ಪ್ರತಿ ನಿತ್ಯ 5 ಲಕ್ಷ ನಿರಾಶ್ರಿತರಿಗೆ ಉಚಿತ ಆಹಾರ ಪೂರೈಕೆ ಸ್ವಿಗ್ಗಿ ಗುರಿ
ಬೆಂಗಳೂರು, ಏಪ್ರಿಲ್ 5: ದೇಶದಲ್ಲಿ ಘೋಷಣೆಯಾಗಿರುವ 21 ದಿನಗಳ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ವಲಸಿಗ ಕಾರ್ಮಿಕರು, ದಿನಗೂಲಿ ನೌಕರರ ನೆರವಿಗೆ ಮುಂದಾಗಿರುವ ದೇಶದ ಅತಿ ದೊಡ್ಡ ಆಹಾರ ಪೂರೈಕೆ ವೇದಿಕೆ ಸ್ವಿಗ್ಗಿ, ನಿರಾಶ್ರಿತರಿಗೆ ಉಚಿತ ಆಹಾರ ಪೂರೈಕೆಯ ಯೋಜನೆ ಘೋಷಿಸಿದೆ.
ಇದಕ್ಕಾಗಿ ವಿವಿಧ ವಾಣಿಜ್ಯ ಆಹಾರ ಕಿಚನ್ ಗಳು, ಎನ್ ಜಿಓಗಳು ಹಾಗೂ ರಾಜ್ಯ ಸರ್ಕಾರಗಳೊಂದಿಗೆ ಸ್ವಿಗ್ಗಿ ಕೈಜೋಡಿಸಿದೆ. ಕಳೆದ ವಾರ ದೆಹಲಿ ಸರ್ಕಾರದ ಬೆಂಬಲದೊಂದಿಗೆ 'ಭರವಸೆ, ಹಸಿವಲ್ಲ' ('ಹೋಪ್, ನಾಟ್ ಹಂಗರ್') ಎಂಬ ಘೋಷಣೆಯಡಿ ಅಲ್ಲಿನ ನಿರಾಶ್ರಿತ ಶಿಬಿರಗಳಲ್ಲಿನ ಜನರಿಗೆ ದಿನದ ಎರಡು ಹೊತ್ತು ಪೌಷ್ಠಿಕ ಆಹಾರದ ತಯಾರಿ ಹಾಗೂ ವಿತರಣೆಗೆ ಮುಂದಾಗಿದೆ. ಇದಕ್ಕಾಗಿ ಸ್ವಿಗ್ಗಿ, ಕಂಪಾಸ್ ಕಿಚನ್ಸ್, ಲೈಟ್ ಬೈಟ್ ಫುಡ್ಸ್ ಮತ್ತು ಸ್ಮಾರ್ಟ್ ಕ್ಯೂ ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಿದೆ.
ಲಾಕ್ಡೌನ್: ಕಾಡಿನಲ್ಲಿ 3ಕಿಮೀ ನಡೆದು ದಿನಸಿ ತಲುಪಿಸಿದ ಡಿಸಿ..!
ಮುಂಬೈನಲ್ಲಿ ಎನ್ ಜಿಓಗಳಾದ ಪ್ರಥಮ್, ಹೆಲ್ಪ್ ಏಜ್ ಇಂಡಿಯಾ ಮತ್ತು ಯುವದೊಂದಿಗೆ ಕೈಜೋಡಿಸಿದ್ದು, ಎಲಿಯೋರ್ ಇಂಡಿಯಾ ಆಹಾರ ಪೂರೈಕೆ ಪಾಲುದಾರರಾಗಿ ಸೇರಿಕೊಂಡಿದೆ. ನಂತರ ಸ್ವಿಗ್ಗಿ ಈ ಸೇವೆಯನ್ನು ಬೆಂಗಳೂರು, ಹೈದರಾಬಾದ್, ಗುರುಗ್ರಾಮ, ಚೆನ್ನೈ ಮತ್ತು ಕೋಲ್ಕತಾ ನಗರಗಳಿಗೂ ವಿಸ್ತರಿಸಿದ್ದು, ಪ್ರತಿನಿತ್ಯ 75 ಸಾವಿರಕ್ಕೂ ಹೆಚ್ಚು ಆಹಾರ ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ.
