ಹೆಚ್ 1ಬಿ ವೀಸಾ ಬಳಕೆ ನಿಲ್ಲಲಿ: ನಾರಾಯಣ ಮೂರ್ತಿ ಸಲಹೆ
ಎಚ್ 1ಬಿ ವೀಸಾಗಳನ್ನು ಬಳಸಿಕೊಂಡು ಹೆಚ್ಚೆಚ್ಚು ಭಾರತೀಯರನ್ನು ವಿದೇಶಕ್ಕೆ ಕಳುಹಿಸುವ ಪರಿಪಾಠವನ್ನು ಬಿಟ್ಟರೆ ಮಾತ್ರ ಭಾರತೀಯ ಕಂಪನಿಗಳು ಬಹುರಾಷ್ಟ್ರೀಯ ಕಂಪನಿಗಳಾಗುವ ಕನಸು ನನಸಾಗುತ್ತದೆ ಎಂಬುದು ನಾರಾಯಣ ಮೂರ್ತಿ ಅನಿಸಿಕೆ.
ನವದೆಹಲಿ, ಫೆಬ್ರವರಿ 3: ಭಾರತೀಯ ಮೂಲದ ಐಟಿ ಕಂಪನಿಗಳು ವಿವಿಧ ದೇಶಗಳಲ್ಲಿನ ತಮ್ಮ ಕಚೇರಿಯಲ್ಲಿ ಸ್ಥಳೀಯ ಪ್ರತಿಭೆಗಳನ್ನು ಉಪಯೋಗಿಸಿಕೊಂಡು ಹೆಚ್ಚಿನ ಮಟ್ಟದ ಸಾಧನೆಗೆ ಮುಂದಾಗಬೇಕು ಹಾಗೂ ಎಚ್ 1ಬಿ ವೀಸಾ ಬಳಕೆಗೆ ಕಡಿವಾಣ ಹಾಕಬೇಕೆಂದು ಇನ್ಫೋಸಿಸ್ ಕಂಪನಿಯ ಸಹ ಸಂಸ್ಥಾಪಕ ನಾರಾಯಣ ಮೂರ್ತಿಯವರು ಕರೆ ನೀಡಿದ್ದಾರೆ.
ಇತ್ತೀಚೆಗೆ ಅಮೆರಿಕದಲ್ಲಿ ಅಧಿಕಾರಕ್ಕೆ ಬಂದ ನೂತನ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಅವರು, ಅಮೆರಿಕದಲ್ಲಿ ಉದ್ಯೋಗ ಬಯಸಿ ಬರುವ ವಿದೇಶಿಗರಿಗೆ ನೀಡಲಾಗುವ ಎಚ್ 1ಬಿ ವೀಸಾದ ನಿಯಮಗಳನ್ನು ಬಿಗಿಗೊಳಿಸಿದ್ದಾರೆ. ಇದರಿಂದ, ಅಮೆರಿಕಕ್ಕೆ ತಮ್ಮಲ್ಲಿನ ಐಟಿ ತಂತ್ರಜ್ಞರನ್ನು ಕಳುಹಿಸುವ ಅನೇಕ ವಿದೇಶಿ ಕಂಪನಿಗಳಿಗೆ ಅದರಲ್ಲೂ ವಿಶೇಷವಾಗಿ ಭಾರತೀಯ ಐಟಿ ಉದ್ಯಮಕ್ಕೆ ಇದರಿಂದ ತೀವ್ರ ಹಿನ್ನಡೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನಾರಾಯಣ ಮೂರ್ತಿಯವರು ಎಚ್ 1ಬೀ ವೀಸಾ ಬಳಕೆಗೆ ಕಡಿವಾಣ ಹಾಕುವಂತೆ ಭಾರತೀಯ ಐಟಿ ವಲಯಕ್ಕೆ ಕರೆ ನೀಡಿದ್ದಾರೆ. [ಏನಿದು ಎಚ್1ಬಿ ವೀಸಾ ತಿದ್ದುಪಡಿ ಕಾಯ್ದೆ? ಇದ್ಹೇಗೆ ಟೆಕ್ಕಿಗಳಿಗೆ ಮಾರಕ?]
ತಮ್ಮ ಆಗ್ರಹದ ಬಗ್ಗೆ ವಿವರಣೆಯನ್ನೂ ನೀಡಿರುವ ಅವರು, "ಬದಲಾದ ಸನ್ನಿವೇದಲ್ಲಿ ಭಾರತೀಯ ಐಟಿ ಕಂಪನಿಗಳು ಬಹು ಸಂಸ್ಕೃತಿಯ ಕೇಂದ್ರಗಳಾಗಬೇಕಿದೆ. ಈ ನಿಟ್ಟಿನಲ್ಲಿ ಭಾರತೀಯ ಕಂಪನಿಗಳು ತಮ್ಮ ಅಮೆರಿಕದ ಕಚೇರಿಯಲ್ಲಿ ಅಮೆರಿಕದವರನ್ನು, ಕೆನಡಾದ ಕಚೇರಿಯಲ್ಲಿ ಕೆನಡಾದವರನ್ನು, ಬ್ರಿಟನ್ ನ ಕಚೇರಿಯಲ್ಲಿ ಬ್ರಿಟನ್ ಪ್ರಜೆಗಳನ್ನು ಕೆಲಸಕ್ಕೆ ತೊಡಗಿಸಿಕೊಂಡು ತಮ್ಮ ಕಾರ್ಯ ಸಾಧನೆ ಮಾಡಿಕೊಳ್ಳಬೇಕಿದೆ. ಹಾಗಾದಲ್ಲಿ ಮಾತ್ರ ಭಾರತೀಯ ಕಂಪನಿಗಳು ಅಕ್ಷರಶಃ ಬಹುರಾಷ್ಟ್ರೀಯ ಕಂಪನಿಗಳಾಗಿ ಬೆಳೆಯಲು ಸಾಧ್ಯ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
''ವಿವಿಧ ದೇಶಗಳ ಕಚೇರಿಗಳಲ್ಲಿ ಆಯಾ ದೇಶದ ತಂತ್ರಜ್ಞರಿಗೇ ಕೆಲಸ ನೀಡುವುದು ಸೇರಿದಂತೆ ಎಚ್ 1ಬಿ ವೀಸಾಗಳನ್ನು ಬಳಸಿಕೊಂಡು ಹೆಚ್ಚೆಚ್ಚು ಭಾರತೀಯರನ್ನು ವಿದೇಶಕ್ಕೆ ಕಳುಹಿಸುವ ಪರಿಪಾಠವನ್ನು ಬಿಟ್ಟರೆ ಮಾತ್ರ ಭಾರತೀಯ ಕಂಪನಿಗಳು ಬಹುರಾಷ್ಟ್ರೀಯ ಕಂಪನಿಗಳಾಗುವ ಕನಸು ನನಸಾಗುತ್ತದೆ'' ಎಂದು ಅವರು ತಿಳಿಸಿದ್ದಾರೆ.