1.2 ಮಿಲಿಯನ್ ಟನ್ ಗೋಧಿ ರಫ್ತಿಗೆ ಭಾರತ ಅನುಮತಿ ಸಾಧ್ಯತೆ
ನವದೆಹಲಿ ಜೂನ್ 8: ಕಳೆದ ತಿಂಗಳು ಗೋಧಿ ರಫ್ತಿಗೆ ಹಠಾತ್ ನಿಷೇಧದ ಕಾರಣ ಬಂದರುಗಳಲ್ಲಿ ಸಿಲುಕಿರುವ ಸರಕುಗಳನ್ನು ತೆರವುಗೊಳಿಸಲು ಶೀಘ್ರದಲ್ಲೇ ವ್ಯಾಪಾರಿಗಳಿಗೆ ಸುಮಾರು 12 ಲಕ್ಷ ಟನ್ ಗೋಧಿಯನ್ನು ರಫ್ತು ಮಾಡಲು ಭಾರತ ಅವಕಾಶ ನೀಡಬಹುದು ಎಂದು ಸರಕಾರಿ ಮೂಲಗಳು ತಿಳಿಸಿವೆ.
ಇಷ್ಟು ಪ್ರಮಾಣದ ಗೋಧಿ ರಫ್ತಿಗೆ ಕೇಂದ್ರ ಸರಕಾರ ಅನುಮತಿ ನೀಡಿದ ನಂತರವೂ ಸುಮಾರು ಐದು ಲಕ್ಷ ಟನ್ ಗೋಧಿ ಬಂದರುಗಳಲ್ಲಿ ಉಳಿಯಬಹುದು. ಕೆಲವು ವ್ಯಾಪಾರಿಗಳು ರಫ್ತು ಪರವಾನಗಿ ಪಡೆಯಲು ವಿಫಲರಾದ ಕಾರಣ ಇಷ್ಟು ಪ್ರಮಾಣದ ಗೋಧಿ ಹಾಗೇ ಉಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯಲ್ಲಿ ದಾಖಲೆ ಬರೆದ ಬಿಸಿಗಾಳಿ, ದೇಶದ ಹಲವೆಡೆ ಮಳೆ ಮುನ್ಸೂಚನೆ
ಕೇಂದ್ರ ಸರಕಾರವು ಮೇ 14ರಂದು ಗೋಧಿ ರಫ್ತು ನಿಷೇಧಿಸಿತು. ಆದರೆ ಈಗಾಗಲೇ ನೀಡಲಾದ ಸಾಲದ ಪತ್ರ(ಎಲ್ ಸಿ)ಗಳು ಮತ್ತು ತಮ್ಮ ಆಹಾರ ಭದ್ರತೆಯ ಅಗತ್ಯಗಳನ್ನು ಪೂರೈಸಲು ಸರಬರಾಜಿಗೆ ವಿನಂತಿಸುವ ದೇಶಗಳಿಗೆ ಗೋಧಿ ಗೋಧಿಗೆ ಅನುಮತಿಸಲಾಗುವುದು ಎಂದು ಸರಕಾರ ಹೇಳಿದೆ.
ಮೇ 14 ರ ಮೊದಲು ನೀಡಲಾದ ಎಲ್ ಸಿ ಗಳ ಆಧಾರದ ಮೇಲೆ ಗೋಧಿ ರಫ್ತಿಗೆ ಅಗತ್ಯವಿರುವ ನೋಂದಣಿ ಪ್ರಮಾಣಪತ್ರಗಳನ್ನು ಸರಕಾರವು ವಿತರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂದರುಗಳಲ್ಲೇ ಉಳಿದಿದ ಗೋಧಿ
ಗೋಧಿ ರಫ್ತು ನಿಷೇಧದ ನಂತರ ಭಾರತವು 4,69,202 ಟನ್ ಗಳ ಗೋಧಿ ಸಾಗಣೆಗೆ ಅನುಮತಿಸಿದೆ. ಆದರೆ ಈ ಪೈಕಿ ಕನಿಷ್ಠ 1.7 ಮಿಲಿಯನ್ ಟನ್ ಗೋಧಿ ಬಂದರುಗಳಲ್ಲೇ ಉಳಿದಿವೆ. ಮುಂಗಾರು ಮಳೆಯಿಂದಾಗಿ ಗೋಧಿ ಹಾಳಾಗುವ ಸಾಧ್ಯತೆಯಿದೆ.
ಮಾನ್ಯವಾಗಿರುವ ಎಲ್ ಸಿ ಗಳನ್ನು ಹೊಂದಿರುವ ವ್ಯಾಪಾರಿಗಳಿಗೆ ರಫ್ತು ಮಾಡಲು ಅನುಮತಿಸಲಾಗುವುದು. ಆದರೆ ಅಗತ್ಯ ದಾಖಲೆಗಳು ಹೊಂದಿಲ್ಲದವರಿಗೆ ರಫ್ತಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಕತಾರ್ ಏರ್ವೇಸ್ ಮುಖ್ಯಸ್ಥರನ್ನೇ 'ಮೂರ್ಖ' ಎಂದು ಸುದ್ದಿಯಾದ ಕಂಗನಾ ರಣಾವತ್!
