ರಾಜ್ಯದ ಐಟಿ ಪ್ರಗತಿ ಶೇ. 24ರ ದರದಲ್ಲಿ ಬೆಳವಣಿಗೆ : ಸಿದ್ದರಾಮಯ್ಯ
ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ ವಲಯದ ಆದಾಯವು 50 ಬಿಲಿಯನ್ ಯು.ಎಸ್. ಡಾಲರ್ ಗಳಿಷ್ಟಿದ್ದು ಶೇ. 24ರ ದರದಲ್ಲಿ ಬೆಳವಣಿಗೆ ಹೊಂದುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಬೆಂಗಳೂರು, ಜನವರಿ 18: ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ ವಲಯದ ಆದಾಯವು 50 ಬಿಲಿಯನ್ ಯು.ಎಸ್. ಡಾಲರ್ ಗಳಿಷ್ಟಿದ್ದು ಶೇ. 24ರ ದರದಲ್ಲಿ ಬೆಳವಣಿಗೆ ಹೊಂದುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ನಗರದ ವೈಟ್ ಫೀಲ್ಡ್ ನಲ್ಲಿ ನೆಟ್ಆಪ್ ಕಂಪನಿಯ ಬೆಂಗಳೂರು ಕ್ಯಾಂಪಸ್ನ್ನು ಉದ್ಘಾಟಿಸಿ ಮುಖ್ಯಮಂತ್ರಿಗಳು ಮಾತನಾಡಿದರು.
ಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿಯ ರಾಜಧಾನಿಯೆಂದೇ ಹೆಸರಾಗಿರುವ ಕರ್ನಾಟಕವು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ವಲಯದಲ್ಲಿ ಅತ್ಯಂತ ಮುಂಚೂಣಿಯಲ್ಲಿ ಇರುವ ರಾಜ್ಯವಾಗಿ ಹೊರ ಹೊಮ್ಮಿದೆ. ಬೆಂಗಳೂರು ಜಾಗತಿಕ ತಂತ್ರಜ್ಞಾನ ಟೆಕ್-ಹಬ್ ಹಾಗೂ ಭಾರತದ ಸ್ಟಾರ್ಟ್ಅಪ್ ರಾಜಧಾನಿಯಾಗಿದೆ ಎಂದು ಅವರು ವಿವರಿಸಿದರು.
ಬೆಂಗಳೂರು ನಗರದಲ್ಲಿ 400 ಕ್ಕೂ ಹೆಚ್ಚು ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳು, 3500 ಕಂಪನಿಗಳು ಮತ್ತು 750 ಬಹುರಾಷ್ಟ್ರೀಯ ಕಂಪನಿಗಳು 10 ಲಕ್ಷಕ್ಕೂ ಹೆಚ್ಚು ಜನರಿಗೆ ನೇರ ಉದ್ಯೋಗ ಒದಗಿಸಿದೆ.
ಕರ್ನಾಟಕದ ಕೈಗಾರಿಕಾ ಉತ್ಪಾದನೆ
ಕರ್ನಾಟಕದ ಕೈಗಾರಿಕಾ ಉತ್ಪಾದನೆಯು 61.5 ಬಿಲಿಯನ್ ಯು.ಎಸ್. ಡಾಲರ್ ಗಳಾಗಿದ್ದು ಕಳೆದ 5 ವರ್ಷಗಳಲ್ಲಿ 20 ಬಿಲಿಯನ್ ಯು.ಎಸ್. ಡಾಲರ್ ಗಳಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಯಾಗಿದೆ. ಇದರಲ್ಲಿ ಬಹುಪಾಲು ರಫ್ತು ತಂತ್ರಜ್ಞಾನ ವಲಯದಲ್ಲಿ ಆಗುತ್ತಿದೆ ಎಂದು ಮುಖ್ಯಮಂತ್ರಿ ಅವರು ವಿವರಿಸಿದರು.
ಹುಬ್ಬಳ್ಳಿಯಲ್ಲಿ ಆರ್ಯಭಟ ಪಾರ್ಕ್
ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಮುಂಚೂಣಿಯನ್ನು ಕಾಯ್ದುಕೊಳ್ಳಲು ಹಾಗೂ ಹೂಡಿಕೆಗೆ ಅತಿ ಹೆಚ್ಚಿನ ಅವಕಾಶ ಕಲ್ಪಿಸಲು ದೇವನಹಳ್ಳಿಯಲ್ಲಿ ಬೆಂಗಳೂರು ಮಾಹಿತಿ ತಂತ್ರಜ್ಞಾನ ಮತ್ತು ಹಾರ್ಡ್ವೇರ್ ಪಾರ್ಕ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಫ್ತು ಉತ್ತೇಜನ ಕೈಗಾರಿಕಾ ಪಾರ್ಕ್, ಮಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ವಿಶೇಷ ವಿತ್ತ ವಲಯ, ಹುಬ್ಬಳ್ಳಿಯಲ್ಲಿ ಆರ್ಯಭಟ ಪಾರ್ಕ್ ಸ್ಥಾಪಿಸಲು ಹಾಗೂ ಖಾಸಗಿ ಸಾರ್ವಜನಿಕ ಸಹಭಾಗಿತ್ವ ಮಾದರಿಯಲ್ಲಿ ಇನ್ ಕ್ಯುಬೇಟರ್ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಪರಿಸರ ಸ್ನೇಹಿ ಕ್ಯಾಂಪಸ್
ನೆಟ್ಆಪ್ ಸಂಸ್ಥೆಯು ನಿರ್ಮಿಸಿರುವ ಪರಿಸರ ಸ್ನೇಹಿ ಕ್ಯಾಂಪಸ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿ ಅವರು ನಮ್ಮ ಸರ್ಕಾರವು ತಂತ್ರಜ್ಞಾನ ಕಂಪನಿಗಳ ಸ್ಥಾಪನೆಗೆ ಪೂರಕವಾದ ವಾತಾವರಣ ಸೃಷ್ಟಿಸುವುದಷ್ಟೇ ಅಲ್ಲ ಅವುಗಳು ಹೆಚ್ಚಿನ ಅಭಿವೃದ್ಧಿ ಸಾಧಿಸಲು ಪೂರಕವಾಗಿ ಕಾರ್ಯನಿರ್ವಹಿಸಲು ಬದ್ಧವಾಗಿದೆ ಎಂದು ಹೇಳಿದರು.
ಬೈಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್ ವರೆಗೆ
ಕೈಗಾರಿಕಾ ವಲಯಕ್ಕೆ ಹೆಚ್ಚಿನ ಬೆಂಬಲ ನೀಡಲು ಸರ್ಕಾರ ಬದ್ಧವಾಗಿದ್ದು ನಮ್ಮ ಮೆಟ್ರೋ ಸೇವೆಯನ್ನು ಬೈಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್ ವರೆಗೆ ವಿಸ್ತರಿಸುವ ನಮ್ಮ ಇತ್ತೀಚಿನ ಘೋಷಣೆಯು ಈ ಪ್ರದೇಶದ ಕೈಗಾರಿಕಾ ಸಂಸ್ಥೆಗಳ ಸಿಬ್ಬಂದಿಯ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಸಮಾರಂಭದಲ್ಲಿ ಸಚಿವರುಗಳಾದ ಕೆ ಜೆ ಜಾರ್ಜ್, ಆರ್ ವಿ ದೇಶಪಾಂಡೆ ಉಪಸ್ಥಿತರಿದ್ದರು.