ತೆರಿಗೆ ವಂಚನೆ ಕೇಸ್: ಬಂಧಿತ ಇನ್ಫಿ ಟೆಕ್ಕಿಗಳು ಉದ್ಯೋಗದಿಂದ ವಜಾ
ಬೆಂಗಳೂರು, ಮಾರ್ಚ್ 9: ಆದಾಯ ತೆರಿಗೆ ವಂಚನೆಗೆ ನೆರವು ನೀಡಿ ಕಮಿಷನ್ ಗಳಿಸುತ್ತಿದ್ದ ಇನ್ಫೋಸಿಸ್ ಸಂಸ್ಥೆಯ ಮೂವರು ಸಾಫ್ಟ್ ವೇರ್ ಉದ್ಯೋಗಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಬಂಧನ ಸುದ್ದಿ ಖಚಿತವಾಗುತ್ತಿದ್ದಂತೆ ಮೂವರು ಟೆಕ್ಕಿಗಳಿಗೆ ಇನ್ಫೋಸಿಸ್ ಪಿಂಕ್ ಸ್ಲಿಪ್ ನೀಡಿದೆ. ಅತಿಯಾಸೆ ಗತಿಗೇಡು ಎಂಬಂತೆ ಕಮಿಷನ್ ಆಸೆಗೆ ವಂಚನೆ ಹಾದಿ ಹಿಡಿದ ಮೂವರು ಉದ್ಯೋಗವನ್ನು ಕಳೆದುಕೊಂಡಿದ್ದಲ್ಲದೆ, ಜೈಲುವಾಸ ಅನುಭವಿಸುವಂತಾಗಿದೆ.
ಬಂಧಿತರನ್ನು ಆಂಧ್ರಪ್ರದೇಶ ಮೂಲದ ಕಲ್ಯಾಣ್ ಕುಮಾರ್, ದೇವೇಶ್ವರ್ ರೆಡ್ಡಿ ಹಾಗೂ ಪ್ರಕಾಶ್ ಎಂದು ಗುರುತಿಸಲಾಗಿದೆ. ಆದಾಯ ತೆರಿಗೆ ಇಲಾಖೆಯ ತೆರಿಗೆ ಸಂಗ್ರಹ ತಂತ್ರಾಂಶಕ್ಕೆ ಇನ್ಫೋಸಿಸ್ ನೆರವು ಒದಗಿಸುತ್ತಿದ್ದು, ಈ ಪ್ರಾಜೆಕ್ಟ್ ನಲ್ಲಿ ಬಂಧಿತ ಮೂವರು ಕಾರ್ಯ ನಿರ್ವಹಿಸುತ್ತಿದ್ದರು.
ಆದರೆ, ದುರಾಸೆಗೆ ಬಿದ್ದು, ತೆರಿಗೆ ಕಟ್ಟುವವರನ್ನು ಸಂಪರ್ಕಿಸಿ, ರೀಫಂಡ್ ಮೊತ್ತ ತ್ವರಿತವಾಗಿ ಕೊಡಿಸುವುದು, ತೆರಿಗೆ ವಂಚಿಸುವುದು, ಸುಳ್ಳು ಮಾಹಿತಿ ನೀಡುವುದು ಮುಂತಾದ ಕೃತ್ಯಗಳಲ್ಲಿ ತೊಡಗಿದ್ದರು. ಇದಕ್ಕಾಗಿ ಇಂತಿಷ್ಟು ಕಮಿಷನ್ ಎಂದು ಪಡೆದುಕೊಳ್ಳುತ್ತಿದ್ದರು. ವ್ಯಕ್ತಿಯೊಬ್ಬರು ಕಮಿಷನ್ ಮೊತ್ತ ನೀಡಲು ಹಿಂದೇಟು ಹಾಕಿದಾಗ, ಇವರ ಬಣ್ಣ ಬಯಲಾಗಿದೆ. ಬಂಧಿತರಿಂದ 3 ಲಕ್ಷ ರು ನಗದು, ಲ್ಯಾಪ್ ಟಾಪ್ ಜಪ್ತಿ ಮಾಡಲಾಗಿದೆ. ಮೂವರು ಕೂಡಾ ಆದಾಯ ತೆರಿಗೆ ಇಲಾಖೆಯ ತೆರಿಗೆ ಸಂಗ್ರಹ ಪ್ರಾಜೆಕ್ಟ್ (ಸಿಪಿಸಿ)ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಹೇಳಿದ್ದಾರೆ.
