ಕೇಂದ್ರದಿಂದ ನೆರವು ಸಿಗದಿದ್ದರೆ 1 ಕೋಟಿ ಉದ್ಯೋಗ ಕಡಿತ
ನವದೆಹಲಿ, ಏಪ್ರಿಲ್ 14: ಕೊರೊನಾವೈರಸ್ ಸೋಂಕು ಹರಡದಂತೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ವಿಧಿಸಿರುವ ಲಾಕ್ಡೌನ್ ನಿಂದಾಗಿ ಅಸಂಘಟಿತ ವಲಯದ ಕಾರ್ಮಿಕರು, ದಿನಗೂಲಿಗಳು ಅಲ್ಲದೆ ಹೆಚ್ಚು ನಷ್ಟ ಅನುಭವಿಸುತ್ತಿರುವುದು ಜವಳಿ ಉದ್ಯಮ. ಗಾರ್ಮೆಂಟ್ ಕೈಗಾರಿಕೆ ಬಂದ್ ಆಗಿದ್ದು, ಸರಿಯಾದ ಸಮಯಕ್ಕೆ ಕೇಂದ್ರ ಸರ್ಕಾರದಿಂದ ಸೂಕ್ತ ಆರ್ಥಿಕ ನೆರವು ಸಿಗದಿದ್ದರೆ, ಸರಿ ಸುಮಾರು 1 ಕೋಟಿ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂಬ ಆಘಾತಕಾರಿ ಅಂಕಿ ಅಂಶ ಹೊರ ಬಂದಿದೆ.
ಕ್ಲೋಥಿಂಗ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ(ಸಿಎಂಎಐ) ನೀಡಿರುವ ವರದಿ ಪ್ರಕಾರ, ಬಹುತೇಕ ಗಾರ್ಮೆಂಟ್ ಉದ್ಯಮವು ಎಂಎಸ್ ಎಂ ಇ ಅಡಿಯಲ್ಲೇ ಬರುತ್ತದೆ. MSMEs ವಲಯದಲ್ಲಿ ದೇಶದಲ್ಲಿ 11 ಕೋಟಿ ಮಂದಿ ಕಾರ್ಯ ನಿರ್ವಹಿಸುತ್ತಿದ್ದು, ದೇಶದ ಜಿಡಿಪಿಗೆ ಶೇ 30 ರಷ್ಟು ಕೊಡುಗೆ ನೀಡುತ್ತಿದೆ.
ಲಾಕ್ಡೌನ್ ಸಂದರ್ಭದಲ್ಲಿ ಸಿಬ್ಬಂದಿಗೆ ಪೂರ್ತಿ ಸಂಬಳ ನೀಡಿ: FKCCI
"ಬಳ, ಸಬ್ಸಿಡಿ, ಆರ್ಥಿಕ ಪುನಶ್ಚೇತನ ಪ್ಯಾಕೇಜ್ ಹೀಗೆ ಯಾವುದಾದರೂ ರೂಪದಲ್ಲಿ ಕೇಂದ್ರ ಸರ್ಕಾರದಿಂದ ನೆರವು ಸಿಗದಿದ್ದರೆ, ಜವಳಿ ಉದ್ಯಮದಲ್ಲಿ ಕಾರ್ಯ ನಿರತ ಸುಮಾರು 1 ಕೋಟಿ ಮಂದಿಯನ್ನು ಮನೆಗೆ ಕಳಿಸಬೇಕಾಗುತ್ತದೆ"ಎಂದು ಸಿಎಂಎಐ ಮುಖ್ಯಸ್ಥ ರಾಹುಲ್ ಮೆಹ್ತಾ ಹೇಳಿದ್ದಾರೆ.
