ಕರ್ನಾಟಕ ಸರ್ಕಾರದಿಂದ ಸಾಲದ ಮೇಳ: 3 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ
ಬೆಂಗಳೂರು, ಸೆಪ್ಟೆಂಬರ್ 08: ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಇವರಿಗೆ ಅನುಕೂಲವಾಗಲೆಂದು ಸೆಪ್ಟೆಂಬರ್ 16 ರಂದು ರಾಜ್ಯ ಸರ್ಕಾರವು ವಿವಿಧ ಸ್ಥಳಗಳಲ್ಲಿ 'ಸಾಲ ಮೇಳ' ವನ್ನು ಆಯೋಜಿಸಲಿದೆ. ಈ ಉಪಕ್ರಮವು ಉದ್ಯೋಗ ಕಳೆದುಕೊಂಡ ಸಾವಿರಾರು ಜನರಿಗೆ ಸಹಾಯ ಮಾಡುತ್ತದೆ
Recommended Video
ಸಾಲ ಮೇಳದ ಪ್ರಮುಖ ಆಕರ್ಷಕವಾಗಿ 3 ಲಕ್ಷ ರೂಪಾಯಿವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲು ಸರ್ಕಾರ ಮುಂದಾಗಿದೆ. 3 ಲಕ್ಷದಿಂದ 10 ಲಕ್ಷ ರೂ.ವರೆಗಿನ ಸಾಲಗಳಿಗೆ ಶೇ 3 ರಷ್ಟು ಬಡ್ಡಿ ವಿಧಿಸಲಾಗುವುದು.
ರೈತರು, ಸ್ಟಾರ್ಟ್ ಅಪ್ಗಳಿಗೆ ಆರ್ಬಿಐನಿಂದ ಸುಲಭ ಸಾಲದ ಟಾನಿಕ್
ಈ ಹಣವನ್ನು ರಾಜ್ಯ ಸರ್ಕಾರದ ಜೊತೆಗೆ ಆತ್ಮನಿರ್ಭಾರ ಭಾರತ್ ನಿಧಿಯಿಂದ ಬಿಡುಗಡೆ ಮಾಡಲಾಗುವುದು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕಾರ್ಯಕ್ರಮವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಅದಕ್ಕೂ ಮೊದಲು ಸಚಿವ ಎಸ್ ಟಿ ಸೋಮಶೇಖರ್ ಪತ್ರಿಕಾಗೋಷ್ಟಿ ನಡೆಸಲಿದ್ದಾರೆ.
ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್ ಅಂತ್ಯದಲ್ಲಿ ಲಾಕ್ಡೌನ್ ಘೋಷಣೆಯಾದಂದಿನಿಂದಲೂ, ಬೀದಿ ಬದಿ ವ್ಯಾಪಾರಿಗಳು, ಕಾರ್ಮಿಕರು, ಮಹಿಳಾ ಸಹಾಯ ಗುಂಪುಗಳು, ಕೃಷಿ ಕಾರ್ಮಿಕರು, ಡೈರಿ ಮತ್ತು ರೇಷ್ಮೆ ರೈತರು ಮತ್ತು ಇನ್ನೂ ಅನೇಕರು ವ್ಯಾಪಾರವೂ ಇಲ್ಲದೆ ಭಾರೀ ಸಮಸ್ಯೆಯನ್ನು ಎದುರಿಸಿದ್ದಾರೆ. ಹೀಗಾಗಿ ಅವರಿಗೆ ಸಹಾಯವಾಗಲೆಂದು ಸಹಕಾರಿ ಬ್ಯಾಂಕುಗಳ ಮೂಲಕ ಸಾಲ ಕೊಡುವ ಯೋಜನೆ ಇದಾಗಿದೆ.
ಸಾಲ ಮೇಳವನ್ನು ಬೆಂಗಳೂರು, ಮೈಸೂರು, ಕಲಬುರಗಿ ಮತ್ತು ಬೆಳಗಾವಿ ಎಂಬ ನಾಲ್ಕು ಪ್ರದೇಶಗಳಲ್ಲಿ ಆಯೋಜಿಸಲಾಗುವುದು. ವಿವಿಧ ಸಹಕಾರಿ ಬ್ಯಾಂಕುಗಳು ಸಾಲದ ಮೊತ್ತವನ್ನು ವಿತರಿಸುವ ನಿರೀಕ್ಷೆಯಿದೆ.
ಈ ಉಪಕ್ರಮದ ಹಿಂದೆ ಸಹಕಾರಿ ಸಚಿವ ಎಸ್ ಟಿ ಸೋಮಶೇಖರ್ ಇದ್ದಾರೆ ಎನ್ನಲಾಗಿದೆ. ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಸಮಯದಲ್ಲಿ, ಬೀದಿ ಬದಿ ವ್ಯಾಪಾರಿಗಳಿಗೆ ಇದೇ ರೀತಿಯ ಯೋಜನೆಯನ್ನು ಪ್ರಾರಂಭಿಸಲಾಯಿತು, ಅಲ್ಲಿ ಶೂನ್ಯ ಬಡ್ಡಿಯೊಂದಿಗೆ ಸಾಲ ನೀಡಲಾಯಿತು. ಆದಾಗ್ಯೂ, ಈ ವರ್ಷದ ಬಜೆಟ್ನಲ್ಲಿ ಯಡಿಯೂರಪ್ಪ ಅವರು ಹಣವನ್ನು ಮಂಜೂರು ಮಾಡಿಲ್ಲ. ಈಗ, ಹೊಸ ಉಪಕ್ರಮದ ಅಡಿಯಲ್ಲಿ, ಬೀದಿ ವ್ಯಾಪಾರಿಗಳಿಗೆ ಸಹ ಸಾಲ ನೀಡಲಾಗುವುದು.