ಐಐಎಸ್ಸಿ ವಿಜ್ಞಾನಿಗಳು ಸೇರಿದಂತೆ 6 ಮಂದಿಗೆ ಇನ್ಫೋಸಿಸ್ ಪ್ರಶಸ್ತಿ
ಬೆಂಗಳೂರು, ಜನವರಿ 6: ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನ (ಐಎಸ್ಎಫ್) ಇಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಇನ್ಫೋಸಿಸ್ ಪ್ರೈಜ್ 2018ರ ವಿಜೇತರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿತು. ಇದರ ಜೊತೆಗೆ, ತನ್ನ 10ನೇ ವರ್ಷದ ಮೈಲುಗಲ್ಲನ್ನು ಕೂಡ ಸಂಭ್ರಮದಿಂದ ಆಚರಿಸಿತು.
ಇನ್ಫೋಸಿಸ್ ಪ್ರೈಜ್ ಎನ್ನುವುದು ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್, ಮಾನವಿಕ, ಜೀವ ವಿಜ್ಞಾನ, ಗಣಿತ ವಿಜ್ಞಾನ, ಶಾರೀರಿಕ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಹೀಗೆ ಆರು ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದಂಥ ವ್ಯಕ್ತಿಗಳಿಗೆ ನೀಡುವ ಪ್ರಶಸ್ತಿಯಾಗಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಯಾದ ಫೀಲ್ಡ್ ಮೆಡಲಿಸ್ಟ್ ಪ್ರೊಫೆಸರ್ ಮತ್ತು ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ಗಣಿತಶಾಸ್ತ್ರದ ಆರ್. ಬ್ರಾಂಡನ್ ಫ್ರಾಡ್ ಪ್ರೊಫೆಸರ್ ಮಂಜುಳ್ ಭಾರ್ಗವ ಅವರು ವಿಜೇತರಿಗೆ ಶುದ್ಧ ಚಿನ್ನದ ಪದಕ, ಸ್ಮರಣಿಕೆ ಹಾಗೂ 1,00,000 ಯುಎಸ್ ಡಾಲರ್ ನಗದು ಬಹುಮಾನವನ್ನು ನೀಡಿ ಗೌರವಿಸಿದರು.
ಭಾರತದ ಮತ್ತು ವಿದೇಶಗಳ ಖ್ಯಾತ ವಿಜ್ಞಾನಿಗಳು, ಶೈಕ್ಷಣಿಕ ತಜ್ಞರು, ಉದ್ದಿಮೆ ಪ್ರಮುಖರು, ಯುವ ಸಂಶೋಧಕರು ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇನ್ಫೋಸಿಸ್ ಸೈನ್ಸ್ ಫೌಂಡೇಷನ್ನ ಟ್ರಸ್ಟಿಗಳ ಮಂಡಳಿಯ ಅಧ್ಯಕ್ಷರಾದ ಕೆ. ದಿನೇಶ್, ಟ್ರಸ್ಟಿಗಳಾದ ಎನ್.ಆರ್.ನಾರಾಯಣಮೂರ್ತಿ,ನಂದನ್ ನಿಲೇಕಣಿ, .ಟಿ.ವಿ. ಮೋಹನ್ ದಾಸ್ ಪೈ, ಎಸ್. ಗೋಪಾಲಕೃಷ್ಣನ್, ಎಸ್.ಡಿ. ಶಿಬುಲಾಲ್ ಮತ್ತು ಶ್ರೀನಾಥ್ ಬಾಟ್ನಿ ಮತ್ತಿತರರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್
