್ ಸಂಪೂರ್ಣ ನಿಷೇಧದ ಭೀತಿಯಿಂದ ಪಾರಾಗಿದೆ.