ಐದು ವರ್ಷಗಳಲ್ಲಿ 300 ಶತಕೋಟಿ ಡಾಲರ್ ಡಿಜಿಟಲ್ ಉದ್ಯಮದ ಆರ್ಥಿಕತೆ!
ಬೆಂಗಳೂರು, ಆ. 21: ಭಾರತದ ಡಿಜಿಟಲ್ ಉದ್ಯಮದ ವಹಿವಾಟು 2025ರ ವೇಳೆಗೆ 1 ಟ್ರಿಲಿಯನ್ ಆಗಬೇಕೆಂಬುದು ಪ್ರಧಾನಿ ನರೇಂದ್ರ ಮೋದಿ ಗುರಿಯಾಗಿದ್ದು, ಆ ವೇಳೆಗೆ ರಾಜ್ಯದ ಡಿಜಿಟಲ್ ಉದ್ಯಮದ ಪಾಲು 300 ರಿಂದ 350 ಶತಕೋಟಿ ಡಾಲರ್ ತಲುಪಬೇಕೆಂಬ ಗುರಿ ಹಾಕಿಕೊಳ್ಳಲಾಗಿದೆ ಎಂದು ಐಟಿ, ಬಿಟಿ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ಹೇಳಿದ್ದಾರೆ.
ಮೈಸೂರಿನ ಹೆಬ್ಬಾಳ ಕೈಗಾರಿಕ ಪ್ರದೇಶದ ಸಿಲ್ವರ್ ಸ್ಪಿರಿಟ್ ಟೆಕ್ನಾಲಜಿ ಪಾರ್ಕ್ ನಲ್ಲಿ ಸ್ಥಾಪಿಸಿರುವ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಕಚೇರಿಯಲ್ಲಿ ಮಾತನಾಡಿದ್ದಾರೆ. "ಆರ್ಥಿಕತೆಗೆ ಯಾವುದೇ ಸವಾಲಿದ್ದರೂ ನಿಗದಿತ ಗುರಿಯನ್ನು ತಲುಪಲು ಸರಕಾರ ಎಲ್ಲ ಕ್ರಮಗಳನ್ನೂ ಕೈಗೊಂಡಿದೆ" ಎಂದು ಹೇಳಿದ್ದಾರೆ.
ಐಟಿ ರಫ್ತಿನಲ್ಲಿ ಕರ್ನಾಟಕ ನಂಬರ್ 1
ಸದ್ಯಕ್ಕೆ ರಾಜ್ಯವು ವಾರ್ಷಿಕ 54 ಶತಕೋಟಿ ಡಾಲರ್ ಮೌಲ್ಯದ ಐಟಿ ರಫ್ತು ವಹಿವಾಟು ನಡೆಸುತ್ತಿದೆ. ಇದು ದೇಶದಲ್ಲೇ ಅತಿ ಹೆಚ್ಚು. ಇದರ ಪ್ರಮಾಣವನ್ನೂ ಇನ್ನು ಕೆಲವೇ ವರ್ಷಗಳಲ್ಲಿ 150 ಶತ ಕೋಟಿ ಡಾಲರ್ಗೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ. ಅದಲ್ಲದೆ, ಒಟ್ಟಾರೆ ಜಿಎಸ್ಡಿಪಿಗೆ ಐಟಿ ವಲಯದ ಪಾಲನ್ನು ಶೇಕಡಾ 30ಕ್ಕೆ ಏರಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ.
ಜೊತೆಗೆ ಬಿಯಾಂಡ್ ಬೆಂಗಳೂರು ಪರಿಕಲ್ಪನೆಯಡಿ 10 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವ ಗುರಿಯನ್ನು ರಾಜ್ಯ ಐಟಿ ಇಲಾಖೆ ಹೊಂದಿದ್ದು, ರಾಜ್ಯದ ಎಲ್ಲ ಪ್ರದೇಶಗಳಲ್ಲೂ ಹೊಸ ಉದ್ಯಮಗಳ ಸ್ಥಾಪನೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಕೆಲಸವನ್ನು ಸರಕಾರ ಮಾಡುತ್ತಿದೆ.
ಬಿಯಾಂಡ್ ಬೆಂಗಳೂರು
"ಈ ಗುರಿಗಳನ್ನು ಸಾಧಿಸಿಲು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್, ಬಿಯಾಂಡ್ ಬೆಂಗಳೂರು, ದೇಶದಲ್ಲೇ ಅತ್ಯುತ್ತಮವಾದ ನವೋದ್ಯಮ ನೀತಿ, ಎಂಜಿಯರಿಂಗ್ ಸಂಶೋಧನಾ ಮತ್ತು ಅಭಿವೃದ್ಧಿ ನೀತಿ ಇತ್ಯಾದಿಗಳಿಂದ ಸಾಧ್ಯವಾಗುತ್ತಿದೆ. ಇದಕ್ಕೆ ಪೂರಕವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೂಡ ದೇಶದಲ್ಲೇ ಮೊತ್ತ ಮೊದಲಿಗೆ ರಾಜ್ಯದಲ್ಲೇ ಜಾರಿ ಮಾಡಲಾಗುತ್ತಿದೆ" ಎಂದು ಸಚಿವ ಡಾ. ಅಶ್ವಥ್ ನಾರಾಯಣ ಹೇಳಿದ್ದಾರೆ.
