ಐಸಿಐಸಿಐ ಬ್ಯಾಂಕ್ 2,810 ಕೋಟಿ ಎನ್ ಪಿಎ ಕೇಸಿನ ಥ್ರಿಲ್ಲಿಂಗ್ ಡೀಟೇಲ್ಸ್!
ವೈಟ್ ಕಾಲರ್ ಕ್ರೈಂ ಅನ್ನೋದು ರೂಢಿಯಲ್ಲಿದೆ. ಇಂಥದ್ದರಲ್ಲಿ ವಂಚನೆ ಅನುಭವಕ್ಕೆ ಬರುವುದು ಕಷ್ಟ. ಬಂದರೆ ಅದರ ವಿಧಾನ ಮತ್ತೂ ವಿಚಿತ್ರ- ವಿಶಿಷ್ಟ. ಈಗ ಅಂಥದ್ದೊಂದು ಆರೋಪ ಐಸಿಐಸಿಐ ಬ್ಯಾಂಕ್ ನ ಕಾರ್ಯನಿರ್ವಾಹಕ ನಿರ್ದೇಶಕಿ ಹಾಗೂ ಸಿಇಒ ಕೂಡ ಆದ ಚಂದಾ ಕೊಚ್ಚರ್ ಅವರ ಮೇಲೆ ಬಂದಿದೆ.
ಐಸಿಐಸಿಐ ಬ್ಯಾಂಕ್ ನ ಕಾರ್ಯನಿರ್ವಾಹಕ ನಿರ್ದೇಶಕಿ ಹಾಗೂ ಸಿಇಒ ಕೂಡ ಆದ ಚಂದಾ ಕೊಚ್ಚರ್ ಅವರು ಸದ್ಯಕ್ಕೆ ರಜಾದಲ್ಲಿದ್ದಾರೆ. ಈಗ ವ್ಯವಹಾರ ವಲಯದಲ್ಲಿ, ಬ್ಯಾಂಕ್ ವಲಯದಲ್ಲಿ ಇದೇ ಸುದ್ದಿ. ಚಂದಾ ಕೊಚ್ಚರ್ ಮೇಲೆ ಈಗ ಹಿತಾಸಕ್ತಿ ಸಂಘರ್ಷ, ತನಗೆ ಬೇಕಾದವರಿಗೆ ಅನುಕೂಲ ಒದಗಿಸಿದ ಆರೋಪ ಕೂಡ ಕೇಳಿಬಂದಿದೆ.
ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೊಚ್ಚಾರ್ ಗೆ ಕಡ್ಡಾಯ ರಜೆ
ಚಂದ್ರಾ ಅವರ ಪತಿ ದೀಪಕ್ ಮತ್ತು ವಿಡಿಯೋಕಾನ್ ಗ್ರೂಪ್ ಪ್ರಮೋಟರ್ ವೇಣುಗೋಪಾಲ್ ಧೂತ್ ಮಧ್ಯದ ವ್ಯವಹಾರ ಕೂಡ ಈ ವೇಳೆಯಲ್ಲಿ ಬಯಲಾಗಿದ್ದು, ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ತನಿಖೆಯಲ್ಲಿ ಮಾಲೀಕತ್ವದ ಪ್ರಶ್ನೆ ಮತ್ತು ಹಿತಾಸಕ್ತಿ ಸಂಘರ್ಷದ ಬಗ್ಗೆ ಕೂಡ ಕೇಳಿಬಂದಿದೆ.
ಈಚೆಗೆ ಐಸಿಐಸಿಐ ಬ್ಯಾಂಕ್ ಮಂಡಳಿಯು ಚಂದಾ ಕೊಚ್ಚರ್ ಮೇಲೆ ಸ್ವತಂತ್ರ ತನಿಖೆಗೆ ಆದೇಶಿಸಿದೆ. ಆಕೆ ರಜಾ ಮೇಲೆ ತೆರಳಿದ್ದಾರೆ. ಈ ವರ್ಷದ ಮಾರ್ಚ್ ನಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಒಂದು ತನಿಖೆ ನಡೆಸಿತ್ತು. ವಿಡಿಯೋಕಾನ್ ಗ್ರೂಪ್ ನ ಪ್ರಮೋಟರ್ ವೇಣುಗೋಪಾಲ್ ಧೂತ್ ರ ಕಂಪೆನಿಯು ಸುಪ್ರೀಂ ಎನರ್ಜಿಗೆ 64 ಕೋಟಿ ರುಪಾಯಿ ಸಾಲ ನೀಡಿತ್ತು.
