ಬಂಡವಾಳ ಹೂಡಿಕೆಗಾಗಿ ಹೈದರಾಬಾದಿನಲ್ಲಿ ಕರ್ನಾಟಕದ ರೋಡ್ ಶೋ
ಹೈದರಾಬಾದ್ ಜನವರಿ 30: ಉತ್ತರ ಕರ್ನಾಟಕ ಹಾಗೂ ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸಲು ಕೇಂದ್ರ ಸಂಸದೀಯ ಹಾಗೂ ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಷಿ ಹಾಗೂ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಹೈದರಾಬಾದ್ನಲ್ಲಿ ರೋಡ್ ಶೋ ಹಾಗೂ ಪ್ರಮುಖ ಕೈಗಾರಿಕೋದ್ಯಮಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿದರು.
ಫೆಬ್ರವರಿ 14 ರಂದು ಹುಬ್ಬಳ್ಳಿಯಲ್ಲಿ ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶ-2020 ನಡೆಯಲಿದ್ದು, ಈ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆಯೂ ಸಹ ಇದೇ ವೇಳೆ ಆಹ್ವಾನಿಸಲಾಯಿತು.
ದೇಶದಲ್ಲಿ ನಂ 1 ಕೈಗಾರಿಕಾ ಸ್ನೇಹಿ ರಾಜ್ಯವಾಗಲಿದೆ ಕರ್ನಾಟಕ
ಡಾ ರೆಡ್ಡಿ ಲ್ಯಾಬ್ ಗೆ ಭೇಟಿ ನೀಡಿದ ಸಚಿವರು, ಕಂಪನಿಯ ಉಪಾಧ್ಯಕ್ಷರಾದ ಜಿ ವಿ ಪ್ರಸಾದ್ ಅವರೊಂದಿಗೆ ಉತ್ತರ ಕರ್ನಾಟಕದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಚರ್ಚೆ ನಡೆಸಿದರು. ನಂತರ ಆಲ್ಫಾ ಪ್ಯಾಕೇಜಿಂಗ್ ಗೆ ಭೇಟಿ ನೀಡಿದ ಸಚಿವರನ್ನೊಳಗೊಂಡ ನಿಯೋಗ ಕಂಪನಿಯ ಭಾರತ ದೇಶದ ವ್ಯವಹಾರಗಳ ಮುಖ್ಯಸ್ಥರಾದ ವಾಗೀಶ್ ದೀಕ್ಷಿತ್ ಅವರೊಂದಿಗೆ ಮಾತುಕತೆ ನಡೆಸಿದರು. ಈ ಭೇಟಿಯ ವೇಳೆ ಕೆಲವು ಬೇರೆ ಬೇರೆ ಕಂಪನಿಗಳ ಪ್ರತಿನಿಧಿಗಳು ಕೂಡಾ ಉಪಸ್ಥಿತರಿದ್ದರು.
ಉದ್ಯಮಿಗಳ ಸಮಸ್ಯೆ ನೀಗಿಸಲು "ಇಂಡಸ್ಟ್ರೀ ಅದಾಲತ್": ಶೆಟ್ಟರ್
ರೋಡ್ ಶೋ ಕಾರ್ಯಕ್ರಮದಲ್ಲಿ ಪಶು ಸಂಗೋಪನಾ ಸಚಿವರಾದ ಪ್ರಭು ಚೌಹಾಣ್, ಸಂಸದರಾದ ಉಮೇಶ್ ಜಾಧವ್, ಭಗವಂತ್ ಖುಬಾ, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಇನ್ವೆಸ್ಟ್ ಕರ್ನಾಟಕ ಪೋರಂ ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸ್ವರೂಪ ಟಿ.ಕೆ, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ರೇವಣ್ಣಗೌಡ ಸೇರಿದಂತೆ ಹಲವು ಪ್ರಮುಖ ಅಧಿಕಾರಿಗಳು ಪಾಲ್ಗೊಂಡಿದ್ದರು.
