ಮೇಕ್ ದಿ ಫ್ಯೂಚರ್ ಲೈವ್ ಇಂಡಿಯಾಗೆ ಬಿಎಸ್ವೈ ಚಾಲನೆ
ಬೆಂಗಳೂರು,ನವೆಂಬರ್,21,2019: ಶೆಲ್ ಕಂಪನಿ ಆಯೋಜಿಸಿದ್ದ ಮೇಕ್ ದಿ ಫ್ಯೂಚರ್ ಲೈವ್ ಇಂಡಿಯಾಗೆ ಚಾಲನೆ ನೀಡಿದ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ''ಎಲ್ಲರೂ ಒಟ್ಟಾಗಿ ಕರ್ನಾಟಕ ಮತ್ತು ಭಾರತದ ಭವಿಷ್ಯವನ್ನು ಉಜ್ವಲವಾಗಿಸೋಣ'' ಎಂದು ಕರೆ ನೀಡಿದ್ದಾರೆ.
ಬೆಂಗಳೂರಿನ ಶೆಲ್ ಟೆಕ್ನಾಲಜಿ ಸೆಂಟರ್ನಲ್ಲಿ ಗುರುವಾರ ಶೆಲ್ ಕಂಪನಿ ಆಯೋಜಿಸಿದ್ದ ಎರಡನೇ ಸರಣಿಯ ಮೇಕ್ ದಿ ಫ್ಯೂಚರ್ ಲೈವ್ ಇಂಡಿಯಾ 2019 ಗೆ ಚಾಲನೆ ನೀಡಿ ಮಾತನಾಡಿದ ಅವರು,''ಈ ಕಾರ್ಯಕ್ರಮದ ಭಾಗವಾಗಿರುವುದಕ್ಕೆ ನನಗೆ ಸಂತಸವೆನಿಸುತ್ತಿದೆ. ಆವಿಷ್ಕಾರ ಮತ್ತು ಮೊಟ್ಟ ಮೊದಲ ಪರ್ಯಾಯ ಇಂಧನ ಪರಿಹಾರಗಳನ್ನು ಪ್ರದರ್ಶಿಸುವ ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ'' ಎಂದು ತಿಳಿಸಿದರು.
''ಸುಸ್ಥಿರವಾದ ಅಭಿವೃದ್ಧಿಗೆ ನಿಮ್ಮೆಲ್ಲರ ಬದ್ಧತೆ, ಪಾಲುದಾರಿಕೆ ಮತ್ತು ನಿರಂತರವಾದ ಸಹಕಾರಕ್ಕೆ ಧನ್ಯವಾದಗಳನ್ನು ಹೇಳುತ್ತಿದ್ದೇನೆ. ನಾವೆಲ್ಲಾ ಸೇರಿ ಕರ್ನಾಟಕ ಮತ್ತು ಇಡೀ ಭಾರತದ ಭವಿಷ್ಯವನ್ನು ಉಜ್ವಲವಾಗಿಸೋಣ'' ಎಂದು ಕರೆ ನೀಡಿದರು.
