ನಂದನ್ ನಿಲೇಕಣಿ ಇನ್ಫಿಗೆ ಬಂದರೆ ಯಾವ ಹುದ್ದೆ ಸಿಗಲಿದೆ?
ಬೆಂಗಳೂರು, ಆಗಸ್ಟ್ 24: ದೇಶದ ಪ್ರಮುಖ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಹ ಸ್ಥಾಪಕ ನಂದನ್ ನಿಲೇಕಣಿ ಅವರು ಮತ್ತೊಮ್ಮೆ ಇನ್ಫೋಸಿಸ್ ಗೆ ಮರಳುವುದಿಲ್ಲ ಎಂದು ಹಿಂದೊಮ್ಮೆ ಘೋಷಿಸಿದ್ದರು. ಆದರೆ, ಈಗ ಇನ್ಫಿ ಚುಕ್ಕಾಣಿ ಹಿಡಿಯುವುದು ಅನಿವಾರ್ಯವಾಗಿದೆ.
ಲಭ್ಯ ಮಾಹಿತಿ ಪ್ರಕಾರ, ನಂದನ್ ನಿಲೇಕಣಿ ಅವರು ಯುಎಸ್ ಪ್ರವಾಸವನ್ನು ಸದ್ಯಕ್ಕೆ ರದ್ದುಪಡಿಸಿದ್ದು, ಇನ್ಫೋಸಿಸ್ ಗೆ ಮರಳಲು ಸಿದ್ಧರಾಗುತ್ತಿದ್ದಾರೆ. ಅವರಿಗೆ ಕಾರ್ಯಕಾರಿ ಹುದ್ದೆಯ ಬದಲಿಗೆ non -executive ಚೇರ್ಮನ್ ಹುದ್ದೆ ನೀಡಿ, ಮುಂದಿನ ಸಿಇಒ ಆಯ್ಕೆ ಮಾಡುವ ಜವಾಬ್ದಾರಿ ನೀಡುವ ಬಗ್ಗೆ ಹೂಡಿಕೆದಾರರು, ಸ್ಥಾಪಕರು ಹಾಗೂ ಬೋರ್ಡ್ ಸದಸ್ಯರು ಮುಂದಾಗಿದ್ದಾರೆ.
ಇನ್ಫೋಸಿಸ್ ನಲ್ಲಿ ಈಗ ಬದಲಾವಣೆ ಪರ್ವ ಆರಂಭವಾಗಿದೆ. ಚೇರ್ಮನ್ ಆರ್ ಶೇಷಸಾಯಿ, ಸಹ ಮುಖ್ಯಸ್ಥ ರವಿ ವೆಂಕಟೇಶನ್, ಆಡಿಟ್ ಸಮಿತಿ ಮುಖ್ಯಸ್ಥರಾದ ರೂಪಾ ಕುಡ್ವಾ, ನಾಮಾಂಕಿತ ಸಮಿತಿ ಚೇರ್ಮನ್ ಜೆಫ್ ಲೇಹ್ಮನ್ ಅವರು ತಮ್ಮ ಹುದ್ದೆಯಿಂದ ಕೆಳಗಿಳಿಯುತ್ತಿದ್ದಾರೆ.
ಸಂಕಷ್ಟದಲ್ಲಿರುವ ಇನ್ಫೋಸಿಸ್ ಸಂಸ್ಥೆ
ಸಂಕಷ್ಟದಲ್ಲಿದ್ದ ಇನ್ಫೋಸಿಸ್ ಸಂಸ್ಥೆ ಮೇಲಕ್ಕೆತ್ತಲು ಸಹ ಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿ ಅವರು ಇನ್ಫೋಸಿಸ್ ಗೆ ಮರಳಿದ್ದಲ್ಲದೆ ಸಾಕಷ್ಟು ಬದಲಾವಣೆ ತಂದಿದ್ದರು. ಇದೇ ರೀತಿ ನಿಲೇಕಣಿ ಅವರು ಇನ್ಫೋಸಿಸ್ ಗೆ ಮರಳುತ್ತಾರೆ ಎಂಬ ಸುದ್ದಿ ಈ ಹಿಂದೆಯೂ ಹಬ್ಬಿತ್ತು.
ಇನ್ಫೋಸಿಸ್ ಹೊಸ ಸಿಇಒ ಹುಡುಕಾಟ
ಇನ್ಫೋಸಿಸ್ ಹೊಸ ಸಿಇಒ ಹುಡುಕಾಟದಲ್ಲಿದ್ದಾಗ ಈ ಸುದ್ದಿ ಇನ್ನಷ್ಟು ಬಲವಾಗಿತ್ತು. ಮಾಜಿ ಸಿಎಫ್ ಒ ಬಿಪ್ಯಾಕ್ ನ ಮೋಹನ್ ದಾಸ್ ಪೈ, ಬಾಲಕೃಷ್ಣನ್ ಸೇರಿದಂತೆ ಸಹಸ್ಥಾಪಕರು ಕೂಡಾ ನಂದನ್ ಮತ್ತೊಮ್ಮೆ ಸಿಇಒ ಆಗಲಿ ಎಂದು ಬೆಂಬಲ ವ್ಯಕ್ತಪಡಿಸಿದ್ದರು. ಆದರೆ,ನಂದನ್ ಮತ್ತೆ ಸಿಇಒ ಆಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಇನ್ಫೋಸಿಸ್ ಗೆ ವಾಪಸ್
ವಿಶಾಲ್ ಸಿಕ್ಕಾ ಆಯ್ಕೆಯ ಸಂದರ್ಭದಲ್ಲಿ ತಮಗೆ ಬಂದಿದ್ದ ಅವಕಾಶವನ್ನು ನಂದನ್ ಬದಿಗೊತ್ತಿದ್ದರು. ಅದರೆ, ನಂದನ್ ಅವರು ಇನ್ಫೋಸಿಸ್ ಗೆ ವಾಪಸ್ ತೆರಳದಿರಲು ನಿರ್ಧರಿಸಿದ್ದರು. ಇನ್ಫೋಸಿಸ್ ನಲ್ಲಿ ಈಗ ಯುವಕರ ತಂಡ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ. ನಾನು ಈಗ ಕಂಪನಿ ಸೇರಿ ಮಾಡುವಂಥದ್ದೇನಿಲ್ಲ ಎಂದಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ.
7,700 ಕೋಟಿ ರೂ ಆಸ್ತಿಯ ಒಡೆಯ ನಂದನ್
7,700 ಕೋಟಿ ರೂ ಆಸ್ತಿಯ ಒಡೆಯ ನಂದನ್ ಅವರು ಇನ್ಫೋಸಿಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದವರು. ಯುಪಿಎ ಸರ್ಕಾರದ ಅವಧಿಯಲ್ಲಿ ಆಧಾರ್ ಚೇರ್ಮನ್ ಆಗಿ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಅಲಂಕರಿಸಿದವರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಪಡೆದು ಭರ್ಜರಿಯಾಗಿ ಕ್ಯಾಂಪೇನ್ ಮಾಡಿದರೂ ಎಚ್ .ಎನ್ ಅನಂತ್ ಕುಮಾರ್ ಅವರು ಡಬ್ಬಲ್ ಹ್ಯಾಟ್ರಿಕ್ ತಪ್ಪಿಸಲು ಸಾಧ್ಯವಾಗ್ಲಿಲ್ಲ.