ಗಾರ್ಮೆಂಟ್ ಉದ್ಯಮ ಬಂದ್ ಆಗುವುದರಿಂದ ಫ್ಯಾಬ್ರಿಕ್ ಪೂರೈಕೆ ಕೈಗಾರಿಕೆಗೂ ಹೊಡೆತ ಬೀಳಲಿದೆ. ದೊಡ್ಡ ದೊಡ್ಡ ಫ್ಯಾಷನ್ ಕಂಪನಿಗಳು ಭಾರತದ ಈ ಸಣ್ಣ ಪುಟ್ಟ ಗಾರ್ಮೆಂಟ್ ಗಳ ಮೇಲೆ ಅವಲಂಬಿತವಾಗಿವೆ.
ಜವಳಿ ಸಚಿವಾಲಯದ ಭರವಸೆ: ವಿದೇಶಿ ಕಂಪನಿಗಳು ಈಗಾಗಲೇ ನೀಡಿರುವ ಆರ್ಡರ್ ಗಳನ್ನು ಕ್ಯಾನ್ಸಲ್ ಮಾಡದಿರುವಂತೆ ಜವಳಿ ಸಚಿವಾಲಯವು ಕೋರಿದೆ. ಹೀಗಾಗಿ, ಸಣ್ಣ ಗಾರ್ಮೆಂಟ್ ನಿಂದ ಹಿಡಿದು ಬ್ರ್ಯಾಂಡೆಡ್ ಕಂಪನಿ ತನಕ ರಫ್ತು ಅಬಾಧಿತವಾಗಿರುವ ಭರವಸೆಯಲ್ಲಿವೆ.
ಕೊವಿಡ್19 ನೆಪದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವಂತಿಲ್ಲ
ಸಿಎಂಎಐ ಸಮೀಕ್ಷೆ ಪ್ರಕಾರ, ಶೇ 20ರಷ್ಟು ಮಂದಿ ಗಾರ್ಮೆಂಟ್ ಮುಚ್ಚಿ ಬೇರೆ ಉದ್ಯಮದಲ್ಲಿ ತೊಡಗಿಕೊಳ್ಳಲು ಸಿದ್ಧರಾಗಿದ್ದಾರೆ. ಶೇ 60 ರಷ್ಟು ಮಂದಿ ಶೇ 40ರಷ್ಟು ಆದಾಯಕ್ಕೆ ಹೊಡೆತ ಬೀಳಲಿದೆ ಎಂದಿದ್ದಾರೆ.
ಚೀನಾದಲ್ಲಿ ಜವಳಿ, ಸಿದ್ದಉಡುಪು ಉದ್ಯಮ ಶೇ 59ರಷ್ಟು ಕುಸಿತ ಕಂಡರೆ, ಸಿದ್ಧ ಆಹಾರ ಹಾಗೂ ಸಂಸ್ಕರಿತ ಆಹಾರ ಕ್ಷೇತ್ರ ಚೇತರಿಕೆ ಕಂಡಿದೆ.
ಕೊರೊನಾದಿಂದ 40 ಕೋಟಿ ಕಾರ್ಮಿಕರು ಮತ್ತಷ್ಟು ಬಡತನದ ಕೂಪಕ್ಕೆ!
ರೀಟೈಲ್ ಕ್ಷೇತ್ರದಲ್ಲಿ ಶೇ 50ರಷ್ಟು ಮಂದಿ ಮತ್ತೆ ಅಂಗಡಿ ಓಪನ್ ಮಾಡುವ ಭರವಸೆ ಇಟ್ಟುಕೊಂಡಿಲ್ಲ. ಕೆಲಸಗಾರರನ್ನು ಮತ್ತೆ ಹೊಂದಿಸುವುದು ಭಾರಿ ಕಷ್ಟವಾಗಲಿದೆ ಎಂದು ರೀಟೈಲ್ ಅಸೋಸಿಯೇಷನ್ ಆಫ್ ಇಂಡಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರ್ ರಾಜಗೋಪಾಲನ್ ಅಭಿಪ್ರಾಯಪಟ್ಟಿದ್ದಾರೆ.