ಅರ್ಥ ವ್ಯವಸ್ಥೆ ಸುಧಾರಣೆಗೆ ಕೇಂದ್ರದ ಹೊಸ ಕ್ರಮ
ನವದೆಹಲಿ, ಸೆಪ್ಟೆಂಬರ್. 10: ಬಜೆಟ್ ನಲ್ಲಿ ಹೇಳಿದಂತೆ ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಕಾರ್ಪೋರೇಟ್ ತೆರಿಗೆಯನ್ನು ಶೇ.30 ರಿಂದ ಶೇ. 25ಕ್ಕೆ ಇಳಿಸಲು ನಿರ್ಧಾರ ಮಾಡಲಾಗಿದೆ. ಸರ್ಕಾರಿ ಸ್ವಾಮ್ಯದ ದುರ್ಬಲ ಬ್ಯಾಂಕ್ ಗಳನ್ನು ಬಲಿಷ್ಠ ಬ್ಯಾಂಕ್ಗಳಲ್ಲಿ ವಿಲೀನ ಮಾಡಲು ಹೆಜ್ಜೆ ಇಡಲಾಗಿದ್ದು ಅರ್ಥ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆ ತರಲಾಗುವುದು ಎಂದು ಕೇಂದ್ರ ಹಣಕಾಸಿ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ನಡೆದ ಇಂಡಿಯಾ ಸಮಿಟ್ 2015ನಲ್ಲಿ ಮಾತನಾಡಿದ ಜೇಟ್ಲಿ, ಸರ್ಕಾರ ಏಪ್ರಿಲ್ 1ರೊಳಗಾಗಿ ಜಿಎಸ್ಟಿ ಮಸೂದೆ ಜಾರಿಗೆ ಮುಂದಾಗಿದ್ದರೂ, ರಾಜ್ಯಸಭೆಯಲ್ಲಿ ಕಾಂಗ್ರೆಸ್ ತಡೆಯೊಡ್ಡುತ್ತಿದೆ. ವಿದೇಶದಲ್ಲಿರುವ ಕಪ್ಪು ಹಣ ಹಿಂದಕ್ಕೆ ತರಲು ಕೇಂದ್ರ ಸರ್ಕಾರ ಬದ್ಧವಾಗಿದ್ದು ಯಾವ ರೀತಿಯಲ್ಲೂ ವಿಳಂಬ ಮಾಡುತ್ತಿಲ್ಲ ಎಂದು ಹೇಳಿದರು.
ಸರ್ಕಾರಿ ಷೇರು ಪಾಲನ್ನು ಶೇ 52ಕ್ಕೆ ತಗ್ಗಿಸಿ ಸ್ಪರ್ಧಾತ್ಮಕತೆಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ ನಿರೀಕ್ಷಿತ ಪ್ರಮಾಣದ ಫಲ ಸಿಗುತ್ತಿಲ್ಲ. ಹಾಗಾಗಿ ಸಮಸ್ಯೆಯ ಸುಳಿಯಲ್ಲಿರುವ ದುರ್ಬಲ ಬ್ಯಾಂಕ್ಗಳನ್ನು ಬಲಿಷ್ಠ ಬ್ಯಾಂಕ್ಗಳಲ್ಲಿ ವಿಲೀನಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿ ಯಾವುದೇ ಒಪ್ಪಂದ ಮಾಡಿಕೊಳ್ಳುವುದಿದ್ದರೂ ಮೊದಲು ದೇಶದ ಅರ್ಥ ವ್ಯವಸ್ಥೆಯನ್ನು ಗಣನೆಗೆ ತೆಗೆದುಕೊಂಡಿರಲಾಗುತ್ತದೆ. ಹಾನಿ ಯಾಗುವಂಥ ಒಪ್ಪಂದಗಳನ್ನು ಎಂದಿಗೂ ಸರ್ಕಾರ ಮಾಡಲ್ಲ. ಅಭಿವೃದ್ಧಿ ಸಾಧಿಸಲು ಕೆಲ ಒಪ್ಪಂದಗಳು ನೆರವಾಗುತ್ತವೆ ಎಂಬುದನ್ನು ಎಲ್ಲರು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.