ಶೆಲ್ ಇಕೋ-ಮ್ಯಾರಥಾನ್: ಇಂಜಿನಿಯರಿಂಗ್ ವಿದ್ಯಾರ್ಥಿಗಳ ಆವಿಷ್ಕಾರಕ್ಕೆ ವೇದಿಕೆ
ಶೆಲ್ ಇಕೋ-ಮ್ಯಾರಥಾನ್-2019 ರಲ್ಲಿ ಭವಿಷ್ಯಕ್ಕೆ ಸಿದ್ಧವಾಗಿರುವ ಸಾರಿಗೆ ಪರಿಹಾರಗಳ ಪ್ರದರ್ಶನಕ್ಕೆ, ಉತ್ಸಾಹಿ, ಯುವ ಇಂಜಿನಿಯರ್ಸ್ ಗಳ ಹೊಸ ಆಲೋಚನೆಗೆ ವೇದಿಕೆ ಒದಗಿಸಲಿದೆ
ಹ್ಯಾರಿ ಬ್ರೆಕೆಲ್ಮ್ಯಾನ್ಸ್ ಮಾತನಾಡಿ
ರಾಯಲ್ ಡಚ್ ಶೆಲ್ನ ಪ್ರಾಜೆಕ್ಟ್ಸ್ & ಟೆಕ್ನಾಲಜಿ ಡೈರೆಕ್ಟರ್ ಹ್ಯಾರಿ ಬ್ರೆಕೆಲ್ಮ್ಯಾನ್ಸ್ ಮಾತನಾಡಿ, ''ನಮ್ಮ ಮೂರು ಜಾಗತಿಕ ತಂತ್ರಜ್ಞಾನ ಹಬ್ಗಳ ಕೇಂದ್ರ ಸ್ಥಾನವಾಗಿದ್ದು, ಇಲ್ಲಿ ಆವಿಷ್ಕಾರಗಳಿಗೆ ಆದ್ಯತೆ ನೀಡಲಾಗುತ್ತಿದೆ. ಮೇಕ್ ದಿ ಫ್ಯೂಚರ್ ಲೈವ್ ಈ ನಿಟ್ಟಿನಲ್ಲಿ ಒಂದು ಉತ್ತಮ ಉಪಕ್ರಮವಾಗಿದೆ. ಆವಿಷ್ಕಾರ, ಪ್ರೇರಣೆ, ಬದ್ಧತೆ ಮತ್ತು ನಿರ್ಧಾರಿತ ವಿಚಾರಗಳಲ್ಲಿ ಇಲ್ಲಿ ಆವಿಷ್ಕಾರಗಳು ನಡೆಯುತ್ತವೆ. ನಾವು ಇದನ್ನು ಮಾಡಬಲ್ಲೆವು ಎಂಬ ತತ್ತ್ವದೊಂದಿಗೆ ನಾವು ಹೆಜ್ಜೆ ಇಟ್ಟಿದ್ದೇವೆ. ಭವಿಷ್ಯದಲ್ಲಿ ನಾವು ಎದುರಿಸುವ ಬಹುದೊಡ್ಡ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ನಾವು ಮಹತ್ವಪೂರ್ಣವಾದ ಹೆಜ್ಜೆಗಳನ್ನು ಇಡುತ್ತಿದ್ದೇವೆ. ಈ ಭವಿಷ್ಯ ರೂಪಿಸುವ ಕಾರ್ಯಕ್ರಮದಲ್ಲಿ ಕೆಲವು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ'' ಎಂದರು.
ಶೆಲ್ ಕಂಪನಿಗಳ ಅಧ್ಯಕ್ಷ ನಿತಿನ್ ಪ್ರಸಾದ್
ಭಾರತದಲ್ಲಿನ ಶೆಲ್ ಕಂಪನಿಗಳ ಅಧ್ಯಕ್ಷ ನಿತಿನ್ ಪ್ರಸಾದ್ ಅವರು ಮಾತನಾಡಿ, ''ಮೊಬಿಲಿಟಿ ಕ್ಷೇತ್ರದಲ್ಲಿ ಭಾರತ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ಈ ಬೆಳವಣಿಗೆ ಜತೆಯಲ್ಲೇ ಇರಬಹುದಾದ ಸಮಸ್ಯೆಗಲು ಮತ್ತು ಸವಾಲುಗಳಿಗೆ ಸೂಕ್ತವಾದ ರೀತಿಯ ಪರಿಹಾರಗಳನ್ನೂ ಕಂಡುಕೊಳ್ಳಬೇಕಾಗಿದೆ. ನಾವು ಪ್ರಗತಿ ಕಾಣಬೇಕೆಂಬುದರ ಬಗ್ಗೆ ಸದಾ ಜಾಗೃತರಾಗಿರಬೇಕು. ಈ ನಿಟ್ಟಿನಲ್ಲಿ ಸಾರಿಗೆ ಮತ್ತು ಸಾರಿಗೆಗೆ ಸಂಬಂಧಿಸಿದ ಪರಿಹಾರಗಳನ್ನು ನಾವು ಜನರಿಗೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ನಾವು ನಮ್ಮ ಶೆಲ್ ಕ್ಯಾಂಪಸ್ನಲ್ಲಿ ಶೆಲ್ ಇಕೋ-ಮ್ಯಾರಥಾನ್ ಅನ್ನು ಆಯೋಜಿಸಿದ್ದು. ಈ ಮೂಲಕ ಭವಿಷ್ಯದ ಸವಾಲುಗಳನ್ನು ಎದುರಿಸುವ ಕುರಿತಾದ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಿಯಾಶೀಲರಾಗಿದ್ದೇವೆ'' ಎಂದು ತಿಳಿಸಿದರು.
