ಭಾರತದಲ್ಲಿ ಮಾಧ್ಯಮ-ಮನರಂಜನೆ ಉದ್ಯಮಕ್ಕೆ ವರ್ಷಕ್ಕೆ 7.5 ಲಕ್ಷಕೋಟಿ ಆದಾಯ: ಠಾಕೂರ್
ನವದೆಹಲಿ, ಜೂನ್ 26: ಭಾರತದ ಮಾಧ್ಯಮ ಮತ್ತು ಮನರಂಜನಾ ಉದ್ಯಮ ಒಳ್ಳೆಯ ಆದಾಯ ಹೊಂದುವ ಕ್ಷೇತ್ರವಾಗಿದೆ. 2025ರಷ್ಟರಲ್ಲಿ ಈ ಉದ್ಯಮಕ್ಕೆ ವರ್ಷಕ್ಕೆ 4 ಲಕ್ಷ ಕೋಟಿ ರೂ ಆದಾಯ ಸೃಷ್ಟಿಯಾಗುವ ನಿರೀಕ್ಷೆ ಇದೆ. 2030ರಷ್ಟರಲ್ಲಿ ಆದಾಯ 7.5 ಲಕ್ಷ ಕೋಟಿಗೆ ಏರಿಕೆಯಾಗಲಿದೆ ಎಂದು ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಭವಿಷ್ಯ ನುಡಿದಿದ್ದಾರೆ.
ಭಾರತದಲ್ಲಿ ಡಿಜಿಟಲ್ ಸೌಕರ್ಯ ಗಣನೀಯವಾಗಿ ಬೆಳೆಯುತ್ತಿದೆ. ಎವಿಜಿಸಿ ಕ್ಷೇತ್ರದಲ್ಲೂ ಪ್ರಗತಿಯಾಗುತ್ತಿದೆ. ಇದರಿಂದ ಜಾಗತಿಕ ಮಾಧ್ಯಮ ಮತ್ತು ಮನರಂಜನಾ ಉದ್ಯಮದ ಪೋಸ್ಟ್-ಪ್ರೊಡಕ್ಷನ್ ಕಾರ್ಯಗಳಿಗೆ ಭಾರತವೇ ಕೇಂದ್ರವಾಗಲಿದೆ ಎಂದು ಠಾಕೂರ್ ಹೇಳಿದ್ಧಾರೆ. ಇಲ್ಲಿ ಎವಿಜಿಸಿ ಎಂದರೆ ಅನಿಮೇಶನ್, ಗೇಮಿಂಗ್, ವಿಷುವಲ್ ಎಫೆಕ್ಟ್ ಮತ್ತು ಕಾಮಿಕ್ಸ್.
ಶೀಘ್ರವೇ ಭಾರತ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ: ಪಿಯೂಷ್ ಗೋಯಲ್
ಪುಣೆಯ ಸಿಂಬಯೋಸಿಸ್ ಸ್ಕಿಲ್ ಅಂಡ್ ಪ್ರೊಫೆಷನಲ್ ಯೂನಿವರ್ಸಿಟಿ ಆಯೋಜಿಸಿದ ರಾಷ್ಟ್ರೀಯ ವಿಚಾರ ಸಂಕಿರಣವೊಂದರಲ್ಲಿ ಅನುರಾಗ್ ಠಾಕೂರ್ ಮುಖ್ಯ ಭಾಷಣ ಮಾಡುತ್ತಾ ಮಾಧ್ಯಮ ಕ್ಷೇತ್ರದಲ್ಲಿ ಭಾರತ ಸಾಧಿಸುತ್ತಿರುವ ಬೆಳವಣಿಗೆ ಬಗ್ಗೆ ವಿವರ ನೀಡಿದ್ದಾರೆ.
ಭಾರತದಲ್ಲಿ ಡಿಜಿಟಲ್ ಇಂಡಿಯಾ ಯೋಜನೆಯಿಂದಾಗಿ ಕಂಟೆಂಟ್ ಕ್ರಿಯೇಶನ್ ಉದ್ಯಮ ಗಮನಾರ್ಹ ರೀತಿಯಲ್ಲಿ ಪುಷ್ಟಿ ಪಡೆದಿದೆ ಎಂದ ಅವರು, ಮಾಧ್ಯಮ ಮತ್ತು ಮನರಂಜನೆ ವಲಯದಲ್ಲಿ ಭವಿಷ್ಯದ ತಂತ್ರಜ್ಞಾನಕ್ಕೆ ವಿದ್ಯಾರ್ಥಿಗಳು ಹೊಂದಿಕೊಳ್ಳಲು ಅನುವಾಗುವ ರೀತಿಯಲ್ಲಿ ಖಾಸಗಿ ವಲಯದೊಂದಿಗೆ ಸರಕಾರ ಸಹಭಾಗಿತ್ವ ಮಾಡಿಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಜೊಮಾಟೊದಿಂದ 4,447 ಕೋಟಿಗೆ ಬ್ಲಿಂಕಿಟ್ ಖರೀದಿ; ಏನಿದರ ಮಹತ್ವ?
