ಕುಡುಕರಿಗೆ ಆಘಾತ, ನಿರೀಕ್ಷೆಯಂತೆ ಬೆಲೆ ಏರಿಕೆ ಮಾಡಿದ ಯಡಿಯೂರಪ್ಪ
ಬೆಂಗಳೂರು, ಮಾರ್ಚ್ 05: ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಸಕ್ತ ಸಾಲಿನ ಆಯವ್ಯಯ ಪತ್ರವನ್ನು ಮಾರ್ಚ್ 05ರಂದು ಮಂಡಿಸಿದ್ದಾರೆ. ಈ ಬಾರಿ ಬಜೆಟ್ ನಲ್ಲಿ ಮದ್ಯದ ಬೆಲೆ ಏರಿಕೆ ಮಾಡುವಂತೆ ಅಬಕಾರಿ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಯಂತೆ ಕುಡುಕರಿಗೆ ಆಘಾತ ಸುದ್ದಿ ಬಂದಿದೆ. ಆದರೆ, ಅಬಕಾರಿ ಇಲಾಖೆ ನಿರೀಕ್ಷಿಸಿದ್ದಷ್ಟು ಪ್ರಮಾಣದಲ್ಲಿ ಬೆಲೆ ಏರಿಕೆಯಾಗಿಲ್ಲ.
ಬಜೆಟ್ ನಲ್ಲಿ ಆದಾಯ ಸಂಗ್ರಹಕ್ಕಾಗಿ ಮದ್ಯದ ಬೆಲೆ ಏರಿಕೆ ಘೋಷಣೆಯಾಗಲಿದೆ. ಬಜೆಟ್ ನಲ್ಲಿ ತೆರಿಗೆ ಹೆಚ್ಚಳ ಘೋಷಣೆಯಾಗುತ್ತಿದ್ದಂತೆ ಏಪ್ರಿಲ್ 1 ರಿಂದ ನೂತನ ದರ ಪಟ್ಟಿ ಜಾರಿಗೆ ಬರಲಿದೆ. ಅಬಕಾರಿ ತೆರಿಗೆ ಶೇಕಡ 10 ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿತ್ತು. ಆದರೆ, ಯಡಿಯೂರಪ್ಪ ಅವರು ಶೇ 6ರಷ್ಟು ಹೆಚ್ಚಳ ಘೋಷಿಸಿದ್ದಾರೆ.
ಅಬಕಾರಿ ಇಲಾಖೆಗೆ ಮುಂದಿನ ಹಣಕಾಸು ವರ್ಷಕ್ಕೆ 25 ಸಾವಿರ ಕೋಟಿ ರೂಪಾಯಿ ಗುರಿ ನಿಗದಿಪಡಿಸಲು ಹಣಕಾಸು ಇಲಾಖೆ ಹೊಂದಿರುವ ಸಿಎಂ ಯಡಿಯೂರಪ್ಪ ತೀರ್ಮಾನ ಕೈಗೊಂಡಿದ್ದು, ಅಬಕಾರಿ ತೆರಿಗೆಯನ್ನು ಶೇಕಡ 6 ರಷ್ಟು ಹೆಚ್ಚಳ ಮಾಡಿದ್ದಾರೆ. ಆದಾಯ ತರುವ ಪ್ರಮುಖ ಇಲಾಖೆಗಳಲ್ಲಿ ಒಂದಾಗಿರುವ ಅಬಕಾರಿ ಇಲಾಖೆ ಆದಾಯ ಗುರಿ ಹೆಚ್ಚಿಸಲು ತೆರಿಗೆ ಹೆಚ್ಚಳ ಮಾಡಲಾಗಿದೆ.
ಅಬಕಾರಿ ಇಲಾಖೆ ಕಳೆದ ಬಾರಿ ಮದ್ಯದ ಬೆಲೆ ಹೆಚ್ಚಳ ಮಾಡದೆ ಹೆಚ್ಚಿನ ಲಾಭಗಳಿಸಿದೆ. ದರ ಹೆಚ್ಚಳ, ಅಕ್ರಮ ಮಾರಾಟ ತಡೆ, ಆನ್ಲೈನ್ ಮೂಲಕ ಲೈಸೆನ್ಸ್ ನವೀಕರಣ ಮುಂತಾದ ಕ್ರಮಗಳನ್ನು ಆದಾಯ ಹೆಚ್ಚಳಕ್ಕಾಗಿ ಇಲಾಖೆ ಕೈಗೊಳ್ಳಲಿದೆ.
ಅಬಕಾರಿ ಇಲಾಖೆ ತೆರಿಗೆ ಗುರಿ ಎಷ್ಟು?
2019ನೇ ಸಾಲಿನಲ್ಲಿ ಇಲಾಖೆ 16,187.95 ಕೋಟಿ ರೂ. ತೆರಿಗೆ ಸಂಗ್ರಹ ಮಾಡಿದೆ.2020ನೇ ಸಾಲಿನಲ್ಲಿ 20,950 ಕೋಟಿ ರೂ. ತೆರಿಗೆ ಸಂಗ್ರಹ ಮಾಡುವ ಗುರಿಯನ್ನು ಇಲಾಖೆ ಹೊಂದಿದೆ. 2018ಕ್ಕೆ ಹೋಲಿಕೆ ಮಾಡಿದರೆ ಅಬಕಾರಿ ಇಲಾಖೆ ಲಾಭವನ್ನೇ ಗಳಿಸಿದೆ. ಬೆಳವಣಿಗೆ ದರ ಶೇ. 7.76 ರಷ್ಟಿದೆ. ಈ ಬಾರಿ ಮದ್ಯದ ಬೆಲೆ ಹೆಚ್ಚಳ ಮಾಡದೆ ನೀಡಿದ ಗುರಿಯನ್ನು ಸಾಧಿಸಲಾಗಿದೆ. 2020ಕ್ಕೆ ಇನ್ನೂ ಹೆಚ್ಚಿನ ಲಾಭಗಳಿಸುವ ಗುರಿ ಇದೆ.