ಇದಲ್ಲದೆ, ರಾಜ್ಯದಲ್ಲಿ ಕೈಗಾರಿಕೆಗಳಿಗೆ ಅಗತ್ಯವಾದ ಅತ್ಯುತ್ತಮ ಕುಶಲ ಮಾನವ ಸಂಪನ್ಮೂಲವನ್ನು ಒದಗಿಸುವದಕ್ಕೆ ಕ್ರಮ ವಹಿಸಲಾಗಿದ್ದು, ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯದ ನೂರೈವತ್ತು ಸರಕಾರಿ ಐಟಿಐಗಳನ್ನು ಅತ್ಯಾಧುನಿಕವಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿ
ಡಿಜಿಟಲ್ ಎಕಾನಮಿ ಮಿಷನ್ ಮೂಲಕ ಬೆಂಗಳೂರು ಮಾತ್ರವಲ್ಲ ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗದಂಥ ಎರಡನೇ ಹಂತದ ಹಾಗೂ ಆನಂತರದ ನಗರಗಳಲ್ಲೂ ಹೆಚ್ಚು ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ ಎಂದ ಐಟಿ, ಬಿಟಿ ಇಲಾಖೆ ಸಚಿವರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಮೈಸೂರು ಮುಂಚೂಣಿ ನಗರವಾಗಿದೆ, ಇತರೆ ಐಟಿ ಕ್ಷಸ್ಟರ್ಗಳಿಗೆ ಮೈಸೂರು ಮಾದರಿಯಾಗಲಿದೆ ಮತ್ರವಲ್ಲದೆ ಮುಂದಿನ ಕೆಲ ದಿನಗಳಲ್ಲಿ ಕರ್ನಾಟಕದಲ್ಲಿ 2 ಸಾವಿರಕ್ಕೂ ಹೆಚ್ಚು ಹೊಸ ಪದವೀಧರರು ಉದ್ಯೋಗಕ್ಕೆ ಸೇರಲು ಸಿದ್ಧರಾಗಲಿದ್ದಾರೆ. ಅವರೆಲ್ಲರಿಗೂ ಅವಕಾಶ ಸಿಗಲಿದೆ ಎಂದರು.
ಡಿಜಿಟಲ್ ಉದ್ಯೋಗಾವಕಾಶಗಳೇ ಹೆಚ್ಚು!
"ಮುಂದೆ ಡಿಜಿಟಲ್ ಉದ್ಯೋಗಾವಕಾಶಗಳೇ ಹೆಚ್ಚುತ್ತವೆ. 2030ರ ಹೊತ್ತಿಗೆ ರಾಜ್ಯದ ಡಿಜಿಟಲ್ ಆರ್ಥಿಕತೆಗೆ ಮೈಸೂರು, ಹುಬ್ಬಳ್ಳಿ, ಮಂಗಳೂರು ಕ್ಲಸ್ಟರ್ಗಳಿಂದ ಶೇಕಡಾ 5 ರಷ್ಟು ಕೊಡುಗೆ ದೊರೆಯುವ ಸಾಧ್ಯತೆ ಇದೆ" ಎಂದು ಡಾ. ಅಶ್ವಥ್ ನಾರಾಯಣ ಅಭಿಪ್ರಾಯ ಪಟ್ಟಿದ್ದಾರೆ.
ಜೊತೆಗೆವ ಕೆರಿಯರ್ ಹಬ್ನಿಂದ ಪ್ರತೀ ವರ್ಷ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ. ಸದ್ಯಕ್ಕೆ ದೇಶದ ವಿವಿಧ ಕ್ಷೇತ್ರಗಳಿಗೆ ನುರಿತ, ನೈಪುಣ್ಯತೆಯುಳ್ಳ ಮಾನವ ಸಂಪನ್ಮೂಲದ ಅಗತ್ಯವಿದೆ. ಆ ದಿಕ್ಕಿನಲ್ಲಿ ಕೆರಿಯರ್ ಹಬ್ ಸ್ಥಾಪನೆ ದೃಢವಾದ ಹೆಜ್ಜೆಯಾಗಿದೆ. ಮುಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನೆ, ಕಲಿಕೆ ಜತೆಗೆ ಆವಿಷ್ಕಾರಕ್ಕೂ ಹೆಚ್ಚು ಮಹತ್ವ ಇರುತ್ತದೆ ಎಂದರು.