ಕೇಂದ್ರ ಬಜೆಟ್ ಮಂಡನೆ ನಂತರ ಸಂಪುಟದಲ್ಲಿ ಭಾರಿ ಬದಲಾವಣೆ
ನವದೆಹಲಿ, ಜನವರಿ 19: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಗಾಗಿ ಕೆಲ ನಿಯಮಗಳನ್ನು ರೂಪಿಸಿದ್ದಾರೆ. ಈ ಪೈಕಿ ಕೇಂದ್ರ ಬಜೆಟ್ ನಂತರ ಸಂಪುಟ ವಿಸ್ತರಣೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಆರ್ಥಿಕ ಹಾಗೂ ಬ್ಯಾಂಕಿಂಗ್ ಕ್ಷೇತ್ರದ ದಿಗ್ಗಜರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುತ್ತಾರೆ ಎಂಬ ಮಾಹಿತಿ ಬಂದಿದೆ.
ಐಎಎನ್ಎಸ್ ವರದಿಯಂತೆ ಬ್ರಿಕ್ಸ್ ಬ್ಯಾಂಕ್ ಅಧ್ಯಕ್ಷ, ಕನ್ನಡಿಗ ಕೆ.ವಿ.ಕಾಮತ್ ಶೀಘ್ರದಲ್ಲೇ ಹಣಕಾಸು ಸಚಿವಾಲಯದ ರಾಜ್ಯ ಸಚಿವರಾಗಿ ಸೇರ್ಪಡೆಗೊಳ್ಳುವ ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಅವರನ್ನು ಕೇಂದ್ರ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಇವರೆಲ್ಲರ ಜೊತೆಗೆ ಸುರೇಶ್ ಪ್ರಭು ಅವರು ಮತ್ತೊಮ್ಮೆ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳುವ ಸುದ್ದಿಯಿದೆ.
ಬ್ರಿಕ್ಸ್ ಬ್ಯಾಕ್ ಅಧ್ಯಕ್ಷರಾಗುವುದಕ್ಕೂ ಮೊದಲು ಕೆ.ವಿ. ಕಾಮತ್ ಇನ್ಪೋಸಿಸ್ ಅಧ್ಯಕ್ಷರಾಗಿ ಮತ್ತು ಐಸಿಐಸಿಐ ಬ್ಯಾಂಕ್ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. 72 ವರ್ಷ ವಯಸ್ಸಿನ ಕಾಮತ್ ಅವರಿಗೆ ವಿತ್ತ ಸಚಿವಾಲಯದ ರಾಜ್ಯ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ. 64ವರ್ಷ ವಯಸ್ಸಿನ ದಾಸ್ ಗುಪ್ತಾ ಅವರಿಗೆ ಮಾನವ ಸಂಪನ್ಮೂಲ ಖಾತೆಯ ರಾಜ್ಯ ಸಚಿವ ಸಿಗಲಿದೆ.
ಮೋದಿ 2.0 ಸರ್ಕಾರ 8 ತಿಂಗಳ ಆಡಳಿತ ಅವಧಿ ಮುಕ್ತಾಯಗೊಳಿಸಿದ್ದು, ಬಜೆಟ್ ನಂತರ ಜಿಡಿಪಿ ಪ್ರಗತಿ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಜುಲೈ- ಸೆಪ್ಟೆಂಬರ್ ಅವಧಿಯಲ್ಲಿ ಜಿಡಿಪಿ ಪ್ರಮಾಣ 4.5%ಕ್ಕೆ ಕುಸಿದಿದೆ.