ವರ್ಷಕ್ಕೆ 7.5 ಲಕ್ಷ ಕೋಟಿ ರೂ ಆದಾಯ ಸಾಧ್ಯತೆ
"ಮಾಧ್ಯಮ ಮತ್ತು ಮನರಂಜನಾ ಉದ್ಯಮ ಭಾರೀ ಬೆಳವಣಿಗೆ ಸಾಧಿಸುವ ಅವಕಾಶ ಇರುವ ಕ್ಷೇತ್ರವಾಗಿದೆ. ೨೦೨೫ರಷ್ಟರಲ್ಲಿ ಈ ಉದ್ಯಮ ವರ್ಷಕ್ಕೆ 4 ಲಕ್ಷ ಕೋಟಿ ರೂ ಆದಾಯ ಗಳಿಸಬಹುದು. ೨೦೩೦ರಷ್ಟರಲ್ಲಿ ವರ್ಷಕ್ಕೆ 7.5 ಲಕ್ಷಕೋಟಿ ರೂಗೆ ಆದಾಯ ಹೆಚ್ಚಬಹುದು. ಸರಕಾರ ಗುರುತಿಸಿರುವ 12 ಪ್ರಮುಖ ಸೇವಾ ಕ್ಷೇತ್ರಗಳಲ್ಲಿ ಆಡಿಯೋ ವಿಷುವಲ್ ಸೇವೆಯೂ ಒಂದು. ಈ ಕ್ಷೇತ್ರದಲ್ಲಿ ಸ್ಥಿರ ಪ್ರಗತಿ ಕಾಣಲು ಅನುವಾಗುವಂತೆ ಪ್ರಮುಖ ಕ್ರಮಗಳನ್ನು ಘೋಷಿಸಲಾಗದೆ" ಎಂದು ಮಾಹಿತಿ ಮತ್ತು ಪ್ರಸರಣ ಖಾತೆ ಸಚಿವರೂ ಆದ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದಾರೆ.
ಹಲವು ರೀತಿಯ ಉದ್ಯೋಗಗಳು
"ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ವಿಡಿಯೋ ಎಡಿಟಿಂಗ್, ಕಲರ್ ಗ್ರೇಡಿಂಗ್, ವಿಎಫ್ಎಕ್ಸ್, ಸೌಂಡ್ ಡಿಸೈನ್, ರೋಟೊಸ್ಕೋಪಿಂಗ್, ಥ್ರೀಡಿ ಮಾಡೆಲಿಂಗ್ ಇತ್ಯಾದಿ ಹಲವು ರೀತಿಯ ಉದ್ಯೋಗಗಳು ಸೃಷ್ಟಿಯಾಗಿವೆ. ಈ ಪ್ರತಿಯೊಂದು ಉದ್ಯೋಗಕ್ಕೂ ಅದರದ್ದೇ ನಿರ್ದಿಷ್ಟ ಕೌಶಲ್ಯ ಮತ್ತು ಸ್ಪರ್ಧಾತ್ಮಕತೆ ಅಗತ್ಯ ಇದೆ. ಇದರಿಂದ ಈ ಉದ್ಯಮ ಮತ್ತು ಶಿಕ್ಷಣ ಕ್ಷೇತ್ರ ಒಟ್ಟಿಗೆ ಕೂತು ಕೌಶಲ್ಯಾಭಿವೃದ್ಧಿಗೆ ಪೂರಕವಾದ ಪಠ್ಯಕ್ರಮಗಳನ್ನು ರೂಪಿಸುವುದು ಅನಿವಾರ್ಯ" ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.
ಬಾಲಿವುಡ್ ಟಾಲಿವುಡ್ ವಿಭಾಗ ಯಾಕೆ?
"ನನಗೆ ಬಾಲಿವುಡ್, ಟಾಲಿವುಡ್ ಎಂಬ ಪದ ಪ್ರಯೋಗ ಇಷ್ಟ ಆಗುವುದಿಲ್ಲ. ಇದು ಭಾರತೀಯ ಚಿತ್ರೋದ್ಯಮ ಆಗಭೇಕು. ಅದರಲ್ಲಿ ವೈವಿಧ್ಯತೆ ಕಾಣಬೇಕು" ಎಂದೂ ಠಾಕೂರ್ ಅಭಿಪ್ರಾಯಪಟ್ಟಿದ್ದಾರೆ.
