2 ಕೋಟಿ ಯುವಕರಿಗೆ ಕೌಶಲ್ಯ ತರಬೇತಿ ಗುರಿ: ಜಗದೀಶ್ ಶೆಟ್ಟರ್
ಬೆಂಗಳೂರು, ನವೆಂಬರ್ 26: ಏರೋಸ್ಪೇಸ್, ಕೃಷಿವ್ಯಾಪಾರ, ಬಯೋಟೆಕ್, ಮೂಲಸೌಕರ್ಯ, ಮಾಹಿತಿ ತಂತ್ರಜ್ಞಾನ ಮತ್ತು ಸ್ಟಾರ್ಟಪ್ ಕಂಪನಿಗಳ ಉನ್ನತಿಗೆ ಪೂರಕವಾದ ನೀತಿಗಳನ್ನು ಪ್ರಕಟಿಸುವ ಮೂಲಕ ಕೈಗಾರಿಕೀಕರಣದ ಪ್ರತಿಯಲ್ಲಿ ಸೇವಾ ವಲಯ ಪ್ರಮುಖ ಪಾತ್ರವಹಿಸಿದ್ದು, ಈ ನಿಟ್ಟಿನಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವ ರಾಜ್ಯವಾಗಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರಾದ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಆರಂಭವಾದ 3 ದಿನಗಳ ಗ್ಲೋಬಲ್ ಎಕ್ಸಿಬಿಷನ್ ಆನ್ ಸರ್ವೀಸಸ್(ಜಿಐಎಸ್) ನ ಸಮಾವೇಶದಲ್ಲಿ ಮಾತನಾಡಿದ ಅವರು, "ಹಲವಾರು ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಕರ್ನಾಟಕ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ನಾಯಕನ ಸ್ಥಾನದಲ್ಲಿ ನಿಂತಿದೆ'' ಎಂದರು.
ಆರ್ಥಿಕ ಹಿಂಜರಿತದ ಹೊಡೆತಕ್ಕೂ ಜಗ್ಗದೆ ಲಾಭದತ್ತ ನುಗ್ಗಿದೆ ಧಾರವಾಡದ ಈ ಕೈಗಾರಿಕೆ
''ಬೆಂಗಳೂರು ವೈದ್ಯಕೀಯ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುವ ನಗರವಾಗಿದೆ. ಇಲ್ಲಿ ಹಲವಾರು ಸುಸಜ್ಜಿತವಾದ ಖಾಸಗಿ ಆಸ್ಪತ್ರೆಗಳು ಮತ್ತು ನುರಿತ ವೈದ್ಯರ ತಂಡಗಳಿವೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಗಳಿಸಿವೆ. ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯು ಅಭೂತಪೂರ್ವ ಯಶಸ್ವಿಯಾಗಿದ್ದು, ಇದರಿಂದ ಅಸಂಖ್ಯಾತ ಜನರಿಗೆ ಪ್ರಯೋಜನವಾಗುತ್ತಿದೆ'' ಎಂದು ಹೇಳಿದರು.
ದೇಶದ ಅತಿದೊಡ್ಡ ಅಂತಾರಾಷ್ಟ್ರೀಯ ಪ್ರದರ್ಶನಗಳಲ್ಲಿ ಒಂದಾಗಿರುವ ಈ ಸೇವಾ ಕ್ಷೇತ್ರದ ಪ್ರದರ್ಶನದ ಒಟ್ಟಾರೆ ಕಾರ್ಯಕ್ರಮವನ್ನು 19,000 ಚದರಡಿಗಳ ವಿಸ್ತೀರ್ಣದಲ್ಲಿ ಆಯೋಜಿಸಲಾಗಿದೆ. ಪ್ರದರ್ಶನದ ವಿಸ್ತೀರ್ಣ 4600 ಚದರಡಿಯಲ್ಲಿ ರೂಪಿಸಲಾಗಿದೆ. 211 ಪ್ರದರ್ಶಕರು ಇಲ್ಲಿದ್ದಾರೆ. ಎಲೆಕ್ಟ್ರಾನಿಕ್ಸ್, ಐಟಿ, ರೈಲ್ವೇಸ್, ಎಂಎಸ್ಎಂಇ, ಲಾಜಿಸ್ಟಿಕ್, ಅಂಚೆ ಸೇರಿದಂತೆ ಸರ್ಕಾರದ ಹಲವಾರು ಸಂಸ್ಥೆಗಳು ಈ ಪ್ರದರ್ಶನದಲ್ಲಿ ಪಾಲ್ಗೊಂಡಿವೆ.
