ಆದಾಯ ತೆರಿಗೆ ಪಾವತಿಗಿಂತ ಆಧಾರ್-ಪ್ಯಾನ್ ಕಾರ್ಡ್ ಲಿಂಕ್ ಕಷ್ಟವಪ್ಪೋ..
ಆದಾಯ ತೆರಿಗೆ ಪಾವತಿಸುವುದಕ್ಕೆ ಆಧಾರ್-ಪ್ಯಾನ್ ಕಾರ್ಡ್ ಲಿಂಕ್ ಆಗುವುದು ಕಡ್ಡಾಯ ಎಂದು ನಿಯಮ ಮಾಡಲಾಗಿದೆ. ಆದರೆ ಇದು ಸುಲಭವಲ್ಲ ಎಂದು ಈಗ ಗೊತ್ತಾಗುತ್ತಿದೆ. ಹತ್ತಾರು ಲಕ್ಷ ಮಂದಿ ಸಮಸ್ಯೆ ಎದುರಿಸುತ್ತಿದ್ದಾರೆ
ಚೆನ್ನೈ, ಏಪ್ರಿಲ್ 6: ಹೊಸ ನಿಯಮದ ಪ್ರಕಾರ ಆದಾಯ ತೆರಿಗೆ ಪಾವತಿಸುವುದಕ್ಕೆ ಪ್ಯಾನ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಈ ನಿಯಮ ಎಂಥ ಪೀಕಲಾಟ ತಂದಿದೆ ಅಂತ ಗೊತ್ತಾಗಬೇಕಾದರೆ ಚೆನ್ನೈನ ಕೆ.ವೆಂಕಟೇಶ್ ಅವರ ಬಗ್ಗೆ ಹೇಳಬೇಕು. ಅವರ ಪ್ಯಾನ್ ಕಾರ್ಡ್ ಅನ್ನು ಆಧಾರ್ ಗೆ ಲಿಂಕ್ ಮಾಡುವುದಕ್ಕೆ ಆಗಲಿಲ್ಲ ಅಂತ ಚೆನ್ನೈ ಮೂಲಸ ಬ್ಯಾಂಕರ್ ಆಗಿರುವ ವೆಂಕಟೇಶ್ ಅಕೌಂಟೆಂಟ್ ನ ಭೇಟಿಯಾಗಿದ್ದಾರೆ.
ಆ ನಂತರ ಸಮಸ್ಯೆ ಏನು ಅಂತ ಗೊತ್ತಾಗಿದೆ. ವೆಂಕಟೇಶ್ ಅವರ ಇನ್ಷಿಯಲ್ ಕೆ ಅನ್ನು ವಿಸ್ತೃತವಾಗಿ ಕೃಷ್ಣಸ್ವಾಮಿ ಎಂದು ಆಧಾರ್ ದಾಖಲೆಯಲ್ಲಿ ಇದೆ. ಆದರೆ ಪ್ಯಾನ್ ಕಾರ್ಡ್ ನಲ್ಲಿ ಹಾಗಿಲ್ಲ. ಆ ಕಾರಣಕ್ಕೆ ಅವರ ದಾಖಲೆಯು ಮತ್ತೊಂದರ ಜೊತೆಗೆ ಸರಿಹೊಂದುತ್ತಿಲ್ಲ. ದೇಶದ ಲಕ್ಷಾಂತರ ಮಂದಿ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.[ಐಟಿ ರಿಟರ್ನ್ಸ್, ಪಾನ್ ಕಾರ್ಡ್ ಪಡೆಯಲು ಆಧಾರ್ ಕಡ್ಡಾಯ]
ಕೇಂದ್ರ ಸರಕಾರವೋ ಜುಲೈ 31ರೊಳಗೆ ಎರಡೂ ಲಿಂಕ್ ಆಗಿರಬೇಕು ಎಂದು ಆದೇಶಿಸಿದೆ. ಮಧ್ಯೆ ಯಾವುದೇ ಸಣ್ಣ ಬದಲಾವಣೆಯನ್ನು ಮಾಡಬೇಕಾದರೂ ಮನುಷ್ಯರ ಮಧ್ಯಪ್ರವೇಶದಿಂದ ಆಗುತ್ತಿಲ್ಲ. ಅಂದರೆ, ಸ್ವತಃ ಆಯಾ ವ್ಯಕ್ತಿಗಳಿಂದಲೇ ಮಾಡಲು ಆಗುತ್ತಿಲ್ಲ. ಆದ್ದರಿಂದ ಚಾರ್ಟರ್ಡ್ ಅಕೌಂಟೆಂಟ್ ಗಳು ಎಸ್ ಒಎಸ್ ಸಂದೇಶಗಳೊಂದಿಗೆ ರಾಶಿರಾಶಿ ಮಂದಿ ಒದ್ದಾಡುತ್ತಿದ್ದಾರೆ. ಈ ಬಗ್ಗೆ ಎಕನಾಮಿಕ್ ಟೈಮ್ಸ್ ನಲ್ಲಿ ವರದಿ ಪ್ರಕಟವಾಗಿದೆ
ಸ್ಪೆಷಲ್ ಕ್ಯಾರೆಕ್ಟರ್ ಆಧಾರ್ ಗುರುತಿಸಲ್ಲ
ಇನ್ನು ಕಾಲೇಜು ಉಪನ್ಯಾಸಕ ಡಿಸಿಲ್ವ ಅವರದು ಮತ್ತೂ ಕಷ್ಟದ ಸ್ಥಿತಿ. ಆಧಾರ್ ಡೇಟಾ ಬೇಸ್ ನಲ್ಲಿ ಸ್ಪೆಷಲ್ ಕ್ಯಾರೆಕ್ಟರ್ ( , " ') ಗಳನ್ನು ಗುರುತಿಸಲ್ಲ. ಆದರೆ ಪ್ಯಾನ್ ಕಾರ್ಡ್ ಗುರುತಿಸುತ್ತದೆ. ಆದ್ದರಿಂದ ಅವರ ಹೆಸರು ಹೋಲಿಕೆ ಆಗುತ್ತಿಲ್ಲ. ಇದೇ ಸ್ಥಿತಿಯಲ್ಲಿ ಕೆ.ಎಸ್.ಶ್ರೀನಿವಾಸ್ ಇದ್ದಾರೆ.