15 ಕ್ಕೂ ಹೆಚ್ಚು ಕಂಪನಿಗಳೊಂದಿಗೆ ಸಭೆ
ಪ್ರಮುಖವಾಗಿ ಜಿವಿಕೆ ಗ್ರೂಪ್, ಆರ್ಎ ಇನ್ಫ್ರಾಸ್ಟ್ರಕ್ಚರ್ ಪ್ರೈವೆಟ್ ಲಿಮಿಟೆಡ್ನ ಮುಖಂಡರನ್ನು ಭೇಟಿ ಮಾಡಿದರು. ಕೆ.ಎನ್. ಗ್ರೂಪ್ ಆಫ್ ಕಂಪನಿ, ಕೋಮಲ್ ಆಗ್ರೋಟೆಕ್ ಪ್ರೈವೆಟ್ ಲಿಮಿಟೆಡ್, ಭಾರತ್ ಬಯೋಟೆಕ್ ಸೇರಿದಂತೆ 15 ಕ್ಕೂ ಹೆಚ್ಚು ಕಂಪನಿ ಮುಖ್ಯಸ್ಥರನ್ನು ಸಚಿವರು ಭೇಟಿ ಮಾಡಿ ಚರ್ಚೆ ನಡೆಸಿದರು.
ರೋಡ್ ಶೋ: ಸಂಜೆ 6 ಗಂಟೆಗೆ ಪ್ರಾರಂಭಗೊಂಡ ರೋಡ್ ಶೋ ರಾತ್ರಿ 9 ರವರೆಗೆ ನಡೆಯಿತು. ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಹ್ಲಾದ ಜೋಶಿ, ಹುಬ್ಬಳ್ಳಿ ಸಮಾವೇಶದ ಭಾಗವಾಗಿ ಇಂದು ಹೈದರಾಬಾದ್ನಲ್ಲಿ ಎರಡನೇ ರೋಡ್ ಶೋ ನಡೆಸುವ ಮೂಲಕ ಸಾಕಷ್ಟು ಕೈಗಾರಿಕೋದ್ಯಮಿಗಳು ಆಸಕ್ತಿ ವ್ಯಕ್ತಪಡಿಸಿರುವುದು ಸಂತೋಷ ತಂದಿದೆ ಎಂದರು. ದಿನವಿಡೀ ಹಲವು ಉದ್ದಿಮೆದಾರರನ್ನು ಭೇಟಿ ಮಾಡಿ ಸಭೆ ನಡೆಸಿದೆವು. ಬಹುತೇಕ ಉದ್ಯಮಿದಾರರು ಧನಾತ್ಮಕವಾದ ಒಲವು ತೋರಿಸಿದ್ದಾರೆ ಎಂದು ತಿಳಿಸಿದರು.
ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಕರ್ನಾಟಕದ ಪಾಲು
ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಕರ್ನಾಟಕದ ಪಾಲು ಹೆಚ್ಚಿದೆ. ಕರ್ನಾಟಕವು ಬೆಳವಣಿಗೆ ಮತ್ತು ಅಭಿವೃದ್ಧಿಯ ಶಕ್ತಿಶಾಲಿಯಾಗಿದೆ. 2020 ರ ನವೆಂಬರ್ 3 ರಿಂದ 5 ರವರೆಗೆ ಬೆಂಗಳೂರಿನಲ್ಲಿ ಕರ್ನಾಟಕ ಸರ್ಕಾರವು "ಇನ್ವೆಸ್ಟ್ ಕರ್ನಾಟಕ 2020" ಜಾಗತಿಕ ಹೂಡಿಕೆದಾರರ ಸಭೆಯನ್ನು ಆಯೋಜಿಸುತ್ತಿದ್ದು, ವಿಚಾರ ಹಂಚಿಕೊಳ್ಳಲು ಸಂತೋಷವೆನಿಸುತ್ತದೆ. ಈ ರೋಡ್ ಶೋನಲ್ಲಿ ದೇಶೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರಮುಖ ಕೈಗಾರಿಕೋದ್ಯಮಿಗಳು / ಸಿಇಒಗಳೊಂದಿಗ ಸಭೆ ನಡೆಸಿದ್ದೇವೆ. ಉತ್ತರ ಕರ್ನಾಟಕ ಭಾಗದಲ್ಲಿ ಇರುವ ಅವಕಾಶಗಳನ್ನು ಆಲಿಸಿರುವ ಅವರು ಹುಬ್ಬಳ್ಳಿ ಸಮಾವೇಶಕ್ಕೆ ಆಗಮಿಸುವ ಭರವಸೆ ನೀಡಿದ್ದಾರೆ ಎಂದರು.
