ಕೆಐಎಡಿಬಿ ಭೂ ದರ ನಿಗದಿಗೆ ಹೊಸ ನೀತಿ ಜಾರಿ: ಜಗದೀಶ ಶೆಟ್ಟರ್
ಬೆಂಗಳೂರು ಜೂನ್ 26: ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ವತಿಯಿಂದ ಹಂಚಿಕೆ ಮಾಡಲಾಗುವ ಭೂಮಿಯ ದರದ ಬಗ್ಗೆ ಹಲವಾರು ಗೊಂದಲಗಳಿವೆ. ಈ ನಿಟ್ಟಿನಲ್ಲಿ ಒಂದು ವೈಜ್ಞಾನಿಕ ವಾದ ನೀತಿಯನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ ಶೆಟ್ಟರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
Recommended Video
ಈಗಾಗಲೇ ಭೂ ಹಂಚಿಕೆ ಮಾಡಿರುವ ಹಳೆಯ ಪ್ರಕರಣಗಳಿಗೆ ಅನ್ವಯವಾಗುವಂತಹ ಹಾಗೂ ಮುಂದಿನ ಹೊಸ ಹಂಚಿಕೆಗೂ ಅನ್ವಯವಾಗುವಂತಹ ಪ್ರತ್ಯೇಕ ನೀತಿಯನ್ನು ತರುವ ಅಗತ್ಯವಿದೆ ಎಂದು ಹೇಳಿದರು.
ಕರ್ನಾಟಕ ಕೈಗಾರಿಕಾ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ
ಕರ್ನಾಟಕ ಉದ್ಯೋಗ ಮಿತ್ರ ಸಭಾಂಗಣದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ ಶೆಟ್ಟರ್ ಜೊತೆಗೆ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಕೈಗಾರಿಕಾ ಇಲಾಖೆ ಆಯುಕ್ತೆ ಶ್ರೀಮತಿ ಗುಂಜನ್ ಕೃಷ್ಣ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ ಹೆಚ್ ಶಿವಶಂಕರ್ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.
ಭೂ ಮಾಲೀಕರುಗಳಿಗೆ ಪರಿಹಾರ ನೀಡುವ ಕಾರ್ಯ
ಮಂಡಳಿಯ ವತಿಯಿಂದ ಭೂಸ್ವಾಧೀನ ಪಡಿಸಿಕೊಂಡಿರುವ ಭೂ ಮಾಲೀಕರುಗಳಿಗೆ ಪರಿಹಾರ ನೀಡುವ ಕಾರ್ಯವನ್ನು ಚುರುಕುಗೊಳಿಸುವಂತೆ ಸೂಚನೆ ನೀಡಿದರು. ಭೂ ಮಾಲೀಕರುಗಳಿಗೆ ಪರಿಹಾರ ನೀಡುವಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ. ಕೆಲವೊಂದು ಪ್ರಕರಣಗಳಲ್ಲಿ ಹಲವಾರು ವರ್ಷಗಳ ಕಾಲ ಪರಿಹಾರ ಪಡೆಯಲು ಭೂ ಮಾಲೀಕರು ಕಚೇರಿಗಳಿಗೆ ಭೇಟಿ ನೀಡಬೇಕಾಗಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಒಂದು ಕಾಲಮಿತಿಯೊಳಗೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದು ಹಾಗೂ ಪರಿಹಾರ ನೀಡುವಂತಹ ವ್ಯವಸ್ಥೆಯ ಮಾರ್ಗಸೂಚಿಗಳನ್ನು ರೂಪಿಸುವಂತೆ ಸೂಚನೆ ನೀಡಿದರು.
