ಅಪನಗದೀಕರಣ, ಜಿಎಸ್ ಟಿಯಿಂದ ಭಾರತ ನಲುಗಿದೆ ಎಂದ ರಘುರಾಮ್ ರಾಜನ್
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಮ್ ರಾಜನ್ ಅಪನಗದೀಕರಣದ ಬಗ್ಗೆ ಮಾತನಾಡಿದ್ದಾರೆ. ಅದೊಂದು ಕೆಟ್ಟ ನಡೆ ಎಂದು ವಿಶ್ಲೇಷಣೆ ಮಾಡಿದ್ದಾರೆ. ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ನಡೆಸಿದ ಎಕ್ಸ್ ಕ್ಲೂಸಿವ್ ಸಂದರ್ಶನದಲ್ಲಿ ವಿವಿಧ ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.
ಭಾರತದಲ್ಲಿ ಉದ್ಯೋಗ ಸೃಷ್ಟಿ ಆಗದಿರುವುದು ಅತಿ ಗಂಭೀರ ಸಮಸ್ಯೆ ಎಂದಿರುವ ಅವರು, ತೊಂಬತ್ತು ಸಾವಿರ ರೈಲ್ವೆ ಇಲಾಖೆಯ ಹುದ್ದೆಗೆ ದೇಶದಲ್ಲಿ ಎರಡೂವರೆ ಕೋಟಿ ಮಂದಿ ಅರ್ಜಿ ಹಾಕಿದ್ದನ್ನು ಉದಾಹರಣೆಯಾಗಿ ನೀಡಿದ್ದಾರೆ. ಅಪನಗದೀಕರಣ ಎಂಬುದು ಕೆಟ್ಟ ಆಲೋಚನೆ ಎಂದು ಜರೆದಿರುವ ರಾಜನ್, ಜತೆಗೆ ಜಿಎಸ್ ಟಿ ಜಾರಿ ಕೂಡ ಭರ್ತಿ ಪೆಟ್ಟು ನೀಡಿತು ಎಂದಿದ್ದಾರೆ.
2012ರಿಂದ 2016ರ ವರೆಗೆ ಭಾರತದ ಅಭಿವೃದ್ಧಿ ವೇಗ ಚೆನ್ನಾಗಿತ್ತು: ರಾಜನ್
ಅಪನಗದೀಕರಣದ ಬಗ್ಗೆ ವಿಶ್ವಾದ್ಯಂತ ಮೆಚ್ಚುಗೆ ಮಾತುಗಳು ಕೇಳಿಬರುತ್ತಿವೆ ಎಂಬುದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರ ಮಾಡುತ್ತಿರುವ ವಾದ. ಆದರೆ ಭಾರತದ ಆರ್ಥಿಕತೆಯನ್ನು ಚೆನ್ನಾಗಿ ಬಲ್ಲ, ರಿಸರ್ವ್ ಬ್ಯಾಂಕ್ ಗವರ್ನರ್ ಆಗಿದ್ದ ರಘುರಾಮ್ ರಾಜನ್ ಎಳೆ ಎಳೆಯಾಗಿ ಬಿಡಿಸಿಟ್ಟಿರುವ ಸಂಗತಿ ಏನು ಗೊತ್ತೆ?
ಆ ಬಗ್ಗೆ ವಿವರಗಳನ್ನು ತಿಳಿಯುವುದಕ್ಕೆ ಮುಂದೆ ಓದಿ.
