ಬೆಳ್ಳಿತೆರೆಗೆ ಇನ್ಫೋಸಿಸ್ ಸ್ಥಾಪಕ ನಾರಾಯಣಮೂರ್ತಿ ಜೀವನಗಾಥೆ
ಬೆಂಗಳೂರು, ಜನವರಿ 17: ಹೆಮ್ಮೆಯ ಕನ್ನಡಿಗ ಎನ್. ಆರ್ ನಾರಾಯಣಮೂರ್ತಿ ಅವರು ತಮ್ಮ ಸಹಚರರೊಡನೆ ಕೂಡಿ ಇನ್ಫೋಸಿಸ್ ಸ್ಥಾಪಿಸಿದ್ದು, ದೇಶದ ಎರಡನೇ ಸ್ಥಾನಕ್ಕೆ ಸಂಸ್ಥೆಯನ್ನು ಬೆಳೆಸಿದ್ದು, ಸುಧಾಮೂರ್ತಿ ಅವರನ್ನು ಪ್ರೀತಿಸಿ, ಮದುವೆಯಾಗಿದ್ದು, ಇನ್ಫೋಸಿಸ್ ಎದುರಿಸಿದ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸಿ, ಸಂಸ್ಥೆಯನ್ನು ಉಳಿಸಿ, ಬೆಳೆಸಿದ್ದು ಹೇಗೆ? ಹೀಗೆ ಎಲ್ಲವನ್ನು ಬೆಳ್ಳಿತೆರೆಯ ಮೇಲೆ ನೋಡಿ ಆನಂದಿಸುವ ಕಾಲ ಇನ್ನೇನು ಹತ್ತಿರದಲ್ಲಿದೆ.
ಚಿತ್ರಕರ್ಮಿ ಸಂಜಯ್ ತ್ರಿಪಾಠಿ ಅವರು ಎನ್. ಆರ್ ನಾರಾಯಣ ಮೂರ್ತಿ ಅವರ ಜೀವನಗಾಥೆ ಕುರಿತ ಚಿತ್ರದ ಕಥೆ ಸಿದ್ಧಪಡಿಸಿಕೊಂಡಿದ್ದಾರೆ. ಎಂಟು ತಿಂಗಳ ಹಿಂದೆ ಇನ್ಫಿ ಮೂರ್ತಿ ಅವರನ್ನು ಭೇಟಿ ಮಾಡಿ, ಚಿತ್ರ ನಿರ್ಮಾಣದ ಬಗ್ಗೆ ಮಾತುಕತೆ ನಡೆಸಿ, ಒಪ್ಪಿಗೆ ಪಡೆದುಕೊಂಡಿದ್ದಾರೆ.
ವರ್ಷದ ವ್ಯಕ್ತಿ 2017: ಇನ್ಫಿ ಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿ
'ವಿಷಯಗಳನ್ನು ತಿರುಚಬೇಡಿ, ಸತ್ಯಾಂಶವನ್ನು ಹಾಗೆ ತೋರಿಸಿ' ಎಂದಷ್ಟೇ ಮೂರ್ತಿ ಅವರು ಸೂಚಿಸಿದ್ದಾರೆ.
'ಪತ್ನಿ ಸುಧಾ ಅವರಿಂದ ಮೂರ್ತಿ ಅವರು 10,000 ರು ಸಾಲ ಪಡೆದುಕೊಂಡು ಗ್ಯಾರೇಜ್ ವೊಂದರಲ್ಲಿ ಸಮಾನ ಮನಸ್ಕರೊಡಗೂಡಿ ಇನ್ಫೋಸಿಸ್ ಸ್ಥಾಪಿಸಿದ್ದನ್ನು ತಿರುಚಲು ಸಾಧ್ಯವಿಲ್ಲ. ಆದರೆ, ಸಾಲ ಪಡೆದಿದ್ದು, ಸಂಸ್ಥೆ ಸ್ಥಾಪನೆ ಸಂದರ್ಭದಲ್ಲಿ ಆಗಿದ್ದ ಮಾತುಕತೆ, ಚರ್ಚೆಯನ್ನು ಎಲ್ಲರ ಮುಂದಿಡಬಹುದು ಎಂದು ಚಿತ್ರತಂಡ ಹೇಳಿದೆ.
