ಇನ್ವೆಸ್ಟ್ ಕರ್ನಾಟಕ 2016 : ಉದ್ಯಮಿಗಳು ಹೇಳಿದ್ದೇನು?
ಬೆಂಗಳೂರು, ಫೆಬ್ರವರಿ 04 : ಮೂರು ದಿನಗಳ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ 'ಇನ್ವೆಸ್ಟ್ ಕರ್ನಾಟಕ 2016'ಕ್ಕೆ ಬುಧವಾರ ಚಾಲನೆ ಸಿಕ್ಕಿದೆ. 'ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಉತ್ಸುಕರಾಗಿರುವ ಉದ್ಯಮಿಗಳಿಗೆ ಸರ್ಕಾರ ಎಂತಹ ಸಂದರ್ಭದಲ್ಲೂ ಸಂಪೂರ್ಣ ಬೆಂಬಲ ಮತ್ತು ಪೂರಕ ಸಹಾಯ ಒದಗಿಸುತ್ತದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ.
ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಇಂದು ಕರ್ನಾಟಕ 120 ಬಿಲಿಯನ್ (ಶತಕೋಟಿ) ಡಾಲರುಗಳ ಆರ್ಥಿಕತೆಯಾಗಿದೆ. 2035ರ ಹೊತ್ತಿಗೆ ಇದನ್ನು 700 ಬಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಛಲ ನಮ್ಮದು' ಎಂದು ಹೇಳಿದ್ದಾರೆ.[ಚಿತ್ರಗಳು : ಅರಮನೆ ಮೈದಾನದಲ್ಲಿ ಉದ್ಯಮಿಗಳ ದಂಡು]
'ಸರ್ಕಾರ ಉದ್ಯಮಗಳಿಗೆ ಅಗತ್ಯವಾಗಿ ಬೇಕಾದ ಮೂಲಸೌಕರ್ಯಗಳನ್ನು ಉತ್ತಮಪಡಿಸಲು ನಿರಂತರವಾಗಿ ಪ್ರಯತ್ನಗಳನ್ನು ನಡೆಸುತ್ತಿದೆ. ರಸ್ತೆ ನಿರ್ಮಾಣ, ವಿದ್ಯುತ್ ಪೂರೈಕೆ, ವಿಮಾನ ನಿಲ್ದಾಣ, ರೈಲು ಮಾರ್ಗಗಳನ್ನು ಉನ್ನತ ದರ್ಜೆಗೇರಿಸುವ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದೇವೆ' ಎಂದು ಸಿದ್ದರಾಮಯ್ಯ ತಿಳಿಸಿದರು. [ಕರ್ನಾಟಕದ ರಸ್ತೆ ಅಭಿವೃದ್ಧಿಗೆ 1 ಲಕ್ಷ ಕೋಟಿ ರು ತಗೊಳ್ಳಿ!]
ಖ್ಯಾತ ಉದ್ಯಮಿ ರತನ್ ಟಾಟಾ, ಉದ್ಯಮಿ ಅನಿಲ್ ಅಂಬಾನಿ, ಅದಾನಿ ಸಮೂಹದ ಸಂಸ್ಥಾಪಕ ಗೌತಮ್ ಅದಾನಿ, ಇನ್ಫೋಸಿಸ್ನ ಎನ್.ಆರ್.ನಾರಾಯಣಮೂರ್ತಿ, ವಿಪ್ರೋದ ಅಜೀಂ ಪ್ರೇಮ್ ಜಿ ಸೇರಿದಂತೆ ಹಲವು ಉದ್ಯಮಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಉದ್ಯಮಿಗಳು ಹೇಳಿದ್ದೇನು? ಚಿತ್ರಗಳಲ್ಲಿ ನೋಡಿ.... [ಇನ್ವೆಸ್ಟ್ ಕರ್ನಾಟಕ ಮೊಬೈಲ್ ಅಪ್ಲಿಕೇಶನ್]
ಕರ್ನಾಟಕದಲ್ಲಿ ಉದ್ಯಮ ಸ್ನೇಹಿ ವಾತಾವರಣವಿದೆ
'ಕರ್ನಾಟಕದಲ್ಲಿ ಆಡಳಿತದ ಸೂತ್ರ ಹಿಡಿದವರು ಉದ್ಯಮಿಗಳ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಕರ್ನಾಟಕದ ಉತ್ತಮ ಹವಾಗುಣ, ಉದ್ಯಮ ಸ್ನೇಹಿ ವಾತಾವರಣ ಉದ್ಯಮಗಳ ಬೆಳವಣಿಗೆ ಹಾಗೂ ಹೂಡಿಕೆಗೆ ಪೂರಕವಾಗಿವೆ. ಕರ್ನಾಟಕದ ಜೊತೆ ನನ್ನ ಒಡನಾಟ ದಶಕಗಳಿಂದ ಮುಂದುವರೆಯುತ್ತಿದೆ' ಎಂದು ಟಾಟಾ ಟ್ರಸ್ಟ್ನ ಅಧ್ಯಕ್ಷ ರತನ್ ಟಾಟಾ ಹೇಳಿದರು.