ಭೂ ದರದ ಬಗ್ಗೆ ಹಲವಾರು ಗೊಂದಲಗಳಿವೆ
ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ವತಿಯಿಂದ ಭೂ ದರದ ಬಗ್ಗೆ ಹಲವಾರು ಗೊಂದಲಗಳಿವೆ. ಹಲವಾರು ಕೈಗಾರಿಕೋದ್ಯಮಿಗಳು ಹಾಗೂ ಕೈಗಾರಿಕಾ ಸಂಘ ಸಂಸ್ಥೆಗಳು ಈ ಬಗ್ಗೆ ದೂರುಗಳನ್ನು ನೀಡಿದ್ದಾರೆ. ಇದುವರೆಗೂ ಭೂಮಿಯನ್ನು ಹಂಚಿಕೆ ಮಾಡುವ ಸಮಯದಲ್ಲಿ ಒಂದು ದರ ಹಾಗೂ ಸೇಲ್ ಡೀಡ್ ನೀಡುವ ಸಮಯದಲ್ಲಿ ಒಂದು ದರದ ನಿಗದಿ ಮಾಡಲಾಗುತ್ತಿದೆ. ಹಲವಾರು ಸಂಧರ್ಭಗಳಲ್ಲಿ ಇದು ಪ್ರಾಥಮಿಕ ಹಂತದ ದರಕ್ಕಿಂತಾ ಶೇಕಡಾ 50 ಕ್ಕೂ ಹೆಚ್ಚಾಗಿರುತ್ತದೆ. ಈ ನಿಯಮಗಳಲ್ಲಿ ಏಕರೂಪತೆ ತರುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕಾಗಿದೆ. ಈ ಹಿನ್ನಲೆಯಲ್ಲಿ ಈ ಹಿಂದೆ ಭೂ ಹಂಚಿಕೆ ಮಾಡಿರುವ ಪ್ರಕರಣಗಳನ್ನು ವಿಲೇವಾರಿ ಮಾಡಲು ಹಾಗೂ ಹೊಸದಾಗಿ ಭೂ ಹಂಚಿಕೆ ಮಾಡಲು ಹೊಸ ನೀತಿಗಳ ಅಗತ್ಯವಿದೆ. ಹೊಸ ನೀತಿಯನ್ನು ತಯಾರು ಮಾಡಲು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಭೂಮಿ ಲೆಕ್ಕ ಪರಿಶೋಧನೆ (ಲ್ಯಾಂಡ್ ಆಡಿಟ್)
ಭೂಮಿ ಲೆಕ್ಕ ಪರಿಶೋಧನೆ (ಲ್ಯಾಂಡ್ ಆಡಿಟ್): ರಾಜ್ಯದಲ್ಲಿ ಕೈಗಾರಿಕೆಗಳಿಗೆ ಉಪಯೋಗಿಸಿರುವ ಭೂಮಿಯ ಬಗ್ಗೆ ಒಂದು ಸರ್ವೆಯನ್ನು ನಡೆಸುವ ಅಗತ್ಯವಿದೆ. ರಾಜ್ಯದಲ್ಲಿರುವ ಒಟ್ಟು ಭೂಮಿಯ ಪ್ರಮಾಣ, ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ವತಿಯಿಂದ ಇದುವರೆಗೂ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯ ವಿವರ, ಅದರಲ್ಲಿ ಕೈಗಾರಿಕೆಗಳಿಗೆ ಎಷ್ಟು ಹಂಚಿಕೆ ಮಾಡಲಾಗಿದೆ ಎನ್ನುವ ವಿವರ, ಹಂಚಿಕೆ ಮಾಡಿರುವ ಭೂಮಿಯಲ್ಲಿ ಕೈಗಾರಿಕೆಗಳು ಪ್ರಾರಂಭವಾಗಿರುವ ಬಗ್ಗೆ ಹಾಗೂ ಆಗದೇ ಇರುವ ಬಗ್ಗೆ ಮಾಹಿತಿ, ಕೈಗಾರಿಕಾ ಭೂಪ್ರದೇಶಗಳಲ್ಲಿ ಭೂ ಹಂಚಿಕೆಯ ನಂತರ ಇನ್ನೂ ಕೈಗಾರಿಕೆಗಳ ಪ್ರಾರಂಭ ಮಾಡದೇ ಇರುವದಕ್ಕೆ ಕಾರಣ ಹಾಗೂ ಅದರ ಮೇಲೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ವಿಸ್ತ್ರತವಾದ ಅಧ್ಯಯನ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೈಗಾರಿಕಾ ಪ್ರದೇಶಗಳ ಬಗ್ಗೆ ಸರಿಯಾದ ಮಾಹಿತಿ
