ಕೆಲಸಕ್ಕೆ ಸಮರ್ಥರು ಸಿಗುತ್ತಾರೆ: ಅಗ್ನಿಪಥ್ ಯೋಜನೆಗೆ ಭಾರತದ ಉದ್ಯಮಪತಿಗಳ ಭರಪೂರ ಬೆಂಬಲ
ಬೆಂಗಳೂರು, ಜೂನ್ 20: ಅಗ್ನಿಪಥ್ ಯೋಜನೆಯಿಂದ ನಿರುದ್ಯೋಗಿ ಯುವಕರ ಸಂಖ್ಯೆ ಹೆಚ್ಚಾಗಬಹುದು ಎಂಬಿತ್ಯಾದಿ ಆತಂಕಗಳ ಮಧ್ಯೆ ಭಾರತದ ಹಲವು ಉದ್ಯಮಿಗಳು ಈ ಯೋಜನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಹೀಂದ್ರಾ ಗ್ರೂಪ್ನ ಛೇರ್ಮನ್ ಆನಂದ್ ಮಹೀಂದ್ರ ಈ ಯೋಜನೆಗೆ ಬೆಂಬಲ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಇನ್ನೂ ಹಲವು ಮಹೀಂದ್ರ ಅಭಿಪ್ರಾಯವನ್ನು ಅನುಮೋದಿಸಿದ್ದಾರೆ.
ಆರ್ಪಿಜಿ ಎಂಟರ್ಪ್ರೈಸಸ್ನ ಛೇರ್ಮನ್ ಹರ್ಷ್ ಗೋಯೆಂಕಾ, ಬಯೋಕಾನ್ ಛೇರ್ಮನ್ ಕಿರಣ್ ಮಜುಮ್ದಾರ್ ಶಾ, ಅಪೊಲೊ ಹಾಸ್ಪಿಟಲ್ ಗ್ರೂಪ್ನ ಜಂಟಿ ಎಂಡಿ ಸಂಗೀತಾ ರೆಡ್ಡಿ, ಟಿವಿಎಸ್ ಮೋಟಾರ್ ಕಂಪನಿ ಎಂಡಿ ಸುದರ್ಶನ್ ವೇಣು ಮೊದಲಾದವರು ಅಗ್ನಿಪಥ್ ಯೋಜನೆಯನ್ನು ಪ್ರಶಂಸಿಸಿ ಪ್ರತಿಕ್ರಿಯಿಸಿದ್ದಾರೆ.
ದೇಶದ ಅಗ್ನಿವೀರರಿಗೆ ಉದ್ಯೋಗ ಆಫರ್ ಕೊಟ್ಟ ಆನಂದ್ ಮಹೀಂದ್ರಾ
ಅಗ್ನಿಪಥ್ ಯೋಜನೆಯಿಂದ ವಿವಿಧ ಉದ್ಯಮಗಳಿಗೆ ಪೂರಕವಾಗುವ ಉದ್ಯೋಗಾರ್ಹತೆ ಇರುವ ಸಮರ್ಥ ಯುವಕರು ಸಿಗುತ್ತದೆ ಎಂಬುದು ಈ ಉದ್ಯಮಪತಿಗಳ ಅನಿಸಿಕೆ. ವಿವಿಧ ಉದ್ಯಮಗಳಲ್ಲಿ ಅಗ್ನಿವೀರರಿಗೆ ಎಂಥ ಉದ್ಯೋಗಗಳು ಕಾದಿರಲಿವೆ ಎಂಬುದನ್ನೂ ಇವರು ನೀಡಿದ್ದು, ಈಗ ದೇಶದೆಲ್ಲೆಡೆ ಈ ಯೋಜನೆ ವಿರುದ್ಧ ನಡೆಯುತ್ತಿರುವ ಹೋರಾಟದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ಧಾರೆ. ಈ ಪ್ರತಿಭಟನೆಗೆ ಅವಶ್ಯಕತೆಯೇ ಇಲ್ಲ. ಉತ್ತಮ ಮತ್ತು ಸುದೃಢ ಯುವಕರು ಈ ಅಗ್ನಿಪಥ್ನಿಂದ ಹೊರಹೊಮ್ಮುತ್ತಾರೆ ಎಂಬುದು ಈ ಉದ್ಯಮಿಗಳ ಅನಿಸಿಕೆ.
