ಭಾರತದ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರ ಮೇಲೆ ಇಸ್ರೇಲಿ ಗೂಢಚಾರಿಕೆ ಏನು? ಏಕೆ?
ಇಸ್ರೇಲ್ ಮೂಲದ ಸ್ಪೈ ವೇರ್ ಬಳಸಿಕೊಂಡು ಫೇಸ್ಬುಕ್ ಒಡೆತನದ ವಾಟ್ಸಾಪ್ ಟೂಲ್, ಭಾರತದ ಪತ್ರಕರ್ತರು, ಮಾನವ ಹಕ್ಕು ಸಂಘಟನೆಯ ಕಾರ್ಯಕರ್ತರು ಸೇರಿದಂತೆ ಅನೇಕರ ಫೋನ್ ಮಾಹಿತಿ ಪಡೆಯಲು ಗೂಢಚಾರಿಕೆ ನಡೆಸಿರುವ ಸುದ್ದಿ ಬೆಳಕಿಗೆ ಬಂದಿದೆ. ಈ ಕುರಿತಂತೆ ಸ್ಪಷ್ಟನೆ ನೀಡುವಂತೆ ಫೇಸ್ಬುಕ್ ಗೆ ಕೇಂದ್ರ ಸರ್ಕಾರ ಇಂದು ಕೇಳಿದೆ.
ಪ್ರಧಾನಿ ಮೋದಿ ವೆಬ್ ಸೈಟಿನ ಹುಳುಕು ತೋರಿಸಿದ ಹ್ಯಾಕರ್
ಸೈಬರ್ ಭದ್ರತೆಯ ಬಗ್ಗೆ ನಿಗಾ ಇಡುವ ಇಸ್ರೇಲ್ನ ಎನ್ಎಸ್ಒ ಸಂಸ್ಥೆಯ ಪೆಗಾಸಸ್ ಸಾಫ್ಟ್ ವೇರ್ ನೆರವಿನಿಂದ ಅನೇಕ ಸಂಸ್ಥೆ ಸದಸ್ಯರು, ವಕೀಲರು, ಸಾಮಾಜಿಕ ಕಾರ್ಯಕರ್ತರು, ಹಿರಿಯ ಸರ್ಕಾರಿ ಅಧಿಕಾರಿಗಳು, ಪತ್ರಕರ್ತರ ಮೊಬೈಲ್ ಹ್ಯಾಕ್ ಮಾಡಿ, ಮಾಹಿತಿ ಪಡೆಯಲಾಗಿದೆ. ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲೇ ಇಂಥ ಘಟನೆ ನಡೆದಿದೆ.
"ವಿಶ್ವದೆಲ್ಲೆಡೆ ಸುಮಾರು 1,400 ಪ್ರಭಾವಿಗಳ ಮಾಹಿತಿಗೆ ಕನ್ನ ಹಾಕಲಾಗಿದ್ದು, ಈ ಸೈಬರ್ ದಾಳಿ ನಂತರ ಎಲ್ಲರಿಗೂ ಈ ಕುರಿತಂತೆ ನೇರವಾಗಿ ಸಂದೇಶ ಕಳುಹಿಸಿದ್ದೇವೆ," ವಾಟ್ಸಾಪ್ ಸಂಸ್ಥೆ ಹೇಳಿದೆ.
ಯಾರು ಯಾರು ಟಾರ್ಗೆಟ್
ಭೀಮಾ ಕೊರೆಂಗಾವ್ ಪ್ರಕರಣದ ಹಲವು ಆರೋಪಿಗಳ ಪರ ವಕೀಲರಾದ ನಿಹಾಲ್ ಸಿಂಗ್ ರಾಥೋಡ್, ಬೆಲಾ ಭಾಟಿಯಾ, ವಕೀಲ ಕಾರ್ಯಕರ್ತ ದಿಗ್ರಿ ಪ್ರಸಾದ್ ಚೌಹಾಣ್, ಆನಂದ್ ತೆಲ್ತುಂಬ್ಡೆ, ಪತ್ರಕರ್ತ ಸಿದ್ಧಾಂತ್ ಸಿಬಾಲ್ ಅವರು ಟಾರ್ಗೆಟ್ ಆಗಿದ್ದರು ಎನ್ನಲಾಗಿದೆ. ಆದರೆ ಯಾರು ಯಾರ ಮಾಹಿತಿಗೆ ಕನ್ನ ಹಾಕಲಾಗಿತ್ತು ಎಂಬುದರ ಬಗ್ಗೆ ವಾಟ್ಸಾಪ್ ಸ್ಪಷ್ಟ ಮಾಹಿತಿ ನೀಡಿಲ್ಲ.
