ಆಹಾರ ವಸ್ತು, ತರಕಾರಿ-ಹಣ್ಣುಗಳು ದುಬಾರಿ, ನಿರೀಕ್ಷೆಗಿಂತ ಹೆಚ್ಚಾಗಿದೆ ಹಣದುಬ್ಬರ
ನವದೆಹಲಿ, ಡಿಸೆಂಬರ್ 13: ಚಿಲ್ಲರೆ ಹಣದುಬ್ಬರದಲ್ಲಿ ಏರಿಕೆ ಆಗಿದ್ದು, ನವೆಂಬರ್ ತಿಂಗಳಲ್ಲಿ 4.88 ಪರ್ಸೆಂಟ್ ದಾಖಲಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಈ ಪ್ರಮಾಣ 3.63 ಪರ್ಸೆಂಟ್ ಇತ್ತು. ಕೇಂದ್ರ ಸರಕಾರವೇ ಮಂಗಳವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಹಣದುಬ್ಬರ ಪ್ರಮಾಣ 15 ತಿಂಗಳಲ್ಲೇ ಗರಿಷ್ಠ ಪ್ರಮಾಣಕ್ಕೆ ಏರಿದೆ.
ಕಳೆದ ವರ್ಷದ ಆಗಸ್ಟ್ ನಲ್ಲಿ ದಾಖಲೆ ಪ್ರಮಾಣಕ್ಕೆ (5.05) ಏರಿಕೆಯಾಗಿದ್ದು ಹೊರತುಪಡಿಸಿದರೆ, ಈ ಬಾರಿಯ ನವೆಂಬರ್ ನಲ್ಲಿ 4.88 ಪರ್ಸೆಂಟ್ ದಾಖಲೆಯಾಗಿದೆ. ಆ ಮೂಲಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಹಣದುಬ್ಬರ ನಿಯಂತ್ರಣಕ್ಕಾಗಿ ಮಧ್ಯಮಾವಧಿಗೆ ಹಾಕಿಕೊಂಡಿದ್ದ 4 ಪರ್ಸೆಂಟ್ ಗುರಿಯನ್ನು ಇದು ಮೀರಿಸಿದೆ.
ಜಿಎಸ್ ಟಿ ಜಾರಿ, ಬೇಡಿಕೆ ಕುಸಿತ; ಉತ್ಪಾದನಾ ವಲಯಕ್ಕೆ ಪೆಟ್ಟು
ಆಹಾರ ವಸ್ತುಗಳ ಬೆಲೆಯಲ್ಲಿ ಏರಿಕೆ ಆಗಿರುವುದರಿಂದ ಆಹಾರದುಬ್ಬರದ ಪ್ರಮಾಣ 4.42 ಪರ್ಸೆಂಟ್ ತಲುಪಿದೆ. ಕಳೆದ ಅಕ್ಟೋಬರ್ ನಲ್ಲಿ ಈ ಪ್ರಮಾಣ 1.90 ಪರ್ಸೆಂಟ್ ಇತ್ತು. ಇನ್ನು ಮೊಟ್ಟೆ ದರದಲ್ಲಿ ಭಾರೀ ಏರಿಕೆ ಆಗಿದ್ದು, ನವೆಂಬರ್ ತಿಂಗಳಲ್ಲೇ 7.95 ಪರ್ಸೆಂಟ್ ಜಿಗಿದಿದೆ.
ನವೆಂಬರ್ ನಲ್ಲಿ ತರಕಾರಿ ದರಗಳಲ್ಲಿ 22.48 ಪರ್ಸೆಂಟ್ ಆಗಿದ್ದು, ಅಕ್ಟೋಬರ್ ನಲ್ಲಿ ಈ ಪ್ರಮಾಣ 7.47 ಪರ್ಸೆಂಟ್ ಇತ್ತು. ಮುಂದಿನ ಎರಡು ತ್ರೈ ಮಾಸಿಕ ಅವಧಿಯಲ್ಲಿ ಹಣದುಬ್ಬರ ಪ್ರಮಾಣ 4.2ರಿಂದ 4.6 ಪರ್ಸೆಂಟ್ ನಿಂದ 4.3- 4.7 ಪರ್ಸೆಂಟ್ ಇರಲಿದೆ ಎಂದು ರಿಸರ್ವ್ ಬ್ಯಾಂಕ್ ಇಂಡಿಯಾ ಕೂಡ ಅಂದಾಜು ಮಾಡಿದೆ.
ತರಕಾರಿ ಬೆಲೆಗಳಲ್ಲಿನ ಏರಿಕೆ ಅಂದಾಜು ಮಾಡಿದ್ದಕ್ಕಿಂತ ಹೆಚ್ಚು ಕಾಲ ಮುಂದುವರಿಯಿತು ಎಂಬುದು ತಜ್ಞರ ಅಭಿಮತ. ಅದಕ್ಕೆ ಅವರು ಕೊಡುವ ಕಾರಣ ಏನೆಂದರೆ ನವೆಂಬರ್ ನಲ್ಲಿ ಆದ ಮಳೆ. ಇದರಿಂದ ತರಕಾರಿ ಹಾಗೂ ಹಣ್ಣಿನ ಬೆಳೆ ಹಾಳಾಯಿತು. ಪೂರೈಕೆ ಕಡಿಮೆ ಆಗಿ, ಬೇಡಿಕೆ ಹೆಚ್ಚಾದರಿಂದ ಈರುಳ್ಳಿ, ಟೊಮೆಟೊದಂಥ ಬೇಗ ಕೊಳೆಯುವ ತರಕಾರಿ ಹಾಗೂ ಹಣ್ಣುಗಳ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಇದರ ಜತೆಗೆ ಕೇಂದ್ರ ಸರಕಾರಿ ನೌಕರರಿಗೆ ಹೆಚ್ಚಿಸಿದ ಗೃಹ ಭತ್ಯೆ, ಕಚ್ಚಾ ತೈಲ ಬೆಲೆಯಲ್ಲಿನ ಹೆಚ್ಚಳ, ಜಿಎಸ್ ಟಿ ಜಾರಿ ಮಾಡಿದ್ದರಿಂದ ಹೆಚ್ಚಾಗಿರುವ ಕಚ್ಚಾ ವಸ್ತುಗಳ ಬೆಲೆಯೂ ಸೇರಿ ಹಣದುಬ್ಬರ ಏರಿಕೆಗೆ ಕಾರಣವಾಗಿವೆ ಎಂದು ಕೂಡ ಸೇರಿಸಿದ್ದಾರೆ.