ಗೋಧಿ ಕೊರತೆ ನಿವಾರಣೆಗೆ ಸಹಾಯ
ಬಂದರುಗಳಲ್ಲಿ ಉಳಿದಿರುವ ಗೋಧಿಯ ರಫ್ತಿಗೆ ಅವಕಾಶ ನೀಡಿದರೆ ಬಾಂಗ್ಲಾದೇಶ, ಶ್ರೀಲಂಕಾ ಮತ್ತು ನೇಪಾಳದಂತಹ ದೇಶಗಳಲ್ಲಿ ಗೋಧಿ ಕೊರತೆ ನಿವಾರಣೆಗೆ ಸಹಾಯವಾಗುತ್ತದೆ. ಈ ದೇಶಗಳು ಭಾರತದ ಗೋಧಿಯ ಮೇಲೆ ಹೆಚ್ಚು ಅವಲಂಬನೆ ಹೊಂದಿವೆ. ಈ ಸರಕುಗಳು ಬಾಂಗ್ಲಾದೇಶ, ಇಂಡೋನೇಶಿಯಾ, ಶ್ರೀಲಂಕಾ, ನೇಪಾಳ ಮತ್ತು ಫಿಲಿಫೀನ್ಸ್ ಗೆ ತೆರಳಲಿವೆ ಎಂದು ವ್ಯಾಪಾರಿಯೊಬ್ಬರು ತಿಳಿಸಿದರು.
ರಫ್ತು ಅವಕಾಶಕ್ಕೆ ವ್ಯಾಪಾರಿಗಳ ಮನವಿ
ರಫ್ತಿಗೆ ಅನುಮತಿ ಪಡೆಯದ ವ್ಯಾಪಾರಿಗಳು ವಿದೇಶಗಳಿಗೆ ಗೋಧಿ ಸಾಗಿಸಲು ಸರಕಾರ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದಾರೆ. ಈ ವ್ಯಾಪಾರಿಗಳು ಸರಕಾರದಿಂದ ಸರಕಾರಕ್ಕೆ ಒಪ್ಪಂದಗಳ ಅಡಿಯಲ್ಲಿ ರಫ್ತು ಮಾಡಲು ಅವಕಾಶ ನೀಡುವಂತೆ ಕೇಂದ್ರ ಸರಕಾರಕ್ಕೆ ಕೋರಿದ್ದಾರೆ. ಅಲ್ಲದೇ ಬಂದರುಗಳಲ್ಲಿ ಸಿಲುಕಿರುವ ತಮ್ಮ ಸರಕುಗಳನ್ನು ಖರೀದಿಸುವಂತೆ ಪ್ರಮಾಣಪತ್ರ ಪಡೆದ ವ್ಯಾಪಾರಿಗಳಲ್ಲಿ ಮನವಿ ಸಹ ಮಾಡಿದ್ದಾರೆ ಎಂದು ವ್ಯಾಪಾರಿಯೊಬ್ಬರು ಮಾಹಿತಿ ನೀಡಿದರು.
ಹವಾಮಾನ ಬದಲಾವಣೆ, ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಗೋಧಿ ಸರಬರಾಜಿನಲ್ಲಿ ಕೊರತೆ ಹಿನ್ನೆಲೆಯಲ್ಲಿ ಮೇ 14ರಂದು ಕೇಂದ್ರ ಸರಕಾರ ಗೋಧಿ ರಫ್ತಿಗೆ ನಿಷೇಧ ಹೇರಿತ್ತು.
ಗೋಧಿ ಸರಬರಾಜಿನಲ್ಲಿ ಕೊರತೆ
ಪ್ರಸಕ್ತ ವರ್ಷದ ಬೇಸಗೆಯಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದರಿಂದ ಭಾರತದಲ್ಲಿ ಗೋಧಿಯ ಒಟ್ಟಾರೆ ಇಳುವರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅಲ್ಲದೇ ಕಳೆದ 122 ವರ್ಷಗಳಲ್ಲೇ ಅತ್ಯಂತ ಹೆಚ್ಚಿನ ಬಿಸಿಲನ್ನು ಈ ವರ್ಷದ ಮಾರ್ಚ್ ತಿಂಗಳಲ್ಲಿ ಭಾರತ ಅನುಭವಿಸಿದೆ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಈ ಎರಡೂ ದೇಶಗಳಿಂದ ಗೋಧಿ ರಫ್ತು ಸಂಪೂರ್ಣ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಹಲವು ರಾಷ್ಟ್ರಗಳಿಂದ ಗೋಧಿಗೆ ಭಾರೀ ಬೇಡಿಕೆ ವ್ಯಕ್ತವಾಗಿದೆ.
ಹವಾಮಾನ ವೈಪರೀತ್ಯದಿಂದಾಗಿ ಈ ಬಾರಿ ಭಾರತದಲ್ಲಿ ಗೋಧಿ ಇಳುವರಿಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ತಾಪಮಾನ ಹೆಚ್ಚಳ, ನೀರಿನ ಲಭ್ಯತೆಯಲ್ಲಿ ಕೊರತೆ ಕೂಡ ಇಳುವರಿ ಕಡಿಮೆಯಾಗಲು ಕಾರಣವಾಗಿದೆ. ನಿರೀಕ್ಷೆಗಿಂತ ಉತ್ಪಾದನೆ ಕಡಿಮೆಯಾದ ಹಿನ್ನೆಲೆಯಲ್ಲಿ ಇದು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಆಹಾರ ಭದ್ರತೆಯ ಕುರಿತು ಕಳವಳ ಉಂಟು ಮಾಡುವಂತೆ ಮಾಡಿದೆ. ಇನ್ನೊಂದೆಡೆ ಇಳುವರಿ ತಗ್ಗಿರುವುದರಿಂದ ಗೋಧಿ ಮತ್ತು ಅದರ ಹಿಟ್ಟಿನ ಬೆಲೆಯಲ್ಲಿ ಏರಿಕೆಯಾಗುತ್ತಿದೆ.
(ಒನ್ಇಂಡಿಯಾ ಸುದ್ದಿ)