ಎನ್ಜಿಒ, ಕಾರ್ಪೊರೇಟ್ ಕಂಪನಿಗಳ ನೆರವು
ಐ-ಪ್ಯಾಕ್ ಮತ್ತು ಇತರ ಕಾರ್ಪೊರೇಟ್ ಘಟಕಗಳು ಕೂಡ ನೆರವಿಗೆ ಬಂದಿದ್ದು, ತಮ್ಮ ಎನ್ ಜಿಓಗಳ ಸಂಪರ್ಕ ಜಾಲದ ಮೂಲಕ ಈ ಸೇವೆಯನ್ನು ಇತರ ನಗರಗಳಿಗೆ ವಿಸ್ತರಿಸಲು ಮುಂದಾಗಿದೆ. ಇದು ಅಗತ್ಯವುಳ್ಳವರಿಗೆ ಆಹಾರ ನೀಡುವ ಜೊತೆಗೆ, ಈ ಅಡುಗೆ ಕೋಣೆ ಮತ್ತು ರೆಸ್ಟೋರೆಂಟ್ ಸಿಬ್ಬಂದಿಗೆ ಈ ಕಠಿಣ ಸಮಯದಲ್ಲಿ ಉದ್ಯೋಗ ಒದಗಿಸಿದೆ.
ಇಲ್ಲಿಯವರೆಗೆ 2.50 ಲಕ್ಷ ಆಹಾರ ಪೊಟ್ಟಣಗಳನ್ನು ಪೂರೈಸಿರುವ ಸ್ವಿಗ್ಗಿ, ಪ್ರತಿ ನಿತ್ಯ 5 ಲಕ್ಷ ಆಹಾರ ಪೂರೈಸುವ ಗುರಿ ಹೊಂದಿದೆ. ಇದಕ್ಕಾಗಿ ಕಾರ್ಪೊರೇಟ್ ಗಳು ಮತ್ತು ವೈಯಕ್ತಿಕ ಹಣ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದು,ದೇಶದ ಇತರ ಭಾಗಗಳಿಗೆ ವಿಸ್ತರಿಸಲಿದೆ. ಮಧ್ಯಾಹ್ನ ಮತ್ತು ರಾತ್ರಿಯ ಆಹಾರ ಸಾಕಷ್ಟು ಅನ್ನ, ದಾಲ್ (ಸಾಂಬಾರ್ ) ಮತ್ತು ತರಕಾರಿಗಳನ್ನು ಒಳಗೊಂಡಿರುತ್ತದೆ.
ಸ್ವಿಗ್ಗಿ ಸಿಇಒ ಶ್ರೀಹರ್ಷ ಮಜೇತಿ
‘ಭರವಸೆ, ಹಸಿವಲ್ಲ' ಯೋಜನೆ ಕುರಿತು ವಿವರ ನೀಡಿದ ಸ್ವಿಗ್ಗಿ ಸಿಇಒ ಶ್ರೀಹರ್ಷ ಮಜೇತಿ, "ಇದು ಆಹಾರ ವಲಯ ಸೇರಿದಂತೆ ಎಲ್ಲಾ ಸೇವಾ ವಲಯಗಳಿಗೆ ಇದು ಸವಾಲಿನ ಸಮಯ. ಅನೇಕ ರೆಸ್ಟೋರೆಂಟ್ ಗಳು ವ್ಯವಹಾರವಿಲ್ಲದೆ ಶಾಶ್ವತವಾಗಿ ಮುಚ್ಚಿಹೋಗುವ ಭೀತಿ ಎದುರಿಸುತ್ತಿವೆ. ಇದು ಅನೇಕ ಕಾರ್ಮಿಕರು, ಬಾಣಸಿಗರು ಮತ್ತು ಬೆಂಬಲದ ಸಿಬ್ಬಂದಿಯ ಜೀವನವನ್ನು ನಾಶಮಾಡಲಿದೆ. ಈಗ ನಾವು ಈ ಯೋಜನೆ ಮೂಲಕ ಬಡವರಿಗೆ ನೆರವಾಗುವುದರ ಜೊತೆಗೆ, ಆಹಾರ ಸಿಬ್ಬಂದಿಗೂ ಸಹಾಯ ಮಾಡುತ್ತಿದ್ದೇವೆ" ಎಂದಿದ್ದಾರೆ.
