ವಿತ್ತೀಯ ಸವಾಲುಗಳನ್ನು ಎದುರಿಸಲು ಭಾರತ ಶಕ್ತ: ಆರ್ಥಿಕ ವರದಿ
ನವದೆಹಲಿ, ಜೂನ್ 20: ಹಲವು ಪ್ರಮುಖ ಆರ್ಥಿಕ ಸವಾಲುಗಳನ್ನು ಭಾರತ ಎದುರಿಸುತ್ತಿದೆ. ವಿತ್ತೀಯ ಕೊರತೆ ಕಡಿಮೆಗೊಳಿಸುವುದು, ಆರ್ಥಿಕ ಪ್ರಗತಿ ಏರುಗತಿಯಲ್ಲಿರುವಂತೆ ನೋಡಿಕೊಳ್ಳುವುದು, ಹಣದುಬ್ಬರಕ್ಕೆ ಕಡಿವಾಣ ಹಾಕುವುದು, ಚಾಲ್ತಿ ಖಾತೆ ಕೊರತೆ ನೀಗಿಸುವುದು ಹಾಗು ಕರೆನ್ಸಿಯ ಮೌಲ್ಯ ಕುಸಿಯದಂತೆ ನೋಡಿಕೊಳ್ಳುವುದು, ಇವರು ಭಾರತದ ಮುಂದಿರುವ ಸದ್ಯೋಭವಿಷ್ಯದ ಸವಾಲುಗಳಾಗಿವೆ ಎಂದು ಹಣಕಾಸು ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ತನ್ನ ಮಾಸಿಕ ಆರ್ಥಿಕ ವರದಿಯಲ್ಲಿ ತಿಳಿಸಲಾಗಿದೆ.
"ಅಭಿವೃದ್ಧಿ ಹೊಂದಿದ ದೇಶಗಳನ್ನೂ ಒಳಗೊಂಡಂತೆ ವಿಶ್ವದ ಹಲವು ದೇಶಗಳೂ ಇಂಥವೇ ಸವಾಲುಗಳನ್ನು ಎದುರಿಸುತ್ತಿವೆ. ಆದರೆ, ಆ ದೇಶಗಳಿಗೆ ಹೋಲಿಸಿದರೆ ಭಾರತ ಈ ಸವಾಲುಗಳನ್ನು ಎದುರಿಸಲು ಹೆಚ್ಚು ಸಮರ್ಥವಾಗಿದೆ. ಭಾರತದ ಹಣಕಾಸು ವಲಯದ ಸ್ಥಿರತೆ ಇದಕ್ಕೆ ಒಂದು ಕಾರಣವಾದರೆ, ಲಸಿಕೀಕರಣ ಯೋಜನೆಯ ಯಶಸ್ಸಿನಿಂದಾಗಿ ಆರ್ಥಿಕತೆಯನ್ನು ತೆರೆದುಕೊಳ್ಳಲು ಸಾಧ್ಯವಾಗಿದ್ದು ಇನ್ನೊಂದು ಕಾರಣ" ಎಂದು ಹಣಕಾಸು ಸಚಿವಾಲಯ ಅಭಿಪ್ರಾಯಪಟ್ಟಿದೆ.
ಸರಕಾರಿ ಉದ್ಯೋಗಿಗಳಿಗೆ ಕ್ಲೌಡ್ ಸರ್ವಿಸ್, ವಿಪಿಎನ್ ಬಳಸದಂತೆ ನಿರ್ಬಂಧ
2022 ಮೇ 31ರಂದು ಜಿಡಿಪಿ ಅಂದಾಜಿನ ಬಗ್ಗೆ ಬಿಡುಗಡೆ ಮಾಡಲಾದ ಮಾಹಿತಿ ಪ್ರಕಾರ 2021-2ರ ಹಣಕಾಸು ವರ್ಷದಲ್ಲಿ ಭಾರತೀಯ ಆರ್ಥಿಕತೆಯು ಕೋವಿಡ್ ಸಾಂಕ್ರಾಮಿಕದ ಪೂರ್ವಸ್ಥಿತಿಗೆ ಮರಳುವಷ್ಟು ಚೇತರಿಕೆ ಕಂಡಿದೆ ಎನ್ನಲಾಗಿದೆ.