|
ಆನಂದ್ ಮಹೀಂದ್ರ ಹೇಳಿದ್ದು
ಅಗ್ನಿಪಥ್ ಯೋಜನೆ ವಿರುದ್ಧ ಪ್ರತಿಭಟನೆ ಮತ್ತ ಹಿಂಸಾಚಾರ ನಡೆಯುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಮಹಿಂದ್ರಾ ಗ್ರೂಪ್ ಛೇರ್ಮನ್ ಆನಂದ್ ಮಹೀಂದ್ರಾ, ಕಾರ್ಪೊರೇಟ್ ಸೆಕ್ಟರ್ನಲ್ಲಿ ಅಗ್ನಿವೀರರಿಗೆ ಕೆಲಸ ಸಿಗುವ ಅವಕಾಶ ತುಂಬಾ ಇರಲಿದೆ ಎಂದಿದ್ದಾರೆ.
"ಅಗ್ನಿಪಥ್ ಯೋಜನೆಯಿಂದ ಅಗ್ನಿವೀರರು ಗಳಿಸುವ ಶಿಸ್ತು ಮತ್ತು ಕೌಶಲ್ಯಗಳು ಅವರ ಉದ್ಯೋಗಾರ್ಹತೆಯನ್ನು ಗಣನೀಯವಾಗಿ ಹೆಚ್ಚಿಸುತ್ತಿದೆ. ಕಳೆದ ವರ್ಷ ಅಗ್ನಿಪಥ್ ಯೋಜನೆಯ ಪ್ರಸ್ತಾಪ ಬಂದಾಗಲೇ ನಾನು ಅದನ್ನು ಹೇಳಿದ್ದೆ" ಎಂದು ನೇರ ಮಾತಿನ ಆನಂದ್ ಮಹೀಂದ್ರ ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.
"ಕಾರ್ಪೊರೇಟ್ ವಲಯದಲ್ಲಿ ಅಗ್ನಿವೀರರಿಗೆ ಉದ್ಯೋಗಾವಕಾಶ ಬಹಳ ಇದೆ. ನಾಯಕತ್ವ, ಟೀಮ್ ವರ್ಕ್, ದೈಹಿಕ ತರಬೇತಿಯ ಬಲ ಇರುವ ಅಗ್ನಿವೀರರು ನಮ್ಮ ಉದ್ಯಮಕ್ಕೆ ಸಿದ್ಧವಾಗಿರುವ ವೃತ್ತಿಪರ ಪರಿಹಾರಗಳನ್ನು ಒದಗಿಸಬಲ್ಲರು. ಆಪರೇಷನ್ಸ್ ವಿಭಾಗದಿಂದ ಹಿಡಿದು ಆಡಳಿತ ಮತ್ತು ಸರಬರಾಜು ಸರಪಳಿ ನಿರ್ವಹಣೆ ವ್ಯವಸ್ಥೆಯವರೆಗೂ ಅವರ ಸೇವೆ ಉಪಯುಕ್ತವಾಗಿರಲಿದೆ" ಎಂದು ಆನಂದ್ ಮಹೀಂದ್ರ ಅಭಿಪ್ರಾಯಪಟ್ಟಿದ್ದಾರೆ.
|
ಹರ್ಷ್ ಗೋಯೆಂಕಾ ಹೇಳಿದ್ದಿದು
ಆನಂದ್ ಮಹೀಂದ್ರ ಅವರ ಟ್ವೀಟ್ಗೆ ಆರ್ಪಿಜಿ ಗ್ರೂಪ್ ಮುಖ್ಯಸ್ಥ ಹರ್ಷ್ ಗೋಯೆಂಕಾ ಪ್ರತಿಕ್ರಿಯಿಸಿ, ಅವರ ಅಭಿಪ್ರಾಯಕ್ಕೆ ಸಹಮತ ವ್ಯಕ್ಪಡಿಸಿದ್ದಾರೆ.