ಕಂಪಾಸ್ ಕಿಚನ್ ನ ವ್ಯವಸ್ಥಾಪಕ ನಿರ್ದೇಶಕ
ಈ ಯೋಜನೆಯ ಪಾಲುದಾರರಾದ ಕಂಪಾಸ್ ಕಿಚನ್ ನ ವ್ಯವಸ್ಥಾಪಕ ನಿರ್ದೇಶಕ ದೇವ್ ಅಮೃತೇಶ್, "ಕಂಪಾಸ್ ಗ್ರೂಪ್ ಇಂಡಿಯಾ ಮೊದಲಿನಿಂದಲೂ ಕಾರ್ಪೊರೇಟ್ ಗಳು, ಶಾಲಾ-ಕಾಲೇಜುಗಳು, ಕಾರ್ಖಾನೆಗಳು ಮತ್ತು ಆಸ್ಪತ್ರೆಗಳಿಗೆ ಪೌಷ್ಠಿಕಾಂಶದ ಆಹಾರ ನೀಡುವ ವ್ಯವಹಾರದಲ್ಲಿ ತೊಡಗಿದೆ. ಈ ಕಷ್ಟದ ಸಮಯದಲ್ಲಿ ನಮ್ಮ ಹಲವು ಗ್ರಾಹಕರು ತಮ್ಮ ಸಂಸ್ಥೆಗಳನ್ನು ಮುಚ್ಚಬೇಕಾಗಿದೆ. ನಮ್ಮ ಕೈಗಾರಿಕಾ ಅಡುಗೆಕೋಣೆಯ ಸಾಮರ್ಥ್ಯ ಲಭ್ಯವಿದ್ದುದರಿಂದ ಸ್ವಿಗ್ಗಿಯೊಂದಿಗೆ ಕೈಜೋಡಿಸಿ ನಾವು ಪ್ರತಿನಿತ್ಯ 40 ಸಾವಿರ ಆಹಾರ ಪೊಟ್ಟಣಗಳನ್ನು ಪೂರೈಸುತ್ತಿದ್ದೇವೆ" ಎಂದು ಹೇಳಿದ್ದಾರೆ.
ಎಲಿಯಾರ್ ಇಂಡಿಯಾದ ಎಂಡಿ
ಎಲಿಯಾರ್ ಇಂಡಿಯಾದ ಎಂಡಿ ಮತ್ತು ಸಿಇಓ ಸಂಜಯ್ ಕುಮಾರ್ "ಸ್ವಿಗ್ಗಿಯೊಂದಿಗೆ ಪಾಲುದಾರಿಕೆ ಹೊಂದಲು ಸಂತಸವಾಗುತ್ತಿದೆ. ಎಲಿಯಾರ್ ಕಂಪನಿ ಹಲವು ಕಿಚನ್ ಗಳ ಮೂಲಕ ಪ್ರತಿನಿತ್ಯ 20 ಸಾವಿರ ಜನರಿಗೆ ಆಹಾರ ತಯಾರಿಸುತ್ತಿದೆ" ಎಂದಿದ್ದಾರೆ.
ಈ ಯೋಜನೆಗೆ ನೆರವಾಗಬಯಸುವವರು
ಸ್ವಿಗ್ಗಿಯ ಈ ಯೋಜನೆಗೆ ನೆರವಾಗಬಯಸುವವರು ಕಂಪನಿಯನ್ನು www.hopenothunger.com ಮೂಲಕ ಸಂಪರ್ಕಿಸಬಹುದು. ಇದು ಸಂಪೂರ್ಣ ಸ್ವಯಂ ಇಚ್ಛೆಯಾಗಿದ್ದು, ಈ ಸೇವೆಯನ್ನು 1961ರ ಆದಾಯ ತೆರಿಗೆ ಕಾಯ್ದೆ 80 ಜಿ ಸೆಕ್ಷನ್ ಅಡಿಯಲ್ಲಿ ತೆರಿಗೆ ಕಡಿತಕ್ಕೆ ಬಳಸಿಕೊಳ್ಳಬಹುದಾಗಿದೆ. ಕನಿಷ್ಠ 250 ರೂ.ಗಳ ದೇಣಿಗೆ ನಾಲ್ಕು ಜನರ ಕುಟುಂಬಕ್ಕೆ ಒಂದು ದಿನದ ಆಹಾರ ಪೂರೈಸಲು ನೆರವಾಗಬಲ್ಲದು. ಪ್ರತಿ ನಿತ್ಯ 5 ಲಕ್ಷ ಆಹಾರ ಪೂರೈಸುವ ಗುರಿ ಹೊಂದಿದೆ.