2,810 ಕೋಟಿ ರುಪಾಯಿ ಎನ್ ಪಿಎ
ಆ ಸುಪ್ರೀಂ ಎನರ್ಜಿ ಕಂಪೆನಿ ಯಾವುದೆಂದರೆ, ಧೂತ್ ಹಾಗೂ ಇದೇ ಚಂದಾ ಕೊಚ್ಚರ್ ಪತಿ ದೀಪಕ್ ಕೊಚ್ಚರ್ ಮತ್ತಿಬ್ಬರು ಸಂಬಂಧಿಕರ ಜತೆ ಸೇರಿ 2008ರಲ್ಲಿ ಆರಂಭಿಸಿದ್ದ ಕಂಪೆನಿ. ಆ ನಂತರ ಈ ಕಂಪೆನಿಯ ಮಾಲೀಕತ್ವವನ್ನು ಕೊಚ್ಚರ್ ಗೆ ಸೇರಿದ ಟ್ರಸ್ಟ್ ಗೆ ಹಸ್ತಾಂತರಿಸಲಾಗಿದೆ. ಈ ಪ್ರಕ್ರಿಯೆ ನಡೆಯುವ ಆರು ತಿಂಗಳ ಮುಂಚೆ ಐಸಿಐಸಿಐ ಬ್ಯಾಂಕ್ ನಿಂದ ವಿಡಿಯೋಕಾನ್ ಗ್ರೂಪ್ ಗೆ 3,250 ಕೋಟಿ ರುಪಾಯಿ ಸಾಲ ಮಂಜೂರಾಗಿದ್ದು, 2017ರಲ್ಲಿ ಆ ಸಾಲದ ಪೈಕಿ ಹತ್ತಿರ ಹತ್ತಿರ 2,810 ಕೋಟಿ ರುಪಾಯಿಯನ್ನು ನಾನ್ ಪರ್ಫಾಮಿಂಗ್ ಅಸೆಟ್ (ಎನ್ ಪಿಎ) ಎಂದು ಘೋಷಿಸಿದ್ದು, ಮರು ಪಾವತಿಸಿಲ್ಲ ಎಂದು ಆರೋಪಿಸಲಾಗಿತ್ತು.
ಸಾಲ ಮಂಜೂರಾತಿ ಸಮಿತಿಯಲ್ಲಿ ಚಂದಾ ಕೂಡ ಇದ್ದರು
ಐಸಿಐಸಿಐ ಬ್ಯಾಂಕ್ ನ ಅಧ್ಯಕ್ಷ ಎಂ.ಕೆ.ಶರ್ಮಾ ಬಯಲು ಮಾಡಿರುವ ಪ್ರಕಾರ, 3,250 ಕೋಟಿ ರುಪಾಯಿ ಸಾಲ ಮಂಜೂರು ಮಾಡುವ ಸಮಿತಿಯಲ್ಲಿ ಕೊಚ್ಚರ್ ಕೂಡ ಇದ್ದರು. ಆದರೆ ಚಂದಾ ಅವರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಉದ್ದೇಶ ಇರಲಿಲ್ಲ ಎಂದು ಬ್ಯಾಂಕ್ ನ ಮಂಡಳಿ ಸ್ಪಷ್ಟವಾಗಿ ಹೇಳಿತು. ಪ್ರಾಥಮಿಕ ವಿಚಾರಣೆಗೆ ಸಿಬಿಐನಿಂದ ಮಾರ್ಚ್ ನಲ್ಲೇ ಪ್ರಕರಣ ದಾಖಲಿಸಿಕೊಳ್ಳುವಾಗ ದೀಪಕ್ ಹಾಗೂ ಧೂತ್ ಹೆಸರನ್ನು ಸೇರಿಸಲಾಯಿತೇ ವಿನಾ ಚಂದಾ ಹೆಸರು ಆರಂಭದಲ್ಲಿ ತೆಗೆದುಕೊಳ್ಳಲಿಲ್ಲ. ಇನ್ನೂ ಒಂದು ವಿಚಾರ ಏನೆಂದರೆ, ಇವರಿಗೆ ಸಾಲ ಕೊಡಬಹುದಾ ಎಂದು ಸಾಮಾನ್ಯವಾಗಿ ಬ್ಯಾಂಕ್ ನಿಂದ ಸಲಹೆ ಕೇಳಲಾಗುತ್ತದೆ. ಆ ರೀತಿಯ ಸಲಹೆ ನೀಡುವವರನ್ನು ಡೆಟರ್ ಅಡ್ವೈಸರ್ ಅಂತ ಕರೆಯಲಾಗುತ್ತದೆ. ಹಾಗೆ ವಿಡಿಯೋಕಾನ್ ಗ್ರೂಪ್ ಗೆ ಸಾಲ ನೀಡಬಹುದು ಎಂಬ ಸಲಹೆ ನೀಡಿರುವುದು ದೀಪಕ್ ಕೊಚರ್ ನ ಸಹೋದರ, ಸಿಂಗಪೂರದಲ್ಲಿ ಕಂಪೆನಿ ಹೊಂದಿರುವ ರಾಜೀವ್ ಕೊಚ್ಚರ್. ಇಲ್ಲೂ ಹಿತಾಸಕ್ತಿ ಸಂಘರ್ಷದ ವಿಚಾರ ಬರುತ್ತದಾ ಅಂದರೆ, ಇಲ್ಲ, ಇದು ಸ್ಪರ್ಧಾತ್ಮಕವಾಗಿ ಮಾಡುವ ಆಯ್ಕೆ ಎಂದು ರಾಜೀವ್ ಉತ್ತರಿಸಿದ್ದಾರೆ.
ದೀಪಕ್ ಕೊಚ್ಚರ್ ಗೆ ಐಟಿ ನೋಟಿಸ್
ಈ ಮಧ್ಯೆ ಕೇಂದ್ರ ಸರಕಾರ ಕೂಡ ಇಷ್ಟು ದೊಡ್ಡ ವಿಚಾರಗಳ ಬಗ್ಗೆ ಮಾಹಿತಿ ತರಿಸಿಕೊಂಡಿತು. ದೀಪಕ್ ಕೊಚ್ಚರ್ ಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿತು. ವಿಡಿಯೋಕಾನ್ ಪ್ರಕರಣದಲ್ಲಿ ನಿಯಮ ಮೀರಿದ್ದೀರಿ ಎಂದು ಐಸಿಐಸಿಐ ಬ್ಯಾಂಕ್ ಗೂ ಹಾಗೂ ಚಂದಾ ಕೊಚ್ಚರ್ ಗೂ ಸೆಬಿಯಿಂದ ನೋಟಿಸ್ ನೀಡಲಾಯಿತು. ಆದರೆ ಇಷ್ಟೆಲ್ಲ ಆಗುತ್ತಿರುವಾಗ ಚಂದಾ ಕೊಚ್ಚರ್ ಪರವಾಗಿಯೇ ನಿಂತಿದ್ದ ಐಸಿಐಸಿಐ ಬ್ಯಾಂಕ್ ಆಡಳಿತ ಮಂಡಳಿ ಅಂತೂ ಕೊನೆಗೆ ಸ್ವತಂತ್ರ ತನಿಖೆಯೊಂದಕ್ಕೆ ಆದೇಶ ನೀಡಿತು. ತನಿಖೆ ಪೂರ್ಣಗೊಳ್ಳುವವರೆಗೆ ರಜಾದ ಮೇಲೆ ತೆರಳುವಂತೆ ನಾವೇನೂ ಸೂಚಿಸಿಲ್ಲ ಎಂದು ಬ್ಯಾಂಕ್ ಹೇಳುತ್ತಿತ್ತು. ಜತೆಗೆ ಈ ರಜಾ ಬಹಳ ಹಿಂದೆಯೂ ಪ್ಲಾನ್ ಮಾಡಿದ್ದು ಎಂದು ಕೂಡ ಹೇಳಿತ್ತು. ಇನ್ನು ಚಂದಾ ಕೊಚ್ಚರ್ ಗೆ ಉತ್ತರಾಧಿಕಾರಿಯನ್ನು ಹುಡುಕಲು ಸಮಿತಿ ರಚಿಸಲಾಗಿದೆ ಎಂಬ ಸುದ್ದಿಯನ್ನು ಕೂಡ ಬ್ಯಾಂಕ್ ತಳ್ಳಿ ಹಾಕಿತ್ತು.