ಸ್ಟ್ಯಾಗ್ಫ್ಲೇಶನ್ ಸಮಸ್ಯೆ
ವಿಶ್ವದ ಹಲವು ಆರ್ಥಿಕತೆಗಳಿಗೆ ಸ್ಟ್ಯಾಗ್ಫ್ಲೇಷನ್ (Stagflation) ಸಮಸ್ಯೆ ಕಾಡುತ್ತಿದೆ. ಭಾರತದಲ್ಲಿ ಇದರ ಪ್ರತಿಕೂಲ ಪರಿಣಾಮ ಸಾಧ್ಯತೆ ಕಡಿಮೆ ಎಂದು ಆರ್ಥಿಕ ಪರಾಮರ್ಶೆ ವರದಿ ಅಭಿಪ್ರಾಯಪಟ್ಟಿದೆ.
ಸ್ಟ್ಟಾಗ್ಫ್ಲೇಷನ್ ಎಂಬುದು ಸ್ಟ್ಯಾಗ್ನೆಂಟ್ ಎಕನಾಮಿ ಮತ್ತು ಇನ್ಫ್ಲೇಷನ್ ಪದಗಳ ಸಂಯೋಗ. ಸ್ಟ್ಯಾಗ್ನೆಂಟ್ ಎಕನಾಮಿ ಎಂದರೆ ಪ್ರಗತಿ ಕಾಣದೇ ನಿಶ್ಚಲವಾಗಿರುವ ಆರ್ಥಿಕತೆ. ಇನ್ಫ್ಲೆಷನ್ ಎಂದರೆ ಹಣದುಬ್ಬರ. ಅಂದರೆ, ಪ್ರಗತಿ ಕಾಣದೇ ನಿಶ್ಚಿಲವಾಗಿರುವ ಆರ್ಥಿಕತೆಗೆ ಹಣದುಬ್ಬರದ ಸಮಸ್ಯೆಯೂ ಜೋತು ಬಿದ್ದಿರುವುದಕ್ಕೆ ಸ್ಟ್ಯಾಗ್ಫ್ಲೇಷನ್ ಎನ್ನುವುದು. ಈ ಸಮಸ್ಯೆ ಇರುವ ಆರ್ಥಿಕತೆಯಲ್ಲಿ ಹಣದುಬ್ಬರ ಹೆಚ್ಚಿರುತ್ತದೆ. ಜೊತೆಗೆ ಆರ್ಥಿಕತೆಯಲ್ಲಿ ಬೇಡಿಕೆ ಪ್ರಮಾಣ ನಿಶ್ಚಲವಾಗಿರುತ್ತದೆ. ನಿರುದ್ಯೋಗ ಪ್ರಮಾಣ ಹೆಚ್ಚಿರುತ್ತದೆ.
ವಿಶ್ವಾದ್ಯಂತ ಹಲವು ದೇಶಗಳಲ್ಲಿ ಸ್ಟ್ಯಾಗ್ಫ್ಲೆಷನ್ ಸಮಸ್ಯೆ ಇದೆ. ಆದರೆ, ಭಾರತದಲ್ಲಿ ಸೂಕ್ತ ನೀತಿಗಳನ್ನು ಮತ್ತು ಕ್ರಮಗಳನ್ನು ಜಾರಿಗೆ ತಂದಿದ್ದರಿಂದ ಸ್ಟ್ಯಾಗ್ಫ್ಲೇಷನ್ ಸಮಸ್ಯೆಯನ್ನು ನಿವಾರಿಸುವ ಶಕ್ತಿ ಹೊಂದಿದ್ದೇವೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಮಾಸಿಕ ಆರ್ಥಿಕ ವರದಿ ಹೇಳುತ್ತದೆ.
ಕೆಲಸಕ್ಕೆ ಸಮರ್ಥರು ಸಿಗುತ್ತಾರೆ: ಅಗ್ನಿಪಥ್ ಯೋಜನೆಗೆ ಭಾರತದ ಉದ್ಯಮಪತಿಗಳ ಭರಪೂರ ಬೆಂಬಲ
ವಿತ್ತೀಯ ಕೊರತೆಯ ಸಮಸ್ಯೆ
ಭಾರತದಲ್ಲಿ ಬಜೆಟ್ ಸಂಬಂಧಿತ ವಿತ್ತೀಯ ಕೊರತೆ ಹೆಚ್ಚಾಗಿದೆ. ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಸರಕಾರಕ್ಕೆ ಆದಾಯ ಕಡಿಮೆ ಆಗಿದೆ. ಆರೋಗ್ಯ ಮತ್ತು ಇತರ ಜನರ ಸಹಾಯಾರ್ಥ ಕ್ರಮಗಳಿಂದಾಗಿ ವೆಚ್ಚದ ಪ್ರಮಾಣ ವಿಪರೀತ ಹೆಚ್ಚಾಗಿದೆ. ಹೀಗಾಗಿ ವಿತ್ತೀಯ ಕೊರತೆ ಏರಿದೆ. ೨೦೨೨ರ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆ ಶೇ. 6.7 ಇತ್ತು. 2023ಕ್ಕೆ ಶೇ. 6.4ಕ್ಕೆ ವಿತ್ತೀಯ ಕೊರತೆಯನ್ನು ನಿಲ್ಲಿಸಬೇಕೆಂದು ಗರಿ ಇಡಲಾಗಿದೆ. ಆದರೆ, ಅದು ಶೇ. 7ರ ಸಮೀಪಕ್ಕೆ ಹೋಗಬಹುದು ಎಂದು ಅಂದಾಜು ಮಾಡಲಾಗಿದೆ.