ಕ್ಯಾನಸ್ ಚಲನಚಿತ್ರೋತ್ಸವದಲ್ಲಿ ಭಾರತಕ್ಕೆ ಗೌರವ ನೀಡಲಾಯಿತು. ಭಾರತದ ನಿಯೋಗಕ್ಕೆ ರೆಡ್ ಕಾರ್ಪೆಟ್ ಸ್ವಾಗತ ಸಿಕ್ಕಿತು. ಇವರು ಬಾಲಿವುಡ್ ಪ್ರತಿನಿಧಿಸಿದ್ದಲ್ಲ, ಭಾರತವನ್ನು ಪ್ರತಿನಿಧಿಸಿ ರೆಡ್ ಕಾರ್ಪೆಟ್ನಲ್ಲಿ ಸ್ವಾಗತ ಪಡೆದರು ಎಂದರು ತಿಳಿಸಿದ್ದಾರೆ.
ಮ್ಯಾಟ್ರಿಕ್ಸ್ ಸಿನಿಮಾಗೆ ಪುರಾಣ ಪ್ರೇರಣೆ
ಅನುರಾಗ್ ಠಾಕೂರ್ ಈ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹಾಲಿವುಡ್ನ ದಿ ಮ್ಯಾಟ್ರಿಕ್ಸ್ ಸಿನಿಮಾವನ್ನು ಉಲ್ಲೇಖಿಸಿದರು. ಭಾರತದ ಸಂಸ್ಕೃತಿಯನ್ನು ಆಧಾರವಾಗಿಟ್ಟುಕೊಂಡು ಹಾಲಿವುಡ್ನವರು ಉತ್ಕೃಷ್ಟ ಸಿನಿಮಾ ಮಾಡಿದ್ದಾರೆ. ಅಂಥದ್ದು ಭಾರತೀಯರು ಮಾಡಬೇಕು ಎಂಬುದು ಠಾಕೂರ್ ಅವರ ಕರೆ.
"ನೀವು ಮ್ಯಾಟ್ರಿಕ್ಸ್ನಂಥ ಸಿನಿಮಾ ನೋಡಿ. ಅದು ಭಾರತೀಯ ಪುರಾಣದ ವಿಚಾರವನ್ನು ತೆಗೆದುಕೊಂಡು ಮಾಡಲಾದ ಚಿತ್ರವಾಗಿದ್ದು ಬಹಳ ಜನಪ್ರಿಯತೆ ಪಡೆಯಿತು. ನಮ್ಮ ಸಂಸ್ಕೃತಿಯಿಂದ ನಾವು ಏನನ್ನೂ ತೆಗೆದುಕೊಂಡು ಈ ವಿಶ್ವದ ಮುಂದಿಟ್ಟಿಲ್ಲ. ನಮ್ಮ ಸಂಸ್ಕೃತಿಯಿಂದ ನಾವು ಏನನ್ನೂ ಕಲಿತಿಲ್ಲ" ಎಂದು ಅವರು ವಿಷಾಧಿಸಿದ್ದಾರೆ.
1999ರಲ್ಲಿ ಆರಂಭಗೊಂಡ ದಿ ಮ್ಯಾಟ್ರಿಕ್ಸ್ ಸರಣಿಯ ಸಿನಿಮಾಗಳಲ್ಲಿ ಭಾರತೀಯರ ಮಾಯ ರೀತಿಯ ತತ್ವ ಇದೆ. ಎಲ್ಲವೂ ನಶ್ವರ, ಎಲ್ಲವೂ ಮಾಯೆ ಎಂಬ ವಿಚಾರವೇ ಈ ಸಿನಿಮಾಗಳ ಹೃದಯವಾಗಿದೆ ಎಂದು ಹೇಳಲಾಗುತ್ತದೆ.
ಅನುರಾಗ್ ಠಾಕೂರ್ ನಮ್ಮ ವೇದಗಳ ಬಗ್ಗೆ ಮಾತನಾಡುತ್ತಾ, "ಶಬ್ದ ಎನ್ನುವುದು ಸ್ಮರಣೆ, ಸ್ಮರಣೆ ಎನ್ನವುದು ಜ್ಞಾನ. ಶಬ್ದಗಳ ಮೂಲಕ ಸುಲಭವಾಗಿ ಸ್ಮರಣೆಯಲ್ಲಿಟ್ಟುಕೊಳ್ಳಬಹುದಾದಂತೆ ವೇದಗಳನ್ನು ರಚಿಸಲಾಗಿದೆ. ಆದರೆ, ನಮ್ಮ ನಾಗರಿಕೆಯು ಶಬ್ದದ ಬಲವನ್ನು ಮರೆತಿದೆ. ನಮ್ಮ ಸಿನಿಮಾ ಮತ್ತು ಕಲೆಯಲ್ಲಿ ಈ ಶಬ್ದದ ಅಭಿವ್ಯಕ್ತತೆ ಕಾಣುವುದಿಲ್ಲ. ಇದು ಬದಲಾಗಬೇಕು" ಎಂದು ಸಲಹೆ ನೀಡಿದ್ಧಾರೆ.
(ಒನ್ಇಂಡಿಯಾ ಸುದ್ದಿ)