ನವಕಾಂತ ಭಟ್, ಪ್ರೊಫೆಸರ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು ಮತ್ತು ಐಐಎಸ್ಸಿ ಸೆಂಟರ್ ಫಾರ್ ನ್ಯಾನೋ ಸೈನ್ಸ್ ಆಂಡ್ ಎಂಜಿನಿಯರಿಂಗ್ ಮುಖ್ಯಸ್ಥರು. ಇವರು ಜೈವಿಕ ರಸಾಯನಶಾಸ್ತ್ರದಲ್ಲಿ ತಾವು ಕೈಗೊಂಡಿರುವ ಸಂಶೋಧನೆಯ ಆಧಾರದಲ್ಲಿ ಹೊಸ ಬಗೆಯ ಬಯೋಸೆನ್ಸರ್ ಗಳನ್ನು ವಿನ್ಯಾಸಗೊಳಿಸಿದ್ದಾರೆ. ಮಾತ್ರವಲ್ಲ, ಪ್ರಸ್ತುತ ಇರುವಂಥ ಮೆಟಲ್-ಆಕ್ಸೈಡ್ ಸೆನ್ಸರ್ಗಳ ಕಾರ್ಯಕ್ಷಮತೆಯ ಮಿತಿಯನ್ನು ವೃದ್ಧಿಸುವಂಥ ಗ್ಯಾಸಿಯಸ್(ಅನಿಲ ರೂಪದ) ಸೆನ್ಸರ್ ಗಳನ್ನು ವಿನ್ಯಾಸಗೊಳಿಸುವ ಮೂಲಕ ಅದ್ಭುತ ಕೊಡುಗೆ ನೀಡಿದ್ದಾರೆ. ಪ್ರೊ ಆರ್.ಭಟ್ ಅವರು ಬಾಹ್ಯಾಕಾಶ ಮತ್ತು ಪರಿಸರೀಯ ಕಣ್ಗಾವಲಿಗೆ ಅಗತ್ಯವಿರುವಂಥ ಅತ್ಯಂತ ನಿಖರ ಮಾಹಿತಿ ಒದಗಿಸುವ ಅನಿಲ ಸೆನ್ಸರ್ ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಬಾಹ್ಯಾಕಾಶ, ಪರಮಾಣು ಶಕ್ತಿ ಮತ್ತು ಭದ್ರತಾ ಕ್ಷೇತ್ರಗಳಲ್ಲಿ ಭಾರತದ ಸಾಧನೆಗೆ ಮತ್ತಷ್ಟು ಕೊಡುಗೆ ನೀಡಲಿದೆ.
ಮಾನವಿಕ
ಕವಿತಾ ಸಿಂಗ್, ಪ್ರೊಫೆಸರ್ ಮತ್ತು ಡೀನ್, ಸ್ಕೂಲ್ ಆಫ್ ಆರ್ಟ್ಸ್ ಆಂಡ್ ಏಸ್ತೆಟಿಕ್ಸ್, ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ, ನವದಹೆಲಿ. ಮೊಘಲ್, ರಜಪೂತ ಹಾಗೂ ಡೆಕ್ಕನ್ ಕಲೆಗಳ ಕುರಿತು ನಡೆಸಿರುವಂಥ ಅದ್ಭುತವಾದ ಅಧ್ಯಯನಕ್ಕಾಗಿ ಹಾಗೂ ಪ್ರಸ್ತುತ ಸಂಘರ್ಷಪೀಡಿತ ಸಮಾಜದಲ್ಲಿ ವಿಶ್ಯುವಲ್ ಆರ್ಟ್ ಅಸ್ತಿತ್ವದಲ್ಲಿರುವಂತೆಯೇ, ಮ್ಯೂಸಿಯಂಗಳ ಐತಿಹಾಸಿಕ ಕಾರ್ಯಕ್ಷಮತೆ ಹಾಗೂ ಅವುಗಳ ಪಾತ್ರ ಮತ್ತು ಪ್ರಾಮುಖ್ಯತೆ ಕುರಿತು ಅಂತರ್ದೃಷ್ಟಿಯ ಬರವಣಿಗೆಗಾಗಿ ಇವರಿಗೆ ಪ್ರಶಸ್ತಿ ಸಂದಿದೆ. ಕಲೆಗಳ ಮೇಲೆ ಸಾಮಾಜಿಕ ಪ್ರಭಾವವನ್ನು ಬಿಂಬಿಸುತ್ತಲೇ ಮ್ಯೂಸಿಯಂಗಳ ಮಹತ್ವವನ್ನು ಪ್ರೊಫೆಸರ್. ಸಿಂಗ್ ತೋರಿಸಿಕೊಟ್ಟಿದ್ದಾರೆ. ಅಲ್ಲದೆ, ಜಾತ್ಯತೀತತೆ, ಆಧುನಿಕತೆ ಮತ್ತು ರಾಜಕೀಯ ಸಂಘರ್ಷಗಳಂಥ ಸಮಕಾಲೀನ ಪ್ರಶ್ನೆಗಳೊಂದಿಗೆ ವಿಶುವಲ್ ಸಂಸ್ಕೃತಿಯನ್ನು ಮೆಲುಕು ಹಾಕಿದ್ದಾರೆ.