ಕರ್ನಾಟಕದ ಎರಡನೇ ಸ್ತರದ ನಗರಗಳಲ್ಲಿ ಹೂಡಿಕೆ
ಕರ್ನಾಟಕದ 2- ಟಯರ್ ಹಾಗೂ 3- ಟಯರ್ ನಗರಗಳಲ್ಲಿ ಹೂಡಿಕೆಗೆ ಆಕರ್ಷಿಸುವ ಉದ್ದೇಶದಿಂದ ಹುಬ್ಬಳ್ಳಿ ಸಮಾವೇಶಕ್ಕೆ ಎಲ್ಲರನ್ನೂ ಆಹ್ವಾನಿಸಲಾಗುತ್ತಿದೆ. ಇದರಿಂದ ಈ ಭಾಗದಲ್ಲಿ ಉದ್ಯೋಗಾವಕಾಶ ಸುಧಾರಿಸುವ ನಿರೀಕ್ಷೆ ಹೊಂದಲಾಗಿದೆ. ಹುಬ್ಬಳ್ಳಿ- ಧಾರವಾಡ ಪ್ರದೇಶವು ಕರ್ನಾಟಕದ ಉನ್ನತ ಕೈಗಾರಿಕಾ ತಾಣವಾಗಲು ಸೂಕ್ತ ವಾತಾವರಣ ಹೊಂದಿದೆ. ಈ ಭಾಗದಲ್ಲಿ ಕೆಐಎಡಿಬಿ ಮತ್ತು ಕೈಗಾರಿಕಾ ಎಸ್ಟೇಟ್ಗಳು ಅಭಿವೃದ್ಧಿಪಡಿಸಿದ 9 ಕೈಗಾರಿಕಾ ಪ್ರದೇಶಗಳನ್ನು ಹೊಂದಿದೆ . ಜೊತೆಗೆ ಉತ್ತಮ ರೈಲು, ರಸ್ತೆ ಮತ್ತು ವಾಯು ಸಂಪರ್ಕ, ಲಾಜಿಸ್ಟಿಕ್ ಬೆಂಬಲ, ಮೂಲಸೌಕರ್ಯ, ಅತ್ಯುತ್ತಮ ಟೆಲಿ-ಸಂವಹನ ಜಾಲ ಮತ್ತು ಶಾಂತಿಯುತ ಕಾರ್ಮಿಕ ಶಕ್ತಿಯನ್ನು ಒಳಗೊಂಡಿದ್ದು, ಹುಬ್ಬಳ್ಳಿ ಧಾರವಾಡ ಪ್ರದೇಶವು ಹೂಡಿಕೆಗಳಿಗೆ ಆದ್ಯತೆಯ ತಾಣವಾಗಿದೆ ಎಂದರು.
ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಆದ್ಯತೆ
ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು ರಾಜಧಾನಿ ಬೆಂಗಳೂರಿನ ನಂತರ ಕರ್ನಾಟಕ ರಾಜ್ಯದಲ್ಲಿ ಅತಿದೊಡ್ಡ ಮಹಾನಗರವಾಗಿದೆ. ಅಲ್ಲದೆ, ಹುಬ್ಬಳ್ಳಿ ಧಾರವಾಡ ಮುನ್ಸಿಪಲ್ ಕಾರ್ಪೊರೇಷನ್ (ಎಚ್ಡಿಎಂಸಿ) ಯನ್ನು ದೇಶದ 100 ಸ್ಮಾರ್ಟ್ ಸಿಟಿಗಳಲ್ಲಿ ಒಂದಾಗಿ ಆಯ್ಕೆ ಮಾಡಲಾಗಿದೆ. ಎಚ್ಡಿಎಂಸಿ ಈಗಾಗಲೇ ಅನೇಕ ಮಟ್ಟದ ಸಾರ್ವಜನಿಕ ಪಾರ್ಕಿಂಗ್ ನಿರ್ವಹಣಾ ವ್ಯವಸ್ಥೆ, ಇ-ಆಡಳಿತ ಮತ್ತು ಇಂಟೆಲಿಜೆಂಟ್ ಟ್ರಾನ್ಸ್ಪೋರ್ಟ್ ಮ್ಯಾನೇಜ್ಮೆಂಟ್ ಸಿಸ್ಟಮ್ನಂತಹ ಅನೇಕ ಸ್ಮಾರ್ಟ್ ವ್ಯವಸ್ಥೆಗಳನ್ನು ಹುಬ್ಬಳ್ಳಿ-ಧಾರವಾಡಿನ ಅವಳಿ ನಗರಗಳಲ್ಲಿ ಜಾರಿಗೆ ತಂದಿದೆ. ಇತ್ತೀಚೆಗೆ, ಗೌರವಾನ್ವಿತ ಮುಖ್ಯಮಂತ್ರಿ ಉತ್ತರ ಕರ್ನಾಟಕದ ಮೊದಲ ಟೆಂಡರ್ ಶ್ಯೂರ್ ರಸ್ತೆಯನ್ನು ಹುಬ್ಬಳ್ಳಿಯಲ್ಲಿ ಉದ್ಘಾಟಿಸಿದರು ಎಂದು ತಿಳಿಸಿದರು.
ಹುಬ್ಬಳ್ಳಿಯಲ್ಲಿ ಸಮಾವೇಶ ನಡೆಸಲಾಗುತ್ತಿದೆ: ಶೆಟ್ಟರ್
ಕರ್ನಾಟಕದ 2 ಟಯರ್ ಹಾಗೂ 3 ಟಯರ್ ನಗರಗಳಲ್ಲಿ ಹೂಡಿಕೆಗೆ ಆಕರ್ಷಿಸುವ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ಸಮಾವೇಶ ನಡೆಸಲಾಗುತ್ತಿದೆ. ಕೈಗಾರಿಕಾ ಅಭಿವೃದ್ಧಿಗೆ ಅನುಕೂಲಕರ ವಾತಾವರಣ ಈ ಭಾಗದಲ್ಲಿದೆ. ಉತ್ತರ ಕರ್ನಾಟಕದಲ್ಲಿ ಸುಮಾರು 5400 ಎಕರೆ ವಿಸ್ತೀರ್ಣದ "ಲ್ಯಾಂಡ್ ಬ್ಯಾಂಕ್" ರಚಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸುಮಾರು 3000 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಸಾಗಿದೆ. ಜೊತೆಗೆ 5 ವಿಮಾನ ನಿಲ್ದಾಣಗಳನ್ನು ಹೊಂದುವ ಮೂಲಕ ದೇಶದ 20 ಕ್ಕೂ ಹೆಚ್ಚು ಪ್ರಮುಖ ನಗರಗಳಿಗೆ ವಿಮಾನ ಸಂಪರ್ಕ ಹೊಂದಲಾಗಿದೆ ಎಂದರು.
ಉತ್ತರ ಕರ್ನಾಟಕ ಭಾಗದಲ್ಲಿ ಏರೋಸ್ಪೇಸ್ ಮತ್ತು ಡಿಫೆನ್ಸ್, ಆಟೋ ಮತ್ತು ವಿದ್ಯುತ್ ವಾಹನಗಳು, ಐಟಿ, ಕೃಷಿ-ವ್ಯವಹಾರ ಹೀಗೆ ಹಲವು ಉದ್ಯಮ ತೆರೆಯಲು ಉತ್ತಮ ಅವಕಾಶವಿದೆ. ಈ ಮೂಲಕ ಉದ್ಯೋಗ ಸೃಷ್ಟಿಯಾಗಲಿದೆ ಎಂದು ವಿವರಣೆ ನೀಡಿದರು.