ಯುವಕರಿಗೆ ಕೌಶಲ್ಯ ತರಬೇತಿ
ಎನ್ಎಲ್ಎಸ್ಐಯು, ಐಐಎಸ್ಸಿ, ಐಐಎಂ ಮತ್ತು ಐಐಟಿಯಂತಹ ಖ್ಯಾತನಾಮ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಕರ್ನಾಟಕ ಅಸಂಖ್ಯಾತ ಪ್ರತಿಭಾನ್ವಿತ ಮಾನಶಕ್ತಿಯನ್ನು ಸೃಷ್ಟಿ ಮಾಡುತ್ತಿದೆ. ಶೇ.26 ಕ್ಕಿಂತಲೂ ಅಧಿಕ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಭಾರತಕ್ಕೆ ಬರುತ್ತಿದ್ದು, ವಿಶೇಷವಾಗಿ ಕರ್ನಾಟಕವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ ಅವರು, 2017-2030 ರ ಅವಧಿಯಲ್ಲಿ ಕರ್ನಾಟಕ 2 ಕೋಟಿಗೂ ಅಧಿಕ ಯುವಕರನ್ನು ಕೌಶಲ್ಯವಂತರನ್ನಾಗಿ ರೂಪಿಸುವ ಗುರಿಯನ್ನು ಹೊಂದಿದೆ. ಇದಕ್ಕೆ ಪೂರಕವಾದ ಮೂಲಸೌಕರ್ಯಗಳನ್ನು ಸರ್ಕಾರ ಒದಗಿಸುತ್ತಿದೆ. ಇಂದು 1700 ಕ್ಕೂ ಅಧಿಕ ಐಟಿಐಗಳು ಮತ್ತು 290 ಪಾಲಿಟೆಕ್ನಿಕ್ಗಳು ನಮ್ಮ ಯುವಕರಿಗೆ ಕೌಶಲ್ಯ ತರಬೇತಿಯನ್ನು ನೀಡುತ್ತಿವೆ ಎಂದು ತಿಳಿಸಿದರು.
ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರು ಮಾತನಾಡಿ, ಕರ್ನಾಟಕದಲ್ಲಿನ ಸೇವಾ ಕ್ಷೇತ್ರವು ಕರ್ನಾಟಕದ ಜಿಎಸ್ಡಿಪಿಗೆ ಶೇ.68 ಕ್ಕಿಂತಲೂ ಅಧಿಕ ಕೊಡುಗೆ ನೀಡುತ್ತಿದೆ. ಕರ್ನಾಟಕದ ಆರ್ಥಿಕ ಸಮೀಕ್ಷೆ ಪ್ರಕಾರ 2018-19 ನೇ ಹಣಕಾಸು ಸಾಲಿನಲ್ಲಿ ಸೇವಾ ಕ್ಷೇತ್ರವು ಶೇ.12.3 ರಷ್ಟು ಪ್ರಗತಿ ಕಾಣಲಿದೆ'' ಎಂದು ಹೇಳಿದರು.
ಕರ್ನಾಟಕ ನ್ಯಾಷನಲ್ ಲಾ ಸ್ಕೂಲ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸೇರಿದಂತೆ ಮೊದಲಾದ ದೇಶದ ಪ್ರೀಮಿಯರ್ ಶೈಕ್ಷಣಿಕ ಸಂಸ್ಥೆಗಳ ತವರಾಗಿದೆ. 1909 ರಲ್ಲಿ ಆರಂಭವಾದ ಭಾರತೀಯ ವಿಜ್ಞಾನ ಸಂಸ್ಥೆ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಖ್ಯಾತಿ ಹೊಂದಿದೆ ಎಂದು ವಿಜಯಭಾಸ್ಕರ್ ತಿಳಿಸಿದರು.
ರಾಜ್ಯದ ಸೇವಾ ವಲಯದ ಅಭಿವೃದ್ಧಿಗೆ ಕಾರ್ಯತಂತ್ರ:ಶೆಟ್ಟರ್
ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಅವರು ಮಾತನಾಡಿ, ''ರಾಜ್ಯದ ಒಟ್ಟು ದೇಸೀಯ ಉತ್ಪನ್ನಕ್ಕೆ ಶೇ.68 ರಷ್ಟು ಕೊಡುಗೆ ನೀಡುತ್ತಿರುವ ಸೇವಾ ವಲಯವು ಭಾರತದ ಸೇವಾ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇಲ್ಲಿ ಅತ್ಯುತ್ಸಾಹಿ ಮಾನವ ಸಂಪನ್ಮೂಲವಿದ್ದು, ಈ ಮೂಲಕ ದೇಶದಲ್ಲಿ ಕಾರ್ಮಿಕ ಉತ್ಪಾದಕತೆಯಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ'' ಎಂದು ಹೇಳಿದರು.
ಸೇವಾ ಕ್ಷೇತ್ರದ ಪ್ರದರ್ಶನ 2019
ಆಯುಷ್ ಪ್ರವಾಸೋದ್ಯಮ, ನಾಗರಿಕ ವಿಮಾನಯಾನ, ವಸತಿ ಮತ್ತು ನಗರ ವ್ಯವಹಾರಗಳು, ದೂರಸಂಪರ್ಕ ಇಲಾಖೆಗಳೂ ಸಹ ಇದರಲ್ಲಿ ಭಾಗಿಯಾಗಿವೆ.
ಪ್ರಮುಖವಾಗಿ ಕರ್ನಾಟಕ, ಉತ್ತರಖಂಡ, ಉತ್ತರ ಪ್ರದೇಶ, ಮಹಾರಾಷ್ಟ್ರ, ಕೇರಳ, ತೆಲಂಗಾಣ, ಗುಜರಾತ್ ಸೇರಿದಂತೆ ಮತ್ತಿತರೆ ರಾಜ್ಯಗಳು ತಮ್ಮ ಸೇವಾ ವಲಯಕ್ಕೆ ಸಂಬಂಧಿಸಿದ ಪ್ರಾತ್ಯಕ್ಷಿಕೆಗಳನ್ನು ಇಲ್ಲಿ ನೀಡುತ್ತಿವೆ.
ಇನ್ನು ವಿದೇಶದ 300 ಕ್ಕೂ ಹೆಚ್ಚು ಖರೀದಿದಾರರು, 55 ದೇಶಗಳ ಪ್ರತಿನಿಧಿಗಳು, 80 ಉಪನ್ಯಾಸಕರು ಸೇರಿದಂತೆ ದೇಶ ವಿದೇಶಗಳ ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ.