6.3ಕ್ಕೇರಿದ ಜಿಡಿಪಿ ಹಿಂದೆ ಜಿಎಸ್ಟಿ, ಅಪನಗದೀಕರಣದ ಕೊಡುಗೆ: ಅರುಣ್ ಜೇಟ್ಲಿ
ನವದೆಹಲಿ, ನವೆಂಬರ್ 30: 2017-18ನೇ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ದೇಶದ ನಿವ್ವಳ ಉತ್ಪನ್ನ ದರ (ಜಿಡಿಪಿ) ಶೇಕಡಾ 6.3ಕ್ಕೆ ಏರಿಕೆಯಾಗಿದೆ. ಇದಕ್ಕೆ ಜಿಎಸ್ಟಿ ಮತ್ತು ಅಪನಗದೀಕರಣವೇ ಕಾರಣ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಕಳೆದ ಬಾರಿಗೆ ಹೋಲಿಸಿದರೆ 2017ನೇ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ನಿವ್ವಳ ಉತ್ಪನ್ನ ಮೌಲ್ಯ ರೂ. 31.66 ಲಕ್ಷ ಕೋಟಿಗೆ ಏರಿಕೆಯಾಗಿದೆ. 2016-17ನೇ ಆರ್ಥಿಕ ವರ್ಷದಲ್ಲಿ ಇದರ ಪ್ರಮಾಣ ರೂ. 29.79 ಲಕ್ಷ ಕೋಟಿಯಾಗಿತ್ತು.
ಈ ಹಿಂದಿನ ತ್ರೈಮಾಸಿಕ ಅಂದರೆ, "ಮೊದಲ ತ್ರೈಮಾಸಿಕದಲ್ಲಿ ಮೂರು ವರ್ಷಗಳಲ್ಲೇ ಕನಿಷ್ಠ ಜಿಡಿಪಿ 5.7 ದಾಖಲಾಗಿತ್ತು. ಇದೀಗ ಚೇತರಿಕೆ ಕಂಡು ಶೇಕಡಾ 6.3ಕ್ಕೆ ಏರಿಕೆಯಾಗಿದೆ. ಸತತ 5 ತ್ರೈಮಾಸಿಕದಲ್ಲಿ ಇಳಿಕೆ ಕಂಡಿದ್ದ ಜಿಡಿಪಿ ಇದೇ ಮೊದಲ ಬಾರಿಗೆ ಏರಿಕೆಯಾಗಿದೆ," ಎಂದು ಚೀಫ್ ಸ್ಟಾಟಿಸ್ಟೀಶಿಯನ್ ಅನಂತ್ ಹೇಳಿದ್ದಾರೆ.
ಉತ್ಪಾದನಾ ವಲಯಲ್ಲಿ ಶೇಕಡಾ 7, ವಿದ್ಯುತ್, ನೀರು ಸರಬರಾಜು, ಗ್ಯಾಸ್ ವಲಯದಲ್ಲಿ ಶೇ. 7.6 ಹಾಗೂ ಹೋಟೆಲ್, ಸಾರಿಗೆ ಮತ್ತು ಸಂಪರ್ಕ ಕ್ಷೇತ್ರದಲ್ಲಿ ಬೆಳವಣಿಗೆ ದರ ಶೇಕಡಾ 9.9ಕ್ಕೆ ಏರಿಕೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಆದರೆ ನಿರ್ಮಾಣ ಕ್ಷೇತ್ರದ ಬೆಳವಣಿಗೆ ಮಾತ್ರ ಅಷ್ಟಾಗಿ ಇಲ್ಲ ಇದಕ್ಕೆ ಉಕ್ಕು ಮತ್ತು ಸಿಮೆಂಟ್ ಕಾರಣ ಎಂದು ಅವರು ವಿಶ್ಲೇಷಿಸಿದ್ದಾರೆ.
"ತ್ರೈಮಾಸಿಕದಲ್ಲಿ ಧನಾತ್ಮಕ ಫಲಿತಾಂಶ ಬರಲು ಉತ್ಪಾದನಾ ಕ್ಷೇತ್ರದಲ್ಲಿ ನಡೆದಿರುವ ಉತ್ತಮ ಬೆಳವಣಿಗೆಯೇ ಕಾರಣ. ಕಳೆದ 5 ತ್ರೈಮಾಸಿಕದಲ್ಲಿ ಜಿಡಿಪಿ ಋಣಾತ್ಮಕವಾಗಿತ್ತು. ಇದೀಗ ಜಿಡಿಪಿ ಶೇ. 6.3ನ್ನು ತಲುಪಿದ್ದು ಟ್ರೆಂಡ್ ಬದಲಾಗಿದೆ," ಎಂದು ಅರುಣ್ ಜೇಟ್ಲಿ ವಿಶ್ಲೇಷಿಸಿದ್ದಾರೆ.
"ಅಪನಗದೀಕರಣ ಮತ್ತು ಜಿಎಸ್ಟಿ ನಮ್ಮ ಬೆನ್ನಿಗೆ ಇದೆ. ಮುಂದಿನ ತ್ರೈಮಾಸಿಕದಲ್ಲೂ ಇದೇ ರೀತಿ ನಮ್ಮ ಪರವಾಗಿ ಇರಲಿದೆ ಎಂಬ ನಂಬಿಕೆ ಇದೆ. ಹೀಗಾಗಿ ಇನ್ನೂ ಹೆಚ್ಚಿನ ಬೆಳವಣಿಗೆಯನ್ನು ನಿರೀಕ್ಷಿಸಬಹುದು," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಅಂತಿಮವಾಗಿ ಪರಿಷ್ಕರಣೆ ಮಾಡಿದಾಗ ಜಿಡಿಪಿ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮುಖ್ಯ ಹಣಕಾಸು ಕಾರ್ಯದರ್ಶಿ ಹಸ್ಮುಖ್ ಅಧಿಯಾ ಹೇಳಿದ್ದಾರೆ.