ಜುಲೈ 1981ರಲ್ಲಿ ಸ್ಥಾಪನೆಯಾದ ಇನ್ಫೋಸಿಸ್ ಲಿಮಿಟೆಡ್, ಕಳೆದ ಆಥಿಕ ವರ್ಷದ ಅಂತ್ಯಕ್ಕೆ 10.94 ಬಿಲಿಯನ್ ಡಾಲರ್ ಆದಾಯ ಗಳಿಸಿದೆ. 72 ವರ್ಷ ವಯಸ್ಸಿನ ನಾರಾಯಣ ಮೂರ್ತಿ ಹೆಸರಿನ ಬ್ರ್ಯಾಂಡಿಗೆ 2.3 ಬಿಲಿಯನ್ ಯುಎಸ್ ಡಾಲರ್ ಮೌಲ್ಯವಿದೆ ಎಂದು ಫೋರ್ಬ್ಸ್ ಹೇಳಿದೆ.
ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷರಾಗಿ ಇನ್ಫಿ ಮೂರ್ತಿ ನೇಮಕ
ಚಿಕ್ಕಬಳ್ಳಾಪುರದ ಶಾಲಾ ಶಿಕ್ಷಕರೊಬ್ಬರ ಪುತ್ರರಾದ ನಾರಾಯಣ ಮೂರ್ತಿ ಅವರು ಐಐಟಿ ಖರಗ್ ಪುರದಿಂದ ಮಾಸ್ಟರ್ಸ್ ಪಡೆದಿದ್ದಾರೆ. ಪಟ್ನಿ ಕಂಪ್ಯೂಟರ್ಸ್ ಸಿಸ್ಟಮ್ಸ್ ನಲ್ಲಿ ಸಿಸ್ಟಮ್ ಪ್ರೋಗ್ರಾಮರ್ ಆಗಿದ್ದವರು 1981ರಲ್ಲಿ ಆರು ಮಂದಿ ಸಾಫ್ಟ್ ವೇರ್ ವೃತ್ತಿಪರರ ಜತೆಗೂಡಿ ಇನ್ಫೋಸಿಸ್ ಸ್ಥಾಪಿಸಿದರು. 1981 ರಿಂದ 2002ರ ತನಕ ಸಂಸ್ಥೆಯ ಸಿಇಒ ಆಗಿ 21 ವರ್ಷಗಳ ಕಾಲ ದುಡಿದರು. ಸಂಸ್ಥೆದಿಂದ ಕೆಲ ಕಾಲ ದೂರಾಗಿದ್ದ ಮೂರ್ತಿ ಅವರು 2013ರಲ್ಲಿ ಪುನಃ ಸಂಸ್ಥೆಯ ನೆರವಿಗೆ ಬಂದರು. ಹೊಸ ಸಿಇಒ ಆಗಿ ವಿಶಾಲ್ ಸಿಕ್ಕಾ ನೇಮಕಕ್ಕೆ ಕಾರಣರಾದರು
ಸದ್ಯ 30 ಪುಟಗಳ ಸ್ಕ್ರಿಪ್ಟ್ ಸಿದ್ಧವಾಗಿದೆ. ಮಣಿರತ್ನಂ ಅವರು 2007ರಲ್ಲಿ ರಿಲಯನ್ಸ್ ಸ್ಥಾಪಕ ಧಿರೂಭಾಯಿ ಅಂಬಾನಿ ಕಥೆಯನ್ನು ಬೆಳ್ಳಿ ತೆರೆಗೆ ತಂದಿದ್ದರು. ಅದಾದ ಬಳಿಕ ಉದ್ಯಮಿಗಳ ಕುರಿತ ಕಥೆ ಅಷ್ಟಾಗಿ ಸಿನಿಮಾರಂಗಕ್ಕೆ ಬಂದಿಲ್ಲ. ದೂರದರ್ಶನದಲ್ಲಿ ಟರ್ನಿಂಗ್ ಪಾಯಿಂಟ್ ಕಾರ್ಯಕ್ರಮ ನಿರ್ಮಿಸಿದ್ದ ತ್ರಿಪಾಠಿ ಅವರು, ಮೂರ್ತಿ ಕಾಲದ ಇನ್ಫೋಸಿಸ್, ಸಿಕ್ಕಾ ಕಾಲದ ಇನ್ಫೋಸಿಸ್, ಸರ್ಕಾರ ಹಾಗೂ ಕಾರ್ಪೊರೇಟ್ ಗಳ ನಡುವಿನ ತಿಕ್ಕಾಟ, ನಂದನ್ ನಿಲೇಕಣಿ ಮತ್ತೆ ಸಂಸ್ಥೆಗೆ ಮರಳಿದ್ದನ್ನು ವಿವರಿಸಿ ತೋರಿಸಲು ಮುಂದಾಗಿದ್ದಾರೆ.