ಕೃಷಿ ವಲಯದ ಮೇಲೆ ಹೆಚ್ಚಿನ ಒತ್ತಡ
ಕೃಷಿ ವಲಯದ ಮೇಲಿನ ಒತ್ತಡ ದೊಡ್ಡ ಸಮಸ್ಯೆ. ವಿದ್ಯುತ್ ಹಾಗೂ ಬ್ಯಾಂಕ್ ಗಳು ಪ್ರಮುಖ ಸಮಸ್ಯೆಯಾಗಿವೆ. ಬೆಳವಣಿಗೆಗೆ ಪೂರಕವಾಗಿ ಕೃಷಿ ಅಭಿವೃದ್ಧಿ ಆಗಬೇಕಿದೆ. ಉದ್ಯೋಗ ಸೃಷ್ಟಿ ಆಗದಿರುವುದು ಗಂಭೀರ ಸಮಸ್ಯೆ. ಏಳು ಪರ್ಸೆಂಟ್ ನಷ್ಟು ಪ್ರಗತಿ ದರ ಇದ್ದಾಗಲೂ ಉದ್ಯೋಗ ಸಮಸ್ಯೆ ಆಗುತ್ತಿದೆ. ಜಿಡಿಪಿ ಪ್ರಗತಿ ದರ ಇದ್ದರೂ ಉದ್ಯೋಗ ಸೃಷ್ಟಿ ಆಗುತ್ತಿಲ್ಲ. ರೈಲ್ವೆಯಲ್ಲಿನ ತೊಂಬತ್ತು ಸಾವಿರ ಉದ್ಯೋಗಕ್ಕೆ ಎರಡೂವರೆ ಕೋಟಿ ಮಂದಿ ಅರ್ಜಿ ಹಾಕಿದ್ದಾರೆ. ಇಲ್ಲಿ ನಿಜವಾಗಿಯೂ ಉದ್ಯೋಗ ಸಮಸ್ಯೆ ಇದೆ ಎಂಬುದಕ್ಕೆ ನಿದರ್ಶನ ಸಿಕ್ಕಂತಾಗುತ್ತದೆ.
ವಿಶ್ವಾಸಾರ್ಹತೆ ಕಾಪಾಡಿಕೊಳ್ಳಬೇಕು
ಆರ್ಥಿಕತೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮಾಣ ಕಡಿಮೆ ಇರುವುದು ಕೂಡ ಚಿಂತೆಗೆ ಕಾರಣ. ಏಕೆಂದರೆ, ಮಹಿಳೆಯರಿಗಾಗಿ ಅವಕಾಶ ಸೃಷ್ಟಿಸುತ್ತಿಲ್ಲ. ನಾನು ಗವರ್ನರ್ ಆಗಿದ್ದಾಗ ಸರಕಾರಕ್ಕೆ ಅತಿ ಹೆಚ್ಚು ಲಾಭಾಂಶ ಪಾವತಿಸಿದ್ದೆವು. ಅದು ಅವರಿಗೆ ವಿಚಾರ ಅಲ್ಲ. ಸರಕಾರಕ್ಕೆ ಕೇವಲ ಲಾಭ ಮಾತ್ರ ಬೇಡ, ಇನ್ನೂ ಹೆಚ್ಚಿನದನ್ನು ಬಯಸುತ್ತದೆ. ಜಿಡಿಪಿ ಪ್ರಗತಿ ದರದ ಅಂಕಿ-ಅಂಶ ಪರಿಷ್ಕರಣೆಗೆ ತಜ್ಞರದೊಂದು ಸ್ವತಂತ್ರ ಸಮಿತಿ ಬೇಕು. ಅದರಲ್ಲಿ ಭಾರತೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ತಜ್ಞರಿದ್ದು, ನಾವು ಪ್ರಸ್ತುತ ಪಡಿಸುವ ದತ್ತಾಂಶದಲ್ಲಿ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಬೇಕು.