ಫ್ಲ್ಯಾಟ್ ಖರೀದಿ ಬಗ್ಗೆಯೂ ತನಿಖೆ
ಐಸಿಐಸಿಐ ಬ್ಯಾಂಕ್ ನ ಆಡಳಿತ ಮಂಡಳಿಯಲ್ಲಿ ಸರಕಾರದಿಂದ ನಾಮನಿರ್ದೇಶಿತರು ಇರುತ್ತಾರೆ. ಆದರೆ ಬ್ಯಾಂಕ್ ಕಾರ್ಯನಿರ್ವಹಣೆಯಲ್ಲಿ ಮೂಗು ತೂರಿಸುವುದಿಲ್ಲ ಎಂದು ಸರಕಾರ ಹೇಳಿದೆ. ಆರೋಪ ಕೇಳಿಬಂದಿರುವುದರಿಂದ ಸರಕಾರ ಮಧ್ಯಪ್ರವೇಶಿಸಬೇಕು ಎಂಬ ಒತ್ತಡಕ್ಕೆ, ನಾವು ಹೊರಗೆ ನಿಂತು ಏನಾಗುತ್ತದೆ ಎಂಬುದನ್ನು ಗಮನಿಸುತ್ತೇವೆ ಎಂದು ಸರಕಾರ ನಿಲುವು ತಿಳಿಸಿದೆ. ಆದರೆ ಬ್ಯಾಂಕ್ ನ ಆಡಳಿತ ಮಂಡಳಿ ಜೂನ್ ಹದಿನೆಂಟನೇ ತಾರೀಕು ಘೋಷಣೆ ಮಾಡಿತು: ಚಂದಾ ಕೊಚ್ಚರ್ ವಿರುದ್ಧದ ಸ್ವತಂತ್ರ ತನಿಖೆ ಪೂರ್ಣಗೊಳ್ಳುವ ತನಕ ಆಕೆ ರಜಾದ ಮೇಲಿರುತ್ತಾರೆ. ಇನ್ನು ಸಂದೀಪ್ ಬಕ್ಷಿ ಅವರು ಪೂರ್ಣಾವಧಿ ನಿರ್ದೇಶಕ ಹಾಗೂ ಚೀಫ್ ಆಪರೇಟಿಂಗ್ ಆಫೀಸರ್ ಆಗಿ ನೇಮಕವಾದರು. ದೀಪಕ್ ಕೊಚ್ಚರ್ ನ ವಿಚಾರಣೆಯನ್ನು ಆದಾಯ ತೆರಿಗೆ ಇಲಾಖೆ ಮಾಡಿದ ನಂತರ ಸದ್ಯಕ್ಕೆ ಅವರು ವಾಸವಿರುವ ಫ್ಲ್ಯಾಟ್ ಖರೀದಿ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ಚರ್ಚ್ ಗೇಟ್ ಬಡಾವಣೆಯಲ್ಲಿ 1990ರ ಮಧ್ಯಭಾಗದಲ್ಲಿ ದೀಪಕ್ ಹಾಗೂ ಅವರ ಸೋದರ ರಾಜೀವ್ ಆರಂಭಿಸಿದ್ದ ಫೈನಾನ್ಷಿಯಲ್ ಸರ್ವೀಸ್ ಹೆಸರಲ್ಲಿ ಅದನ್ನು ಕೊಳ್ಳಲಾಗಿತ್ತು. ವಿಡಿಯೋಕಾನ್ ಗ್ರೂಪ್ ವ್ಯವಹಾರದಲ್ಲಿ ಈ ಫ್ಲ್ಯಾಟ್ ಖರೀದಿಯೂ ಕಂಡುಬರುತ್ತಿದ್ದು, ಆ ಬಗ್ಗೆ ಕೂಡ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.