ಸಾಲದ ಮರುಪಾವತಿ ಮೇಲಿನ ವಿನಾಯಿತಿ ಸೋಮವಾರಕ್ಕೆ ಕೊನೆ
ನವದೆಹಲಿ, ಆಗಸ್ಟ್ 29: ಕೊರೊನಾವೈರಸ್ ಸಾಂಕ್ರಾಮಿಕ ರೋಗ ಹಾಗೂ ಲಾಕ್ಡೌನ್ದಿಂದಾಗಿ ಆರ್ಬಿಐ ನೀಡಿದ್ದ ಸಾಲದ ಮರುಪಾವತಿ ಮೇಲಿನ ವಿನಾಯಿತಿಯು ಆಗಸ್ಟ್ 31 ರಂದು ಕೊನೆಗೊಳ್ಳಲಿದ್ದು, ಮರುಪಾವತಿ ಮೇಲಿನ ನಿಷೇಧವನ್ನು ಆರ್ಬಿಐ ವಿಸ್ತರಿಸುವುದಿಲ್ಲ.
ಒಂದು ವೇಳೆ ಸಾಲ ಮರುಪಾವತಿ ವಿನಾಯಿತಿ ಮುಂದುವರಿದಿದ್ದಲ್ಲಿ ಸಾಲಗಾರರಲ್ಲಿ ಪ್ರಚೋದನೆ ಮತ್ತು ಸಾಲದ ಡೀಫಾಲ್ಟ್ ಅಪಾಯವನ್ನು ಹೆಚ್ಚಿಸಬಹುದು ಎಂದು ಆರ್ಬಿಐ ನಿರ್ಧರಿಸಿದೆ ಎಂದು ಹೆಸರು ಉಲ್ಲೇಶಿಸಲು ಇಚ್ಛಿಸದ ವ್ಯಕ್ತಿಯೊಬ್ಬರು ಹೇಳಿದ್ದಾರೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಸಾಲಗಳ ಮೇಲಿನ ನಿಷೇಧವು ತಾತ್ಕಾಲಿಕ ಪರಿಹಾರವಾಗಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಗುರುವಾರ ಹೇಳಿದ್ದಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಚ್ 27 ರಂದು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಸಾಲ ವಸೂಲಿಗೆ ಮೂರು ತಿಂಗಳ ವಿನಾಯಿತಿ ನೀಡಿತ್ತು. ಎಲ್ಲಾ ವಾಣಿಜ್ಯ ಬ್ಯಾಂಕುಗಳು (ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು ಮತ್ತು ಸ್ಥಳೀಯ ಪ್ರದೇಶ ಬ್ಯಾಂಕುಗಳು ಸೇರಿದಂತೆ), ಸಹಕಾರಿ ಬ್ಯಾಂಕುಗಳು, ಆಲ್-ಇಂಡಿಯಾ ಹಣಕಾಸು ಸಂಸ್ಥೆಗಳು ಮತ್ತು ಎನ್ಬಿಎಫ್ಸಿ (ವಸತಿ ಹಣಕಾಸು ಕಂಪನಿಗಳು ಮತ್ತು ಸೂಕ್ಷ್ಮ ಹಣಕಾಸು ಸಂಸ್ಥೆಗಳು ಸೇರಿದಂತೆ) ಮಾರ್ಚ್ 1, 2020 ರಂತೆ ಬಾಕಿ ಇರುವ ಎಲ್ಲಾ ಅವಧಿಯ ಸಾಲಗಳಿಗೆ ಸಂಬಂಧಿಸಿದಂತೆ ಕಂತುಗಳನ್ನು ಪಾವತಿಸಲು ಮೂರು ತಿಂಗಳ ನಿಷೇಧಕ್ಕೆ ಅನುಮತಿ ನೀಡಲಾಗಿತ್ತು.
ಆದರೆ ಹಣದ ಚಲಾವಣೆಗೆ ಎದುರಾಗಿದ್ದ ತೀವ್ರ ತರಹದ ಅಡ್ಡಿಗಳನ್ನು ನಿಭಾಯಿಸಲು ಜನರಿಗೆ ಸಾಧ್ಯವಾಗಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಸಾಲ ಮರುಪಾವತಿ ಮೇಲೆ ಆಗಸ್ಟ್ 31ರವರೆಗೆ ವಿನಾಯಿತಿ ನೀಡಿತ್ತು.