ಪತ್ರಕರ್ತರ ವಿರುದ್ಧ ಬಳಕೆಗೆ ಬಳಸುವಂತದ್ದಲ್
ಆದರೆ, ಇಸ್ರೇಲಿ ಎನ್ಎಸ್ಒ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, 'ನಮ್ಮಲ್ಲಿ ಬಳಕೆಯಲ್ಲಿರುವ ಪೆಗಾಸಸ್ ಸಾಫ್ಟ್ ವೇರ್ ಅಥವಾ ತಂತ್ರಜ್ಞಾನವು ಮಾನವ ಹಕ್ಕುಗಳ ಉಲ್ಲಂಘನೆ, ಪತ್ರಕರ್ತರ ವಿರುದ್ಧ ಬಳಕೆಗೆ ಬಳಸುವಂತದ್ದಲ್ಲ, ಸರ್ಕಾರಿ ಸಂಸ್ಥೆಗಳ ಕಾರ್ಯಾಚರಣೆ ಬಗ್ಗೆ ನಿಗಾವಹಿಸಲು ಲೈಸನ್ಸ್ ಪಡೆದಿದೆ ಎಂದಿದೆ. ಆದರೆ, ಎನ್ಎಸ್ಒ ನೀಡಿರುವ ಸ್ಪಷ್ಟನೆಯನ್ನು ವಾಟ್ಸಾಪ್ ನಿರಾಕರಿಸಿದ್ದು, ಇಸ್ರೇಲಿ ಸಂಸ್ಥೆ ಎನ್ಎಸ್ಒನಿಂದ 75,000 ಯುಎಸ್ ಡಾಲರ್ ನಷ್ಟ ಪರಿಹಾರವನ್ನು ವಾಟ್ಸಾಪ್ ಕೋರಿದೆ.
ವಿಡಿಯೋ ಕಾಲ್ ವೇಳೆ ಈ ಸ್ಪೈವೇರ್ ಸಕ್ರಿಯಗೊಳ್ಳುತ್ತದೆ
ಪೆಗಾಸಸ್ ಸ್ಪೈವೇರ್ ಬಳಸಿಕೊಂಡು ಬಳಕೆದಾರರ ಸಂದೇಶ, ಕಾಲ್, ಪಾಸ್ವರ್ಡ್ ಎಲ್ಲವನ್ನು ಪಡೆಯಬಹುದು. ನಿಮ್ಮ ಫೋನನ್ನು ಮೈಕ್ರೋಫೋನ್ ಆಗಿ ಪರಿವರ್ತಿಸಿ ರೂಮಿನಲ್ಲಿ ನಡೆಯುವ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಳ್ಳಬಹುದು.
ಸಾಮಾನ್ಯವಾಗಿ ವಿಡಿಯೋ ಕಾಲ್ ವೇಳೆ ಈ ಸ್ಪೈವೇರ್ ಸಕ್ರಿಯಗೊಳ್ಳುತ್ತದೆ. ಟಾರ್ಗೆಟ್ ಆಗಿರುವ ವ್ಯಕ್ತಿಯು ವಿಡಿಯೋ ಕಾಲ್ ರಿಸೀವ್ ಮಾಡದಿದ್ದರೂ ಸ್ಪೈವೇರ್ ಸಕ್ರಿಯಗೊಳಿಸಬಹುದು. ಐಮೆಸೇಜ್, ಟೆಲಿಗ್ರಾಮ್, ವೀಚಾಟ್, ಫೇಸ್ಬುಕ್ ಮೆಸೆಂಜರ್, ವಾಟ್ಸಾಪ್ ಹೀಗೆ ಎಲ್ಲಾ ಚಾಟ್ ಟೂಲ್ ಗಳ ರಕ್ಷಣಾ ಕವಚವನ್ನು ಪೆಗಾಸಸ್ ದಾಟುವ ಸಾಮರ್ಥ್ಯ ಹೊಂದಿದೆ.
|
ಇದು ಮೋದಿ ಸರ್ಕಾರದ್ದೇ ಕೃತ್ಯ ಎಂದ ಕಾಂಗ್ರೆಸ್
ಇನ್ನೊಂದೆಡೆ, "ಇದು ಮೋದಿ ಸರ್ಕಾರದ್ದೇ ಕೃತ್ಯ, ಸುಪ್ರೀಂಕೋರ್ಟ್ ತಕ್ಷಣವೇ ಮೋದಿ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಬೇಕು" ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಆಗ್ರಹಿಸಿದ್ದಾರೆ. ಆದರೆ ಇದನ್ನು ಕೇಂದ್ರ ಸರ್ಕಾರ ಅಲ್ಲಗೆಳೆದಿದೆ. ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಪ್ರತಿಕ್ರಿಯಿಸಿ, "ಪ್ರತಿ ನಾಗರಿಕರ ವೈಯಕ್ತಿಕ ಸುರಕ್ಷತೆ, ಸೈಬರ್ ಭದ್ರತೆ, ಮಾಹಿತಿ ಗೌಪ್ಯವನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಜರುಗಿಸಲಾಗಿದೆ" ಎಂದು ಸರಣಿ ಟ್ವೀಟ್ ಮಾಡಿದ್ದಾರೆ.