ಜೀವ ವಿಜ್ಞಾನ
ರೂಪ್ ಮಲಿಕ್, ಪ್ರೊಫೆಸರ್, ಬಯಾಲಾಜಿಕಲ್ ಸೈನ್ಸಸ್ ವಿಭಾಗ, ಟಾಟಾ ಇನ್ ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್, ಮುಂಬೈ. ಮಾಲಿಕ್ಯೂಲರ್ ಮೋಟರ್ ಪ್ರೋಟೀನ್ ಗಳ ಕುರಿತಾದ ಅಧ್ಯಯನಕ್ಕಾಗಿ ಇವರಿಗೆ ಈ ಪ್ರಶಸ್ತಿ ಸಂದಿದೆ. ಮಾಲಿಕ್ಯೂಲರ್ ಮೋಟಾರ್ ಪ್ರೊಟೀನ್ ಗಳು ಸಜೀವ ಕೋಶಗಳ ಕಾರ್ಯನಿರ್ವಹಣೆಗೆ ಅತ್ಯಂತ ಮುಖ್ಯವಾಗಿ ಬೇಕಾಗಿರುವಂಥದ್ದು. ಕೋಶಗಳ ಒಳಗೆ ಬೃಹತ್ ಕಣಗಳನ್ನು ಹೊತ್ತೊಯ್ಯಲು ಅಗತ್ಯವಾದ ಬಲವನ್ನು ಗುರುತಿಸುವಲ್ಲಿ ಮಲಿಕ್ ಯಶಸ್ವಿಯಾಗಿದ್ದಾರೆ. ಅಲ್ಲದೆ, ಪ್ಯಾಥೋಜೆನ್ ಗಳನ್ನು ಟಾರ್ಗೆಟ್ ಮಾಡುವ ಮೂಲಕ ಅವುಗಳನ್ನು ನಾಶಮಾಡುವ, ಯಕೃತ್ತಿನಲ್ಲಿ ನೆಣಾಮ್ಲ(ಫ್ಯಾಟಿ ಆಸಿಡ್)ದ ನಿಯಂತ್ರಣಕ್ಕೆ ಮೇದಸ್ಸಿನ ಹನಿಗಳನ್ನು ಸಂಚರಿಸುವಂತೆ ಮಾಡುವಂಥ ಮೂಲಭೂತ ಪ್ರಕ್ರಿಯೆಗಳಲ್ಲಿ ಅವುಗಳ ಪಾತ್ರವನ್ನು ತಿಳಿಸಿಕೊಟ್ಟಿದ್ದಾರೆ. ಇಷ್ಟು ಮಾತ್ರವಲ್ಲದೆ, ಪ್ರೊ. ಮಲಿಕ್ ಅವರ ಸಂಶೋಧನೆಯು ಅತಿಕಾಯ ಮತ್ತು ಮಧುಮೇಹದಂಥ ಸ್ಥಿತಿಗಳಿಗೆ ನೀಡಲಾಗುವ ಚಿಕಿತ್ಸಾ ವಿಧಾನಗಳಲ್ಲೂ ಸುಧಾರಣೆಗೆ ನೆರವಾಗಲಿದೆ.
ಗಣಿತ ವಿಜ್ಞಾನ
ನಳಿನಿ ಅನಂತರಾಮನ್, ಪ್ರೊಫೆಸರ್ ಮತ್ತು ಫ್ರಾನ್ಸ್ನ ಸ್ಟ್ರಾಸ್ ಬರ್ಗ್ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡಿಯ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ. ಕ್ವಾಂಟಮ್ ಚಾವೋಸ್ ವಿಚಾರದಲ್ಲಿ ಅವರು ನಡೆಸಿದ ಅಧ್ಯಯನಕ್ಕಾಗಿ ಈ ಪ್ರಶಸ್ತಿ ಸಂದಿದೆ. ಚಾವೋಟಿಕ್ ಡೈನಾಮಿಕ್ ವ್ಯವಸ್ಥೆಯ ಕ್ವಾಂಟಮ್ ಅನಲಾಗ್ನಲ್ಲಿ ಏಜನ್ ಸ್ಟೇಟ್ಸ್ನ ಸೆಮಿ ಕ್ಲಾಸಿಕಲ್ ಮಿತಿಯ ಅಧ್ಯಯನದ ವೇಳೆ ಎಂಟ್ರೋಪಿಯನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ. ಅಲ್ಲದೆ, ಏಜನ್ ಕಾರ್ಯಕ್ಷಮತೆಯ ಡಿಲೋಕಲೈಸೇಷನ್ಗೆ ಸಂಬಂಧಿಸಿದ ಕೆಲಸದಲ್ಲೂ ಅವರು ಉತ್ತಮ ಸಾಧನೆ ಮಾಡಿದ್ದಾರೆ. ಪ್ರೊ. ಅನಂತರಾಮನ್ ಅವರ ಕೆಲಸವು, ಕ್ಲಾಸಿಕಲ್ ಮತ್ತು ಕ್ವಾಂಟಮ್ ವ್ಯವಸ್ಥೆಯ ನಡುವಿನ ಆಳವಾದ ಸಂಬಂಧವನ್ನು ಬಹಿರಂಗಪಡಿಸುತ್ತದೆ ಮಾತ್ರವಲ್ಲ, ಎಂಟ್ರೋಪಿಯ ಅನಿರೀಕ್ಷಿತ ಬಳಕೆಯು ಕೆಲವೊಂದು ಪರಿಣಾಮಕಾರಿ ಫಲಿತಾಂಶವನ್ನೂ ನೀಡಿದೆ.
ಶಾರೀರಿಕ ವಿಜ್ಞಾನ
ಎಸ್. ಕೆ. ಸತೀಶ್, ಪ್ರೊಫೆಸರ್, ಸೆಂಟರ್ ಫಾರ್ ಅಟ್ಮಾಸ್ಫೆರಿಕ್ ಆಂಡ್ ಓಷಿಯನಿಕ್ ಸೈನ್ಸಸ್, ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ದೇವೇಚಾ ಸೆಂಟರ್ ಫಾರ್ ಕ್ಲೈಮೇಟ್ ಚೇಂಜ್ ನ ನಿರ್ದೇಶಕರು. ಹವಾಮಾನ ವೈಪರೀತ್ಯ ಕ್ಷೇತ್ರದಲ್ಲಿ ನಡೆಸಿದ ವೈಜ್ಞಾನಿಕ ಅಧ್ಯಯನಕ್ಕಾಗಿ ಅವರನ್ನು ಗೌರವಿಸಲಾಗುತ್ತಿದೆ. ಇವರು ಬ್ಲ್ಯಾಕ್ ಕಾರ್ಬನ್ ಏರೋಸೋಲ್ಸ್ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಬ್ಲ್ಯಾಕ್ ಕಾರ್ಬನ್ ಏರೋಸೋಲ್ಸ್ ಎಂದರೆ, ಗಾಳಿಯಲ್ಲಿರುವ ಕಡುವಾದ, ಬೆಳಕನ್ನು