ವಿತ್ತೀಯ ಕೊರತೆ ಪರಿಣಾಮ
ವಿತ್ತೀಯ ಕೊರತೆ ಹೆಚ್ಚಾದರೆ ಕರೆಂಟ್ ಅಕೌಂಟ್ ಕೊರತೆಯೂ ಹೆಚ್ಚಾಗುತ್ತದೆ. ಇದರಿಂದ ಆಮದು ದುಬಾರಿಯಾಗುತ್ತದೆ. ರೂಪಾಯಿ ಮೌಲ್ಯ ಇನ್ನಷ್ಟು ಕಡಿಮೆ ಆಗುತ್ತದೆ. ಇದು ಇನ್ನಷ್ಟು ಕೊರತೆಗಳನ್ನು ಸೃಷ್ಟಿಸುತ್ತದೆ, ರೂಪಾಯಿ ಅಪಮೌಲ್ಯ ಮುಂದುವರಿಯುತ್ತದೆ. ಒಂದು ರೀತಿಯಲ್ಲ ಸರಪಳಿ ರೀತಿಯಲ್ಲಿ ಇದು ಮುಂದುವರಿಯುವ ಅಪಾಯ ಇದೆ. ಹಣಕಾಸು ಸಚಿವಾಲಯದ ಆರ್ಥಿಕ ಪರಾಮರ್ಶೆ ವರದಿಯಲ್ಲಿ ಈ ಎಲ್ಲಾ ವಿಚಾರಗಳನ್ನು ಚರ್ಚಿಸಲಾಗಿದೆ.
ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯಲ್ಲಿ ಕಡಿತಗೊಳಿಸಿದ ಪರಿಣಾಮ ಸರಕಾರಕ್ಕೆ ಆದಾಯ ಹರಿದುಬರುವುದು ಕಡಿಮೆ ಆಗಿದೆ. ಇದು ವಿತ್ತೀಯ ಕೊರತೆಗೆ ಪ್ರಮುಖ ಕಾರಣವೆಂದು ಬಗೆಯಲಾಗಿದೆ.
ಭಾರತದ ಆರ್ಥಿಕ ಚೇತರಿಕೆ ಉತ್ತಮ
ಭಾರತದಲ್ಲಿ ಪಿಎಂಐ ಮಟ್ಟ ಕಳೆದ ಒಂದೂವರೆ ವರ್ಷದಲ್ಲಿ ಬಹಳ ಹೆಚ್ಚಾಗಿದೆ. PMI ಎಂದರೆ ಪರ್ಚೇಸ್ ಮ್ಯಾನೇಜರ್ಸ್ ಇಂಡೆಕ್ಸ್. ಇದು ಖಾಸಗಿ ಸಂಸ್ಥೆಗಳು ನಡೆಸುವ ಮಾಸಿಕ ಸಮೀಕ್ಷೆಯಿಂದ ಸಿಗುವ ಆರ್ಥಿಕ ಸೂಚಕವಾಗಿದೆ. ಒಂದು ಆರ್ಥಿಕತೆಯ ಆರೋಗ್ಯಸ್ಥಿತಿ ಹೇಗಿದೆ ಎಂಬ ಸುಳಿವನ್ನು ಈ ಪಿಎಂಐಗಳು ನೀಡುತ್ತವೆ. ಅಮೆರಿಕ, ಬ್ರಿಟನ್, ಐರೋಪ್ಯ ಒಕ್ಕೂಟ ದೇಶಗಳಲ್ಲಿ ಪಿಎಂಐ ಗಣನೀಯವಾಗಿ ಇಳಿಕೆ ಕಾಣುತ್ತಿರುವ ಹೊತ್ತಲ್ಲೇ ಭಾರತದಲ್ಲಿ ಇದು ದಾಖಲೆ ಮಟ್ಟಕ್ಕೆ ಏರಿದೆ ಎಂದು ಆರ್ಥಿಕ ಸಮೀಕ್ಷೆ ವರದಿ ಹೇಳುತ್ತದೆ.
(ಒನ್ಇಂಡಿಯಾ ಸುದ್ದಿ)