ಆರ್ ಬಿಐ ಹಾಗೂ ಕೇಂದ್ರ ಸರಕಾರದ ಸಂಬಂಧ ವಿವರಿಸಿದ ರಘುರಾಮ್ ರಾಜನ್
ವಂಚನೆಯ ಉದಾಹರಣೆ ಹೀಗಿದೆ
ಐಎಲ್ ಅಂಡ್ ಎಫ್ ಎಸ್ ನ ಆರ್ಥಿಕ ಬಿಕ್ಕಟ್ಟು ಎಂಬುದು ಆರಂಭದ ಮುನ್ಸೂಚನೆ ಅಷ್ಟೇ. ಅದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಆರ್ಥಿಕ ಅಪರಾಧಗಳ ವಂಚಕರದೊಂದು ಪಟ್ಟಿ ಮಾಡಿ, ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸಲಾಗಿತ್ತು. ಉದಾಹರಣೆಗೆ ಒಬ್ಬ ಆಭರಣ ವ್ಯಾಪಾರಿ (ಅವರ ಹೆಸರನ್ನು ಪ್ರಸ್ತಾವ ಮಾಡದೆ) ಬ್ಯಾಂಕ್ ಗಳಿಂದ ನಾಲ್ಕು ಸಾವಿರ ಕೋಟಿ ರುಪಾಯಿ ಸಾಲ ಪಡೆದು, ಮತ್ತೊಂದು ಕಡೆ ತಾನು ವಸ್ತು ಖರೀದಿ ಮಾಡಿದವರಿಗೆ ಹಣ ಪಾವತಿಸಲು ಸಾಧ್ಯವಿಲ್ಲ ಎಂದು ಘೋಷಣೆ ಮಾಡಿದ. ಇಲ್ಲಿ ಆ ಖರೀದಿದಾರ ಕಂಪನಿಗೂ ಆತನೇ ಮಾಲೀಕ. ಆ ನಂತರ ವಂಚನೆ ಪ್ರಕರಣ ಪತ್ತೆ ಹಚ್ಚುವುದಕ್ಕೆ ಬಹಳ ಸಮಯ ತೆಗೆದುಕೊಂಡಿತು.
ಜಿಎಸ್ ಟಿ, ಅಪನಗದೀಕರಣದಿಂದ ಅಭಿವೃದ್ಧಿಗೆ ಹಿನ್ನಡೆ
ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರು. ಅವರನ್ನು ಹೊರತುಪಡಿಸಿದವರು ಅಲ್ಪಸಂಖ್ಯಾತರು. ಕ್ರಿಶ್ಚಿಯನ್ನರು ಹಾಗೂ ಮುಸ್ಲಿಮರು. ಮತ್ತು ಇಂಥ ಸನ್ನಿವೇಶದಲ್ಲಿ ಒಂದು ಗುಂಪಾಗಿ ಕೆಲಸ ಮಾಡಬೇಕಾದದ್ದು, ದೇಶವನ್ನು ದೊಡ್ಡದಾಗಿ ಜಗಳ ತಂದಿಡುವ ಗುಂಪುಗಳಾಗಿ ವಿಂಗಡಣೆ ಆಗುವಂತೆ ನೋಡಿಕೊಳ್ಳುತ್ತಿದೆ. ಇನ್ನು ಅಪನಗದೀಕರಣವು ಕೆಟ್ಟ ಆಲೋಚನೆ. ಇನ್ನು ಜಿಎಸ್ ಟಿ ಒಳ್ಳೆಯ ಆಲೋಚನೆಯಾದರೂ ದೀರ್ಘ ಕಾಲದಲ್ಲಿ ಮಾತ್ರ. ಅಲ್ಪಕಾಲೀನ ದೃಷ್ಟಿಯಿಂದ ಕೆಲ ಪರಿಣಾಮ ಎದುರಿಸಬೇಕಾಗುತ್ತದೆ. ಜಿಎಸ್ ಟಿ ಹಾಗೂ ಅಪನಗದೀಕರಣದಿಂದ ಭಾರತವು ನರಳಿದೆ. ಜಾಗತಿಕ ಆರ್ಥಿಕತೆಯು ಪ್ರಗತಿ ಸಾಧಿಸುವಾಗ ಭಾರತದಲ್ಲಿ ಜಿಎಸ್ ಟಿ ಹಾಗೂ ಅಪನಗದೀಕರಣದಿಂದಾಗಿ ಅಭಿವೃದ್ಧಿಗೆ ಹಿನ್ನಡೆಯಾಯಿತು.