ಮದ್ಯ ಮಾರಾಟದ ಅವಧಿ ವಿಸ್ತರಣೆ ಬೇಡಿಕೆ
ಮದ್ಯ ಮಾರಾಟದ ಅವಧಿಯನ್ನು ಒಂದು ಗಂಟೆಗಳ ಕಾಲ ವಿಸ್ತರಣೆ ಮಾಡುವಂತೆ ಸಲಹೆ ಕೊಡಲಾಗಿದೆ. ಅಬಕಾರಿ ಇಲಾಖೆ ಈ ಸಲಹೆಗೆ ಒಪ್ಪಿಗೆ ನೀಡಲಿದೆಯೇ? ಕಾದು ನೋಡಬೇಕು. ಬೆಂಗಳೂರು ನಗರದಲ್ಲಿ ಮಾತ್ರ ವಿಸ್ತರಣೆ ಮಾಡುವಂತೆಯೂ ತಿಳಿಸಲಾಗಿದ್ದು, ಇದರ ಸಾಧ್ಯಸಾಧ್ಯತೆ ಬಗ್ಗೆ ಚರ್ಚೆ ನಡೆಯುತ್ತಿದೆ.
ಅಬಕಾರಿ ಇಲಾಖೆಯ ನಿಯಮಗಳ ಪ್ರಕಾರ ಸಿ ಎಲ್ 2 (ಎಂ ಆರ್ ಪಿ ಔಟ್ಲೆಟ್ ಮತ್ತು ವೈನ್ಸ್ಟೋರ್ಸ್) ಗಳಲ್ಲಿ ರಾತ್ರಿ 10-30 ಗಂಟೆಯವರೆಗೆ ಮತ್ತು ಸಿ ಎಲ್ 9 ( ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಪಬ್ ) ಗಳಲ್ಲಿ ಬೆಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಧ್ಯರಾತ್ರಿ 1-00 ಗಂಟೆಯವರೆಗೆ ಹಾಗೂ ಉಳಿದೆಡೆಗಳಲ್ಲಿ ರಾತ್ರಿ 11-30 ಗಂಟೆಯವರೆಗೆ ಮದ್ಯಪೂರೈಕೆಗೆ ಅವಕಾಶವಿದೆ ಎಂದು ಎಚ್ ನಾಗೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಸದ್ಯ 765 ಎಂಎಸ್ಐಎಲ್ ಮಳಿಗೆಗಳಿವೆ
ರಾಜ್ಯದೆಲ್ಲೆಡೆ ಸದ್ಯ 765 ಎಂಎಸ್ಐಎಲ್ ಮಳಿಗೆಗಳಿದ್ದು, ಮತ್ತೆ 408 ಮಳಿಗೆಗಳನ್ನು ತೆರೆಯಲು ಅನುವು ಮಾಡಿಕೊಡಲಾಗಿದೆ. ಎಲ್ಲಿ ಬೇಡಿಕೆ ಇದಿಯೋ ಅಂತಹ ಕಡೆ ಮಳಿಗೆ ತೆರೆಯಲು ಅವಕಾಶ ಮಾಡಿಕೊಡಲಾಗುವುದು, ಬೆಂಗಳೂರು ನಗರ ಹೊರತುಪಡಿಸಿದರೆ, ಉಳಿದ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕಡಿಮೆ ದರದ ಮದ್ಯವೇ ಹೆಚ್ಚು ಮಾರಾಟವಾಗಿ ರಾಜ್ಯ ಬೊಕ್ಕಸಕ್ಕೆ ಆದಾಯ ತರುತ್ತಿದೆ ಎಂದರು.
ಸಂಚಾರಿ ವೈನ್ ಶಾಪ್ ಬಗ್ಗೆ ಘೋಷಣೆ ಇಲ್ಲ
"ಸಂಚಾರಿ ವೈನ್ ಶಾಪ್ಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಎಲ್ಲೆಲ್ಲಿ ವೈನ್ ಶಾಪ್ಗಳು ಲಭ್ಯವಿಲ್ಲವೋ ಅಲ್ಲಿ ಸಂಚಾರಿ ವೈನ್ ಶಾಪ್ಗಳನ್ನು ಆರಂಭಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಇದರಿಂದ ಸರ್ಕಾರಕ್ಕೆ ಉತ್ತಮ ಆದಾಯ ಬರಲಿದೆ. ತಾಂಡಾಗಳಲ್ಲಿ ಸಂಚಾರಿ ವೈನ್ ಶಾಪ್ಗಳ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ'' ಎಂದು ಸಚಿವ ನಾಗೇಶ್ ಹೇಳಿಕೆ ನೀಡಿ ನಂತರ ಯೂ ಟರ್ನ್ ಹೊಡೆದಿದ್ದರು. ಈ ಬಗ್ಗೆ ಬಜೆಟ್ ನಲ್ಲಿ ಸ್ಪಷ್ಟನೆ ನೀಡುವ ನಿರೀಕ್ಷೆಯಿತ್ತು. ಆದರೆ, ಈ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಬಜೆಟ್ ನಲ್ಲಿ ಹೇಳಲಾಗಿದೆ.