ಇನ್ಫೋಸಿಸ್ ಪ್ರಕಟಣೆ
''ಸಿಪಿಸಿ ಪ್ರಾಜೆಕ್ಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೂವರು ಆರೋಪಿತರು ಸಂಸ್ಥೆಯ ನೀತಿ, ನಿಯಮಗಳನ್ನು ಮುರಿದು ತಪ್ಪೆಸಗಿರುವುದು ಕಂಡು ಬಂದಿದೆ. ಹೀಗಾಗಿ, ತಕ್ಷಣದಿಂದ ಜಾರಿಗೆ ಬರುವಂತೆ ಮೂವರನ್ನು ಉದ್ಯೋಗದಿಂದ ವಜಾಗೊಳಿಸಲಾಗಿದೆ. ಪೊಲೀಸರ ತನಿಖೆಗೆ ಸಂಸ್ಥೆ ಸಂಪೂರ್ಣವಾಗಿ ಸಹಕಾರ ನೀಡಲಿದೆ'' ಇನ್ಫೋಸಿಸ್ ಪ್ರಕಟಿಸಿದೆ.
ತೆರಿಗೆ ವಂಚಕರಿಗೆ ನೆರವಾಗಿದ್ದರು
ತೆರಿಗೆ ವಂಚನೆ ಹೇಗೆ?: ತೆರಿಗೆ ಪಾವತಿದಾರರನ್ನು ಸಂಪರ್ಕಿಸಿ, ತೆರಿಗೆ ವಂಚಿಸಲು ನೆರವಾಗುತ್ತಿದ್ದರು. ಇದಕ್ಕಾಗಿ ಶೇ 4 ರಿಂದ 5ರಷ್ಟು ಕಮಿಷನ್ ಗಳಿಸುತ್ತಿದ್ದರು. ಐಟಿ ಅಧಿಕಾರಿಯೊಬ್ಬರಿಗೆ ಈ ಬಗ್ಗೆ ತಿಳಿದು ಬಂದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಆದಾಯ ತೆರಿಗೆ ಇಲಾಖೆಯ ತೆರಿಗೆ ಸಂಗ್ರಹ ಪ್ರಾಜೆಕ್ಟ್ (ಸಿಪಿಸಿ)ಗೆ ಇನ್ಫೋಸಿಸ್ ಸಂಸ್ಥೆ ತಾಂತ್ರಿಕ ನೆರವು ಒದಗಿಸುತ್ತಿತ್ತು. ಇನ್ಫೋಸಿಸ್ ನಿಂದ ಐಟಿ ಇಲಾಖೆಗಾಗಿ ಈ ಮೂವರು ಕಾರ್ಯ ನಿರ್ವಹಿಸುತ್ತಿದ್ದರು.
ಐಟಿ ರೀಫಂಡ್ ಏಳು ದಿನಗಳ ಕಾಲಾವಕಾಶ
ತೆರಿಗೆ ಮರುಪಾವತಿ ಪಡೆಯಲು ಏಳು ದಿನಗಳ ಕಾಲಾವಕಾಶ ಇರುವುದನ್ನು ಲಾಭಕ್ಕಾಗಿ ಬಳಸಿಕೊಂಡ ಈ ಮೂವರು, ತೆರಿಗೆದಾರರಿಂದ ಹಣ ಪಡೆದು ಸುಳ್ಳು ಮಾಹಿತಿ ನೀಡಿ, ಇಲಾಖೆಗೆ ವಂಚನೆ ಮಾಡುತ್ತಿದ್ದರು ಎಂದು ಐಟಿ ಇಲಾಖೆ ಅಧಿಕಾರಿ ಮ್ಯಾಥ್ಯೂ ಎಂಬುವರು ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಿದ್ದರು.
ಟೆಕ್ಕಿಗಳ ಮೇಲೆ 420 ಕೇಸ್ ದಾಖಲು
ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ತೆರಿಗೆದಾರರೊಬ್ಬರು ಈ ಮೂವರಿಗೆ ಕಮಿಷನ್ ಮೊತ್ತ ನೀಡಲು ನಿರಾಕರಿಸಿದ್ದರು. ಈ ತಂಡದ ಜೊತೆ ನಡೆಸಿದ ಆಡಿಯೋ ಸಂಭಾಷಣೆಯನ್ನು ಹಂಚಿಕೊಂಡಿದ್ದರು. ಇದಕ್ಕೆ ಪೂರಕವಾಗಿ ಆಂತರಿಕ ತನಿಖೆಯಿಂದ ಮೂವರು ವಂಚನೆ ಮಾಡಿರುವುದು ದೃಢಪಟ್ಟ ಮೇಲೆ ಪೊಲೀಸರಿಗೆ ದೂರು ತಲುಪಿದೆ. ಈ ಮೂವರು ಸುಮಾರು 15 ಲಕ್ಷ ರುಗೂ ಅಧಿಕ ಮೊತ್ತ ವಂಚಿಸಿರಬಹುದು ಎಂದು ಅಂದಾಜಿಸಲಾಗಿದೆ.