ಕೈಗಾರಿಕಾ ಪ್ರದೇಶಗಳ ಬಗ್ಗೆ ಸರಿಯಾದ ಮಾಹಿತಿ: ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ವತಿಯಿಂದ ರಾಜ್ಯದ ಹಲವೆಡೆ ಭೂಮಿಯ ಲಭ್ಯತೆ ಇದೆ. ಅಲ್ಲದೆ ಸಾಕಷ್ಟು ಪ್ರಮಾಣದಲ್ಲಿ ಇದರ ಅಭಿವೃದ್ದಿಯೂ ಅಗಿದೆ. ಆದರೆ, ಇದರ ಬಗ್ಗೆ ಕೈಗಾರಿಕೋದ್ಯಮಿಗಳಿಗೆ ಸರಿಯಾಗಿ ಇದನ್ನು ತೋರಿಸುವ ಕಾರ್ಯವನ್ನು ಮಾಡಲಾಗುತ್ತಿಲ್ಲ. ಈ ನಿಟ್ಟಿನಲ್ಲಿ ಕೈಗಾರಿಕಾ ಪ್ರದೇಶಗಳ ಬಗ್ಗೆ ಛಾಯಾಚಿತ್ರಗಳು, ವಿಡಿಯೋಗಳು, ಮುಖ್ಯ ರಸ್ತೆಯಿಂದ ಅಲ್ಲಿಗೆ ಇರುವ ಸಂಪರ್ಕ ಹೀಗೆ ಎಲ್ಲ ಅಂಶಗಳನ್ನು ಒಳಗೊಂಡ ಮಾಹಿತಿಯನ್ನು ವೆಬ್ ಸೈಟ್ ನಲ್ಲಿ ನಮೂದಿಸಿ ಎಂದು ಸೂಚನೆ ನೀಡಿದರು.
ಕೆಐಎಡಿಬಿ ಹೌಸಿಂಗ್ ಪ್ರಾಜೆಕ್ಟ್ಗಳು
ಕೆಐಎಡಿಬಿ ಹೌಸಿಂಗ್ ಪ್ರಾಜೆಕ್ಟ್ಗಳು: ಹಲವಾರು ಸಂಘ ಸಂಸ್ಥೆಗಳು ಈ ಪ್ರದೇಶದಲ್ಲಿ ವಸತಿಗಾಗಿ ಭೂಮಿಯನ್ನು ನೀಡುವಂತೆ ಅರ್ಜಿಯನ್ನು ಸಲ್ಲಿಸಿವೆ. ಆದರೆ, ಇದುವರೆಗೂ ಆ ಸಂಸ್ಥೆಗಳಿಗೆ ಸೈಟ್ಗಳ ಹಂಚಿಕೆ ಆಗಿರುವುದಿಲ್ಲ. ಈ ಬಗ್ಗೆ ಈಗಾಗಲೇ ಒಂದು ಸಮಿತಿಯ ರಚನೆಯಾಗಿದ್ದು, ಹಂಚಿಕೆಯ ಕ್ರಮಗಳನ್ನು ಚುರುಕುಗೊಳಿಸಿ ಎಂದು ಹೇಳಿದರು.
ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ವತಿಯಿಂದ ಭೂಸ್ವಾಧೀನ ಪ್ರಕ್ರಿಯೆ ನಂತರ ಆಯಾ ಪ್ರದೇಶಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಕೈಗಾರಿಕೋದ್ಯಮಿಗಳ ಆಸಕ್ತಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬೇಕು. ಕೈಗಾರಿಕೆಗಳ ಅಲ್ಲಿ ಸ್ಥಾಪನೆಗೆ ಆಸಕ್ತಿ ತೋರಿಸಿದ ನಂತರ ಅಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿ ಪಡಿಸಬೇಕು. ಕೈಗಾರಿಕೆಗಳ ಸ್ಥಾಪನೆಗೆ ಆಸಕ್ತಿ ಇಲ್ಲದ ಪಕ್ಷದಲ್ಲಿ ಅಂತಹ ಭೂಮಿಯನ್ನು ಸಾಕಷ್ಟು ಹಣ ವ್ಯಯ ಮಾಡಿ ಅಭಿವೃದ್ದಿಪಡಿಸುವುದು ಸರಿಯಲ್ಲ ಎಂದರು.