ಹೀರಿಕೊಳ್ಳುವಂಥ, ಅತಿ ಸೂಕ್ಷ್ಮಾಣು ಸೂಕ್ಷ್ಮ ಕಣಗಳು. ಇವುಗಳು ಭಾರತೀಯ ಉಪಖಂಡದಲ್ಲಿ ವಾತಾವರಣದ ಶಕ್ತಿಯ ಸಮತೋಲನದ ಮೇಲೆ ಪ್ರಭಾವ ಬೀರುವಂಥದ್ದು. ಇದರ ಕುರಿತಾದ ಅಧ್ಯಯನ ಮೂಲಕ ಪ್ರೊ. ಸತೀಶ್ ಅವರು ನಮಗೆ, ಭಾರತ ಉಪಖಂಡದಲ್ಲಿ ಹವಾಮಾನ ಬದಲಾವಣೆ, ಮಳೆ ಮತ್ತು ಮಾನವನ ಆರೋಗ್ಯದಲ್ಲಿ ಈ ಕಣಗಳ ಪಾತ್ರವನ್ನು ತಿಳಿಸಿಕೊಟ್ಟಿದ್ದಾರೆ. ಈ ಬ್ಲ್ಯಾಕ್ ಕಾರ್ಬನ್ ಏರೋಸೋಲ್ಸ್ ನ ಪರಿಣಾಮವನ್ನು ಅಳೆಯುವ, ಪ್ರಮಾಣೀಕರಿಸುವ ಮತ್ತು ವಿಶ್ಲೇಷಿಸಿರುವುದು ಹವಾಮಾನ ವೈಪರೀತ್ಯಕ್ಕೆ ಮಾತ್ರವಲ್ಲ, ನಮ್ಮ ಸಮಾಜಕ್ಕೂ ಮಹತ್ವದ ಕೊಡುಗೆಯನ್ನು ನೀಡಿದೆ. ಏಕೆಂದರೆ, ಮಾನವರ ಮುಂದಿರುವ ಅತಿ ದೊಡ್ಡ ಅಪಾಯವಾದ ಹವಾಮಾನ ವೈಪರೀತ್ಯವನ್ನು ಸಮಾಜವು ಸಮರ್ಥವಾಗಿ ಎದುರಿಸಲೂ ಇದರ ಅಗತ್ಯವಿದೆ.
ಸಮಾಜ ವಿಜ್ಞಾನ
ಸೆಂಧಿಲ್ ಮುಳ್ಳೈನಾಥನ್, ಯುನಿವರ್ಸಿಟಿ ಪ್ರೊಫೆಸರ್, ಪ್ರೊಫೆಸರ್ ಆಫ್ ಕಂಪ್ಯುಟೇಷನ್ ಆಂಡ್ ಬಿಹೇವಿರಲ್ ಸೈನ್ಸ್ ಮತ್ತು ಜಾರ್ಜ್ ಸಿ. ಟಿಯಾವೋ ಬೋಧಕ ಸಿಬ್ಬಂದಿ, ಯುನಿವರ್ಸಿಟಿ ಆಫ್ ಷಿಕಾಗೋ ಬೂತ್ ಸ್ಕೂಲ್ ಆಫ್ ಬ್ಯುಸಿನೆಸ್. ನಡವಳಿಕೆಗೆ ಸಂಬಂಧಿಸಿದ ಅರ್ಥಶಾಸ್ತ್ರ ಕುರಿತು ಇವರ ಐತಿಹಾಸಿಕ ಸಾಧನೆಗಾಗಿ ಈ ಪ್ರಶಸ್ತಿ ಸಂದಿದೆ. ಮುಳ್ಳೆನಾಥನ್ ಅವರ ಸಂಶೋಧನೆಯು ಅಭಿವೃದ್ಧಿ, ಸಾರ್ವಜನಿಕ ಹಣಕಾಸು, ಕಾರ್ಪರೇಟ್ ಆಡಳಿತ ಮತ್ತು ನೀತಿನಿರೂಪಣೆ ಮುಂತಾದ ವಿವಿಧ ಕ್ಷೇತ್ರಗಳ ಮೇಲೆ ಪ್ರಭಾವ ಬೀರಿದೆ. ಇವರ ಅಧ್ಯಯನದ ಮಹತ್ವದ ಭಾಗವು ಭಾರತಕ್ಕೆ ಅನ್ವಯವಾಗುವಂಥದ್ದು. ಪ್ರಸ್ತುತ ಇವರು ಅರ್ಥಶಾಸ್ತ್ರದಲ್ಲಿ ಅತಿದೊಡ್ಡ ಡೇಟಾ ಮತ್ತು ಯಂತ್ರ ಕಲಿಕಾ ವಿಚಾರಗಳು ಹಾಗೂ ಅಪ್ಲಿಕೇಷನ್ ಗಳ ಬಗ್ಗೆ ಅಧ್ಯಯನದಲ್ಲಿ ತೊಡಗಿದ್ದಾರೆ.