ಹಲವು ಸಂಸ್ಥೆಗಳ ಸಿಇಒಗಳ ವಿಚಾರ ಮಂಡನೆ
ಇದೇ ವೇಳೆ ಆಂಫೇರ್ ವೆಹಿಕಲ್ಸ್ನ ಸಂಸ್ಥಾಪಕ ಮತ್ತು ಸಿಇಒ ಹೇಮಲತಾ ಅಣ್ಣಾಮಲೈ, ಐಗ್ರೀನ್ ಎನರ್ಜಿಯ ಸಿಇಒ, ಸಹ ಸಂಸ್ಥಾಪಕ ಜಿತೇಂದ್ರ ಆಪ್ಟೆ, ಬುಕಿಂಗ್ಸ್ ಇಂಡಿಯಾದ ರಾಹುಲ್ ಟೊಂಗಿಯಾ, ಬೌನ್ಸ್ನ ಆಯುಶಿ ಜೈನ್ ಸೇರಿದಂತೆ ಮತ್ತಿತರೆ ಉದ್ಯಮಿಗಳು ಮಾತನಾಡಿ ಭವಿಷ್ಯದ ಭಾರತ ನಿರ್ಮಾಣಕ್ಕೆ ಪೂರಕವಾದ ಸಾರಿಗೆ ವ್ಯವಸ್ಥೆಗಳ ವಿಚಾರಗಳನ್ನು ಮಂಡಿಸಿದರು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.
ವಿದ್ಯಾರ್ಥಿಗಳ 24 ತಂಡಗಳು
ದೇಶದ ವಿವಿಧೆಡೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳ 24 ತಂಡಗಳು ಕಡಿಮೆ ಇಂಧನ ಮತ್ತು ವಿದ್ಯುತ್ ಬಳಸಿ ವೇಗವಾಗಿ ಮತ್ತು ಕಾರ್ಯದಕ್ಷತೆಯನ್ನು ಪ್ರದರ್ಶಿಸುವಂತಹ ಕಾರುಗಳ ಮಾದರಿಗಳನ್ನು ಪ್ರದರ್ಶಿಸಿದರು. ಇದರಲ್ಲಿ ವಿಜೇತವಾಗುವ ತಂಡಕ್ಕೆ 22 ಲಕ್ಷ ರೂಪಾಯಿಗಳ ಬಹುಮಾನ ನೀಡಲಾಗುತ್ತದೆ. ಈ ಮ್ಯಾರಥಾನ್ನಲ್ಲಿ ಕೇಂಬ್ರಿಡ್ಜ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ನ್ಯೂ ಹಾರಿಜಾನ್ ಕಾಲೇಜ್ ಆಫ್ ಇಂಜಿನಿಯರಿಂಗ್, ಆರ್ವಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿದಂತೆ ಒಟ್ಟು 39 ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲಿದ್ದಾರೆ.