ಹಲವು ದಾಖಲೆ ಬದಲಿಸಬೇಕು
ಅವರ ಪ್ಯಾನ್ ಕಾರ್ಡ್ ನ ಮಾಹಿತಿಯಲ್ಲಿ ಇನ್ಷಿಯಲ್ ನಂತರ ಫುಲ್ ಸ್ಟಾಪ್ ಇದೆ. ಆಧಾರ್ ನಲ್ಲಿ ಇಲ್ಲ. "ಪ್ಯಾನ್ ಕಾರ್ಡ್ ನಲ್ಲಿ ನಾವು ಬದಲಾವಣೆ ಮಾಡುವುದು ಸಾಧ್ಯವಿಲ್ಲ. ಅದರಲ್ಲಿ ಬದಲು ಮಾಡಿದರೆ ಹಲವು ದಾಖಲೆಗಳನ್ನು ಬದಲಾಯಿಸಿಕೊಳ್ಳ ಬೇಕಾಗುತ್ತದೆ. ಬ್ಯಾಂಕ್ ನವರಿಗೆ ತಿಳಿಸಬೇಕು, ಹೊಸ ಕೆವೈಸಿ, ಇನ್ಷೂರೆನ್ಸ್ ಕಂಪೆನಿಯವರಿಗೆ ತಿಳಿಸಬೇಕು. ಇವೆಲ್ಲ ಬಲು ಕಷ್ಟ" ಅಂತಾರೆ ಶ್ರೀನಿವಾಸ್.
ಸಣ್ಣ-ಪುಟ್ಟ ಸಮಸ್ಯೆ ಸರಿಪಡಿಸುವಂತಾಗಬೇಕು
ಚಾರ್ಟೆರ್ಡ್ ಅಕೌಂಟೆಂಟ್ ಗಳ ಪ್ರಕಾರ ಈ ಲಿಂಕ್ ಮಾಡುವ ಪ್ರಕ್ರಿಯೆ ಮ್ಯಾನ್ಯುಯಲ್ ಆಗುವಂತೆ ಸರಕಾರ ಅನುಕೂಲ ಮಾಡಿಕೊಡಬೇಕು. ಮುಖ್ಯವಾಗಿ ತೀರಾ ಸಣ್ಣ-ಪುಟ್ಟ ಸಮಸ್ಯೆಯನ್ನಾದರೂ ಹಾಗೆ ಸರಿಪಡಿಸುವಂತಾಗಬೇಕು. ಇದಕ್ಕಾಗಿಯೇ ವಿಶೇಷ ವ್ಯವಸ್ಥೆ ಮಾಡಬೇಕು ಎನ್ನುತ್ತಾರೆ ಬೆಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ ಪಂಕಜ್ ಧರಾಂಶಿ.
ಒಮ್ಮೆ ಪರೀಕ್ಷಿಸಿಕೊಳ್ಳಿ
ಪರೀಕ್ಷಾರ್ಥ ಅನ್ನೋ ಹಾಗೆ ಆದಾಯ ತೆರಿಗೆಯ ಮಾಹಿತಿ ಜತೆಗೆ ಪ್ಯಾನ್ ಕಾರ್ಡ್ ಹೋಲಿಸಿ ನೋಡಬಹುದು. "ಆದಾಯ ತೆರಿಗೆದಾರರಿಗೆ ಹಿಂಸೆ ಕೊಡುವ ವಿಷಯ ಇದು" ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮಗೆ ತೆರಿಗೆ ತುಂಬಲು ಸಮಸ್ಯೆ ಆಗ್ತಿದೆಯಾ, ತೆರಿಗೆ ಪಾವತಿಸಿ, ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿ. ಇತ್ತೀಚಿನ ಸುಪ್ರೀಂ ಕೋರ್ಟ್ ಆದೇಶವೊಂದಿದೆ
ತೆರಿಗೆ ಕಟ್ಟಿದ್ದನ್ನು ನಿರಾಕರಿಸುವಂತಿಲ್ಲ
"ಆದಾಯ ತೆರಿಗೆಯನ್ನು ತಿರಸ್ಕರಿಸುವಂತಿಲ್ಲ. ಆದ್ದರಿಂದ ನಿರಾಕರಣೆಗೆ ಅವಕಾಶವೇ ಇಲ್ಲ. ಆದಾಯ ತೆರಿಗೆ ಕಾಯ್ದೆಯಲ್ಲೇ ಅವಕಾಶ ಇದೆ. ಪ್ಯಾನ್ ಕಾರ್ಡ್ ಇಲ್ಲದಿದ್ದರೂ ಆದಾಯ ತೆರಿಗೆ ಕಟ್ಟಲು ಅವಕಾಶ ನೀಡಬೇಕು" ಎಂದು ಮದ್ರಾಸ್ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಯೊಬ್ಬರು ಸಲಹೆ ನೀಡಿದ್ದಾರೆ.