1500 ಜನರಿಗೆ ಉದ್ಯೋಗ ನೀಡುತ್ತೇವೆ
'ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ಏರೋಸ್ಪೇಸ್ ಟೆಕ್ನಾಲಜಿ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಸಂಸ್ಥೆ ಸ್ಥಾಪಿಸಿ 1500 ಜನರಿಗೆ ಉದ್ಯೋಗ ನೀಡಲು ನಿರ್ಧರಿಸಲಾಗಿದೆ' ಎಂದು ಉದ್ಯಮಿ ಅನಿಲ್ ಅಂಬಾನಿ ಹೇಳಿದರು. 'ಕರ್ನಾಟಕದಲ್ಲಿ ಉದ್ಯಮ ಸ್ನೇಹಿ ವಾತಾವರಣವಿದೆ. ಇಲ್ಲಿ ಸಾವಿರಾರು ಕೋಟಿ ಬಂಡವಾಳ ಹೂಡಿಕೆ ಮಾಡಲು ನಿರ್ಧರಿಸಲಾಗಿದೆ' ಎಂದು ಅಂಬಾನಿ ಹೇಳಿದರು.
ಮಾಹಿತಿ ತಂತ್ರಜ್ಞಾನ ವ್ಯವಹಾರ ವಿಸ್ತರಣೆ
'ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ವ್ಯವಹಾರ ವಿಸ್ತರಿಸುವ ಉದ್ದೇಶವಿದೆ' ಎಂದು ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್ಜಿ ಹೇಳಿದರು. 'ಬೆಂಗಳೂರು ನಗರದಲ್ಲಿ ಮೂಲ ಸೌಕರ್ಯಗಳ ಕೊರತೆ ಇದ್ದರೂ ವಾತಾವರಣ ಉತ್ತಮವಾಗಿದೆ. ಆದ್ದರಿಂದ ಉದ್ಯಮಿಗಳ ಪ್ರೀತಿಗೆ ಬೆಂಗಳೂರು ಪಾತ್ರವಾಗಿದೆ' ಎಂದು ಅವರು ಹೇಳಿದರು.
ಉದ್ಯಮಕ್ಕೆ ಪ್ರೋತ್ಸಾಹದಾಯಕ ವಾತಾವರಣ
ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರು, 'ಉಡುಪಿ ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಸಾಮರ್ಥ್ಯದ 1,200ರಿಂದ 2,800 ಮೆಗಾವ್ಯಾಟ್ಗೆ ಹೆಚ್ಚಿಸಿ 11,500 ಕೋಟಿ ರೂ. ಹೂಡಿಕೆ ಮಾಡಲಿದ್ದೇವೆ. ಸೌರಶಕ್ತಿ ಆಧಾರಿತ 1000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಘಟಕ ಸ್ಥಾಪಿಸಲು 7000 ಕೋಟಿ ಹೂಡಲಿದ್ದೇವೆ' ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ಘಟಕ
ಇನ್ವೆಸ್ಟ್ ಕರ್ನಾಟಕ 2016ರಲ್ಲಿ ಪಾಲ್ಗೊಂಡಿದ್ದ ಇನ್ಫೋಸಿಸ್ ಮುಖ್ಯಸ್ಥ ಎನ್.ಆರ್.ನಾರಾಯಣಮೂರ್ತಿ ಅವರು, 'ಶೀಘ್ರವೇ ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ಘಟಕ ನಿರ್ಮಾಣ ಮಾಡಲಾಗುತ್ತದೆ' ಎಂದು ಹೇಳಿದರು.
ಬೆಂಗಳೂರು ಉದ್ಯಮಿಗಳಿಗೆ ಪ್ರಿಯವಾಗಿದೆ
ಇನ್ವೆಸ್ಟ್ ಕರ್ನಾಟಕ 2016ರಲ್ಲಿ ಪಾಲ್ಗೊಂಡಿದ್ದ ಬಯೋಕಾನ್ನ ಸಿಎಂಡಿ ಕಿರಣ್ ಮಜುಂದಾರ್ ಷಾ ಅವರು 'ಭಾರತದ ಮಟ್ಟಿಗೆ ಕರ್ನಾಟಕದ ಅದರಲ್ಲೂ ಬೆಂಗಳೂರು ನವೋದ್ಯಮಗಳ ತವರಾಗಲಿದೆ. ಸರ್ಕರದ ದೂರದೃಷ್ಟಿಯ ನೀತಿ ಕೈಗಾರಿಕಾ ಕ್ಷೇತ್ರದಲ್ಲಿ ರಾಜ್ಯ ಮುನ್ನಡೆ ಸಾಧಿಸಲು ನೆರವಾಗಲಿದೆ' ಎಂದು ಹೇಳಿದರು.