"ಅಗ್ನಿವೀರರಿಗೆ ಉದ್ಯೋಗಾವಕಾಶ ನೀಡುವುದಕ್ಕೆ ಆರ್ಪಿಜಿ ಗ್ರೂಪ್ ಸಿದ್ಧವಿದೆ. ಅಗ್ನಿವೀರರಿಗೆ ಉದ್ಯೋಗ ಒದಗಿಸುವ ಮತ್ತು ಯುವಕರಿಗೆ ಒಳ್ಳೆಯ ಭವಿಷ್ಯದ ಭರವಸೆ ನೀಡುವ ನಮ್ಮ ಕೈಂಕರ್ಯಕ್ಕೆ ಬೇರೆ ಕಾರ್ಪೊರೇಟ್ಗಳೂ ಕೈ ಜೋಡಿಸುತ್ತಾರೆಂದು ಆಶಿಸುತ್ತೇನೆ" ಎಂದು ಹರ್ಷ್ ಗೋಯೆಂಕಾ ಟ್ವೀಟ್ ಮಾಡಿದ್ದಾರೆ.
ಅಗ್ನಿಪಥ್ ಯೋಜನೆ ಬಗ್ಗೆ ಸುಳ್ಳು ಸುದ್ದಿ ಹರಡಿದ 35 ವಾಟ್ಸಾಪ್ ಗ್ರೂಪ್ ನಿರ್ಬಂಧ
|
ಕಿರಣ್ ಮಜುಂದಾರ್ ಮತ್ತು ಸಂಗೀತಾ ರೆಡ್ಡಿ ಹೇಳಿದ್ದು:
ಬೆಂಗಳೂರಿನ ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ಅಗ್ನಿಪಥ್ ಯೋಜನೆ ಸಂಬಂಧ ಟ್ವೀಟ್ ಮಾಡಿದ್ದು, "ಉದ್ಯೋಗ ಮಾರುಕಟ್ಟೆಯಲ್ಲಿ ಅಗ್ನಿವೀರರಿಗೆ ಅನುಕೂಲಕರ ಸ್ಥಿತಿ ಇರಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು, ಅಪೋಲೊ ಹಾಸ್ಪಿಟಲ್ ಗ್ರೂಪ್ನ ಜಂಟಿ ಎಂಡಿ ಸಂಗೀತಾ ರೆಡ್ಡಿ ಕೂಡ ಅಗ್ನಿವೀರರ ಉದ್ಯೋಗಾರ್ಹತೆಯನ್ನು ಗುರುತಿಸಿದ್ದರೆ. "ಅಗ್ನಿವೀರರು ಗಳಿಸುವ ಶಿಸ್ತು ಮತ್ತು ಕೌಶಲ್ಯಗಳು ನಮ್ಮ ಉದ್ಯಮಕ್ಕೆ ಬೇಕಾದ ವೃತ್ತಿಪರ ಸಿದ್ಧಪರಿಹಾರಗಳಾಗಬಹುದು. ನಮ್ಮ ಉದ್ಯಮವು ಇಂಥ ಕಾರ್ಯದಕ್ಷತೆಯ ಯುವಕರ ನೇಮಕಾತಿಗೆ ಬೆಂಬಲ ನೀಡುವ ಆಶಯ ನನ್ನದು" ಎಂದು ಸಂಗೀತಾ ರೆಡ್ಡಿ ಹೇಳಿದ್ದಾರೆ.
ಸುದರ್ಶನ್ ವೇಣು ಹೇಳಿಕೆ
ಟಿವಿಎಸ್ ಮೋಟಾರ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಸುದರ್ಶನ್ ವೇಣು ಮೂರು ದಿನಗಳ ಹಿಂದೆ, ಶುಕ್ರವಾರವೇ ಅಗ್ನಿಪಥ್ ಯೋಜನೆ ಬಗ್ಗೆ ಪೂರಕವಾಗಿ ಮಾತನಾಡಿದ್ಧಾರೆ. ಅಗ್ನಿಪಥ್ ಯೋಜನೆಯು ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
"ಅಗ್ನಿವೀರರು ಮುಂಬರುವ ವರ್ಷಗಳಲ್ಲಿ ದೇಶದ ಆರ್ಥಿಕ ಪ್ರಗತಿಯ ಹಾದಿ ಸುಗಮಗೊಳಿಸಲು ಮತ್ತು ಸಮಾಜವನ್ನು ಬಲಪಡಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ" ಎಂದು ಸುದರ್ಶನ್ ವೇಣು ಶುಕ್ರವಾರ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)